ವಾಹನಗಳ ಹಾರ್ನ್'ನಿಂದ ಹೊರ ಬರುವ ಶಬ್ದವನ್ನು ಬದಲಿಸುವ ಬಗ್ಗೆ ಸುಳಿವು ನೀಡಿದ ಸಾರಿಗೆ ಸಚಿವ
ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿರವರು ಈಗ ಕಾರುಗಳಲ್ಲಿ ಇರುವ ಹಾರ್ನ್ ಶಬ್ದದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಚಿವ ನಿತಿನ್ ಗಡ್ಕರಿ ತಮ್ಮ ಇಲಾಖೆಯು ಕಾರ್ ಹಾರ್ನ್ ಶಬ್ದವನ್ನು ಬದಲಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರವು ಭಾರತೀಯ ಸಂಗೀತ ವಾದ್ಯಗಳಂತೆ ಶಬ್ದ ಬರುವ ಹಾರ್ನ್ ಗಳನ್ನು ಬಳಸುವಂತೆ ಸೂಚಿಸುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ. ಈ ಬಗ್ಗೆ ಮಾತನಾಡಿರುವ ಸಚಿವ ನಿತಿನ್ ಗಡ್ಕರಿ, ನಾನು ನಾಗಪುರದಲ್ಲಿ 11 ನೇ ಮಹಡಿಯಲ್ಲಿ ವಾಸಿಸುತ್ತಿದ್ದೇನೆ. ನಾನು ಪ್ರತಿದಿನ ಬೆಳಿಗ್ಗೆ 1 ಗಂಟೆ ಯೋಗ ಮಾಡುತ್ತೇನೆ.

ಆದರೆ ಬೆಳಗಿನ ಪ್ರಶಾಂತ ವಾತಾವರಣವು ಹಾರ್ನ್ ಶಬ್ದದಿಂದ ಭಂಗಗೊಳ್ಳುತ್ತದೆ. ಇದರ ನಂತರವೇ ನನಗೆ ಕಾರುಗಳ ಹಾರ್ನ್ ಶಬ್ದವು ಸರಿಯಾದ ರೀತಿಯಲ್ಲಿರಬೇಕು ಎಂಬ ಆಲೋಚನೆ ಬಂದಿದೆ. ಕಾರಿನ ಹಾರ್ನ್ ಗಳ ಶಬ್ದವು ಭಾರತೀಯ ಸಂಗೀತ ವಾದ್ಯಗಳ ಧ್ವನಿಯಂತೆ ಇರಬೇಕು ಎಂದು ನಾವು ಯೋಚಿಸುತ್ತಿದ್ದೇವೆ.

ಈಗ ಇದರ ಬಗ್ಗೆ ಕಾರ್ಯ ನಿರ್ವಹಿಸುತ್ತಿದ್ದೇವೆ. ತಬಲಾ, ಪಿಟೀಲು ಹಾಗೂ ಕೊಳಲಿನಂತಹ ಸಂಗೀತ ವಾದ್ಯಗಳ ಶಬ್ದವು ಕಾರಿನ ಹಾರ್ನ್ನಿಂದ ಹೊರ ಹೊಮ್ಮಬೇಕೆಂದು ನಿತಿನ್ ಗಡ್ಕರಿ ಹೇಳಿದ್ದಾರೆ. ಸಚಿವ ನಿತಿನ್ ಗಡ್ಕರಿರವರ ಈ ಹೇಳಿಕೆಯು ಈಗ ಭಾರತದ ಜನರು ಹಾಗೂ ಆಟೋ ಮೊಬೈಲ್ ಉದ್ಯಮದ ಗಮನ ಸೆಳೆದಿದೆ.

ಭಾರತೀಯ ವಾಹನಗಳು ಹೆಚ್ಚು ಸುರಕ್ಷಿತವಾಗಿರಬೇಕು ಎಂಬುದು ಸಚಿವ ನಿತಿನ್ ಗಡ್ಕರಿ ರವರ ಆಶಯ. ಈ ಕಾರಣಕ್ಕೆ ಕೇಂದ್ರ ಸರ್ಕಾರವು ಭಾರತದಲ್ಲಿ ಮಾರಾಟವಾಗುವ ಕಾರುಗಳು ಏರ್ ಬ್ಯಾಗ್ ಸೇರಿದಂತೆ ವಿವಿಧ ಸುರಕ್ಷತಾ ಫೀಚರ್ ಗಳನ್ನು ಹೊಂದಿರುವುದನ್ನು ಕಡ್ಡಾಯಗೊಳಿಸಿದೆ.

ಕೇಂದ್ರ ಸರ್ಕಾರದ ಆದೇಶಕ್ಕೆ ಅನುಸಾರವಾಗಿ ಕಾರು ತಯಾರಕ ಕಂಪನಿಗಳು ಸುರಕ್ಷತಾ ಫೀಚರ್ ಗಳನ್ನು ನೀಡುತ್ತಿವೆ. ಇದರಿಂದ ಭಾರತದಲ್ಲಿ ಮಾರಾಟವಾಗುವ ಕಾರುಗಳು ಈಗ ಮೊದಲಿಗಿಂತ ಸುರಕ್ಷಿತವಾಗುತ್ತಿವೆ. ಆದರೆ ಕಾರಿನ ಸುರಕ್ಷತೆಯಲ್ಲಿ ನಾವು ಇನ್ನೂ ಹೆಚ್ಚು ದೂರ ಸಾಗಬೇಕಾಗಿದೆ.

ಸಚಿವ ನಿತಿನ್ ಗಡ್ಕರಿ ರವರು ಪೆಟ್ರೋಲ್, ಡೀಸೆಲ್ ಎಂಜಿನ್ ಹೊಂದಿರುವ ವಾಹನಗಳ ಬದಲಿಗೆ ಎಲೆಕ್ಟ್ರಿಕ್, ಸಿಎನ್ಜಿ ಹಾಗೂ ಎಥೆನಾಲ್ ನಂತಹ ಪರ್ಯಾಯ ಇಂಧನಗಳ ಬಳಕೆಯನ್ನು ಉತ್ತೇಜಿಸುತ್ತಿದ್ದಾರೆ. ಈಗ ಅವರು ಕಾರುಗಳ ಹಾರ್ನ್ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ.

ಇದು ನಿಜವಾಗಿಯೂ ಹೆಚ್ಚು ಗಮನ ಹರಿಸಬೇಕಾದ ಸಂಗತಿ ಎಂಬುದರಲ್ಲಿ ಯಾವುದೇ ಅನುಮಾನಗಳಿಲ್ಲ. ಏಕೆಂದರೆ ಭಾರತೀಯರು ಅನಗತ್ಯವಾಗಿ ಹಾರ್ನ್ ಹೊಡೆಯುತ್ತಲೇ ಇರುತ್ತಾರೆ. ಅನಗತ್ಯವಾಗಿ ಹಾರ್ನ್ ಮಾಡುವುದರಿಂದ ಶಬ್ದ ಮಾಲಿನ್ಯ ಉಂಟಾಗುತ್ತದೆ. ಇದು ಇತರರಿಗೆ ಕಿರಿಕಿರಿ ಉಂಟುಮಾಡುತ್ತದೆ.

ಈ ಬಗ್ಗೆ ಅನೇಕ ವಾಹನ ಸವಾರರಿಗೆ ತಿಳಿದಿರುವುದಿಲ್ಲ. ತಿಳಿದಿದ್ದರೂ ಕೆಲವೊಮ್ಮೆ ಅನಗತ್ಯವಾಗಿ ಹಾರ್ನ್ ಮಾಡಿ ಇತರರಿಗೆ ಕಿರಿಕಿರಿ ಉಂಟು ಮಾಡುತ್ತಾರೆ. ನಮ್ಮ ದೇಶದಲ್ಲಿ ಹಲವಾರು ಪ್ರದೇಶಗಳಲ್ಲಿ ಹಾರ್ನ್ ಮಾಡುವುದನ್ನು ನಿಷೇಧಿಸಲಾಗಿದೆ. ಆದರೆ ಜನರು ಇದನ್ನು ಪಾಲಿಸುತ್ತಿಲ್ಲವೆಂಬುದು ವಿಪರ್ಯಾಸ.

ವಾಹನ ಸವಾರರು ತಮಗೆ ಇಷ್ಟ ಬಂದಂತೆ ಹಾರ್ನ್ ಮಾಡುತ್ತಾರೆ. ಈಗ ಇರುವ ನಿಯಮಾವಳಿಗಳ ಪ್ರಕಾರ, ವಾಹನಗಳ ಹಾರ್ನ್ನ ಗರಿಷ್ಠ ಶಬ್ದ ಮಿತಿಯು 112 ಡೆಸಿಬಲ್ಗಳನ್ನು ಮೀರುವಂತಿಲ್ಲ. ಆದರೆ ಬಹುತೇಕ ವಾಹನ ಸವಾರರು ಈ ನಿಯಮವನ್ನು ಪಾಲಿಸುತ್ತಿಲ್ಲ.

ಕೆಲವರು ತಮ್ಮ ವಾಹನಗಳಲ್ಲಿ ಹೆಚ್ಚು ಶಬ್ದ ಮಾಡುವ ಹಾರ್ನ್ಗಳನ್ನು ಅಳವಡಿಸುತ್ತಾರೆ. ಈ ರೀತಿಯ ಹಾರ್ನ್ ಗಳು ಕಂಡು ಬಂದರೆ ಪೊಲೀಸರು ಅವುಗಳನ್ನು ವಶಪಡಿಸಿ ಕೊಳ್ಳುತ್ತಾರೆ. ಪೊಲೀಸರು ಎಷ್ಟೇ ಜಾಗೃತಿ ಮೂಡಿಸಿದರೂ, ದಂಡ ವಿಧಿಸಿದರೂ ಕೆಲವರು ಜೋರಾಗಿ ಹಾರ್ನ್ ಮಾಡುತ್ತಲೇ ಇರುತ್ತಾರೆ.

ಕೇರಳ ರಾಜ್ಯ ಸರ್ಕಾರವು ಅಲ್ಲಿನ ಪೊಲೀಸರಿಗೆ ಅತ್ಯಾಧುನಿಕ ಸೌಂಡ್ ಮೀಟರ್ಗಳನ್ನು ಒದಗಿಸಿದೆ. ಇವು ವಾಹನಗಳಿಂದ ಹೊರ ಬರುವ ಹಾರ್ನ್ ಮಟ್ಟವನ್ನು ನಿಖರವಾಗಿ ತಿಳಿಸುತ್ತವೆ. ವಾಹನಗಳು ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಹಾರ್ನ್ ಮಾಡಿದರೆ, ಪೊಲೀಸರು ವಾಹನ ಮಾಲೀಕರಿಗೆ ದಂಡ ವಿಧಿಸುತ್ತಾರೆ. ಆದರೆ ಭಾರತದ ಎಲ್ಲಾ ರಾಜ್ಯಗಳಲ್ಲೂ ಇಂತಹ ಪರೀಕ್ಷೆಗಳು ನಡೆಯುತ್ತಿವೆಯೇ ಎಂಬುದು ತಿಳಿದಿಲ್ಲ.

ಕೆಲವು ವಾಹನ ಸವಾರರು ತಮ್ಮ ವಾಹನಗಳಲ್ಲಿ ವಾಹನ ತಯಾರಕ ಕಂಪನಿಗಳು ನೀಡುವ ಹಾರ್ನ್ ಗಳನ್ನು ತೆಗೆದು ಹಾಕಿ, ಕರ್ಕಶವಾಗಿ ಶಬ್ದ ಮಾಡುವ ಹಾರ್ನ್ ಗಳನ್ನು ಬಳಸುತ್ತಾರೆ. ಇನ್ನು ಕೆಲವು ಸವಾರರು ಜನರನ್ನು ಎದುರಿಸುವಂತಹ ಹಾರ್ನ್ ಗಳನ್ನು ತಮ್ಮ ವಾಹನಗಳಲ್ಲಿ ಅಳವಡಿಸಿ ಕೊಳ್ಳುತ್ತಾರೆ. ಶಾಲಾ ಪ್ರದೇಶದ ಬಳಿ ಹಾರ್ನ್ ಮಾಡಬಾರದು ಎಂಬ ಫಲಕಗಳನ್ನು ಹಾಕಲಾಗಿದ್ದರೂ ಸಹ ಯಾವ ವಾಹನ ಸವಾರರು ಆ ನಿಯಮವನ್ನು ಪಾಲಿಸುತ್ತಿಲ್ಲ.
ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.


Click it and Unblock the Notifications