ಇ-ಆಟೋ ಪರ್ಮಿಟ್: ಬಜಾಜ್ ಆಟೋ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್
ಎಲೆಕ್ಟ್ರಿಕ್ ಆಟೋ ರಿಕ್ಷಾಗಳಿಗೆ 4,200 ಪರ್ಮಿಟ್ಗಳನ್ನು ನೀಡುವ ದೆಹಲಿ ಸರ್ಕಾರದ ನಿರ್ಧಾರದ ವಿರುದ್ಧ ಬಜಾಜ್ ಆಟೋ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಬುಧವಾರ ವಜಾಗೊಳಿಸಿದೆ. ದೆಹಲಿ ನಿವಾಸಿಗಳು ವಾಯು ಮಾಲಿನ್ಯದಿಂದ ತೀವ್ರ ತೊಂದರೆಯನ್ನು ಎದುರಿಸುತ್ತಿದ್ದಾರೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಸಿಎನ್ಜಿ ಆಟೋ ರಿಕ್ಷಾ ತಯಾರಕರ ವಿರುದ್ಧ ದೆಹಲಿ ಸರ್ಕಾರದ ಕ್ರಮವು ನಿರಂಕುಶವಾಗಿದ್ದು, ತಾರತಮ್ಯದಿಂದ ಕೂಡಿದೆ ಎಂದು ಬಜಾಜ್ ಆಟೋ ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ತಿಳಿಸಿತ್ತು.

ಬಜಾಜ್ ಆಟೋ ತನ್ನ ಅರ್ಜಿಯಲ್ಲಿ ದೆಹಲಿ ಸರ್ಕಾರದ ನಿರ್ಧಾರವು ಮಾರುಕಟ್ಟೆ ಅವಕಾಶಗಳನ್ನು ಸೀಮಿತಗೊಳಿಸುವ ಕಡೆಗೆ ಗಮನ ಹರಿಸುತ್ತದೆ ಎಂದು ಹೇಳಿತ್ತು. ಈ ನಿರ್ಧಾರವು ಹೊಸ ಸಿಎನ್ಜಿ ಆಟೋಗಳ ಮೇಲಿನ ಪರೋಕ್ಷ ನಿಷೇಧಕ್ಕೆ ಸಮನಾಗಿರುತ್ತದೆ. ತರ್ಕಬದ್ಧ ಆಧಾರ ಅಥವಾ ಸಂವೇದನಾಶೀಲ ವ್ಯತ್ಯಾಸವಿಲ್ಲದೆ ವಾಹನಗಳ ವರ್ಗಕ್ಕೆ ಮಾರುಕಟ್ಟೆ ಅವಕಾಶಗಳನ್ನು ನಿರ್ಬಂಧಿಸುವುದಕ್ಕೆ ಸಮಾನವಾಗಿದೆ ಎಂದು ಕಂಪನಿ ಹೇಳಿತ್ತು.

ದೆಹಲಿ ಸರ್ಕಾರದ ನಿರ್ಧಾರವನ್ನು ತರ್ಕಬದ್ಧವೆಂದ ನ್ಯಾಯಾಲಯ
ಎಲೆಕ್ಟ್ರಿಕ್ ಆಟೋ ರಿಕ್ಷಾಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಿರುವ ದೆಹಲಿ ಸರ್ಕಾರದ ಕ್ರಮವು ಫೇಮ್ 2 ಯೋಜನೆ ಹಾಗೂ ಎಲೆಕ್ಟ್ರಿಕ್ ವೆಹಿಕಲ್ ನೀತಿ 2020ಕ್ಕೆ ಅನುಗುಣವಾಗಿದೆ ಎಂದು ನ್ಯಾಯಮೂರ್ತಿ ಎಲ್ ನಾಗೇಶ್ವರ ರಾವ್ ರವರಿದ್ದ ನ್ಯಾಯಪೀಠವು ಹೇಳಿದೆ.

ದೆಹಲಿ ನಿವಾಸಿಗಳು ವಾಯು ಮಾಲಿನ್ಯದಿಂದ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ವಾಯು ಮಾಲಿನ್ಯಕ್ಕೆ ವಾಹನಗಳು ನಿಸ್ಸಂದೇಹವಾಗಿ ಪ್ರಮುಖ ಕೊಡುಗೆ ನೀಡುತ್ತವೆ. ಸಿಎನ್ಜಿ ಆಟೋಗಳು ಬಿಎಸ್ 6 ನಿಯಮಗಳಿಗೆ ಹೊಂದಿಕೊಂಡರೂ ಇನ್ನೂ ಕೆಲವು ಪ್ರಮಾಣದಲ್ಲಿ ಕಾರ್ಬನ್ ಡೈ ಆಕ್ಸೈಡ್ ಹೊರ ಹೊಮ್ಮುತ್ತದೆ ಎಂದು ನ್ಯಾಯಪೀಠ ಹೇಳಿದೆ. ಈ ಪ್ರಕರಣದಲ್ಲಿ ಅರ್ಜಿದಾರ ಬಜಾಜ್ ಆಟೋದ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿಲ್ಲವೆಂದು ಎಂದು ನ್ಯಾಯಪೀಠ ಹೇಳಿದೆ.

ಸಿಎನ್ಜಿಯಲ್ಲಿ ಚಲಿಸುವ 92,000 ಆಟೋ ರಿಕ್ಷಾಗಳು ದೆಹಲಿಯಲ್ಲಿ ನೋಂದಣಿಯಾಗಿವೆ. ಜೊತೆಗೆ ಹಳೆಯ ಸಿಎನ್ಜಿ ವಾಹನಗಳನ್ನು ಬದಲಾಯಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ದೆಹಲಿ ಸರ್ಕಾರ ಈಗಾಗಲೇ ತಿಳಿಸಿದೆ. ದೆಹಲಿ ಸರ್ಕಾರವು ಈ ವರ್ಷದ ಅಕ್ಟೋಬರ್ನಲ್ಲಿ 4,261 ಇ-ಆಟೋಗಳಿಗೆ ಪರವಾನಗಿ ನೀಡುವ ಪ್ರಕ್ರಿಯೆಯನ್ನು ಆರಂಭಿಸಿತ್ತು. ಇದರಲ್ಲಿ 1,406 ಇ-ಆಟೋ ಪರ್ಮಿಟ್ಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ.

ದೆಹಲಿ ಸಾರಿಗೆ ಇಲಾಖೆಯು ಇ-ಆಟೋ ಪರ್ಮಿಟ್ಗಳಿಗಾಗಿ ಆನ್ಲೈನ್ ಮೂಲಕ ಅರ್ಜಿಗಳನ್ನು ಸ್ವೀಕರಿಸುತ್ತಿದೆ. ಇ-ಆಟೋಗಳನ್ನು ಖರೀದಿಸುವ ಗ್ರಾಹಕರು ದೆಹಲಿ ಸರ್ಕಾರದಿಂದ ನಾಮನಿರ್ದೇಶನಗೊಂಡ ಹಣಕಾಸು ಏಜೆನ್ಸಿಗಳಿಂದ 5% ಬಡ್ಡಿ ದರದ ರಿಯಾಯಿತಿಯೊಂದಿಗೆ ಆಟೋ ಸಾಲವನ್ನು ಪಡೆಯಬಹುದು. ದೆಹಲಿ ಸಾರಿಗೆ ಇಲಾಖೆಯು ಐಡಿಟಿಆರ್ ಸರೈ ಕಾಲೇ ಖಾನ್ ಮತ್ತು ಲೋನಿಯಲ್ಲಿ ಅಕ್ಟೋಬರ್ 25 ರಿಂದ ಅಕ್ಟೋಬರ್ 31 ರವರೆಗೆ ಇ-ಆಟೋ ಮೇಳವನ್ನು ಆಯೋಜಿಸಿತ್ತು.

ಇ-ಆಟೋ ಮೇಲೆ 30 ಸಾವಿರ ರೂಪಾಯಿ ಸಬ್ಸಿಡಿ
ದೆಹಲಿಯಲ್ಲಿ ಎಲೆಕ್ಟ್ರಿಕ್ ವಾಹನ ನೀತಿಯಡಿಯಲ್ಲಿ, ಇ-ಆಟೋಗಳ ಖರೀದಿಗೆ ರೂ. 30,000 ಸಬ್ಸಿಡಿ ನೀಡಲಾಗುತ್ತದೆ. ದೆಹಲಿ ವಿಳಾಸ, ಲಘು ಮೋಟಾರು ವಾಹನದ ಮಾನ್ಯ ಚಾಲನಾ ಪರವಾನಗಿ ಅಥವಾ ಆಧಾರ್ ಸಂಖ್ಯೆಯೊಂದಿಗೆ ಡ್ರೈವಿಂಗ್ ಲೈಸೆನ್ಸ್ ಹೊಂದಿರುವ ಯಾವುದೇ ವ್ಯಕ್ತಿ ಇ-ಆಟೋ ಪರ್ಮಿಟ್ಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ದೆಹಲಿಯಲ್ಲಿ, ಸಬ್ಸಿಡಿ ನಂತರ ಇ-ಆಟೋ ಬೆಲೆ ರೂ. 2.70 ಲಕ್ಷಗಳಾಗಿದೆ. ಈ ಬೆಲೆ ಸಿಎನ್ಜಿ ಆಟೋ ಬೆಲೆಗೆ ಸಮನಾಗಿದೆ. ಆದರೆ ಸುಮಾರು ರೂ. 1.80 ಲಕ್ಷ ಸಬ್ಸಿಡಿ ನಂತರ ಬ್ಯಾಟರಿ ವಿನಿಮಯ ತಂತ್ರಜ್ಞಾನದೊಂದಿಗೆ ಇ-ಆಟೋಗಳು ಲಭ್ಯವಿರುತ್ತವೆ. ದೆಹಲಿ ಸರ್ಕಾರವು 2020ರ ಆಗಸ್ಟ್ ತಿಂಗಳಿನಲ್ಲಿ ತನ್ನ ಎಲೆಕ್ಟ್ರಿಕ್ ವಾಹನ ನೀತಿಯನ್ನು ಜಾರಿಗೊಳಿಸಿತ್ತು. ಈ ಎಲೆಕ್ಟ್ರಿಕ್ ವಾಹನ ನೀತಿ ಅನ್ವಯ ದೆಹಲಿ ಸರ್ಕಾರವು 2024ರ ವೇಳೆಗೆ 24% ನಷ್ಟು ಎಲೆಕ್ಟ್ರಿಕ್ ವಾಹನಗಳನ್ನು ರಸ್ತೆಗಿಳಿಸುವ ಗುರಿಯನ್ನು ಹೊಂದಿದೆ.

ಎಲೆಕ್ಟ್ರಿಕ್ ವಾಹನಗಳ ಮಾರಾಟವನ್ನು ಉತ್ತೇಜಿಸಲು ದೆಹಲಿ ಸರ್ಕಾರವು ಎಲೆಕ್ಟ್ರಿಕ್ ವಾಹನಗಳ ನೋಂದಣಿ ಹಾಗೂ ರಸ್ತೆ ತೆರಿಗೆಯಲ್ಲಿ ವಿನಾಯಿತಿ ನೀಡುತ್ತಿದೆ. ದೆಹಲಿಯಲ್ಲಿ ಚಳಿಗಾಲಕ್ಕೂ ಮುನ್ನ ಮಾಲಿನ್ಯವನ್ನು ಎದುರಿಸಲು ದೆಹಲಿ ಸರ್ಕಾರವು ಮಾನ್ಯವಾದ ಪಿಯುಸಿ ಪ್ರಮಾಣಪತ್ರವನ್ನು (ಪೋಲ್ಯೂಷನ್ ಅಂಡರ್ ಕಂಟ್ರೋಲ್ ಸರ್ಟಿಫಿಕೇಟ್) ಕಡ್ಡಾಯಗೊಳಿಸಿದೆ.

ಇದರಿಂದ ಇನ್ನು ಮುಂದೆ ದೆಹಲಿಯಲ್ಲಿ ಮಾನ್ಯವಾದ ಪಿಯುಸಿ ಪ್ರಮಾಣಪತ್ರವಿಲ್ಲದೆ ವಾಹನ ಚಲಾಯಿಸಿ ಸಿಕ್ಕಿಬಿದ್ದರೆ ರೂ. 10,000 ದಂಡ ವಿಧಿಸಲಾಗುತ್ತದೆ. ಅಷ್ಟೇ ಅಲ್ಲದೇ ವಾಹನಗಳಿಗೆ ಪಿಯುಸಿ ಮಾಡಿಸದಿದ್ದರೆ 6 ತಿಂಗಳು ಜೈಲು ಶಿಕ್ಷೆ ಜತೆಗೆ 3 ತಿಂಗಳು ಚಾಲನಾ ಪರವಾನಿಗೆಯನ್ನು ರದ್ದುಗೊಳಿಸಲಾಗುತ್ತದೆ.

ಇದರ ಜೊತೆಗೆ ದೆಹಲಿ ಸರ್ಕಾರವು 2020ರ ಫೆಬ್ರವರಿ ಹಾಗೂ 2021ರ ನವೆಂಬರ್ ನಡುವೆ ಮುಕ್ತಾಯಗೊಳ್ಳುವ ಕಲಿಕಾ ಪರವಾನಗಿಯ ಮಾನ್ಯತೆಯನ್ನು 2022ರ ಜನವರಿ 31ರವರೆಗೆ ವಿಸ್ತರಿಸಿದೆ. ಕೋವಿಡ್ 19 ಸಾಂಕ್ರಾಮಿಕ ರೋಗ ಹಾಗೂ ಡ್ರೈವಿಂಗ್ ಪರೀಕ್ಷೆಗೆ ಸ್ಲಾಟ್ಗಳನ್ನು ಪಡೆಯಲು ಜನರು ಎದುರಿಸುತ್ತಿರುವ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ದೆಹಲಿ ಸಾರಿಗೆ ಇಲಾಖೆಯು ತನ್ನ ಆದೇಶದಲ್ಲಿ ವಿವಿಧ ಆರ್ಟಿಒ ಕಚೇರಿಗಳು ಹಾಗೂ ಫಿಟ್ನೆಸ್ ಕೇಂದ್ರಗಳಲ್ಲಿ ಭಾರೀ ಜನದಟ್ಟಣೆ ಉಂಟಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಇಲಾಖೆಯು ಇದನ್ನು ಅರ್ಜಿದಾರರು ಹಾಗೂ ಸಾರ್ವಜನಿಕ ಸೇವಾ ನೌಕರರ ಭದ್ರತೆಯ ಕಾಳಜಿ ಎಂದು ಕರೆದಿದೆ.

ಈ ವರ್ಷದ ಆರಂಭದಲ್ಲಿ ಮೊದಲ ಹಂತದ ಫೇಸ್ ಲೆಸ್ ಸೇವೆಯನ್ನು ಆರಂಭಿಸಿದಾಗಿನಿಂದ, ವಾಹನ ಸಂಬಂಧಿತ ಸೇವೆಗಳಿಗಾಗಿ 2,16,835 ಅರ್ಜಿಗಳು ಹಾಗೂ ಚಾಲನಾ ಪರವಾನಗಿ ಸಂಬಂಧಿತ ಸೇವೆಗಳಿಗಾಗಿ 2,08,224 ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ದೆಹಲಿ ಸರ್ಕಾರ ಹೇಳಿಕೊಂಡಿದೆ.

ಈ ಅರ್ಜಿಗಳ ಪೈಕಿ ಸೆಪ್ಟೆಂಬರ್ 27ರವರೆಗೆ 92% ನಷ್ಟು ಚಾಲನಾ ಪರವಾನಗಿ ಹಾಗೂ 79.9% ನಷ್ಟು ಇತರೆ ವಾಹನ ಸಂಬಂಧಿತ ಅರ್ಜಿಗಳಿಗೆ ಅನುಮೋದನೆ ನೀಡಲಾಗಿದೆ. ದೆಹಲಿಯ ನಂತರ ಕರ್ನಾಟಕ ಸರ್ಕಾರವು ಸಹ ನಮ್ಮ ಬೆಂಗಳೂರಿನ ಸಾರಿಗೆ ಕಚೇರಿಗಳಲ್ಲಿ ಫೇಸ್ ಲೆಸ್ ಹಾಗೂ ಕಾಂಟ್ಯಾಕ್ಟ್ ಲೆಸ್ ಸೇವೆಗಳನ್ನು ಜಾರಿಗೆ ತಂದಿದೆ. ಆದರೆ ಸಮರ್ಪಕ ವ್ಯವಸ್ಥೆ ಇಲ್ಲದ ಕಾರಣ ಜನರು ಪರದಾಡುವಂತಾಗಿದೆ.
ಗಮನಿಸಿ: ಈ ಲೇಖನದಲ್ಲಿರುವ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.


Click it and Unblock the Notifications