ಬೆಂಗಳೂರು-ಕಲಬುರಗಿ ವಂದೇ ಭಾರತ್ ರೈಲಿನ ಟಿಕೆಟ್ ದರ ಪ್ರಕಟ: ರಾಯರ ಭಕ್ತರಿಗೂ ಸಿಹಿಸುದ್ದಿ
ಉತ್ತರ ಕರ್ನಾಟಕ ಜನರ ಬಹುದಿನಗಳ ಕನಸು ಕಡೆಗೂ ನನಸಾಗಿದ್ದು, ಬೆಂಗಳೂರು ಮತ್ತು ಕಲಬುರಗಿ ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ (Vande Bharat Express) ಸಂಚಾರವನ್ನು ಆರಂಭಿಸಿದೆ. ಐಆರ್ಟಿಸಿ ಈ ರೈಲಿನ ವೇಳಾಪಟ್ಟಿ ಹಾಗೂ ಟಿಕೆಟ್ ದರದ ಕುರಿತ ವಿವರವನ್ನು ಪ್ರಕಟಿಸಿದೆ.
ಈ ವಂದೇ ಭಾರತ್ ಎಕ್ಸ್ಪ್ರೆಸ್ ಕಲಬುರಗಿಯಿಂದ ಬೆಳಗ್ಗೆ 5:15ಕ್ಕೆ ಹೊರಟು ಮಧ್ಯಾಹ್ನ 2 ಗಂಟೆಗೆ ಎಸ್ಎಂವಿಟಿ ಬೆಂಗಳೂರಿಗೆ ಬರುತ್ತದೆ. ಇಲ್ಲಿಂದ ಮಧ್ಯಾಹ್ನ 2:40ಕ್ಕೆ ಸಂಚಾರವನ್ನು ಆರಂಭಿಸಲಿದ್ದು, ರಾತ್ರಿ 11:30ಕ್ಕೆ ಕಲಬುರಗಿಯನ್ನು ತಲುಪುತ್ತದೆ. ಮಾರ್ಗ ಮಧ್ಯೆ ಯಲಹಂಕ, ಧರ್ಮಾವರಂ, ಅನಂತಪುರ, ಗುಂತಕಲ್, ಮಂತ್ರಾಲಯ ರೋಡ್ ಹಾಗೂ ರಾಯಚೂರು ರೈಲು ನಿಲ್ದಾಣದಲ್ಲಿ ನಿಲುಗಡೆಯಿರುತ್ತದೆ.

ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಗಂಟೆಗೆ 130 ಕಿ.ಮೀ ಗರಿಷ್ಠ ವೇಗದಲ್ಲಿ ಕಾರ್ಯಾಚರಣೆ ನಡೆಸುವುದರಿಂದ ಇವೆರೆಡು ನಗರಗಳ ನಡುವಿನ 543 ಕಿಲೋಮೀಟರ್ ದೂರವನ್ನು ಸುಮಾರು 8.45 ಗಂಟೆಗಳಲ್ಲಿ ಕ್ರಮಿಸಲಿದೆ. ಇದರಿಂದ ಪ್ರಯಾಣಿಕರು ಬೇಗನೆ ತಮ್ಮ ಗಮ್ಯ ಸ್ಥಾನವನ್ನು ತಲುಪಬಹುದು. 8 ಬೋಗಿಗಳ ಈ ರೈಲು 1 ಎಕ್ಸಿಕ್ಯೂಟಿವ್ ಚೇರ್ ಕಾರ್ ಹಾಗೂ 7 ಚೇರ್ ಕಾರ್ ಕೋಚ್ಗಳನ್ನು ಒಳಗೊಂಡಿದೆ.
ಬೆಂಗಳೂರಿನಿಂದ ಕಲಬುರಗಿಗೆ ಚೇರ್ ಕಾರ್ ಕೋಚ್ನಲ್ಲಿ ಪ್ರಯಾಣಿಸಲು ರೂ.1465 ಟಿಕೆಟ್ ದರವನ್ನು ನಿಗದಿಪಡಿಸಲಾಗಿದೆ. ಇದು ಕ್ಯಾಟರಿಂಗ್ ಸೇರಿದಂತೆ ಇತರೆ ಶುಲ್ಕವನ್ನು ಹೊಂದಿದೆ. ಎಕ್ಸಿಕ್ಯೂಟಿವ್ ಚೇರ್ ಕಾರ್ ಕೋಚ್ನಲ್ಲಿ ಟಿಕೆಟ್ವೊಂದಕ್ಕೆ ಒಬ್ಬರು ರೂ.2700 (ಆಹಾರ, ಜಿಎಸ್ಟಿ ಸೇರಿ ಇತರೆ ಶುಲ್ಕಗಳು) ಪಾವತಿಸಬೇಕು. ಕಲಬುರಗಿಯಿಂದ ಬೆಂಗಳೂರಿಗೆ ಎಕ್ಸಿಕ್ಯೂಟಿವ್ ಚೇರ್ ಕಾರ್ನಲ್ಲಿ ರೂ.2765 ಮತ್ತು ಚೇರ್ ಕಾರ್ನಲ್ಲಿ ರೂ.1540 ಟಿಕೆಟ್ ದರವಿದೆ.

ಈ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಮಂತ್ರಾಲಯ ರೋಡ್ ನಿಲ್ದಾಣದಲ್ಲಿ ನಿಲ್ಲುವುದರಿಂದ ರಾಯರ ಭಕ್ತರಿಗೂ ಹೆಚ್ಚಿನ ಅನುಕೂಲವಾಗುತ್ತದೆ. ಕಲಬುರಗಿಯಿಂದ ಹೊರಡುವ ರೈಲು ಬೆಳಗ್ಗೆ 7.08ರ ಸುಮಾರಿಗೆ ಮಂತ್ರಾಲಯ ರೋಡ್ ಗೆ ಆಗಮಿಸುತ್ತದೆ. ಚೇರ್ ಕಾರ್ನಲ್ಲಿ ರೂ.520 ಟಿಕೆಟ್ ದರವಿದೆ. ಬೆಂಗಳೂರಿಂದ ಮಧ್ಯಾಹ್ನ ಸಂಚಾರವನ್ನು ಶುರು ಮಾಡಲಿದ್ದು, ರಾತ್ರಿ 8.15ರ ಸುಮಾರಿಗೆ ಮಂತ್ರಾಲಯ ರೋಡ್ ತಲುಪುತ್ತದೆ. ಚೇರ್ ಕಾರ್ ಕೋಚ್ನಲ್ಲಿ ಪ್ರಯಾಣಿಸಲು ಟಿಕೆಟ್ವೊಂದಕ್ಕೆ ರೂ.1,175 ಪಾವತಿಸಬೇಕು.
ಬೆಂಗಳೂರು-ಕಲಬುರಗಿ ಮಾತ್ರವಲ್ಲದೆ ಮೈಸೂರು-ಬೆಂಗಳೂರು-ಎಂಜಿಆರ್ ಚೆನ್ನೈ ಮಧ್ಯೆಯೂ ಇನ್ನೊಂದು ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಕಾರ್ಯಚರಣೆಯನ್ನು ಆರಂಭಿಸಿದೆ. ಏಪ್ರಿಲ್ 4ರವರೆಗೆ ಎಂಜಿಆರ್ ಚೆನ್ನೈನಿಂದ ಎಸ್ಎಂವಿಟಿ ಬೆಂಗಳರಿನವರೆಗೆ ಮಾತ್ರ ಸಂಚಾರಿಸುತ್ತದೆ. ಆ ಬಳಿಕ, ಏಪ್ರಿಲ್ 5ರಿಂದ ಮೈಸೂರಿನವರೆಗೂ ಓಡಾಟವನ್ನು ಶುರು ಮಾಡಲಿದೆ. ಮೈಸೂರಿನಿಂದ ಬೆಳಗ್ಗೆ 6 ಗಂಟೆಗೆ ಹೊರಡಲಿದ್ದು, ಮಧ್ಯಾಹ್ನ 12:20ರ ಸುಮಾರಿಗೆ ಎಂಜಿಆರ್ ಚೆನ್ನೈ ನಿಲ್ದಾಣವನ್ನು ತಲುಪಲಿದೆ.
ಎಂಜಿಆರ್ ಚೆನ್ನೈ ರೈಲು ನಿಲ್ದಾಣದಿಂದ ಸಂಜೆ 5 ಗಂಟೆಗೆ ಸಂಚಾರವನ್ನು ಶುರು ಮಾಡುವ ಈ ರೈಲು, ರಾತ್ರಿ 11:20ರ ಸುಮಾರಿಗೆ ಮೈಸೂರಿಗೆ ಬರಲಿದೆ. ಮಾರ್ಗ ಮಧ್ಯೆ ಮಂಡ್ಯ, ಎಸ್ಎಂವಿಟಿ ಬೆಂಗಳೂರು, ಕೃಷ್ಣರಾಜಪುರಂ ಹಾಗೂ ಕಟಪಾಡಿಯಲ್ಲಿ ನಿಲ್ಲಲಿದೆ. ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳು ವೇಗವಾಗಿ ಸಂಚಾರಿಸುವ ಜೊತೆಗೆ ಸಾಕಷ್ಟು ಅತ್ಯಾಧುನಿಕ ಸೌಕರ್ಯಗಳನ್ನು ಹೊಂದಿವೆ. ಬೋಗಿಗಳು ಸಂಪೂರ್ಣ ಹವಾ ನಿಯಂತ್ರಿತವಾಗಿದ್ದು, ಆರಾಮದಾಯಕ ಆಸನಗಳು ಮತ್ತು ವೈಫೈ ವ್ಯವಸ್ಥೆಯಿದೆ.
ಡ್ರೈವ್ಸ್ಪಾರ್ಕ್ ಕನ್ನಡ ವೆಬ್ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications