Viral: ಮೋದಿಜೀ.. ಮುದ್ದಾದ ಅಕ್ಷರಗಳಲ್ಲಿ ಪತ್ರ ಬರೆದ ಪುಟ್ಟ ಪೋರಿ, ಯಾಕೆ ಗೊತ್ತಾ?
ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು, ಭಾನುವಾರ ಬೆಂಗಳೂರಿಗೆ ಬಂದಿದ್ದರು. ಈ ವೇಳೆ ವಂದೇ ಭಾರತ್ ಎಕ್ಸ್ಪ್ರೆಸ್ ಹಾಗೂ ನಮ್ಮ ಮೆಟ್ರೋ ಹಳದಿ ಮಾರ್ಗವನ್ನು ಉದ್ಘಾಟಿಸಿದ್ದರು. ಅದೇ ಸಂದರ್ಭದಲ್ಲಿ ನಗರದ ಸಂಚಾರ ದಟ್ಟಣೆ ಹಾಗೂ ಹದಗೆಟ್ಟ ರಸ್ತೆ ಕುರಿತಂತೆ ಪ್ರಧಾನಿಗಳಿಗೆ ಪುಟ್ಟ ಬಾಲಕಿಯೋರ್ವಳು ಪತ್ರ ಬರೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ನೆಟ್ಟಿಗರಿಂದಲೂ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಸ್ವತಃ ಬಾಲಕಿ ತಂದೆ ಅಭಿರೂಪ್ ಚಟರ್ಜಿ, ಪ್ರಧಾನಿ ನರೇಂದ್ರ ಮೋದಿ ಅವರು ನಗರಕ್ಕೆ ಬಂದಿದ್ದ ದಿನದಂದು ತಮ್ಮ ಮಗಳು ಕೈಬರಹದಲ್ಲಿ ಬರೆದ ಪತ್ರವನ್ನು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ. 'ಪ್ರಧಾನಿ ಮೋದಿ ಬೆಂಗಳೂರಿಗೆ ಭೇಟಿ ನೀಡುತ್ತಿದ್ದಾರೆ. ನನ್ನ 5 ವರ್ಷದ ಮಗಳು ಇದನ್ನು ಸಂಚಾರ ದಟ್ಟಣೆ ಸರಿಪಡಿಸುವ ಅವಕಾಶವೆಂದು ಭಾವಿಸಿದ್ದಾಳೆ' ಎಂದು ಹೇಳಿದ್ದಾರೆ.

ಆ ಬಾಲಕಿಯು ತನ್ನ ಪತ್ರದಲ್ಲಿ 'ನರೇಂದ್ರ ಮೋದಿ ಜಿ, ಸಂಚಾರ ದಟ್ಟಣೆ ಹೆಚ್ಚಿದೆ. ನಾವು ಶಾಲೆ ಹಾಗೂ ