BMTC ಡಿಪೋಗೆ ನಟ ರಜಿನಿಕಾಂತ್ ದಿಢೀರ್ ಭೇಟಿ... ಹಳೇ ದಿನಗಳನ್ನು ನೆನಪಿಸಿಕೊಂಡ ಒಂದು ಕಾಲದ ಕಂಡೆಕ್ಟರ್
ಸೂಪರ್ ಸ್ಟಾರ್ ರಜಿನಿಕಾಂತ್ ಅವರು ಇಂದು ಬೆಂಗಳೂರಿನ ಜಯನಗರ 4ನೇ ಡಿಪೋಗೆ ಧಿಡೀರ್ ಭೇಟಿ ನೀಡಿ ಅಲ್ಲಿನ ಸಿಬ್ಬಂದಿಯನ್ನು ಅಚ್ಚರಿಗೊಳಿಸಿದ್ದಾರೆ. ಸಿಬ್ಬಂದಿಯೊಂದಿಗೆ ಫೊಟೋ ತೆಗೆಸಿಕೊಂಡು ತುಸು ಸಮಯ ಕಳೆದ ಅವರು, ಡಿಪೋವನ್ನು ಒಂದು ರೌಂಡ್ ಹಾಕಿ ಅಲ್ಲಿಂದ ತೆರಳಿದ್ದಾರೆ ಎಂದು ಅಲ್ಲಿನ ಸಿಬ್ಬಂದಿ ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಬಿಡುಗಡೆಯಾದ ಸೂಪರ್ ಸ್ಟಾರ್ ರಜಿನಿಕಾಂತ್ ಅವರ ಜೈಲರ್ ಸಿನಿಮಾ ಅದ್ಬುತ ಯಶಸ್ಸು ಕಂಡಿದೆ. ಕಲೆಕ್ಷನ್ನಲ್ಲಿ ಧೂಳೆಬ್ಬಿಸಿ ಬರೋಬ್ಬರಿ 600 ಕೋಟಿ ಕ್ಲಬ್ ಸೇರಿದೆ. ಇದೇ ಖುಷಿಯಲ್ಲಿರುವ ಸೂಪರ್ಸ್ಟಾರ್ ರಜಿನಿಕಾಂತ್ ಅವರು, ಇಂದು ಜಯನಗರದ ಬಿಎಂಟಿಸಿ ಡಿಪೋಗೆ ಅಚ್ಚರಿಯ ಭೇಟಿ ನೀಡಿ ಅಲ್ಲಿನ ಸಿಬ್ಬಂದಿಯನ್ನು ಖುಷಿಪಡಿಸಿದ್ದಾರೆ.

ಜಯನಗರ ಬಿಎಂಟಿಸಿ 4ನೇ ಡಿಪೋಗೆ ಬೆಳಿಗ್ಗೆ ಸುಮಾರು 11.30ಕ್ಕೆ ಸಾಮಾನ್ಯ ವ್ಯಕ್ತಿಯಂತೆ ಆಗಿಮಿಸಿದ ಅವರು 11.45 ರವರೆಗೂ ಡಿಪೋದಲ್ಲೇ ಸಿಬ್ಬಂದಿಗಳ ಜತೆ ಮಾತನಾಡಿ ಸಮಯ ಕಳೆದಿದ್ದಾರೆ. ನಂತರ ಡಿಪೋ ಒಳಗೆ ಸುತ್ತಾಡಿದ ಅವರು ಅಲ್ಲಿಂದ ತೆರಳಿದ್ದಾರೆ. ಅವರು ಯಾವ ಉದ್ದೇಶಕ್ಕಾಗಿ ಅಲ್ಲಿಗೆ ಭೇಟಿ ನೀಡಿದ್ದರು ಎಂಬುದರ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಆದ್ರೆ ರಜಿನಿಕಾಂತ್ ಅವರು ಯಾರಿಗೂ ತಿಳಿಯದಂತೆ ಆಗ್ಗಾಗೆ ಬೆಂಗಳೂರಿಗೆ ಬಂದು ಸುತ್ತಾಡುವುದು ಎಲ್ಲರಿಗೂ ತಿಳಿದೇ ಇದೆ. ಈಗಲೂ ಅದೇ ರೀತಿ ಬಂದಿರಬಹುದು ಎನ್ನಲಾಗಿದೆ. ಅವರು ಮೊದಲು ಇದೆ ಬಿಎಂಟಿಸಿ ಸಾರಿಗೆಯಲ್ಲಿ ಕಂಡೆಕ್ಟರ್ ಆಗಿದ್ದವರು. ಅವರ ಸಾಮಾನ್ಯ ಜೀವನ ಶೈಲಿಯಿಂದಲೇ ಇಂದು ಭಾರತದಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ.

"ಭಾರತದ ಅತ್ಯುನ್ನತ ಚಲನಚಿತ್ರ ಗೌರವವಾದ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಸ್ವೀಕರಿಸಿದ ನಂತರ ರಜನಿಕಾಂತ್ ಅವರು ತಮ್ಮ ಭಾಷಣದಲ್ಲಿ ಬೆಂಗಳೂರಿನ ತಮ್ಮ ಸ್ನೇಹಿತನನ್ನು ನೆನಪಿಸಿಕೊಂಡಿದ್ದರು. ಬೆಂಗಳೂರಿನಲ್ಲಿರುವ ನನ್ನ ಸ್ನೇಹಿತ, ಬಸ್ ಚಾಲಕ ಹಾಗೂ ನನ್ನ ಸಹೋದ್ಯೋಗಿ ರಾಜ್ ಬಹದ್ದೂರ್, ನಾನು ಬಸ್ ಕಂಡಕ್ಟರ್ ಆಗಿದ್ದಾಗ ನನ್ನಲ್ಲಿನ ನಟನಾ ಪ್ರತಿಭೆಯನ್ನು ಗುರುತಿಸಿ ಚಿತ್ರರಂಗಕ್ಕೆ ಸೇರಲು ನನ್ನನ್ನು ಪ್ರೋತ್ಸಾಹಿಸಿದ್ದರು.
76 ವರ್ಷದ ನಿವೃತ್ತ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಚಾಲಕ ಮತ್ತು ಚಾಮರಾಜಪೇಟೆ ನಿವಾಸಿ ಪಿ.ರಾಜ್ ಬಹುದ್ದೂರ್ ರಜನಿಕಾಂತ್ ಅವರನ್ನು ಆರಂಭಿಕ ದಿನಗಳಲ್ಲಿ ಗುರುತಿಸಿ ಪ್ರೋತ್ಸಾಹಿಸಿ ಚಿತ್ರರಂಗಕ್ಕೆ ಬರುವಂತೆ ಮಾಡಿದ್ದರು. ರಾಜ್ ಬಹುದ್ದೂರ್ ಅವರು ಬಿಎಂಟಿಸಿಯಲ್ಲಿ ಕೆಲಸ ಮಾಡುತ್ತಿದ್ದಾಗ ರಜನಿಕಾಂತ್ ಅವರು ಅದೇ ಬಸ್ಗೆ ಕಂಡಕ್ಟರ್ ಆಗಿ ಕೆಲಸ ಮಾಡಿದ್ದರು.

ಈಗಲೂ ಅವರ ಹಳೆಯ ದಿನಗಳು ನೆನಪಾಗಿ ಡಿಪೋಗೆ ಭೇಟಿ ನೀಡಿರಬಹುದು. ರಜಿನಿಕಾಂತ್ ಅವರನ್ನು ನೋಡಿ ಜಯನಗರ ಡಿಪೋ ಸಿಬ್ಬಂದಿ ಮಾತ್ರ ತುಂಬಾ ಖುಷಿಯಾಗಿಬಿಟ್ಟಿದ್ದಾರೆ. ಅಲ್ಲದೆ, ಸಿಬ್ಬಂದಿ ಜತೆ ಕ್ಯಾಮೆರಾಗೆ ಪೋಸ್ ಸಹ ನೀಡಿದ್ದಾರೆ. ಡಿಪೋದಲ್ಲಿ ಇಬ್ಬರು ಸ್ನೇಹಿತರು ಮತ್ತು ಸಿಬ್ಬಂದಿ ಜತೆ ಕೆಲ ಸಮಯ ಕಳೆದಿದ್ದಾರೆ. ಗಾಂಧಿ ಬಜಾರ್ನಲ್ಲಿರುವ ವಿದ್ಯಾರ್ಥಿ ಭವನ ಹಾಗೂ ರಾಘವೇಂದ್ರ ಸ್ವಾಮಿ ಮಠಕ್ಕೂ ರಜಿನಿಕಾಂತ್ ಭೇಟಿ ನೀಡಿದ್ದು, ಬೆಂಗಳೂರಿನ ಬಾಲ್ಯದ ಜೀವನವನ್ನು ಮೆಲಕು ಹಾಕಿದ್ದಾರೆ.
ಡ್ರೈವ್ಸ್ಪಾರ್ಕ್ ಕನ್ನಡ ವೆಬ್ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications