G20 ಪ್ರತಿನಿಧಿಗಳನ್ನು ಮೆಚ್ಚಿಸಿದ ವಂದೇ ಭಾರತ್... ಎನಂದ್ರು ಗೊತ್ತಾ? ಟ್ರೋಲರ್ಗಳು ನೋಡಲೇಬೇಕು
ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಇತ್ತೀಚಿನ ದಿನಗಳಲ್ಲಿ ಭಾರತೀಯ ರೈಲ್ವೆಯ ಅತ್ಯಂತ ಮಹತ್ವಾಕಾಂಕ್ಷೆಯ ರೈಲು ಯೋಜನೆಗಳಲ್ಲಿ ಒಂದಾಗಿದೆ. ಇದು ಸ್ವಯಂಚಾಲಿತ ಬಾಗಿಲುಗಳನ್ನು ಹೊಂದಿದ್ದು, ಹೆಚ್ಚಿನ ಸಂಖ್ಯೆಯ ರೈಲು ಪ್ರಯಾಣಿಕರನ್ನು ಆಕರ್ಷಿಸುವ ಇತರ ಆಧುನಿಕ ಸೌಲಭ್ಯಗಳ ಜೊತೆಗೆ ಆನ್ಬೋರ್ಡ್ ವೈ- ಫೈ ಹೊಂದಿರುವ ರೈಲಾಗಿದೆ.
ಈ ಎಲ್ಲಾ ವಿಷಯಗಳನ್ನು ನೋಡಿದ್ರೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳ ಮೇಲೆ ಕೇಂದ್ರ ಸರ್ಕಾರವು ಹೆಚ್ಚಿನ ಗಮನವನ್ನು ನೀಡುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ. ಪ್ರತಿಯೊಂದು ರೈಲನ್ನು ಪ್ರಧಾನಿ ನರೇಂದ್ರ ಮೋದಿ ಅವರೇ ಉದ್ಘಾಟಿಸಿದ್ದಾರೆ. ವಾಸ್ತವವಾಗಿ, ಭಾರತದಲ್ಲಿ ಮೊದಲ ಬಾರಿಗೆ ನಡೆಯಲಿರುವ ಮುಂಬರುವ G20 ಶೃಂಗಸಭೆಗೆ ಹೆಜ್ಜೆಯಿಡಲು ಸರ್ಕಾರವು G20 ನಿಯೋಗದ ಸಾರಿಗೆ ವಿಧಾನವಾಗಿ ವಂದೇ ಭಾರತ್ ರೈಲನ್ನು ಮೀಸಲಿಟ್ಟಿದೆ.

ಈ ನಿಟ್ಟಿನಲ್ಲಿ ಗಾಂಧಿನಗರ-ಮುಂಬೈ ವಂದೇ ಭಾರತ್ ಎಕ್ಸ್ಪ್ರೆಸ್ನಲ್ಲಿ ಪ್ರಯಾಣಿಸಿದ G20 ದೇಶಗಳ ಮಾಧ್ಯಮ ಪ್ರತಿನಿಧಿಗಳ ನಿಯೋಗವು ಪ್ರಯಾಣದ ಅನುಭವದ ಬಗ್ಗೆ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು. ಟ್ವಿಟರ್ನಲ್ಲಿ ವೀಡಿಯೊವನ್ನು ಹಂಚಿಕೊಂಡ ಪಶ್ಚಿಮ ರೈಲ್ವೇ, "ಭಾರತೀಯ ಎಂಜಿನಿಯರಿಂಗ್ ಮತ್ತು ಸೌಕರ್ಯದ ಕುರಿತು ಪ್ರತಿನಿಧಿಗಳು ಮೆಚ್ಚುಗೆ ವ್ಯಕ್ತಪಡಿಸಿರುವುದಾಗಿ ತಿಳಿಸಿದೆ. ವಿಶ್ವ ದರ್ಜೆಯ ಸ್ಥಳೀಯವಾಗಿ ತಯಾರಿಸಿದ #ವಂದೇಭಾರತ್ ಎಕ್ಸ್ಪ್ರೆಸ್ನಲ್ಲಿ ಗಾಂಧಿನಗರ ರಾಜಧಾನಿಯಿಂದ ಮುಂಬೈಗೆ ಪ್ರಯಾಣಿಸಿರುವುದಾಗಿ" ರೈಲ್ವೆ ತಿಳಿಸಿದೆ.
ದಕ್ಷಿಣ ಆಫ್ರಿಕಾದ ಪ್ರತಿನಿಧಿಗಳಲ್ಲಿ ಒಬ್ಬರು ಮಾತನಾಡಿ, ರೈಲಿನ ಕುರಿತು ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕುತೂಹಲದಿಂದ ತಮ್ಮ ಪ್ರಯಾಣ ಮಾಡಿದ್ದು, ನಿಲ್ದಾಣದಿಂದ ಸರಿಯಾದ ಸಮಯಕ್ಕೆ ರೈಲು ಹೊರಟಿದ್ದರಿಂದ ವಂದೇ ಭಾರತ್ ಎಕ್ಸ್ಪ್ರೆಸ್ನ ದಕ್ಷತೆಯಿಂದ ನಾನು ಪ್ರಭಾವಿತಳಾಗಿದ್ದೇನೆ ಎಂದು ಹೇಳಿದರು. ರೈಲಿನಲ್ಲಿರುವ ಸೌಲಭ್ಯಗಳು ಮತ್ತು ನೈರ್ಮಲ್ಯವು ಉನ್ನತ ದರ್ಜೆಯ ಮತ್ತು ಶ್ಲಾಘನೀಯವಾಗಿದೆ ಎಂದರು.

ಹೊಸ ರೈಲುಗಳ ನಿಯೋಜನೆಗೆ ತಯಾರಿ: ಭಾರತೀಯ ರೈಲ್ವೇಯು ಹೊಸ ಕಿತ್ತಳೆ ಮತ್ತು ಬೂದು ಬಣ್ಣದ ವಂದೇ ಭಾರತ್ ಎಕ್ಸ್ಪ್ರೆಸ್ನ ನಿಯೋಜನೆಗೆ ತಯಾರಿ ನಡೆಸುತ್ತಿದೆ. ಪರಿಷ್ಕೃತ ವಂದೇ ಭಾರತ್ ಎಕ್ಸ್ಪ್ರೆಸ್ನ ಪ್ರಾಯೋಗಿಕ ಚಾಲನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದಾಗಿ ತಿಳಿದುಬಂದಿದೆ. ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್) ತಯಾರಿಸಿದ ಹೊಸ ರೈಲನ್ನು ಸಚಿವ ಅಶ್ವಿನಿ ವೈಷ್ಣವ್ ಅವರು ಚೆನ್ನೈನಲ್ಲಿ ಅದರ ಮೊದಲ ಪ್ರಾಯೋಗಿಕ ಚಾಲನೆಗೆ ಮುಂಚಿತವಾಗಿ ಪರಿಶೀಲಿಸಿದ್ದಾರೆ.
ಬೆಂಗಳೂರು - ಕಾಚಿಗುಡ ವಂದೇ ಭಾರತ್: ಶೀಘ್ರದಲ್ಲಿ ಮತ್ತೊಂದು ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಬೆಂಗಳೂರು - ಹೈದರಾಬಾದ್ ನಡುವೆ ಕಾರ್ಯಚರಣೆ ನಡೆಸಲಿದ್ದು, ತಿಂಗಳಾಂತ್ಯದಲ್ಲಿ ಓಡಾಟ ನಡೆಸುವ ಸಾಧ್ಯತೆಯಿದೆ. ಬೆಂಗಳೂರು - ಹೈದರಾಬಾದ್ (ಕಾಚಿಗುಡ) ಮಾರ್ಗದಲ್ಲಿ ಮೊದಲ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಓಡಿಸಲು ತೀರ್ಮಾನಿಸಲಾಗಿದೆ. ಎರಡು ನಗರಗಳ ನಡುವೆ 618 ಕಿಲೋಮೀಟರ್ ಅಂತರವಿದ್ದು ಕೇವಲ 7 - 8 ಗಂಟೆಯಲ್ಲಿ ಕ್ರಮಿಸಲಿದೆ.
ತೆಲಂಗಾಣದಲ್ಲಿ ಮುಖ್ಯ ಕಚೇರಿ ಹೊಂದಿರುವ ದಕ್ಷಿಣ ಮಧ್ಯೆ ರೈಲ್ವೆ ಈ 'ವಂದೇ ಭಾರತ್ ಎಕ್ಸ್ಪ್ರೆಸ್' ರೈಲಿನ ನಿರ್ವಹಣೆಯ ಜವಾಬ್ದಾರಿ ಹೊತ್ತಿದೆ. ಧರ್ಮಾವರಂ, ಧೋನೆ, ಕರ್ನುಲ್, ಗದ್ವಲ್ ಮಹಬೂಬ್ ನಗರ ಹಾಗೂ ಶಾದ್ ನಗರ ರೈಲು ನಿಲ್ದಾಣದಲ್ಲಿ ನಿಲ್ಲುವ ನೀರಿಕ್ಷೆಯಿದೆ. ಬಹುತೇಕ, ಈ ರೈಲು ಕರ್ನಾಟಕದ ಯಾವುದೇ ನಿಲ್ದಾಣದಲ್ಲಿಯೂ ನಿಲುಗಡೆಯಾಗುವುದಿಲ್ಲ ಎಂದು ಹೇಳಲಾಗಿದೆ. ಸದ್ಯ, ದಕ್ಷಿಣ ಮಧ್ಯೆ ರೈಲ್ವೆ ಇದರ ಪರೀಕ್ಷಾರ್ಥ ಸಂಚಾರವನ್ನು ನಡೆಸುತ್ತಿದೆ.
ಸದ್ಯ ಭಾರತದಾದ್ಯಂತ 25 ಮಾರ್ಗಗಳಲ್ಲಿ ಚಲಿಸುವ ಬಹುತೇಕ ಎಲ್ಲಾ ವಂದೇ ಭಾರತ್ ರೈಲುಗಳು ಇತರ ರೈಲುಗಳಿಗಿಂತ ಹೆಚ್ಚಿನ ದರವನ್ನು ಹೊಂದಿದ್ದರೂ ಸಹ ಪೂರ್ಣ ಸಾಮರ್ಥ್ಯಕ್ಕಿಂತ ಹೆಚ್ಚು ಚಾಲನೆಯಲ್ಲಿವೆ. ವಿವಿಧ ರೈಲ್ವೆ ವಲಯಗಳಲ್ಲಿ ಬಹು ರಾಜಧಾನಿ ನಗರಗಳು, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಸಂಪರ್ಕಿಸುತ್ತಾ ರೈಲುಗಳು ಯಶಸ್ವಿಯಾಗಿ ಮುನ್ನುಗ್ಗುತ್ತಿವೆ ಎಂದು ರೈಲ್ವೆ ತಿಳಿಸಿದೆ.

ಬೆಂಗಳೂರು, ಮೈಸೂರು, ದೆಹಲಿ, ಮುಂಬೈ, ಚೆನ್ನೈ, ತಿರುಪತಿ, ಭೋಪಾಲ್, ಲಕ್ನೋ, ಗಾಂಧಿನಗರ, ವಿಶಾಖಪಟ್ಟಣಂ, ಕೊಯಮತ್ತೂರು, ಗುವಾಹಟಿ, ಹೌರಾ, ನ್ಯೂ ಜಲ್ಪೈಗುರಿ, ಶಿರಡಿ, ಡೆಹ್ರಾಡೂನ್, ಜೈಪುರ, ಜೋಧ್ಪುರ, ತಿರುವನಂತಪುರ ಸೇರಿದಂತೆ ವಂದೇ ಭಾರತ್ ಎಕ್ಸ್ಪ್ರೆಸ್ನಿಂದ ಸಂಪರ್ಕಗೊಂಡಿರುವ ಕೆಲವು ಪ್ರಮುಖ ನಗರಗಳು ಸೇರಿದಂತೆ ಇನ್ನೂ ಹಲವು ಪ್ರದೇಶಗಳಿಗೆ ಸೇವೆ ಸಲ್ಲಿಸುತ್ತಿದೆ.


Click it and Unblock the Notifications