ಹದಗೆಟ್ಟ ರಸ್ತೆಗಳಲ್ಲಿ ಎಂಜಿನಿಯರ್ಗೆ ಬುದ್ದಿ ಕಲಿಸಿದ ಜನ..!
ರಸ್ತೆ ಗುಂಡಿಗಳು ಭಾರತದ ರಸ್ತೆಗಳಲ್ಲಿ ಕಂಡು ಬರುವ ಪ್ರಮುಖ ಸಮಸ್ಯೆಗಳಾಗಿವೆ. ಈ ಸಮಸ್ಯೆ ಯಾವುದೇ ಒಂದು ರಾಜ್ಯಕ್ಕೆ ಮಾತ್ರ ಸೀಮಿತವಾಗಿಲ್ಲ. ಭಾರತದ ಬಹುತೇಕ ಎಲ್ಲಾ ರಾಜ್ಯಗಳಲ್ಲೂ ಇದು ಸಾಮಾನ್ಯ ಸಮಸ್ಯೆಯಾಗಿದೆ. ರಸ್ತೆಗಳಲ್ಲಿ ಗುಂಡಿ ಕಂಡು ಬಂದರೂ ಭಾರತದ ನಾಗರೀಕರು ಯಾವುದೇ ಪ್ರತಿಭಟನೆಯನ್ನಾಗಲಿ, ಹೋರಾಟವನ್ನಾಗಲಿ ಮಾಡುವುದಿಲ್ಲ.

ಆದರೆ ಗೋವಾದಲ್ಲಿ ಈ ರೀತಿಯ ಸಮಸ್ಯೆಗೆ ಅಲ್ಲಿನ ನಾಗರೀಕರು ವಿಭಿನ್ನ ಪ್ರತಿಭಟನೆ ಮಾಡಿದ್ದಾರೆ. ರಸ್ತೆ ಹದಗೆಡಲು ಕಾರಣರಾದ ಎಂಜಿನಿಯರ್ ಹಾಗೂ ಗುತ್ತಿಗೆದಾರನ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಇದರ ವೀಡಿಯೊವನ್ನು ಅಪ್ಲೋಡ್ ಮಾಡಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವೀಡಿಯೊದಲ್ಲಿ ಗೋವಾದ ಕ್ಯಾನ್ಕೋನ್ ಪ್ರದೇಶದ ಜನರು ಪ್ರತಿಭಟನೆ ನಡೆಸುತ್ತಿರುವುದನ್ನು ಕಾಣಬಹುದು. ಸ್ಥಳೀಯ ನಾಗರೀಕರ ಒಂದು ಗುಂಪು ಪಿಡಬ್ಲ್ಯುಡಿ ಕಚೇರಿಗೆ ನುಗ್ಗಿ, ಹದಗೆಟ್ಟ ರಸ್ತೆ ಹಾಗೂ ರಸ್ತೆ ಗುಂಡಿಗಳ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

ಕಚೇರಿಯಲ್ಲಿದ್ದ ಎಂಜಿನಿಯರ್ ಈ ರಸ್ತೆಯ ಗುತ್ತಿಗೆ ಪಡೆದಿದ್ದ ಗುತ್ತಿಗೆದಾರನನ್ನು ಕರೆಸಿದ್ದಾರೆ. ಕಚೇರಿಗೆ ಬಂದ ಗುತ್ತಿಗೆದಾರನನ್ನು ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಂಡು ರಸ್ತೆಯನ್ನು ಸರಿಪಡಿಸುವಂತೆ ಒತ್ತಾಯಿಸಿದ್ದಾರೆ. ಹಲವಾರು ಕಾರಣಗಳನ್ನು ನೀಡಿದ ಎಂಜಿನಿಯರ್ ಹಾಗೂ ಗುತ್ತಿಗೆದಾರ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

ತನ್ನ ಕಾಮಗಾರಿಯ ಬಗ್ಗೆ ಸಮರ್ಥಿಸಿಕೊಂಡ ಗುತ್ತಿಗೆದಾರನು ಹದಗೆಟ್ಟ ರಸ್ತೆಗಳಿಗೆ ಹವಾಮಾನವೇ ಕಾರಣವೆಂದು ಹೇಳಿದ್ದಾನೆ. ಮಳೆಗಾಲವಾದ ಕಾರಣ ಜೋರಾಗಿ ಮಳೆ ಸುರಿಯುತ್ತಿರುವ ಕಾರಣಕ್ಕೆ ರಸ್ತೆಗಳು ಹಾಳಾಗಿವೆ ಎಂದು ಹೇಳಿದ್ದಾನೆ.

ಇದರ ಜೊತೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಪೈಪ್ ಲೈನ್ ಜೋಡಣೆಯಂತಹ ಹಲವು ಕಾಮಗಾರಿಗಳನ್ನು ನಡೆಸುತ್ತಿರುವುದರಿಂದ ರಸ್ತೆಗಳು ಮತ್ತಷ್ಟು ಹಾಳಾಗಿವೆ ಎಂದು ಹೇಳಿದ್ದಾನೆ. ಸ್ಥಳೀಯರ ಪ್ರಕಾರ, ಈ ಹಿಂದೆಯೂ ಸಹ ಇದೇ ಎಂಜಿನಿಯರ್ ಹಾಗೂ ಗುತ್ತಿಗೆದಾರ ನಾನಾ ಕಾರಣಗಳನ್ನು ನೀಡಿ, ರಸ್ತೆ ನಿರ್ಮಾಣವನ್ನು ಮುಂದೂಡಿದ್ದರು.

ಆದರೆ ಈ ಬಾರಿ ಸ್ಥಳೀಯರು ಇವರ ಮಾತುಗಳನ್ನು ನಂಬಲು ತಯಾರಿರಲಿಲ್ಲ. ಸ್ಥಳೀಯರ ಪ್ರಕಾರ ಈ ಹದಗೆಟ್ಟ ರಸ್ತೆಗಳಲ್ಲಿ ಚಲಿಸಿದ ಆಂಬ್ಯುಲೆನ್ಸ್ ನಲ್ಲಿದ್ದ ರೋಗಿಯೊಬ್ಬರು ಮೃತಪಟ್ಟಿದ್ದಾರೆ. ಆದ ಕಾರಣ ಎಂಜಿನಿಯರ್ ಹಾಗೂ ಗುತ್ತಿಗೆದಾರನಿಗೆ ಆಂಬ್ಯುಲೆನ್ಸ್ ನಲ್ಲಿ ಕುಳಿತು ಹದಗೆಟ್ಟ ರಸ್ತೆಯಲ್ಲಿನ ಅನುಭವವನ್ನು ತಿಳಿಯುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
MOST READ: ಹಳೆಯದಾದಷ್ಟು ದುಬಾರಿಯಾಗುತ್ತವೆ ಈ ಜನಪ್ರಿಯ ಬೈಕುಗಳು

ಸ್ಥಳೀಯರ ಒತ್ತಾಯಕ್ಕೆ ಮಣಿದ ಎಂಜಿನಿಯರ್ ಹಾಗೂ ಗುತ್ತಿಗೆದಾರ ಆಂಬ್ಯುಲೆನ್ಸ್ ಏರಿದ್ದಾರೆ. ಗುತ್ತಿಗೆದಾರನು ಆಂಬ್ಯುಲೆನ್ಸ್ ನಲ್ಲಿದ್ದ ಸ್ಟ್ರೆಚರ್ ಮೇಲೆ ಮಲಗಿದರೆ, ಎಂಜಿನಿಯರ್ ಆತನ ಪಕ್ಕದಲ್ಲಿ ಕುಳಿತಿದ್ದರು. ಹದಗೆಟ್ಟ ರಸ್ತೆಗಳಲ್ಲಿಯೇ ಸ್ಥಳೀಯರು ಇವರಿಬ್ಬರೂ ಇದ್ದ ಆಂಬ್ಯುಲೆನ್ಸ್ ಚಾಲನೆ ಮಾಡಿದ್ದಾರೆ.
MOST READ: ವಾಹನ ಸವಾರರೇ ಎಚ್ಚರ: ನಕಲಿ ಪೊಲೀಸರಿಂದ ಹಗಲು ದರೋಡೆ

ಆಂಬ್ಯುಲೆನ್ಸ್ ನಿಂದ ವಾಪಸಾದ ನಂತರ ಅವರ ಪ್ರತಿಕ್ರಿಯೆ ಕೇಳಿದ್ದಾರೆ. ಗುತ್ತಿಗೆದಾರನು ಹದಗೆಟ್ಟ ರಸ್ತೆಯಲ್ಲಿ ಚಲಿಸಿದ್ದು ಬಹಳ ನೋವಿನಿಂದ ಕೂಡಿತ್ತು ಎಂದು ಹೇಳುತ್ತಿರುವುದನ್ನು ಕೇಳಬಹುದು. ಇದಾದ ನಂತರ ಸ್ಥಳೀಯರು ರಸ್ತೆಗಳನ್ನು ಸರಿಪಡಿಸುವಂತೆ ಎಂಜಿನಿಯರ್ ಹಾಗೂ ಗುತ್ತಿಗೆದಾರನನ್ನು ಮತ್ತೊಮ್ಮೆ ಒತ್ತಾಯಿಸಿದ್ದಾರೆ.
MOST READ: ಜೆಸಿಬಿ ಯಂತ್ರವು ಹಳದಿ ಬಣ್ಣದಲ್ಲೇ ಏಕಿರುತ್ತೆ?

ಸ್ಥಳೀಯರು ಹದಗೆಟ್ಟ ರಸ್ತೆಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಹೇಳುತ್ತಿರುವುದನ್ನು ಸಹ ಈ ವೀಡಿಯೊದಲ್ಲಿ ಕಾಣಬಹುದು. ಇತ್ತೀಚಿಗೆ ಗೋವಾ ಸಂಚಾರ ವಿಭಾಗದ ಡಿವೈಎಸ್ಪಿರವರು ಒಳ್ಳೆಯ ರಸ್ತೆಗಳಿಂದ ರಸ್ತೆ ಅಪಘಾತಗಳು ಉಂಟಾಗುತ್ತವೆಯೇ ಹೊರತು, ರಸ್ತೆ ಗುಂಡಿಗಳಿಂದಲ್ಲ ಎಂದು ಹೇಳಿದ್ದರು.

ಕರ್ನಾಟಕದ ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳರವರು ಸಹ ಕಳೆದ ವಾರ ಇದೇ ರೀತಿಯ ಹೇಳಿಕೆಯನ್ನು ನೀಡಿದ್ದರು. ಒಳ್ಳೆಯ ರಸ್ತೆಗಳಿಂದ ಅಪಘಾತವಾಗುತ್ತವೆಯೇ ಹೊರತು ಹದಗೆಟ್ಟ ರಸ್ತೆಗಳಿಂದ ಅಪಘಾತವಾಗುವುದಿಲ್ಲವೆಂದು ತಿಳಿಸಿದ್ದರು.
Source: In Goa 24X7/Facebook


Click it and Unblock the Notifications