ಆಂಬುಲೆನ್ಸ್ಗೆ ದಾರಿ ಕೊಡದೆ ನಿರ್ಲಕ್ಷ್ಯ ತೋರುವವರಿಗೆ ರೂ.10,000 ದಂಡ
ವಿಶ್ವದ ಬಹುತೇಕ ದೇಶಗಳಲ್ಲಿ ಆಂಬುಲೆನ್ಸ್ಗೆ ಟ್ರಾಫಿಕ್ ನಿಯಮಗಳು ಅನ್ವಯಿಸುವುದಿಲ್ಲ. ಸೈರನ್ ಆನ್ ಮಾಡಿಕೊಂಡರೆ ಯಾವುದೇ ವಾಹನವಾಗಲಿ ದಾರಿಕೊಡಬೇಕು ಎಂಬುದು ಆಯ ದೇಶಗಳ ಕಾನೂನಾಗಿದೆ. ಇದೇ ಕಾನೂನು ಭಾರತದಲ್ಲೂ ಇದೆ, ಆದರೆ ಟ್ರಾಫಿಕ್ ಜಾಮ್ನಿಂದ ಆಂಬುಲೆನ್ಸ್ಗೆ ದಾರಿ ಸಿಗದೆ ಮಾರ್ಗ ಮಧ್ಯೆ ಜೀವ ಕಳೆದುಕೊಂಡಿರುವ ಉದಾಹರಣೆಗಳು ಇವೆ.

ತುರ್ತು ವಾಹನಗಳು ಟ್ರಾಫಿಕ್ ಜಾಮ್ನಲ್ಲಿ ಸಿಲುಕಿಕೊಂಡ ಇಂತಹ ಹಲವು ಪ್ರಕರಣಗಳು ಕಂಡುಬಂದಿವೆ. ಈ ಹಿನ್ನೆಲೆ ಹರಿಯಾಣದ ಗುರುಗ್ರಾಮ ಸಂಚಾರ ಪೊಲೀಸರು ತುರ್ತು ವಾಹನಗಳಿಗೆ ದಾರಿ ಮಾಡಿಕೊಡದವರಿಗೆ 10,000 ರೂಪಾಯಿ ದಂಡ ಪಾವತಿಸಬೇಕಾಗುತ್ತದೆ ಎಂದು ಘೋಷಿಸಿದ್ದಾರೆ. 1988ರ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 194E ಅಡಿಯಲ್ಲಿ ಸಂಚಾರ ಪೊಲೀಸರು ಈ ದಂಡವನ್ನು ವಿಧಿಸುತ್ತಿರುವುದಾಗಿ ತಿಳಿಸಿದ್ದಾರೆ.

ಗುರುಗ್ರಾಮ್ ಟ್ರಾಫಿಕ್ ಪೊಲೀಸರು ತಮ್ಮ ಟ್ವಿಟರ್ ಖಾತೆಯಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ. ತುರ್ತು ವಾಹನ ಬಂದಾಗ ಎಲ್ಲಾ ವಾಹನಗಳು ಪಕ್ಕಕ್ಕೆ ಸರಿಯಬೇಕು ಎಂದು ಪೊಲೀಸರು ಟ್ವೀಟ್ ಮಾಡಿದ್ದಾರೆ. ತುರ್ತು ವಾಹನಕ್ಕೆ ದಾರಿ ಮಾಡಿಕೊಡದಿರುವುದು ಭಾರತದಲ್ಲಿ ಅಪರಾಧವೆಂದು ಗೊತ್ತಿದ್ದರೂ ಹಲವರು ಇದನ್ನು ಕಡೆಗಣಿಸುತ್ತಿರುವುದು ಗಮನಕ್ಕೆ ಬಂದಿದೆ.

ಹಾಗಾಗಿ ಈ ನಿಯಮವನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಹಾಗೂ ರೂ.10,000 ದಂಡ ವಿಧಿಸುವುದಾಗಿ ತಿಳಿಸಿದ್ದಾರೆ. ಇದು ವಾಹನ ಸವಾರರಿಗೆ ಎಚ್ಚರಿಕೆಯ ಘಂಟೆಯಾಗಿದೆ. ತುರ್ತು ವಾಹನಗಳಿಗೆ ದಾರಿ ಮಾಡಿಕೊಡದಿರುವುದು ತುರ್ತು ವಾಹನದ ಅಗತ್ಯವಿರುವವರಿಗೆ ತುಂಬಾ ಅಪಾಯಕಾರಿ ಎಂದು ಸಾಬೀತುಪಡಿಸಬಹುದು.

ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಪ್ರತಿಯೊಬ್ಬರೂ ಈ ನಿಯಮವನ್ನು ಅನುಸರಿಸುತ್ತಾರೆ. ಆದರೆ ಭಾರತದಲ್ಲಿ ಜನರು ಲೇನ್ ಡ್ರೈವಿಂಗ್ ಅನ್ನು ಸಹ ಅನುಸರಿಸುವುದಿಲ್ಲ. ನಿಮ್ಮ ಹಿಂಬದಿಯ ಕನ್ನಡಿಯಲ್ಲಿ ತುರ್ತು ವಾಹನವು ಸಮೀಪಿಸುತ್ತಿರುವುದನ್ನು ನೀವು ನೋಡಿದಾಗ, ನೀವು ಆ ವಾಹನಕ್ಕೆ ದಾರಿ ಮಾಡಿಕೊಡಲು ಪ್ರಯತ್ನಿಸಬೇಕು ಎಂದು ಗುರುಗ್ರಾಮ್ ಸಂಚಾರ ಪೊಲೀಸರು ಹೇಳುತ್ತಿದ್ದಾರೆ.

ದಾರಿ ಬಿಡದವನ ವಿರುದ್ಧ ಪ್ರಕರಣ ದಾಖಲು
ತುರ್ತು ವಾಹನಗಳಲ್ಲಿ ಹೆದ್ದಾರಿ ಗಸ್ತು ವಾಹನಗಳು, ಪೊಲೀಸ್ ವಾಹನಗಳು, ಅಗ್ನಿಶಾಮಕ ದಳಗಳು ಮತ್ತು ಆಂಬ್ಯುಲೆನ್ಸ್ಗಳು ಸೇರಿವೆ. ಕಳೆದ ವರ್ಷ ಕರ್ನಾಟಕ ಪೊಲೀಸರು ಆಂಬ್ಯುಲೆನ್ಸ್ನ ದಾರಿಯನ್ನು ತಡೆದ ಕಾರಣ ಚಾಲಕನನ್ನು ಬಂಧಿಸಿದ್ದರು. ಚಾಲಕ ಮಾರುತಿ ಸುಜುಕಿ ಎರ್ಟಿಗಾವನ್ನು ಚಲಾಯಿಸುತ್ತಿದ್ದನು. ಉದ್ದೇಶಪೂರ್ವಕವಾಗಿ ಹೆದ್ದಾರಿಯಲ್ಲಿ ಆಂಬ್ಯುಲೆನ್ಸ್ನ ದಾರಿಯನ್ನು ತಡೆದಿದ್ದ.

ದಕ್ಷಿಣ ಕನ್ನಡ ಜಿಲ್ಲೆಯ ತೊಕ್ಕೊಟ್ಟು-ಪಂಪ್ವೆಲ್ ನಡುವಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಈ ಘಟನೆ ನಡೆದಿದೆ. ಆರೋಪಿಯನ್ನು 31 ವರ್ಷದ ಚರಣ್ ಎಂದು ಗುರುತಿಸಲಾಗಿದೆ. ಆಂಬ್ಯುಲೆನ್ಸ್ನ ಮುಂಭಾಗದ ಪ್ರಯಾಣಿಕರ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬರು ಈ ವಿಡಿಯೋವನ್ನು ರೆಕಾರ್ಡ್ ಮಾಡಿದ್ದಾರೆ.

ಈ ಸಂಬಂಧ ಮಂಗಳೂರು ಠಾಣಾಧಿಕಾರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವೈರಲ್ ವೀಡಿಯೊ ಕ್ಲಿಪ್ಪಿಂಗ್ ಆಧಾರದ ಮೇಲೆ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 279 ರ ಅಡಿಯಲ್ಲಿ ಸಾರ್ವಜನಿಕ ರಸ್ತೆಯಲ್ಲಿ ಅಸಮರ್ಪಕ ಚಾಲನೆ ಮೋಟಾರು ವಾಹನಗಳ ಕಾಯಿದೆ, 1988 ರ 194 (ಇ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

ಕೇರಳದ ಕಾರು ಚಾಲಕನಿಗೆ ಶಿಕ್ಷೆ
ಇಂತಹ ಪ್ರಕರಣಗಳು ಆಗಾಗ ನಡೆಯುತ್ತಲೇ ಇರುತ್ತವೆ. 2017ರಲ್ಲಿ ಕೇರಳದ ಕೊಚ್ಚಿಯಲ್ಲಿ ಕಾರ್ ಚಾಲಕನೋರ್ವ ಆಂಬುಲೆನ್ಸ್ಗೆ ದಾರಿ ಬಿಡದೆ ಶಿಕ್ಷೆಗೆ ಗುರಿಯಾಗಿದ್ದ. ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದ ನವಜಾತ ಶಿಶು ಸಾಗಿಸುವಾಗ ಫೋರ್ಡ್ ಇಕೋ ಸ್ಪೋರ್ಟ್ ಕಾರು ಚಾಲಕ ಆ್ಯಂಬುಲೆನ್ಸ್ಗೆ ದಾರಿ ಬಿಡದೆ 15 ನಿಮಿಷಗಳ ಕಾಲ ಅಡ್ಡಿಪಡಿಸಿದ್ದ.

ಇದರಿಂದಾಗಿ ಆಸ್ಪತ್ರೆಯನ್ನು ತಲುಪಲು ಪರದಾಡಿದ ಆ್ಯಂಬುಲೆನ್ಸ್ ಚಾಲಕ ಫೋರ್ಡ್ ಕಾರು ಚಾಲಕನ ವರ್ತನೆಯನ್ನು ಕಂಡು ಸಿಡಿಮಿಡಿಗೊಂಡಿದ್ದು, ಈ ಸಂಬಂಧ ಪ್ರಕರಣವನ್ನು ಕೂಡಾ ದಾಖಲು ಮಾಡಿದ್ದ. ಆ್ಯಂಬುಲೆನ್ಸ್ ಚಾಲಕ ನೀಡಿದ ದೂರಿನ್ವಯ ಫೋರ್ಡ್ ಇಕೋ ಸ್ಪೋರ್ಟ್ ಕಾರು ಚಾಲಕನನ್ನು ವಶಕ್ಕೆ ಪಡೆದ ಕೊಚ್ಚಿ ಪೊಲೀಸರು, ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಅಡ್ಡಾದಿಡ್ಡಿ ಕಾರು ಚಾಲನೆ ಪ್ರಕರಣ ದಾಖಲಿಸಿ ಕೋರ್ಟ್ಗೆ ಹಾಜರುಪಡಿಸಿದ್ದರು.

ಹೀಗಾಗಿ ಆ್ಯಂಬುಲೆನ್ಸ್ಗೆ ಅಡ್ಡಿಪಡಿಸಿದ ಹಿನ್ನೆಲೆ ಕಾರು ಚಾಲಕನಿಗೆ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡ ಸ್ಥಳೀಯ ನ್ಯಾಯಾಲಯವು, ಆರೋಪಿ ನಿರ್ಮಲ್ ಜೋಷ್ಗೆ 15 ದಿನ ಕಾಲ ಕಾರಾಗೃಹ ಶಿಕ್ಷೆ ಅಥವಾ ಭಾರೀ ಪ್ರಮಾಣದ ದಂಡ ವಸೂಲಿ ಮಾಡುವಂತೆ ಆದೇಶಿಸಿತ್ತು.

ಇದರಿಂದಾಗಿ ಯಾವುದೇ ವಾಹನ ಚಾಲಕರು ತುರ್ತು ವಾಹನಗಳಿಗೆ ದಯವಿಟ್ಟು ಅಡ್ಡಿಪಡಿಸುವ ಕೆಲಸವನ್ನು ಮಾಡಲೇಬೇಡಿ. ಯಾಕೇಂದ್ರೆ ಒಂದು ನಿಮಿಷ ವಿಳಂಬವಾದ್ರೂ ರೋಗಿಗಳ ಜೀವ ಬಲಿಯಾಗುವ ಸಂದರ್ಭಗಳಿರುತ್ತವೆ ಎಂಬುವುದನ್ನು ಮರೆಯಬೇಡಿ.

ಡ್ರೈವ್ಸ್ಪಾರ್ಕ್ ಅಭಿಪ್ರಾಯ
ಭಾರತದಲ್ಲಿ ಪ್ರತಿಯೊಬ್ಬರು ಜವಾಬ್ದಾರಿಯುತವಾಗಿಯೇ ನಡೆದುಕೊಳ್ಳುತ್ತಾರೆ, ಆದರೆ ಕೆಲ ಪುಂಡರಿಂದ ಇಂತಹ ಪ್ರಕರಣಗಳು ದಾಖಲಾಗುವ ಮೂಲಕ ಭಾರತೀಯರೆಲ್ಲರಿಗೂ ಕೆಟ್ಟ ಹೆಸರು ಬರುತ್ತಿದೆ. ಹಾಗಾಗಿ ಆಂಬುಲನ್ಸ್ಗೆ ಅಡ್ಡಿ ಪಡಿಸುವವರ ಫೋಟೋ ತೆಗೆದು ಪೋಲೀಸರ ಗಮನಕ್ಕೆ ತರುವ ಮೂಲಕ ಇಂತಹ ಪ್ರಕರಣಗಳು ಕಡಿಯಾಗುವ ಸಾಧ್ಯಯಿದೆ.


Click it and Unblock the Notifications