Expressway: ಕರ್ನಾಟಕದಲ್ಲಿ 4 ಹೊಸ ಎಕ್ಸ್ಪ್ರೆಸ್ವೇಗಳು ಸಿದ್ಧಗೊಳ್ಳುತ್ತಿವೆ.. 3-4 ಗಂಟೆಯೊಳಗೆ ನಿಮ್ಮೂರಿಗೆ ಹೋಗಬಹುದು!
ದೇಶದ ಬೆಳವಣಿಗೆಗೆ ಹೆದ್ದಾರಿಗಳು ಮಹತ್ವದ ಪಾತ್ರ ವಹಿಸುತ್ತಿವೆ. ಕರ್ನಾಟಕದಲ್ಲಿಯೂ ಎಕ್ಸ್ಪ್ರೆಸ್ವೇಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಸದ್ಯ ಬೆಂಗಳೂರು - ಚೆನ್ನೈ ಎಕ್ಸ್ಪ್ರೆಸ್ವೇ ಕಾಮಗಾರಿ ಭರದಿಂದ ಸಾಗುತ್ತಿದೆ. ಬೆಂಗಳೂರು - ತುಮಕೂರು ದಶಪಥ ಹೆದ್ದಾರಿ (ಎಕ್ಸ್ಪ್ರೆಸ್ವೇ) ಕೆಲಸವು ನಡೆಯುತ್ತಿದ್ದು, ಬೆಂಗಳೂರು - ಹೈದರಾಬಾದ್ ಹೆದ್ದಾರಿಯನ್ನು 12 ಪಥದ ಎಕ್ಸ್ಪ್ರೆಸ್ವೇಯಾಗಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಬೆಂಗಳೂರು - ಪುಣೆ ಎಕ್ಸ್ಪ್ರೆಸ್ವೇ ನಿರ್ಮಾಣಕ್ಕೂ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ದೊಡ್ಡಮಟ್ಟದಲ್ಲಿ ತಯಾರಿ ನಡೆಸುತ್ತಿದೆ ಎಂದು ತಿಳಿದುಬಂದಿದೆ. ಈ ಕುರಿತಂತೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಮೊದಲಿಗೆ ಬೆಂಗಳೂರು - ಚೆನ್ನೈ ಎಕ್ಸ್ಪ್ರೆಸ್ವೇ (Bengaluru - Chennai Expressway) ಬಗ್ಗೆ ಮಾತನಾಡೋಣ. ಈ ಹೆದ್ದಾರಿಯ ಕಾಮಗಾರಿ ನಡೆಸಲಾಗುತ್ತಿದ್ದು, ವರ್ಷಾಂತ್ಯದೊಳಗೆ ಲೋಕಾರ್ಪಣೆಗೊಳ್ಳಲಿದೆ ಎಂದು ಹೇಳಲಾಗಿತ್ತು. ಆದಾಗ್ಯೂ ವಿವಿಧ ಭಾಗದಲ್ಲಿ ರಸ್ತೆ ನಿರ್ಮಾಣದ ಕೆಲಸಗಳನ್ನು ಮಾಡಲಾಗುತ್ತಿದ್ದು, 2025ರಲ್ಲಿ ಉದ್ಘಾಟನೆಗೊಳ್ಳುವ ಸಾಧ್ಯತೆಯಿದೆ. 262 ಕಿಲೋಮೀಟರ್ ಉದ್ದದ ಈ ಎಕ್ಸ್ಪ್ರೆಸ್ವೇ ಕರ್ನಾಟಕದಲ್ಲಿ 71 ಕಿ.ಮೀ, ಆಂಧ್ರಪ್ರದೇಶದಲ್ಲಿ 85 ಕಿ.ಮೀ ಮತ್ತು ತಮಿಳುನಾಡಿನಲ್ಲಿ 106 ಕಿ.ಮೀ ಹಾದುಹೋಗಿದೆ.

ಕರ್ನಾಟಕದಲ್ಲಿ ಬೆಂಗಳೂರು- ಚೆನ್ನೈ ಎಕ್ಸ್ಪ್ರೆಸ್ವೇ ಕಾಮಗಾರಿ ಬಹುತೇಕ ಮುಗಿದಿದ್ದು, ಆಂಧ್ರ ಹಾಗೂ ತಮಿಳುನಾಡಿನಲ್ಲಿ ಆಮೆಗತಿಯಲ್ಲಿದೆ. ಈ ಹೆದ್ದಾರಿಯನ್ನು 4 ಪಥಗಳಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದು, ವಾಹನ ದಟ್ಟಣೆಗೆ ಅನುಗುಣವಾಗಿ 8 ಪಥಗಳಿಗೆ ವಿಸ್ತರಿಸಬಹುದು. ನೂತನ ರಸ್ತೆ ಬೆಂಗಳೂರಿನ ಸಮೀಪದ ಹೊಸಕೋಟೆಯಲ್ಲಿ ಆರಂಭವಾಗಲಿದ್ದು, ಚೆನ್ನೈ ಹೊರವಲಯದ ಶ್ರೀಪೆರಂಬದೂರಿನಲ್ಲಿ ಮುಕ್ತಾಯಗೊಳ್ಳಲಿದೆ. 5 ರಿಂದ 6 ಗಂಟೆಯಿರುವ ಪ್ರಯಾಣದ ಅವಧಿಯು ಕೇವಲ 2 ಗಂಟೆಗೆ ಇಳಿಕೆಯಾಗಲಿದೆ.
ಬೆಂಗಳೂರು - ಪುಣೆ ಎಕ್ಸ್ಪ್ರೆಸ್ವೇ (Bengaluru - Pune Expressway) ನಿರ್ಮಾಣಕ್ಕೂ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಯಾರಿ ಮಾಡಿಕೊಳ್ಳುತ್ತಿದೆ ಎಂದು ವರದಿಯಾಗಿದೆ. ಸರಿ ಸುಮಾರು 700 ಕಿ.ಮೀ ಉದ್ದದ ಈ ಹೆದ್ದಾರಿ ಕರ್ನಾಟಕದ 9 ಜಿಲ್ಲೆಗಳು (ಬೆಳಗಾವಿ, ಬಾಗಲಕೋಟೆ, ಗದಗ, ಕೊಪ್ಪಳ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಬೆಂಗಳೂರು ಗ್ರಾಮಾಂತರ) ಹಾಗೂ ಮಹಾರಾಷ್ಟ್ರದ 3 ಜಿಲ್ಲೆಯಲ್ಲಿ (ಪುಣೆ, ಸತಾರ, ಸಾಂಗ್ಲಿ) ಹಾದುಹೋಗಲಿದೆ ಎಂದು ತಿಳಿದುಬಂದಿದೆ.
ಹೊಸ ಬೆಂಗಳೂರು - ಪುಣೆ ಎಕ್ಸ್ಪ್ರೆಸ್ವೇ ದಾಬಸ್ ಪೇಟೆ ಮತ್ತು ದೊಡ್ಡಬಳ್ಳಾಪುರ ಮಧ್ಯೆಯಿರುವ ಹುಲಿಕುಂಟೆ ಸಮೀಪ ಆರಂಭವಾಗಿ ಮಹಾರಾಷ್ಟ್ರದ ಶಿವರೆ ಬಳಿ ಕೊನಗೊಳ್ಳುತ್ತದೆ. ಈ ಹೆದ್ದಾರಿಯನ್ನು 6 ಪಥದಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿದ್ದು, ವಾಹನಗಳ ದಟ್ಟಣೆ ಹೆಚ್ಚಾದರೆ, 8 ಪಥದವರೆಗೆ ಮೇಲ್ದರ್ಜೆಗೇರಿಸಬಹುದು ಎಂದು ಹೇಳಲಾಗಿದೆ. ನೂತನ ಎಕ್ಸ್ಪ್ರೆಸ್ವೇಯಿಂದ ಪ್ರಯಾಣದ ಅವಧಿಯು 7 ಗಂಟೆಯಾಗಲಿದೆ ಎನ್ನಲಾಗಿದೆ.
ದಕ್ಷಿಣ ಭಾರತದ ಪ್ರಮುಖ ನಗರಗಳಾದ ಬೆಂಗಳೂರು (Bengaluru) ಹಾಗೂ ಹೈದರಾಬಾದ್ (Hyderabad) ನಡುವೆ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ (ಎನ್ಹೆಚ್-44)ಯನ್ನು ವಿಸ್ತರಿಸಲು ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿಸಿದೆ ಎಂದು ಈ ಹಿಂದೆ ವರದಿಯಾಗಿತ್ತು. ಈಗಿರುವ 4 ಪಥದ ರಸ್ತೆಯನ್ನು 12 ಪಥದ ಎಕ್ಸ್ಪ್ರೆಸ್ವೇಯಾಗಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ ಎಂದು ಹೇಳಲಾಗಿದೆ.
ನೆಲಮಂಗಲ ಮತ್ತು ತುಮಕೂರು ಮಧ್ಯೆಯಿರುವ ರಾಷ್ಟ್ರೀಯ ಹೆದ್ದಾರಿ-48ನ್ನು ಪ್ರವೇಶ ನಿಯಂತ್ರಿತ ಎಕ್ಸ್ಪ್ರೆಸ್ವೇ ಮಾಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದ್ದು, ಸದ್ಯ ಹಲವೆಡೆಗಳಲ್ಲಿ ಕಾಮಗಾರಿ ನಡೆಸುತ್ತಿದೆ. 2025ರ ಡಿಸೆಂಬರ್ ಅಂತ್ಯದೊಳಗೆ ಈ ರಸ್ತೆ ಸಂಪೂರ್ಣವಾಗಿ ನಿರ್ಮಾಣವಾಗಲಿದೆ ಎಂದು ಅಂದಾಜಿಸಲಾಗಿದೆ. ನೂತನ ಹೆದ್ದಾರಿ ನಿರ್ಮಾಣಗೊಂಡ ಮೇಲೆ ಚಿತ್ರದುರ್ಗ, ದಾವಣಗೆರೆ, ಹಾವೇರಿ, ಧಾರವಾಡ, ಬೆಳಗಾವಿ, ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಯ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ.
ಡ್ರೈವ್ಸ್ಪಾರ್ಕ್ ಕನ್ನಡ ವೆಬ್ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications