Vande Bharat Express: ಕರಾವಳಿ ಜನರಿಗೆ ಸಿಹಿಸುದ್ದಿ.. ಈ ವಂದೇ ಭಾರತ್ ರೈಲು ಮಂಗಳೂರಿನವರೆಗೆ ವಿಸ್ತರಣೆ
ರಾಜ್ಯದ ಕರಾವಳಿ ಭಾಗದ ಜನರಿಗೆ ರೈಲ್ವೆ ಇಲಾಖೆಯು ಭರ್ಜರಿ ಸಿಹಿಸುದ್ದಿ ನೀಡಿದೆ. ತಿರುವನಂತಪುರಂ (Thiruvananthapuram) - ಕಾಸರಗೋಡು (Kasargod) ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್ಪ್ರೆಸ್ (Vande Bharat Express) ರೈಲನ್ನು ಮಂಗಳೂರಿನವರೆಗೆ ವಿಸ್ತರಿಸುವ ಪ್ರಸ್ತಾವನೆಗೆ ರೈಲ್ವೆ ಸಚಿವಾಲಯ ಅನುಮೋದನೆ ನೀಡಿದೆ.
ಈ ಬಗ್ಗೆ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ (Nalin Kumar Kateel), 'ನಮ್ಮ ಮನವಿಯನ್ನು ಪುರಸ್ಕರಿಸಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು ಮಂಗಳೂರಿನವರೆಗೆ ವಿಸ್ತರಿಸಿದ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಪೋಸ್ಟ್ ಮಾಡಿದ್ದಾರೆ.

ವಂದೇ ಭಾರತ್ ಎಕ್ಸ್ಪ್ರೆಸ್ (Vande Bharat Express) ರೈಲು ಮಂಗಳೂರಿನಿಂದ ಬೆಳಗ್ಗೆ 06.15ಕ್ಕೆ ಹೊರಟು ಮಧ್ಯಾಹ್ನ 3.05ಕ್ಕೆ ತಿರುವನಂತಪುರವನ್ನು ತಲುಪಲಿದೆ. ತಿರುವನಂತಪುರದಿಂದ ಸಂಜೆ 4.05ಕ್ಕೆ ಸಂಚಾರವನ್ನು ಆರಂಭಿಸಿ ರಾತ್ರಿ 12.40ಕ್ಕೆ ಮಂಗಳೂರಿಗೆ ಬರಲಿದೆ. ಬುಧವಾರ (Wednesday) ಹೊರತುಪಡಿಸಿ, ವಾರದ 6 ದಿನಗಳು ಈ ರೈಲು ಕಾರ್ಯಾಚರಣೆ ನಡೆಸಲಿದೆ.
ಮಂಗಳೂರು ಮತ್ತು ತಿರುವನಂತಪುರಂ ನಡುವೆ ಓಡಾಟ ನಡೆಸಲಿರುವ ಈ ವಂದೇ ಭಾರತ್ ಎಕ್ಸ್ಪ್ರೆಸ್, ಮಾರ್ಗ ಮಧ್ಯೆ ಕಾಸರಗೋಡು, ಕಣ್ಣೂರು, ಕೋಜಿಕ್ಕೋಡ್, ತಿರೂರ್, ಶೋರನೂರ್, ತ್ರಿಶೂರ್, ಎರ್ನಾಕುಲಂ, ಆಲಪ್ಪುಳ ಹಾಗೂ ಕೊಲ್ಲಂ ರೈಲು ನಿಲ್ದಾಣದಲ್ಲಿ ನಿಲುಗಡೆಯಾಗಲಿದೆ. ಮಂಗಳೂರಿನಲ್ಲಿ ಇದರ ನಿರ್ವಹಣೆ ಮಾಡಲಾಗುತ್ತದೆ. ಕೆಲವೇ ದಿನಗಳಲ್ಲಿ ಸಂಚಾರ ಆರಂಭಿಕ ಸಂಬಂಧ ಅಧಿಕೃತ ದಿನಾಂಕ ಘೋಷಣೆಯಾಗಲಿದೆ.

ಮಂಗಳೂರು - ಮಡ್ಗಾಂವ್ ನಡುವೆಯು ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಓಡಾಟ ನಡೆಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು, ಡಿ.30 ರಂದು ಅಯೋಧ್ಯೆಯ ರೈಲು ನಿಲ್ದಾಣದಲ್ಲಿ ಮಾಲ್ಡಾ-ಬೆಂಗಳೂರು, ದೆಹಲಿ-ಅಯೋಧ್ಯೆ-ದರ್ಬಂಗಾ ಮಧ್ಯೆ ಸಂಚರಿಸುವ 2 ಅಮೃತ್ ಭಾರತ್ (Amrit Bharat), ಮಂಗಳೂರು-ಮಡ್ಗಾಂವ್, ಕೊಯಮತ್ತೂರು-ಬೆಂಗಳೂರು, ಅಯೋಧ್ಯೆ-ಆನಂದವಿಹಾರ್ ಸೇರಿದಂತೆ ವಿವಿಧ ಮಾರ್ಗದಲ್ಲಿ ಕಾರ್ಯಾಚರಿಸುವ 6 ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳಿಗೆ ಹಸಿರು ನಿಶಾನೆ ತೋರಿಸಿದ್ದರು.
ಇತ್ತೀಚೆಗೆ ಬೆಳಗಾವಿ - ಪುಣೆ ನಡುವೆಯೂ ಈ ವಂದೇ ಭಾರತ್ ಎಕ್ಸ್ಪ್ರೆಸ್ (Vande Bharat Express) ರೈಲು ಸಂಚರಿಸಲು ಅನುಮತಿ ದೊರೆತಿದೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು, ಬೆಳಗಾವಿ ಹಾಗೂ ಪುಣೆ ಮಧ್ಯೆ ಬಹುನಿರೀಕ್ಷಿತ ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು ಓಡಿಸಲು ತಾತ್ವಿಕ ಒಪ್ಪಿಗೆ ಕೊಟ್ಟಿದ್ದಾರೆ. ಆದಷ್ಟು ಬೇಗ ಈ ರೈಲು ಕಾರ್ಯಾಚರಣೆ ನಡೆಸುವ ನೀರಿಕ್ಷೆಯಿದೆ.
ಚೆನ್ನೈ-ಬೆಂಗಳೂರು-ಮೈಸೂರು, ಬೆಂಗಳೂರು-ಹುಬ್ಬಳ್ಳಿ-ಧಾರವಾಡ, ಹೈದರಾಬಾದ್-ಬೆಂಗಳೂರು ಮಧ್ಯೆಯು ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳು ಓಡಾಟವನ್ನು ನಡೆಸುತ್ತಿವೆ. ಈ ರೈಲುಗಳು ಅತ್ಯಂತ ಗರಿಷ್ಠ ವೇಗದಲ್ಲಿ ಸಂಚಾರಲಿದ್ದು, ಜೊತೆಗೆ ಅತ್ಯಾಧುನಿಕ ಸೌಕರ್ಯಗಳನ್ನು ಹೊಂದಿವೆ. ಆರಾಮದಾಯ ಆಸನಗಳು ಸಂಪೂರ್ಣ ಹವಾ ನಿಯಂತ್ರಿತ ಬೋಗಿ, ವೈಫೈ, ಜೈವಿಕ ಶೌಚಾಲಯ, ಅಗ್ನಿ ನಿರೋಧಕ ಸಾಧನಗಳು ಮತ್ತು ಸ್ವಯಂ ಚಾಲಿತ ಬಾಗಿಲು (Automatic door)ಗಳನ್ನು ಒಳಗೊಂಡಿವೆ.
ಡ್ರೈವ್ಸ್ಪಾರ್ಕ್ ಕನ್ನಡ ವೆಬ್ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications