ಕೇಂದ್ರ ಬಜೆಟ್: ಸಾರಿಗೆ ವಲಯಕ್ಕೆ ಬಂಪರ್... ಎಲೆಕ್ಟ್ರಿಕ್ ವಾಹನಗಳ ಬೆಲೆ ಇಳಿಕೆ
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಎರಡನೇ ಅವಧಿಯ ಪೂರ್ಣಕಾಲಿಕ ಬಜೆಟ್ನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ್ದಾರೆ. ಕೆಲವೊಂದು ಕ್ಷೇತ್ರಗಳಿಗೆ ಭರಪೂರ ಕೊಡುಗೆ ಸಿಕ್ಕಿದ್ದು, ದೇಶದ ಪ್ರಗತಿಯಲ್ಲಿ ದೊಡ್ಡ ಪಾತ್ರವನ್ನು ವಹಿಸುವ ಸಾರಿಗೆಗೆ ಯಾವೆಲ್ಲ ಗಿಫ್ಟ್ ನೀಡಿದ್ದಾರೆ ಎಂಬುದನ್ನು ತಿಳಿಯೋಣ.
ಈ ಬಾರಿಯ ಬಜೆಟ್ನಲ್ಲಿ ಕೇಂದ್ರ ಸರ್ಕಾರ ದೊಡ್ಡ ಘೋಷಣೆ ಮಾಡಿದೆ. ಮಾಲಿನ್ಯ ರಹಿತ ಹಸಿರು ಪರಿಸರ (green mobility) ನಿರ್ಮಾಣ ಮಾಡುವ ಗುರಿಯನ್ನು ಹೊಂದಿದ್ದು, ದೇಶದ ಮಧ್ಯಮ ವರ್ಗದ ಜನರು, IEC ಚಾಲಿತ ವಾಹನಗಳಿಗಿಂತ ಎಲೆಕ್ಟ್ರಿಕ್ ವಾಹನ (ಇವಿ)ಗಳನ್ನು ಖರೀದಿಸಲು ಉತ್ತೇಜನ ನೀಡಲು ಅವುಗಳ ಬೆಲೆಯನ್ನು ಕಡಿಮೆ ಮಾಡಿದೆ. ಅಲ್ಲದೆ, ಲಿಥಿಯಂ-ಐಯಾನ್ ಬ್ಯಾಟರಿ ಸೆಲ್ಗಳನ್ನು ತಯಾರಿಸಲು ಬೇಕಾಗಿರುವ ಕಚ್ಚಾವಸ್ತುಗಳ ಆಮದಿಗೆ ಸುಂಕ ವಿನಾಯಿತಿಯನ್ನು ವಿಸ್ತರಿಸಲಾಗಿದೆ ಎಂದು ಹಣಕಾಸು ಸಚಿವರು ಹೇಳಿದ್ದಾರೆ.

ಬಜೆಟ್ನಲ್ಲಿ ಕೇಂದ್ರ ಸರ್ಕಾರದ ಮತ್ತೊಂದು ದೊಡ್ಡ ಕೊಡುಗೆಯನ್ನು ನೀಡಿದೆ. ಇಂಧನ ಪರಿವರ್ತನೆ (energy transition) ಹಾಗೂ ಶೂನ್ಯ ಹೊರಸೂಸುವಿಕೆ (net zero objectives) ಗುರಿಯನ್ನು ಸಾಧಿಸಲು, ಬಂಡವಾಳ ಹೂಡಿಕೆ ಮಾಡಲು ಬರೋಬ್ಬರಿ ರೂ.35,000 ಕೋಟಿಗಳನ್ನು ಒದಗಿಸಲಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದಾರೆ. ಭಾರತದಲ್ಲಿ ಸ್ವಚ್ಛ ಆರ್ಥಿಕತೆಯ ಮೇಲೆ ಮೋದಿ ಸರ್ಕಾರವು ಕೇಂದ್ರೀಕರಿಸಿದ್ದು, 2070ರ ವೇಳೆಗೆ ಶೂನ್ಯ ಹೊರಸೂಸುವಿಕೆ ಸಾಧಿಸುವ ಗುರಿಯನ್ನು ಹೊಂದಿದೆ. ಇದು ಎಲೆಕ್ಟ್ರಿಕ್ ವಾಹನ ಸ್ಟಾರ್ಟಪ್ ಕಂಪನಿಗಳಿಗೆ ವರದಾನವಾಗಲಿದೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಬಜೆಟ್ ಮಂಡನೆ ವೇಳೆ ಕೇಂದ್ರ ಸರ್ಕಾರದ 'ಗುಜರಿ ನೀತಿಯನ್ನು ಶ್ಲಾಘಿಸಿದ್ದಾರೆ. ಇದು ಭಾರತದಲ್ಲಿ ಆಟೋಮೊಬೈಲ್ ಕಂಪನಿಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಜೊತೆಗೆ ಸಾಕಷ್ಟು ಮಂದಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ' ಎಂದು ಹೇಳಿದ್ದಾರೆ. ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ, 15 ವರ್ಷಕ್ಕಿಂತ ಹಳೆಯ ಸುಮಾರು ಒಂಬತ್ತು ಲಕ್ಷ ಸರ್ಕಾರಿ ವಾಹನಗಳು ಗುಜರಿ ಸೇರಲಿದ್ದು, ಏಪ್ರಿಲ್ 1ರಿಂದ ನಿಯಮ ಜಾರಿಗೆ ಬರಲಿದೆ ಎಂದು ಸೋಮವಾರ ಹೇಳಿಕೆ ನೀಡಿದ್ದರು.
ಕೇಂದ್ರ ಸರ್ಕಾರದ ಬಜೆಟ್ ಬಗ್ಗೆ ಆಟೋಮೊಬೈಲ್ ಕ್ಷೇತ್ರದ ಉದ್ಯಮಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಹೇಳಬಹುದು. 'ಹಸಿರು ಪರಿಸರ (Green Growth) ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದ್ದು, ಅದಕ್ಕಾಗಿ ರೂ. 35,000 ಕೋಟಿ ಬಂಡವಾಳ ಹೂಡಿಕೆ ಮಾಡುವುದಾಗಿ ಹೇಳಿದೆ. ವಿಶ್ವಾದ್ಯಂತ ಬಹುತೇಕ ದೇಶಗಳು ಎದುರಿಸುತ್ತಿರುವ ಮಾಲಿನ್ಯ ಸಮಸ್ಯೆಯನ್ನು ತಡೆಯಲು ಭಾರತವು ಈ ಮೂಲಕ ನಾಯಕತ್ವ ವಹಿಸಲಿದೆ' ಎಂದು ಬಿಲಿಟಿ ಎಲೆಕ್ಟ್ರಿಕ್ನ ಸಹ ಸಂಸ್ಥಾಪಕ ಹರ್ಷ ಬಾವಿರಿಶೆಟ್ಟಿ ಹೇಳಿದ್ದಾರೆ. ಅಲ್ಲದೆ, 'ನಿರ್ಮಲಾ ಸೀತಾರಾಮನ್ ಬಂಡವಾಳ ಹೂಡಿಕೆ ಕುರಿತು ಮಾಡಿರುವ ಘೋಷಣೆಯಿಂದ ಹೊಸ ಎಲೆಕ್ಟ್ರಿಕ್ ವಾಹನಗಳ ಆವಿಷ್ಕಾರವಾಗಲಿದೆ' AutoNxt ಆಟೋಮೇಷನ್ ಸಿಇಒ ಕೌಸ್ತುಭ್ ಧೋಂಡೆ ಹೇಳಿದ್ದಾರೆ.
ಕೇಂದ್ರ ಬಜೆಟ್ ನಲ್ಲಿ ಭಾರತೀಯ ರೈಲ್ವೆ ಇಲಾಖೆ ಭರ್ಜರಿ ಅನುದಾನವನ್ನು ಪಡೆದುಕೊಂಡಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ರೂ.2.4 ಲಕ್ಷ ಕೋಟಿಯನ್ನು ರೈಲ್ವೆಗೆ ಮೀಸಲಿಟ್ಟಿದ್ದಾರೆ. ಇದು 2013-14ರಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಸರ್ಕಾರ ಇಟ್ಟಿದ್ದ ಅನುದಾನಕ್ಕಿಂತ ಒಂಬತ್ತು ಪಟ್ಟು ಅಧಿಕವಾಗಿದೆ. 100 ಅಗತ್ಯ ಸಾರಿಗೆ ಮೂಲಸೌಕರ್ಯ ಯೋಜನೆ (critical transport infrastructure projects)ಗಳಿಗೆ ರೂ.75,000 ಕೋಟಿಯನ್ನುಬಜೆಟ್ ನಲ್ಲಿ ಕೇಂದ್ರ ಸರ್ಕಾರ ಘೋಷಿಸಿದೆ.
ಈ ಅನುದಾನದ ಸಹಾಯದಿಂದ ರಾಜಧಾನಿ, ಶತಾಬ್ದಿ, ಡುರೊಂಟೊ ಮತ್ತು ತೇಜಸ್ನಂತಹ ಸೂಪರ್ ಫಾಸ್ಟ್ ರೈಲುಗಳ 1,000 ಕ್ಕೂ ಹೆಚ್ಚು ಬೋಗಿಗಳನ್ನು ನವೀಕರಿಸುವ ಗುರಿಯನ್ನು ರೈಲ್ವೆ ಇಲಾಖೆ ಹೊಂದಿದೆ. ಜೊತೆಗೆ ಭಾರತದ ಬುಲೆಟ್ ರೈಲುಗಳೆಂದು ಖ್ಯಾತಿಗಳಿಸಿರುವ ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳಿಗೆ ಹಳೆಯ ಟ್ರ್ಯಾಕ್ ಬದಲಿಗೆ ಹೊಸ ಟ್ರ್ಯಾಕ್ ನಿರ್ಮಿಸುವ ಯೋಜನೆಯನ್ನು ಇಲಾಖೆ ಹೊಂದಿದೆ. 2022-23ರ ಬಜೆಟ್ನಲ್ಲಿ ರೈಲ್ವೆಗೆ ರೂ.1.4 ಲಕ್ಷ ಕೋಟಿ ಅನುದಾನ ಮೀಸಲಿಡಲಾಗಿತ್ತು.
ಇಷ್ಟೇಅಲ್ಲದೆ, ವಾಯುಯಾನವನ್ನು ಅಭಿವೃದ್ಧಿಪಡಿಸಲು ಪ್ರಧಾನಿ ಮೋದಿ ಸರ್ಕಾರ ಬಜೆಟ್ ನಲ್ಲಿ ಮಹತ್ವದ ಘೋಷಣೆಗಳನ್ನು ಮಾಡಿದೆ. ದೇಶೀಯ ವಿಮಾನ ಸೇವೆಯನ್ನು ಉತ್ತೇಜಿಸಲು 50ಕ್ಕೂ ಹೆಚ್ಚು ಏರ್ಪೋರ್ಟ್, ಏರೋಡ್ರೋಮ್ ಹಾಗೂ ಹೆಲಿಪೋರ್ಟ್ಗಳನ್ನು ಸ್ಥಾಪಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದಾರೆ. ಒಟ್ಟಾರೆ ಈ ಬಾರಿಯ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ಹಸಿರು ಪರಿಸರ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಿದೆ ಎಂದು ಹೇಳಬಹುದು. ಪ್ರಮುಖವಾಗಿ ಎಲೆಕ್ಟ್ರಿಕ್ ವಾಹನಗಳ ಬೆಲೆ ಕಡಿಮೆ ಮಾಡಿರುವುದು ಮಧ್ಯಮ ವರ್ಗದ ಜನರಿಗೆ ಖುಷಿ ತಂದಿದೆ.


Click it and Unblock the Notifications