ಕಾರಿನಲ್ಲಿ ಹಿಂಬದಿ ಪ್ರಯಾಣಿಕರಿಗೂ ಸೀಟ್ ಬೆಲ್ಟ್ ಕಡ್ಡಾಯ: ಉಲ್ಲಂಘಿಸಿದರೆ ಭಾರಿ ದಂಡ
ಟಾಟಾ ಸನ್ಸ್ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ನಂತರ, ಭಾರತ ಸರ್ಕಾರವು ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಈಗ ಕಾರಿನಲ್ಲಿ ಕುಳಿತುಕೊಳ್ಳುವ ಪ್ರತಿಯೊಬ್ಬ ವ್ಯಕ್ತಿಯು ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯ ಮಾಡಲಾಗಿದೆ.

ಈಗ ನೀವು ಕಾರಿನ ಮುಂಭಾಗ ಅಥವಾ ಹಿಂಭಾಗದಲ್ಲಿ ಕುಳಿತಿದ್ದರೂ ಎಲ್ಲರೂ ಸೀಟ್ ಬೆಲ್ಟ್ ಅನ್ನು ಧರಿಸಬೇಕಾಗುತ್ತದೆ. ಮಾಧ್ಯಮಗಳಿಗೆ ಮಾಹಿತಿ ನೀಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿ ಈ ಮಾಹಿತಿ ನೀಡಿದ್ದಾರೆ. ಭಾರತ ಸರ್ಕಾರದ ಈ ನಿರ್ಧಾರವು ಸೈರಸ್ ಮಿಸ್ತ್ರಿ ಅವರ ಸಾವಿನ ಗಂಭಿರ ಪರಿಣಾಮವಾಗಿದೆ.

ಈಗಾಗಲೇ ಕಾರಿನಲ್ಲಿ ಪ್ರಯಾಣಿಸುವ ಎಲ್ಲರೂ ಸೀಟ್ ಬೆಲ್ಟ್ ಬಳಸುವುದನ್ನು ಕಡ್ಡಾಯಗೊಳಿಸಿದ್ದರೂ ಜನರು ಅದನ್ನು ಪಾಲಿಸುತ್ತಿಲ್ಲ ಎಂದು ಗಡ್ಕರಿ ಹೇಳಿದರು. ಇನ್ನು ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತುಕೊಳ್ಳುವವರೂ ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯ ಒಂದು ವೇಳೆ ಉಲ್ಲಂಘಿಸಿರುವುದು ಕಂಡಬಂದರೆ ದಂಡ ವಿಧಿಸಲಾಗುತ್ತದೆ ಎಚ್ಚರಿಸಿದರು.

ಕಾರಿನ ಮುಂಭಾಗದಲ್ಲಿ ಕುಳಿತವರು ಸೀಟ್ ಬೆಲ್ಟ್ ಧರಿಸುತ್ತಾರೆ ಆದರೆ ಹಿಂದಿನ ಸೀಟಿನಲ್ಲಿ ಕುಳಿತವರು ಸೀಟ್ ಬೆಲ್ಟ್ ಅನ್ನು ನಿರ್ಲಕ್ಷಿಸುತ್ತಾರೆ, ಇದು ಅಪಘಾತದ ಸಮಯದಲ್ಲಿ ಮಾರಣಾಂತಿಕವಾಗಬಹುದು. ಈ ಹಿಂದೆಯೂ ಇಂತಹ ಹಲವು ಉದಾಹರಣೆಗಳಿವೆ, ಇದೀಗ ಸೈರಸ್ ಮಿಸ್ತ್ರಿ ಸಾವಿನಿಂದ ಆದರೂ ಎಲ್ಲರೂ ಎಚ್ಚೆತ್ತುಕೊಳ್ಳಬೇಕು ಎಂದು ಗಡ್ಕರಿ ಹೇಳಿದರು.

ಕೊನೆಯ ಸೆಟ್ಗೆ ಎಚ್ಚರಿಕೆಯ ವ್ಯವಸ್ಥೆ
ಕಾರಿನಲ್ಲಿ ಕುಳಿತವರು ಸೀಟ್ ಬೆಲ್ಟ್ ಧರಿಸುವುದನ್ನು ನೆನಪಿಸುವಲ್ಲಿ ಎಚ್ಚರಿಕೆಯ ವ್ಯವಸ್ಥೆಯು ಪ್ರಮುಖ ಪಾತ್ರ ವಹಿಸುತ್ತದೆ. ಪ್ರಸ್ತುತ, ಮುಂಭಾಗದ ಸೀಟ್ನಲ್ಲಿ ಕುಳಿತುಕೊಳ್ಳುವವರು ತಮ್ಮ ಸೀಟ್ ಬೆಲ್ಟ್ಗಳನ್ನು ಧರಿಸದಿದ್ದಾಗ ಅಲಾರಾಂ ಧ್ವನಿಸುತ್ತದೆ, ಆದರೆ ಈ ವ್ಯವಸ್ಥೆಯು ಸಾಮಾನ್ಯವಾಗಿ ಹಿಂದಿನ ಸೀಟ್ಗಳಿಗೆ ಲಭ್ಯವಿರುವುದಿಲ್ಲ.

ಆದರೆ ಈಗ ಹಿಂಬದಿಯ ಸೀಟಿನಲ್ಲೂ ಈ ಅಲಾರಾಂ ವ್ಯವಸ್ಥೆಯನ್ನು ನೀಡಲಾಗುವುದು. ಇದಕ್ಕಾಗಿ ಕಾರು ಕಂಪನಿಗಳಿಗೆ ಸೂಚನೆ ನೀಡಲಾಗುವುದು, ಈ ಸಂಬಂಧ ಶೀಘ್ರದಲ್ಲೇ ಸಭೆ ಕರೆದು ಕಂಪನಿಯ ಮುಖ್ಯಸ್ಥರೊಂದಿಗೆ ಚರ್ಚಿಸಲಾಗುವುದು ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.

6 ಏರ್ ಬ್ಯಾಗ್ ಕೂಡ ಕಡ್ಡಾಯವಾಗಲಿದೆ
ಕಾರಿನಲ್ಲಿ 6 ಏರ್ಬ್ಯಾಗ್ಗಳನ್ನು ಅಳವಡಿಸುವುದರಿಂದ ಕಾರಿನ ಬೆಲೆ ಹೆಚ್ಚಾಗುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ನಿತಿನ್ ಗಡ್ಕರಿ, ಜನರ ಪ್ರಾಣ ರಕ್ಷಣೆ ಹೆಚ್ಚು ಮುಖ್ಯವಾಗಿದೆ. ಒಂದು ಏರ್ ಬ್ಯಾಗ್ ಬೆಲೆ 1000 ರೂ. ಆಗಿದ್ದು, 6000 ರೂಪಾಯಿ ವೆಚ್ಚದಲ್ಲಿ ಆರು ಏರ್ ಬ್ಯಾಗ್ ಅಳವಡಿಸಬಹುದಾಗಿದೆ ಎಂದರು. ಉತ್ಪಾದನೆ ಮತ್ತು ಬೇಡಿಕೆ ಹೆಚ್ಚಾದಂತೆ ವೆಚ್ಚ ಕ್ರಮೇಣ ಕಡಿಮೆಯಾಗಲಿದೆ ಎಂದರು.

ಮೋಟಾರು ವಾಹನಗಳ ನಿಯಮಗಳ ಪ್ರಕಾರ ಭಾರತದಲ್ಲಿ ಚಾಲಕ ಮತ್ತು ಮುಂಭಾಗದ ಪ್ರಯಾಣಿಕರಿಗೆ ಏರ್ಬ್ಯಾಗ್ ಕಡ್ಡಾಯವಾಗಿದೆ. ಆದರೆ ಇದೀಗ ಶೀಘ್ರದಲ್ಲೇ ಎಂಟು ಆಸನಗಳ ವಾಹನಗಳಲ್ಲಿ 6 ಏರ್ಬ್ಯಾಗ್ಗಳ ನಿಯಮ ಕಡ್ಡಾಯವಾಗಲಿದೆ. ಅಕ್ಟೋಬರ್ 2022 ರಿಂದ ಎಂಟು ಆಸನಗಳ ಕಾರಿನಲ್ಲಿ ಆರು ಏರ್ಬ್ಯಾಗ್ ನಿಯಮವನ್ನು ಕಡ್ಡಾಯಗೊಳಿಸಲಾಗುವುದು ಎಂದು ಗಡ್ಕರಿ ಹೇಳಿದರು.

20 ಸಾವಿರಕ್ಕಿಂತ ಹೆಚ್ಚು ವಾಹನ ಸಂಚಾರ ಇದ್ದರೆ 6 ಪಥ ಅಗತ್ಯ
ಸೋಮವಾರ ನಡೆದ ಐಎಎ ವಿಶ್ವ ಶೃಂಗಸಭೆಯಲ್ಲಿ ಗಡ್ಕರಿ ಅವರು ಅಹಮದಾಬಾದ್-ಮುಂಬೈ ಹೆದ್ದಾರಿ ಅಪಾಯಕಾರಿ ಎಂದು ಬಣ್ಣಿಸಿದ್ದರು. ರಸ್ತೆಯಲ್ಲಿ 20 ಸಾವಿರ ಅಥವಾ ಅದಕ್ಕಿಂತ ಹೆಚ್ಚು ಪ್ರಯಾಣಿಕ ಕಾರುಗಳು ಸಂಚರಿಸುತ್ತಿದ್ದರೆ, ಆರು ಪಥದ ರಸ್ತೆಗಳ ಅವಶ್ಯಕತೆ ಇದೆ ಎಂದು ಹೇಳಿದ್ದರು.

ಆದರೆ, ಪ್ರಸ್ತುತ ಅಹಮದಾಬಾದ್-ಮುಂಬೈ ಎಕ್ಸ್ಪ್ರೆಸ್ವೇನಲ್ಲಿ 1 ಲಕ್ಷದ 25 ಸಾವಿರ ಪ್ರಯಾಣಿಕ ಕಾರುಗಳ ಸಂಚಾರವಿದೆ. ಇದು ರೂಢಿಗಿಂತ 6.25 ಪಟ್ಟು ಹೆಚ್ಚು, ಹೀಗಾಗಿ ಇಲ್ಲಿ ಅಪಘಾತ ಸಂಭವಿಸುವ ಸಾಧ್ಯತೆಗಳು ತುಂಬಾ ಹೆಚ್ಚಿವೆ.

ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ಕಾರಿನ ಹಿಂಬದಿಯ ಸೀಟಿನಲ್ಲಿ ಕುಳಿತಿರುವವರಿಗೂ ಸೀಟ್ ಬೆಲ್ಟ್ ಬಳಸುವಂತೆ ಮನವಿ ಮಾಡಿದ್ದಾರೆ. ಮುಂದಿನ ಸೀಟಿನಲ್ಲಿ ಮಾತ್ರವಲ್ಲದೆ ಹಿಂದಿನ ಸೀಟಿನಲ್ಲೂ ಸೀಟ್ ಬೆಲ್ಟ್ ಧರಿಸುತ್ತೇನೆ ಎಂದು ಇತ್ತಿಚೆಗೆ ಪ್ರತಿಜ್ಞೆ ಕೂಡ ಮಾಡಿದ್ದಾರೆ.

ಟಾಟಾ ಸನ್ಸ್ನ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರು ಅಹಮದಾಬಾದ್ನಿಂದ ಮುಂಬೈಗೆ ಪ್ರಯಾಣಿಸುತ್ತಿದ್ದಾಗ ಸೂರ್ಯ ನದಿಯ ಕೊಳದ ಮೇಲೆ ಡಿವೈಡರ್ಗೆ ಡಿಕ್ಕಿ ಹೊಡೆದು ಕಳೆದ ಭಾನುವಾರ ಸಾವನ್ನಪ್ಪಿದ್ದರು. ಮಾಹಿತಿಯ ಪ್ರಕಾರ, ಕಾರು ಗಂಟೆಗೆ 130 ಕಿ.ಮೀ ವೇಗದಲ್ಲಿತ್ತು. ಅಪಘಾತವಾದಾಗ ಸೈರಸ್ ಮಿಸ್ತ್ರಿ ಅವರು ಹಿಂದಿನ ಸೀಟಿನಲ್ಲಿ ಸೀಟ್ ಬೆಲ್ಟ್ ಧರಿಸದೆ ಕುಳಿತಿದ್ದರು.

ಡ್ರೈವ್ಸ್ಪಾರ್ಕ್ ಅಭಿಪ್ರಾಯ
ಸಾಮಾನ್ಯವಾಗಿ ವಾಹನದಲ್ಲಿ ಪ್ರಯಾಣಿಸುವವರು ಅಪಘಾತ ನಡಿಯಲಿದೆ ಎಂದು ತಿಳಿದು ಪ್ರಯಾಣಿಸುವುದಿಲ್ಲ. ಒಂದು ವೇಳೆ ಹೀಗಾಗುತ್ತದೆ ಎಂದು ತಿಳಿದಿರೆ ಸೀಟ್ ಬೆಲ್ಟ್ ಧರಿಸುವುದು ಬಿಡಿ, ಆ ಪ್ರಯಾಣವನ್ನೇ ಮಾಡುವುದಿಲ್ಲ. ಭಾರತೀಯ ಪ್ರಯಾಣಿಕರಿಗೆ ಸಂಬಂಧಪಟ್ಟಂತೆ ಸೀಟ್ ಬೆಲ್ಟ್ ಎಂದರೆ ಕೇವಲ ಮುಂಬದಿಯವರಿಗೆ ಮಾತ್ರ ಎಂಬಂತೆ ವರ್ತಿಸುತ್ತಾರೆ. ಆದರೆ ಸೈರಸ್ ಮಿಸ್ತ್ರಿ ಅವರ ಅಪಘಾತ ಸೀಟ್ ಬೆಲ್ಟ್ ಮಹತ್ವವನ್ನು ತಿಳಿಸಿದೆ.


Click it and Unblock the Notifications