ಟೊಯೊಟಾ ಇನ್ನೋವಾ 7 ಬಾರಿ ಪಲ್ಟಿ.. 5 ಬಲಿ, ರಸ್ತೆ ಅಪಘಾತ ತಪ್ಪಿಸಲು ಇಲ್ಲಿವೆ ಸಿಂಪಲ್ ಐಡಿಯಾಗಳು!
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಸಮೀಪದ ನಾಯಕರಂಡನಹಳ್ಳಿ & ಮಾಕಳಿ ನಡುವೆ ಮಂಗಳವಾರ ಭೀಕರ ದುರಂತವೊಂದು ಸಂಭವಿಸಿದೆ. ಮಂಚೇನಹಳ್ಳಿಯ ಬೀಮೇಶ್ವರ ಬೆಟ್ಟದ ದೇಗುಲಕ್ಕೆ ತೆರಳುತ್ತಿದ್ದ ಟೊಯೊಟಾ ಇನ್ನೋವಾ (Toyota Innova) ಕಾರೊಂದು 7 ಬಾರಿ ಪಲ್ಟಿಯಾಗಿದೆ. ಈ ಘಟನೆಯಲ್ಲಿ 5 ಮಂದಿ ಸಾವನ್ನಪ್ಪಿದ್ದು, 3 ಗಂಭೀರವಾಗಿ ಗಾಯಗೊಂಡಿದ್ದಾರೆ. ಇವೆರೆಲ್ಲರೂ ಸ್ನೇಹಿತರು ಎಂಬ ವಿಚಾರವು ಗೊತ್ತಾಗಿದೆ.
ಕಿರಿದಾದ ರಸ್ತೆ ತಿರುವಿನಲ್ಲಿ ಟ್ರಕ್ವೊಂದನ್ನು ಇನ್ನೋವಾ ಕಾರು ಹಿಂದಿಕ್ಕುವಾಗ, ಎದುರುಗಡೆಯಿಂದ ಬಸ್ವೊಂದು ಬಂದಿದೆ. ಅದನ್ನು ತಪ್ಪಿಸಲು ಹೋದಾಗ, ಕಾರು ಚಾಲಕ ನಿಯಂತ್ರಣ ಕಳೆದುಕೊಂಡು ಉರುಳಿದೆ. ಪರಿಣಾಮ ಈ ಅಪಘಾತ ನಡೆದಿದೆ. ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದು, ಓರ್ವ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ ಎಂದು ವರದಿಯಾಗಿದೆ.

ಅಪಘಾತ ತಪ್ಪಿಸಲು ನಾವೇನು ಮಾಡಬೇಕು:
ಓವರ್ಟೇಕ್ ಮಾಡುವಾಗ ಇರಲಿ ಜಾಗ್ರತೆ: ವಾಹನ ಚಾಲಕರು ಓವರ್ಟೇಕ್ ಮಾಡುವ ಸಂದರ್ಭದಲ್ಲಿ ತುಂಬಾ ಎಚ್ಚರಿಕೆಯಿಂದ ಇರಬೇಕು. ಮುಂದಿರುವ ರಸ್ತೆ ಸ್ಪಷ್ಟವಾಗಿ ಕಾಣುವಾಗ ಹಾಗೂ ವಾಹನದ ವೇಳೆ ಸಂಪೂರ್ಣವಾದ ನಿಯಂತ್ರಣ ಇಟ್ಟುಕೊಂಡು ಮಾತ್ರವೇ ಓವರ್ಟೇಕ್ ಮಾಡಬೇಕು. ತಿರುವುಗಳು ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ಓವರ್ಟೇಕ್ ಮಾಡುವುದನ್ನು ತಪ್ಪಿರಿ. ಜೊತೆಗೆ ಇತರೆ ವಾಹನಗಳೊಂದಿಗೆ ಅಂತರವನ್ನು ಕಾಯ್ದುಕೊಳ್ಳಿರಿ.
