ಬೆಂಗಳೂರು - ಶಿವಮೊಗ್ಗ ವಿಮಾನ ಸೇವೆ ಆರಂಭ: ಕೇವಲ 1.15 ಗಂಟೆ ಪ್ರಯಾಣ, ಟಿಕೆಟ್ ದರ ಕೇಳಿದ್ರೆ ಶಾಕ್ ಆಗ್ತೀರಾ..!
ಕರ್ನಾಟಕದ ನೂತನ ವಿಮಾನ ನಿಲ್ದಾಣವಾಗಿ ಶಿವಮೊಗ್ಗ ಏರ್ಪೋರ್ಟ್ ಸೇರ್ಪಡೆಯಾಗುವ ಮೂಲಕ ಮಲೆನಾಡಿನ ಜನರ ದಶಕಗಳ ಕನಸು ಸಾಕಾರಗೊಂಡಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು, ಫೆಬ್ರವರಿ 27ರಂದು ಈ ವಿಮಾನ ನಿಲ್ದಾಣವನ್ನು ಲೋಕಾರ್ಪಣೆ ಮಾಡಿದ್ದರು. ಇಂದಿನಿಂದ ಬೆಂಗಳೂರು - ಶಿವಮೊಗ್ಗ ನಡುವೆ ವಿಮಾನ ಸೇವೆಗಳು ಆರಂಭವಾಗಿವೆ.
ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ (Bangalore Kempegowda International Airport) ಶಿವಮೊಗ್ಗ (Shivamogga)ಕ್ಕೆ ಸಂಚಾರ ಆರಂಭಿಸಿದ ಇಂಡಿಗೋ ವಿಮಾನದಲ್ಲಿ ಸಚಿವ ಎಂ.ಬಿ. ಪಾಟೀಲ್, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಶಾಸಕ ಬೇಳೂರು ಗೋಪಾಲಕೃಷ್ಣ, ಸಂಸದ ರಾಘವೇಂದ್ರ, ಶಾಸಕ ವಿಜಯೇಂದ್ರ, ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಪ್ರಯಾಣಿಸಿದ್ದಾರೆ.

ಪ್ರತಿದಿನ, ಬೆಳಗ್ಗೆ 9.05ಕ್ಕೆ ಬೆಂಗಳೂರಿನಿಂದ ಪ್ರಯಾಣ ಪ್ರಾರಂಭಿಸುವ ಈ ವಿಮಾನ, 11.05ಕ್ಕೆ ಶಿವಮೊಗ್ಗ ತಲುಪಲಿದೆ. ಅಲ್ಲಿಂದ ಬೆಂಗಳೂರಿಗೆ ಪುನಃ 11.25ಕ್ಕೆ ಪ್ರಯಾಣವನ್ನು ಶುರು ಮಾಡಲಿದೆ. ಕಳೆದ ನಾಲ್ಕು ದಿನಗಳಿಂದ ಟಿಕೆಟ್ ಬುಕ್ಕಿಂಗ್ ಶುರುವಾಗಿದ್ದು, 1 ತಿಂಗಳ ಎಲ್ಲ ಟಿಕೆಟ್ ಮಾರಾಟವಾಗಿದೆ ಎಂದು ವರದಿಯಾಗಿದೆ. ಸದ್ಯ, ಟಿಕೆಟ್ ವೊಂದಕ್ಕೆ ರೂ.2,940 ದರವಿದೆ.
ನಿನ್ನೆಯಷ್ಟೇ ಮಾಧುರಿ ಅದ್ನಾಲ್ ಎಂಬ ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದರು. ಬೆಂಗಳೂರು - ಶಿವಮೊಗ್ಗ ನಡುವೆ ನಾಳೆಯಿಂದ ವಿಮಾನ ಸೇವೆಗಳು ಶುರುವಾಗಲಿದೆ. ಆದರೆ, ಟಿಕೆಟ್ ದರ ಈ ರೀತಿಯಲ್ಲಿದೆ ಎಂಬುದನ್ನು ತಿಳಿಸಲು ಸ್ಕ್ರೀನ್ ಶಾಟ್ ಅನ್ನು ಹಂಚಿಕೊಂಡಿದ್ದರು. ಅದರಲ್ಲಿ ಆಗಸ್ಟ್ 31ಕ್ಕೆ ಕೇವಲ 2 ಸೀಟ್ ಮಾತ್ರ ಇದ್ದು, ರೂ.14,354 ಟಿಕೆಟ್ ದರವಿತ್ತು. ರಿಯಾಯತಿ ಒಳಗೊಂಡು ರೂ.13,854 ಇದ್ದು, ದುಪ್ಪಟ್ಟು ಹೆಚ್ಚಾಗಿದೆ.
ಶಿವಮೊಗ್ಗದಿಂದ ದೇಶದ ಪ್ರಮುಖ ನಗರಗಳಾದ ದೆಹಲಿ, ಹೈದರಾಬಾದ್, ತಿರುಪತಿ, ಚೆನ್ನೈ ಮತ್ತು ಗೋವಾಕ್ಕೂ ನೇರ ವಿಮಾನ ಸೇವೆ ಒದಗಿಸಲು ಯೋಜಿಸಲಾಗಿದೆ. ಈ ವಿಮಾನ ನಿಲ್ದಾಣದಿಂದ ಚಿತ್ರದುರ್ಗ, ದಾವಣಗೆರೆ ಜಿಲ್ಲೆಯ ಜನರಿಗೂ ದೊಡ್ಡಮಟ್ಟದಲ್ಲಿ ಅನುಕೂಲವಾಗಲಿದೆ. ಈ ಏರ್ಪೋರ್ಟ್ನಲ್ಲಿ ಇಲ್ಲಿನ ಸಿಬ್ಬಂದಿಗಳು, ಗಂಟೆಗೆ ಬರೋಬ್ಬರಿ 300 ಪ್ರಯಾಣಿಕರನ್ನು ನಿಭಾಯಿಸುವಷ್ಟು ಪ್ಯಾಸೆಂಜರ್ ರ್ಟರ್ಮಿನಲ್ ಕಟ್ಟಡ ಸುಸಜ್ಜಿತವಾಗಿದೆ.
ಕೇಂದ್ರ ಸರ್ಕಾರ ಉಡಾನ್ ಯೋಜನೆ ಅಡಿ ಶಿವಮೊಗ್ಗ ಸಮೀಪದ ಸೋಗಾನೆ ಹತ್ತಿರ 662.38 ಎಕರೆ ಪ್ರದೇಶದಲ್ಲಿ ರೂ.450 ಕೋಟಿ ವ್ಯಯಿಸಿ, ಈ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡಿದೆ. ಕೆಂಪೇಗೌಡ ಇಂಟರ್ನ್ಯಾಷನಲ್ ಏರ್ಪೋರ್ಟ್ ನಂತರ, ರಾಜ್ಯದ ಅತಿ ಉದ್ದದ ರನ್ ವೇ ಹೊಂದಿರುವ ಎರಡನೇ ವಿಮಾನ ನಿಲ್ದಾಣವೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಬೋಯಿಂಗ್ 737 ಮತ್ತು ಏರ್ಬಸ್ A320 ನಂತಹ ದೊಡ್ಡ ಫ್ಲೈಟ್ ಲ್ಯಾಂಡ್ ಮಾಡಬಹುದು.

ಸೋಗಾನೆಯಲ್ಲಿರುವ ಈ ಏರ್ಪೋರ್ಟ್ ಶಿವಮೊಗ್ಗ ನಗರದಿಂದ 8.8 ಕಿಲೋಮೀಟರ್ ಹಾಗೂ ಭದ್ರಾವತಿಯಿಂದ 8.2 ಕಿಲೋಮೀಟರ್ ಅಂತರದಲ್ಲಿದೆ. ಪ್ರಮುಖವಾಗಿ ನೈಟ್ ಲ್ಯಾಡಿಂಗ್ ವ್ಯವಸ್ಥೆಯೂ ಇಲ್ಲಿದೆ. ಜೊತೆಗೆ, ಶಿವಮೊಗ್ಗ ರಾಷ್ಟ್ರಕವಿ ಕುವೆಂಪು ಅವರ ಹುಟ್ಟುರು ಆಗಿರುವುದರಿಂದ ಈ ಏರ್ಪೋರ್ಟ್ಗೆ ಕುವೆಂಪು ವಿಮಾನ ನಿಲ್ದಾಣವೆಂದು ನಾಮಕರಣ ಮಾಡಿರುವುದು ಹೆಮ್ಮೆಯ ವಿಚಾರವಾಗಿದೆ.
ಇನ್ನು, ಶಿವಮೊಗ್ಗದಲ್ಲಿ ವಿಮಾನಗಳ ಕಾರ್ಯಾಚರಣೆ ಶುರುವಾಗಿರುವುದರಿಂದ ಮಧ್ಯ ಕರ್ನಾಟಕ ಭಾಗದ ಜನರಿಗೆ ಸಾಕಷ್ಟು ಅನುಕೂಲವಾಗುತ್ತದೆ. ಶಿವಮೊಗ್ಗ ಸುತ್ತಲಿನ ಜಿಲ್ಲೆಗಳಾದ ದಾವಣಗೆರೆ, ಚಿತ್ರದುರ್ಗದಲ್ಲಿ ಕೈಗಾರಿಕೆ, ಪ್ರವಾಸೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳು ಅಭಿವೃದ್ಧಿಯಾಗಲಿದ್ದು, ದೊಡ್ಡಮಟ್ಟದಲ್ಲಿ ಉದ್ಯೋಗ ಸೃಷ್ಟಿಯಾಗಲಿದೆ. ಎರಡು ನಗರಗಳ ನಡುವೆ ಪ್ರಯಾಣದ ಅವಧಿ ತುಂಬಾ ಕಡಿಮೆಯಾಗಲಿದೆ.

ಡ್ರೈವ್ಸ್ಪಾರ್ಕ್ ಕನ್ನಡ ವೆಬ್ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications