ಪೆಟ್ರೋಲ್ ಬೆಲೆ ಇಳಿಸಿ ಜನರಿಗೆ ಸಿಹಿ ಸುದ್ದಿ ಕೊಟ್ಟ ತಮಿಳುನಾಡು ಸರ್ಕಾರ
ದೇಶದಲ್ಲಿ ಇಂಧನ ಬೆಲೆಯು ಗಗನಕ್ಕೇರಿದೆ. ಕರೋನಾ ಮಹಾಮಾರಿಯ ಸಂಕಷ್ಟದ ನಡುವೆ ಇಂಧನ ಬೆಲೆ ಏರಿಕೆಯಿಂದ ವಾಹನ ಸವಾರರು ಹೈರಾಣಾಗಿದ್ದಾರೆ. ಇದರ ನಡುವೆ ಎಂ.ಕೆ ಸ್ಟಾಲಿನ್ ನೇತೃತ್ವದ ತಮಿಳುನಾಡು ಸರ್ಕಾರ ರಾಜ್ಯದ ಜನರಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ.

ತಮಿಳುನಾಡಿನ ಸರ್ಕಾರ ಪೆಟ್ರೋಲ್ ಮೇಲಿನ ಸೆಸ್ ಕಡಿಮೆ ಮಾಡಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ಗೆ ರೂ.3 ಇಳಿಕೆ ಮಾಡಿದ್ದಾರೆ. ಇದನ್ನು ತಮಿಳುನಾಡು ಹಣಕಾಸು ಮತ್ತು ಮಾನವ ಸಂಪನ್ಮೂಲ ಸಚಿವ ಪಿಟಿಆರ್ ಪಳನಿವೇಲ್ ತ್ಯಾಗರಾಜನ್ ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದರು. ತಮಿಳುನಾಡು ವಿಧಾನಸಭೆಯಲ್ಲಿ ಇದೇ ಮೊದಲ ಬಾರಿಗೆ ಕಾಗದ ರಹಿತ ಬಜೆಟ್ ಇಂದು ಮಂಡಿಸಿದರು. ಈ ಬಜೆಟ್ ಅಧಿವೇಶನವನ್ನು ಚೆನ್ನೈನ ಕಲೈವನಾರ್ ಆರಂಗಂನಲ್ಲಿ ನಡೆಯಿತು. ಎಂ.ಕೆ. ಸ್ಟಾಲಿನ್ ಅವರ ಡಿಎಂಕೆ ಸರ್ಕಾರದ ಅಧಿಕಾರಕ್ಕೆ ಬಂದ ನಂತರ ಇದು ಮೊದಲ ಬಜೆಟ್ ಅಧಿವೇಶನವಾಗಿದೆ.

ಆದರೆ ತಮಿಳುನಾಡು ಬೊಕ್ಕಸಕ್ಕೆ ಇದರಿಂದ ಬರೋಬ್ಬರಿ ರೂ.1,160 ಕೋಟಿ ನಷ್ಟವಾಗಲಿದೆ ಎಂದು ಹಣಕಾಸು ಸಚಿವ ಪಿಟಿಆರ್ ಪಳನಿವೇಲ್ ತ್ಯಾಗರಾಜನ್ ಅವರು ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ. ಈ ಸರ್ಕಾರ ದುಡಿಯುವ ವರ್ಗಕ್ಕೆ ಸಹಾಯ ಮಾಡಲು ಪ್ರಯತ್ನ ಮಾಡುತ್ತಿದೆ.

ಪೆಟ್ರೋಲ್ ಮೇಲೆ ಇರುವ ರಾಜ್ಯದ ಸೆಸ್ ಅನ್ನು ಪ್ರತಿ ಲೀಟರ್ಗೆ ರೂ.3 ಕಡಿಮೆ ಮಾಡಿದ್ದೇವೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ವಾರ್ಷಿಕ ರೂ.1160 ಕೋಟಿ ಗಳಷ್ಟು ಭಾರೀ ನಷ್ಟವಾಗಲಿದೆ ಎಂದು ತಮ್ಮ ಬಜೆಟ್ ದಾಖಲೆಗಳಲ್ಲಿ ತಿಳಿಸಿದ್ದಾರೆ.

ಈ ಹಿಂದೆ ಎಂ.ಕೆ ಸ್ಟಾಲಿನ್ ನೆತೃತ್ವದ ಪಕ್ಷ ಚುನಾವಣಾ ಪ್ರಣಾಳಿಕೆಯಲ್ಲಿ ಜನರಿಗೆ ಪೆಟ್ರೋಲ್ ಬೆಲೆಯನ್ನು ರೂ.5 ರವರೆಗೆ ಕಡಿಮೆ ಮಾಡುವುದಾಗಿ ಘೋಷಿಸಿದ್ದರು. ಪ್ರಣಾಳಿಕೆಯಲ್ಲಿ ನೀಡುವ ಆಶ್ವಾಸನೆಯಂತೆ ರೂ.5 ಕಡಿಮೆ ಮಾಡದಿದ್ದರು, ರೂ,3 ಕಡಿತ ಮಾಡಿ ಜನರಿಗೆ ಸಿಹಿ ಸುದ್ದಿ ನೀಡಿದ್ದಾರೆ.

ಇನ್ನು ಬಜೆಟ್ ನಲ್ಲಿ 100 ಹೊಸ ಬಸ್ಗಳಿಗೆ ರೂ 623.59 ಕೋಟಿ, ಸಾರ್ವಜನಿಕ ಬಸ್ಗಳಲ್ಲಿ ತಮಿಳುನಾಡು ಮಹಿಳೆಯರಿಗೆ ಉಚಿತ ಪ್ರಯಾಣಕ್ಕಾಗಿ ರೂ. 703 ಕೋಟಿ ನಿಗಧಿಪಡಿಸಲಾಗಿದೆ. ಕೋಡಂಬಕ್ಕಂ-ಪೂನಮಲ್ಲಿ ಕಾರಿಡಾರ್ 2025ರ ವೇಳೆಗೆ ಪೂರ್ಣಗೊಳ್ಳಲಿದೆ, ವಿಮಾನ ನಿಲ್ದಾಣದಿಂದ ತಾಂಬರಂ ಮೂಲಕ ಹಂತ-1 ವಿಸ್ತರಣೆ ಮಾರ್ಗ ಶೀಘ್ರದಲ್ಲೇ ಪೂರ್ಣವಾಗಲಿದೆ ಎಂದು ತಿಳಿದಿದ್ದಾರೆ.

ದೇಶದ ಹಲವೆಡೆ ಈಗಾಗಲೇ ಪೆಟ್ರೋಲ್ ದರ ಶತಕ ಬಾರಿಸಿದೆ. ಮುಂಬೈ, ಬೆಂಗಳೂರು, ಭೋಪಾಲ್, ಜೈಪುರ, ಪಂಜಾಬ್, ಕೇರಳ , ಆಂಧ್ರ ಪ್ರದೇಶ, ಕರ್ನಾಟಕ ಮತ್ತು ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ ನೂರರ ಗಡಿ ದಾಟಿದೆ. ಮೇ ತಿಂಗಳಿನಲ್ಲಿ ಒಟ್ಟು 16 ಬಾರಿ ಇಂಧನ ಬೆಲೆಯನ್ನು ಹೆಚ್ಚಳ ಮಾಡಲಾಗಿತ್ತು.

ಇನ್ನು ದೇಶದಲ್ಲಿ ಕರೋನಾ ಸಂಕಷ್ಟದ ದಿನನಿತ್ಯದ ಬದುಕು ಸಾಗಿಸಲು ಹೆಣಗಾಡುತ್ತಿರುವ ಜನರಿಗೆ ಪೆಟ್ರೋಲ್-ಡೀಸೆಲ್ ದರ ಗಗನಕ್ಕೇರಿರುವುದರಿಂದ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ, ಕರೋನಾ ಆತಂಕದಿಂದ ಆರೋಗ್ಯದ ಬಗ್ಗೆ ತಲೆಕೆಡಿಸಿಕೊಳ್ಳುರುವಾಗ ಇಂಧನ ಬೆಲೆ ಏರಿಕೆ ಶತಕ ಬಾರಿಸಿತು.

ಇನ್ನು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕಗಳನ್ನು ಸೇರಿಸಿದ ಬಳಿಕ ಇವುಗಳ ಬೆಲೆ ದ್ವಿಗುಣಗೊಳುತ್ತದೆ, ಈ ಕೆಲವು ಮಾನದಂಡಗಳ ಆದಾರಾದ ಮೇಲೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ದರ ನಿಗದಿಪಡಿಸುತ್ತದೆ.

ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್, ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ ತೈಲ ಬೆಲೆಗಳನ್ನು ಪ್ರತಿದಿನ ಅಂತರರಾಷ್ಟ್ರೀಯ ಮಾನದಂಡಗಳು ಮತ್ತು ವಿದೇಶಿ ವಿನಿಮಯ ದರಗಳೊಂದಿಗೆ ಪರಿಷ್ಕರಿಸುತ್ತವೆ. ಈ ಮೂಲಕ ವಿದೇಶಿ ವಿನಿಮಯ ದರಗಳ ಜೊತೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ಬೆಲೆಗಳನ್ನು ಅವಲಂಬಿಸಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬದಲಾಗುತ್ತದೆ.

ಇನ್ನು ಇತ್ತೀಚೆಗೆ ನಡೆದ ವೈರಲ್ ಸುದ್ದಿ, ಗುಜರಾತಿನ ಬರೂಚ್ ಬಳಿಯಿರುವ ನೀತ್ರಾಂಗ್ ನಲ್ಲಿ ಎಸ್ಪಿ ಎಂಬ ಹೆಸರಿನ ಪೆಟ್ರೋಲ್ ಬಂಕ್ ಇದೆ. ಈ ಪೆಟ್ರೋಲ್ ಬಂಕ್ ಮಾಲೀಕರ ಹೆಸರು ಅಯೂಬ್ ಪಠಾಣ್. ನೀರಜ್ ಚೋಪ್ರಾ ಗೆಲುವನ್ನು ಅವರು ವಿಭಿನ್ನ ರೀತಿಯಲ್ಲಿ ಆಚರಿಸಿದ್ದಾರೆ. ನೀರಜ್ ಹೆಸರನ್ನು ಹೊಂದಿರುವವರಿಗೆ ಅವರು ರೂ.501 ಬೆಲೆಯ ಪೆಟ್ರೋಲ್ ಆನ್ನು ಉಚಿತವಾಗಿ ನೀಡಿದ್ದಾರೆ. ಈ ಕೊಡುಗೆಯನ್ನು ಅವರು ಕೇವಲ ಒಂದು ದಿನ ಅಂದರೆ ಆಗಸ್ಟ್ 9 ರಂದು ತಮ್ಮ ಎಸ್ಪಿ ಪೆಟ್ರೋಲ್ ಬಂಕ್'ನಲ್ಲಿ ನೀಡಿದರು.

ಈ ಬಗ್ಗೆ ಮಾಹಿತಿ ಪಡೆದ ನೀರಜ್ ಎಂಬ ಹೆಸರಿನ ಹಲವಾರು ಜನರು ಎಸ್ಪಿ ಪೆಟ್ರೋಲ್ ಬಂಕಿಗೆ ತೆರಳಿ ಉಚಿತ ಪೆಟ್ರೋಲ್ ಪಡೆದಿದ್ದಾರೆ. ತಮ್ಮ ಹೆಸರು ನೀರಜ್ ಎಂದು ಸಾಬೀತುಪಡಿಸಲು ಅವರು ಯಾವುದಾದರೂ ದಾಖಲೆಗಳನ್ನು ತೋರಿಸಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ಹಲವಾರು ಜನರು ಆಧಾರ್ ಕಾರ್ಡ್ ನಂತಹ ದಾಖಲೆಗಳನ್ನು ತೋರಿಸುವ ಮೂಲಕ ಉಚಿತವಾಗಿ ರೂ. 501 ಬೆಲೆಯ ಪೆಟ್ರೋಲ್ ಪಡೆದಿದ್ದಾರೆ.


Click it and Unblock the Notifications