Bangalore–Mysore Expressway: ವೇಗವಾಗಿ ಚಲಿಸಿದರೆ ಡಿಎಲ್ ಕ್ಯಾನ್ಸಲ್, ಖಡಕ್ ವಾರ್ನಿಂಗ್!
ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ವೇ (Bangalore-Mysore Expressway)ಯಲ್ಲಿ ಅಪಘಾತಗಳ ಸಂಖ್ಯೆ ಕಡಿಮೆ ಮಾಡಲು ಪೊಲೀಸ್ ಇಲಾಖೆ ಮುಂದಾಗಿದೆ. ದಶಪಥ ಹೆದ್ದಾರಿಯಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ವೇಗದಲ್ಲಿ ವಾಹನಗಳನ್ನು ಓಡಿಸಿದರೆ, ದಂಡ ವಿಧಿಸುವ ಜೊತೆಗೆ ಅಂತಹ ಚಾಲಕರ ಪರವಾನಗಿಯನ್ನು ರದ್ದು ಮಾಡುವಂತಹ ಕ್ರಮಗಳನ್ನು ಜರುಗಿಸಲು ಚಿಂತನೆ ನಡೆಸಿದೆ.
ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ವೇ ಲೋಕಾರ್ಪಣೆಗೊಂಡ ಬಳಿಕ ನಡೆದ ರಸ್ತೆ ಅಪಘಾತಗಳಲ್ಲಿ 100 ಜನರು ಪ್ರಾಣ ಕಳೆದುಕೊಂಡಿದ್ದು, 350 ಮಂದಿ ಗಾಯಗೊಂಡಿದ್ದಾರೆ. ಈ ಹೆದ್ದಾರಿಯಲ್ಲಿ ವಾಹನಗಳು ನಿಗದಿತ ಮಿತಿಗಿಂತ ಹೆಚ್ಚಿನ ವೇಗದಲ್ಲಿ ಚಲಿಸುತ್ತಿರುವುದೇ ಅಪಘಾತಕ್ಕೆ ಪ್ರಾಥಮಿಕ ಕಾರಣಗಳಲ್ಲಿ ಒಂದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಸದ್ಯ, ಅಪಘಾತಗಳ ತಡೆಗೆ ಪೊಲೀಸ್ ಇಲಾಖೆ ಮುಂದಾಗಿದೆ.

ರಾಮನಗರ ಜಿಲ್ಲೆಯಲ್ಲಿ ಹಾದು ಹೋಗುವ ಎಕ್ಸ್ಪ್ರೆಸ್ವೇಯನ್ನು ಮಂಗಳವಾರ ಸಂಚಾರ ಹಾಗೂ ರಸ್ತೆ ಸುರಕ್ಷತೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಪರಿಶೀಲಿಸಿದರು. ಆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಣ್ಣ ವಾಹನಗಳು ಸಹ 100 ಕಿ.ಮೀ ವೇಗದ ಮಿತಿ ದಾಟುತ್ತಿರವುದನ್ನು ಗಮನಿಸಲಾಗಿದೆ. ವಾಹನಗಳು ಚಾಲಕರ ನಿಯಂತ್ರಣ ಕಳೆದುಕೊಂಡು, ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿ ಎದುರುಗಡೆಯಿಂದ ಬರುತ್ತಿರುವ ವಾಹನಗಳೊಂದಿಗೆ ಮುಖಾಮುಖಿಯಾಗುತ್ತಿವೆ ಎಂದು ಹೇಳಿದ್ದಾರೆ.
ಅತಿ ವೇಗದ ಚಾಲನೆಯನ್ನು ಪರಿಶೀಲಿಸಲು, ಪೊಲೀಸ್ ಗಸ್ತು ವಾಹನಗಳನ್ನು ನಿಯೋಜಿಸಲಾಗುವುದು. ಸಂಚಾರಿ ನಿಯಮ ಉಲ್ಲಂಘಿಸುವವರ ವಿರುದ್ಧ ಅಗತ್ಯ ಕಠಿಣ ಕ್ರಮಕೈಗೊಳ್ಳಲಾಗುವುದು. ಚಾಲಕರಿಗೆ ವೇಗದ ಮಿತಿ, ಸರಿಯಾದ ಲೈನ್ನಲ್ಲಿ ವಾಹನ ಓಡಿಸಲು ಹಾಗೂ ಸರ್ವಿಸ್ ರಸ್ತೆ ಕಡೆಗೆ ತಿರುವನ್ನು ತೆಗೆದುಕೊಳ್ಳುವಾಗ ಇಂಡಿಕೇಟರ್ ಬಳಸುವಂತೆ ಜಾಗೃತಿ ಮೂಡಿಸಲು ಸೈನ್ಬೋರ್ಡ್ ಅವಳವಡಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.
ಹೆದ್ದಾರಿ ದಾಟಲು ಅನುಕೂಲವಾಗುವಂತೆ ಸ್ಕೈವಾಕ್ ನಿರ್ಮಿಸುವುದು. ವಾಹನಗಳ ವೇಗವನ್ನು ಪರೀಕ್ಷಿಸಲು ಕ್ಯಾಮೆರಾ ಅಳವಡಿಸುವುದು. ರಸ್ತೆಯಲ್ಲಿ ಮಳೆನೀರು ನಿಂತು, ವಾಹನ ಸವಾರರಿಗೆ ಆಗುವ ತೊಂದರೆ ಸರಿಪಡಿಸಲು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗೆ ಕೇಳಿದ್ದೇವೆ ಎಂದು ಅವರು ಹೇಳಿದ್ದಾರೆ. ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ವೇ ಸಮಸ್ಯೆ ಬಗೆಹರಿಸಲು ಸ್ವತಃ ಪೊಲೀಸ್ ಇಲಾಖೆ ಎಂಟ್ರಿ ಕೊಟ್ಟಿದ್ದು, ಕನಿಷ್ಠ 25% ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡಲು ಗುರಿಯನ್ನು ಹಾಕಿಕೊಂಡಿದೆ.
ಬೆಂಗಳೂರು - ಮೈಸೂರು ಎಕ್ಸ್ಪ್ರೆಸ್ವೇ ಬಗ್ಗೆ ಒಂದಷ್ಟು ವಿಚಾರಗಳನ್ನು ಹೇಳುವುದಾದರೆ, ಪ್ರವಾಸೋದ್ಯಮ, ಕೈಗಾರಿಕೆ ಒಳಗೊಂಡಂತೆ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ರೂ.8172 ಕೋಟಿ ವ್ಯಯಿಸಿ, ಈ ಹೆದ್ದಾರಿಯನ್ನು ನಿರ್ಮಾಣ ಮಾಡಿದೆ. ಎಕ್ಸ್ಪ್ರೆಸ್ವೇಯಿಂದ ಆಗಿರುವ ಅನುಕೂಲವೆಂದರೆ, ಬೆಂಗಳೂರು ಮೈಸೂರು ನಗರಗಳ ನಡುವೆ ಪ್ರಯಾಣದ ಅವಧಿ ಇಳಿಕೆಯಾಗಿರುವುದು.
ಇದು, ದಶಪಥದ ಹೆದ್ದಾರಿಯಾಗಿರುವುದರಿಂದ ಎರಡು ಕಡೆ ತಲಾ ಮೂರು ಲೈನ್ ಒಳಗೊಂಡಿರುವ 6 ಲೈನ್ ಎಕ್ಸ್ಪ್ರೆಸ್ ವೇ ಇದೆ. ಉಳಿದ ಎರಡು ಬದಿಯಲ್ಲಿ ತಲಾ 2 ಲೈನ್ಗಳಿರುವ ಸರ್ವಿಸ್ ರಸ್ತೆ ಇದೆ. 118 ಕಿಲೋ ಮೀಟರ್ ಉದ್ದದ ಈ ರಸ್ತೆಯಲ್ಲಿ 9 ಬೃಹತ್ ಸೇತುವೆ, 44 ಕಿರು ಸೇತುವೆ, 4 ರೈಲ್ವೆ ಮೇಲ್ಸೇತುವೆ, 28 ಅಂಡರ್ಪಾಸ್ ಗಳಿವೆ.
ಡ್ರೈವ್ಸ್ಪಾರ್ಕ್ ಕನ್ನಡ ವೆಬ್ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications