ಎಕ್ಸ್ ಪ್ರೆಸ್ವೇ ಸುರಕ್ಷತೆಗಾಗಿ ಸ್ವಂತ ಹಣ ಬಳಸಿದ ನಟನ ಸಹೋದರ
2012ರ ಡಿಸೆಂಬರ್ 22ರಂದು, ತನ್ಮಯ್ ಪೆಂಡ್ಸೆಯವರ ಸಹೋದರ, ನಟ ಅಕ್ಷಯ್ ಪೆಂಡ್ಸೆ, ಅಕ್ಷಯ್ರವರ ಎರಡು ವರ್ಷದ ಮಗ ಹಾಗೂ ಹಿರಿಯ ನಟ ಆನಂದ್ ಅಭಯಂಕರ್ರವರು ಪುಣೆ - ಮುಂಬೈ ಎಕ್ಸ್ ಪ್ರೆಸ್ವೇನಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದರು.

ಎದುರಿನಿಂದ ವೇಗವಾಗಿ ಬರುತ್ತಿದ್ದ ಟ್ರಕ್ ರಾಂಗ್ ಸೈಡಿನಲ್ಲಿ ಹೋಗಿ ಅಕ್ಷಯ್ರವರಿದ್ದ ವಾಹನಕ್ಕೆ ಗುದ್ದಿತ್ತು. ಅಕ್ಷಯ್ರವರು ಪುಣೆಯಿಂದ ಮುಂಬೈಗೆ ಹೋಗುತ್ತಿದ್ದರು. ಈ ಅಪಘಾತವು ಉರ್ಸೆ ಟೋಲ್ ಪ್ಲಾಜಾದ ಬಳಿ ನಡೆದಿತ್ತು.

ಟ್ರಕ್ ಗುದ್ದಿದ್ದ ವೇಗಕ್ಕೆ ಕಾರಿನಲ್ಲಿದ್ದ ಅಕ್ಷಯ್, ಅವರ ಮಗ ಹಾಗೂ ನಟ ಅಭಯಂಕರ್ರವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಈ ಅಪಘಾತವು ಪುಣೆ ಮೂಲದ ತನ್ಮಯ್ರವರ ಬದುಕಿನ ದಿಕ್ಕನ್ನೇ ಬದಲಿಸಿತು. 34 ವರ್ಷದ ತನ್ಮಯ್ರವರು ರಸ್ತೆ ಸುರಕ್ಷತೆಯ ಬಗ್ಗೆ ದೂರುತ್ತಾ ಕೂರುವ ಬದಲು ರಸ್ತೆಯಲ್ಲಿನ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಮುಂದಾದರು.

ಎಕ್ಸ್ ಪ್ರೆಸ್ವೇಗಳಲ್ಲಿನ ಸುರಕ್ಷತೆಯನ್ನು ಅಭಿವೃದ್ಧಿಪಡಿಸುವುದನ್ನೇ ತಮ್ಮ ಜೀವನದ ಏಕೈಕ ಗುರಿಯಾಗಿಸಿಕೊಂಡರು. ಕಳೆದ ಆರು ವರ್ಷಗಳಲ್ಲಿ ಪೆಂಡ್ಸೆರವರು ಈ ಎಕ್ಸ್ ಪ್ರೆಸ್ವೇನಲ್ಲಿ ಮೂಲ ಸೌಕರ್ಯ ಒದಗಿಸುವ ಸಲುವಾಗಿ 15 ಲಕ್ಷಕ್ಕೂ ಹೆಚ್ಚು ಹಣವನ್ನು ತಮ್ಮ ಸ್ವಂತ ಖರ್ಚಿನಿಂದ ಖರ್ಚು ಮಾಡಿದ್ದಾರೆ.

ಇಂಡಿಯನ್ ರೋಡ್ ಕಾಂಗ್ರೆಸ್, ಮಹಾರಾಷ್ಟ್ರ ರೋಡ್ ಡೆವಲೆಪ್ಮೆಂಟ್ ಕಾರ್ಪೊರೇಷನ್, ಪೊಲೀಸ್ ಇಲಾಖೆ, ಗೃಹ ಇಲಾಖೆ, ಎಂಜಿನಿಯರ್ಗಳ ಸಂಘ, ಐಎಎಸ್ ಅಧಿಕಾರಿಗಳ ಸಂಘ, ಮರಾಠಿ ಚಿತ್ರರಂಗದ ಗಣ್ಯರ ಜೊತೆಗೆ ಕೈಜೋಡಿಸಿ ಪ್ರತಿ ವರ್ಷ ಎಕ್ಸ್ ಪ್ರೆಸ್ವೇನಲ್ಲಿ ಅಪಘಾತಗಳ ಸಂಖ್ಯೆಯು ಕಡಿಮೆಯಾಗುವಂತೆ ನೋಡಿಕೊಂಡಿದ್ದಾರೆ.

ಈ ಬಗ್ಗೆ ಬೆಟರ್ ಇಂಡಿಯಾ ಜೊತೆಗೆ ಮಾತನಾಡಿರುವ ಪೆಂಡ್ಸೆರವರು, ನನ್ನ ಅಣ್ಣ ಹಾಗೂ ಅಣ್ಣನ ಮಗನನ್ನು ಅಪಘಾತದಲ್ಲಿ ಕಳೆದು ಕೊಳ್ಳುವ ಮುನ್ನ ನಾನೂ ಸಹ ಇತರರಂತೆ ಸರ್ಕಾರವನ್ನು ಟೀಕಿಸುತ್ತಿದ್ದೆ. ಆದರೆ ಅವರ ಸಾವಿನ ನಂತರ ನಾನು ಸರ್ಕಾರವನ್ನು ಟೀಕಿಸುವುದನ್ನು ನಿಲ್ಲಿಸಿ ಪರಿಹಾರಕ್ಕಾಗಿ ಹುಡುಕಾಡಿದೆ. ನಾನು ಬೇರೆಯವರು ನನ್ನ ಸಹಾಯಕ್ಕೆ ಬರಲಿ ಎಂದು ಕಾಯಲಿಲ್ಲ ಎಂದು ಹೇಳಿದರು.

ಪೆಂಡ್ಸೆರವರು ಕಾರ್ಪೊರೇಟ್ ತರಬೇತಿ ನೀಡುವ, ಅಡ್ವೆಂಚರ್ ಹಾಗೂ ಹೆರಿಟೇಜ್ ಪ್ರವಾಸೋದ್ಯಮದ ಸಂಸ್ಥೆಯೊಂದನ್ನು ನಡೆಸುತ್ತಿದ್ದಾರೆ. ರಸ್ತೆ ಸುರಕ್ಷತೆಗಾಗಿನ ತಮ್ಮ ಸಂಶೋಧನೆಯನ್ನು ಪೂರ್ಣಗೊಳಿಸಲು ಅವರು ಒಂದೂವರೆ ವರ್ಷಗಳನ್ನು ತೆಗೆದುಕೊಂಡರು.

ಈ ಒಂದೂವರೆ ವರ್ಷಗಳಲ್ಲಿ, ಅವರು ಹಲವಾರು ರಸ್ತೆ ಸುರಕ್ಷತಾ ತಜ್ಞರನ್ನು ಭೇಟಿಯಾಗಿದ್ದಾರೆ. ಇದರ ಜೊತೆಗೆ ರಾಜಕೀಯ ಮುಖಂಡರು, ಎಂಜಿನಿಯರ್ಗಳು, ಪೊಲೀಸ್ ಸಿಬ್ಬಂದಿಯನ್ನು ಭೇಟಿಯಾಗಿದ್ದಾರೆ. ಎಕ್ಸ್ಪ್ರೆಸ್ವೇಗೆ 1000ಕ್ಕೂ ಹೆಚ್ಚು ಬಾರಿ ಭೇಟಿ ನೀಡಿದ್ದಾರೆ. ಇದರ ಜೊತೆಗೆ 200 ಪುಟಗಳ ಸಂಶೋಧನಾ ವರದಿಯನ್ನು ತಯಾರಿಸಿದ್ದಾರೆ.

ಕೊರಿಯಾ, ಕೆನಡಾ ಮತ್ತು ಆಸ್ಟ್ರೇಲಿಯಾದಲ್ಲಿರುವ ರಸ್ತೆಗಳ ಬಗ್ಗೆ ಆಳವಾದ ಅಧ್ಯಯನವನ್ನು ಕೈಗೊಂಡರು. ಆರು ಪಥಗಳ ಮುಂಬೈ-ಪುಣೆ ಎಕ್ಸ್ಪ್ರೆಸ್ವೇಗೆ ಹೋಲಿಸಿದ ನಂತರ, ರಸ್ತೆ ಅಪಘಾತಗಳ ಅಂಕಿಅಂಶಗಳ ಮೂಲಕ ಪರಿಶೀಲಿಸಿದ ನಂತರ, ಮೂಲಸೌಕರ್ಯ ಸೌಲಭ್ಯಗಳನ್ನು ಒದಗಿಸಿ, ರಸ್ತೆ ಅಪಘಾತಗಳನ್ನು ಕಡಿಮೆ ಮಾಡಲು ಅಗತ್ಯವಾದ ಕ್ರಮಗಳ ಮಾಹಿತಿಯನ್ನು ಸಂಗ್ರಹಿಸಿದರು.

ತನ್ಮಯ್ ಪೆಂಡ್ಸೆರವರು ಸಿಎಂ ದೇವೇಂದ್ರ ಫಡ್ನವೀಸ್ ಸೇರಿದಂತೆ ರಾಜ್ಯ ಸರ್ಕಾರದ ಹಲವು ಅಧಿಕಾರಿಗಳೊಂದಿಗೆ ಸಭೆ ನಡೆಸಿ ಈ ಎಕ್ಸ್ ಪ್ರೆಸ್ವೇನಲ್ಲಿ ಬ್ರಿಫೆನ್ ವೈರ್ ರೋಪ್ಗಳನ್ನು ಅಳವಡಿಸುವಂತೆ ಮನವೊಲಿಸಿದರು. ಬ್ರಿಫೆನ್ ವೈರ್ ರೋಪ್ಗಳನ್ನು ಸದ್ಯಕ್ಕೆ ಈ ಎಕ್ಸ್ಪ್ರೆಸ್ವೇಯ ಸುಮಾರು 40 ಕಿ.ಮೀವರೆಗೆ ಹಾಕಲಾಗಿದೆ.

ಇದರ ಜೊತೆಗೆ ಕ್ರ್ಯಾಶ್ ಬ್ಯಾರಿಯರ್ ಸಿಸ್ಟಂಗಳನ್ನು ಸಹ ಸ್ಥಾಪಿಸಲಾಗಿದೆ. ವಾಹನದ ನೋಂದಣಿ ಸಂಖ್ಯೆಯನ್ನು ಪತ್ತೆ ಮಾಡುವ ಸಲುವಾಗಿ ಎಕ್ಸ್ಪ್ರೆಸ್ವೇಯ ಉದ್ದಕ್ಕೂ ಕ್ಲೋಸ್ಡ್-ಸರ್ಕ್ಯೂಟ್ ಟೆಲಿವಿಷನ್ (ಸಿಸಿಟಿವಿ) ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಈ ಕೆಲಸ ಭಾಗಶಃ ಮುಗಿದ್ದಿದ್ದು, ಪೂರ್ತಿ ಎಕ್ಸ್ ಪ್ರೆಸ್ವೇಯದ್ಯಾಂತ ಈ ಸೌಲಭ್ಯಗಳನ್ನು ಒದಗಿಸಲು ಬಯಸಿದ್ದಾರೆ.

ಎಕ್ಸ್ಪ್ರೆಸ್ವೇಯಲ್ಲಿ ಅಪಘಾತಕ್ಕೊಳಗಾದವರನ್ನು ಪುಣೆಯ ಲೋಕಮಾನ್ಯ ಆಸ್ಪತ್ರೆಗೆ ಅಥವಾ ಖಲ್ಲಾಪುರದ ಎಂಜಿಎಂ ಆಸ್ಪತ್ರೆಗೆ ಸಾಗಿಸಲಾಗುತ್ತದೆ ಎಂಬುದಾಗಿ ಪೆಂಡ್ಸೆಯವರ ಅಧ್ಯಯನದಲ್ಲಿ ಕಂಡು ಬಂದಿದೆ. ಈ ಎರಡೂ ಆಸ್ಪತ್ರೆಗಳು ಸಾಕಷ್ಟು ದೂರದಲ್ಲಿರುವ ಕಾರಣ, ಅಪಘಾತಕ್ಕೊಳಗಾಗುವವರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ದೇಶದ ಅತ್ಯಂತ ಮಾರಕ ಹೆದ್ದಾರಿಗಳಲ್ಲಿ ಒಂದಾಗಿರುವ ಈ ಎಕ್ಸ್ಪ್ರೆಸ್ವೇ ಪರ್ವತಗಳು ಮತ್ತು ಪ್ರಸ್ಥಭೂಮಿಗಳ ಮೂಲಕ ಹಾದುಹೋಗುತ್ತದೆ. ಇದು ಭಾರತದ ಮೊದಲ ಆರು ಪಥದ ಕಾಂಕ್ರೀಟ್, ಹೈಸ್ಪೀಡ್, ಟೋಲ್ಡ್ ಎಕ್ಸ್ಪ್ರೆಸ್ ವೇ.

ಈ ಎಕ್ಸ್ ಪ್ರೆಸ್ವೇ ಮಹಾರಾಷ್ಟ್ರದ ರಾಜಧಾನಿ ಹಾಗೂ ಭಾರತದ ಆರ್ಥಿಕ ರಾಜಧಾನಿಯಾದ ಮುಂಬೈ ಹಾಗೂ ಮಹಾರಾಷ್ಟ್ರದ ಸಾಂಸ್ಕೃತಿಕ ರಾಜಧಾನಿಯಾದ ಪುಣೆಯನ್ನು ಸಂಪರ್ಕಿಸುತ್ತದೆ. ಈ ಎಕ್ಸ್ ಪ್ರೆಸ್ವೇ 94.5 ಕಿ.ಮೀಗಳಷ್ಟು ದೂರವಿದೆ.
Source: Thebetterindia


Click it and Unblock the Notifications