ಕಡಿಮೆ ವೇಗದಲ್ಲಿ ವಾಹನಗಳನ್ನು ಚಲಾಯಿಸಿ: ವಾಹನ ಚಲಾಯಿಸುವಾಗ ಜಾಗರೂಕರಾಗಿರುವುದು ತೀರಾ ಅತ್ಯಗತ್ಯ. ಕಿರಿದಾದ ರಸ್ತೆ ಹಾಗೂ ತಿರುವುಗಳಲ್ಲಿ ನಿಧಾನಗತಿಯಲ್ಲಿ ವಾಹನಗಳನ್ನು ಚಲಾಯಿಸಿರಿ. ಇದರಿಂದ ಯಾವುದೇ ಅಪಘಾತಕ್ಕೂ ಎಡೆ ಮಾಡಿಕೊಡದೆ, ಸುರಕ್ಷಿತವಾಗಿ ಪ್ರಯಾಣ ಮಾಡಬಹುದು.
ಸೀಟ್ ಬೆಲ್ಟ್ನ್ನು ತಪ್ಪದೆ ಹಾಕಿರಿ: ಇದು ನಮ್ಮ ಜೀವ ರಕ್ಷಕ ಸಾಧನವಾಗಿದ್ದು, ಅಪಘಾತವಾದ ಸಂದರ್ಭದಲ್ಲಿ ಸೀಟ್ ಬೆಲ್ಟ್ನ್ನು ಧರಿಸುವುದರಿಂದ ತಲೆ ಹಾಗೂ ಎದೆ ಭಾಗಕ್ಕೆ ಆಗುವ ದೊಡ್ಡ ಪ್ರಮಾಣದ ಗಂಭೀರ ಗಾಯಗಳನ್ನು ತಡೆಯುತ್ತಿದೆ. ಸೀಟ್ ಬೆಲ್ಟ್ ಹಾಕಿಕೊಳ್ಳುವುದರಿಂದ ಸಾವಿನ ಸಂಖ್ಯೆಯು ಗಣನೀಯವಾಗಿ ಕಡಿಮೆಯಾಗಿದೆ ಎಂದು ವಿವಿಧ ಅಧ್ಯಯನಗಳು ಹೇಳಿವೆ.
ಅಪಘಾತ ತಪ್ಪಿಸಲು ಮತ್ತೇನು ಮಾಡಬಹುದು:
ಯಾವುದೇ ರಸ್ತೆ ಅಥವಾ ಹೆದ್ದಾರಿಯೇ ಇರಲಿ, ನಿರ್ದಿಷ್ಟ ವೇಗದಲ್ಲಿ ಸರಿಯಾದ ಪಥದಲ್ಲಿ ವಾಹನಗಳನ್ನು ಓಡಿಸಿರಿ. ಕಡ್ಡಾಯವಾಗಿ ಸಂಚಾರಿ ನಿಯಮಗಳನ್ನು ಪಾಲನೆ ಮಾಡಿರಿ. ವಿಶೇಷವಾಗಿ ದ್ವಿಚಕ್ರ ವಾಹನಗಳನ್ನು ಓಡಿಸುವಾಗ ಹೆಲ್ಮೆಟ್ ಸೇರಿದಂತೆ ಸುರಕ್ಷತಾ ಉಪಕರಣಗಳನ್ನು ತಪ್ಪದೇ ಬಳಕೆ ಮಾಡಿರಿ.
ಇದು ಮಾತ್ರವಲ್ಲದೆ, ಮದ್ಯಪಾನ ಮಾಡಿ ಎಂದಿಗೂ ವಾಹನಗಳನ್ನು ಚಲಾಯಿಸಬೇಡಿ. ಇದರಿಂದ ನಿಮ್ಮ ಸಂಪೂರ್ಣ ಗಮನವನ್ನು ರಸ್ತೆ ಮೇಲೆ ಕೇಂದ್ರೀಕರಿಸಲು ಸಾಧ್ಯವಾಗುವುದೇ ಇಲ್ಲ. ವಾಹನಗಳನ್ನು ಓಡಿಸುವಾಗ ಮೊಬೈಲ್ ಫೋನ್ ಮತ್ತು ಇಯರ್ ಫೋನ್ನ್ನು ಯಾವತ್ತು ಉಪಯೋಗ ಮಾಡದಿರಿ. ಇಂತಹ ಮುನ್ನೆಚ್ಚರಿಕೆ ಕ್ರಮಗಳಿಂದ ಸಂಭಾವ್ಯ ಅಪಘಾತಗಳನ್ನು ತಪ್ಪಿಸಬಹುದು.
ಚಿತ್ರ ಕೃಪೆ: ಉದಯವಾಣಿ


Click it and Unblock the Notifications








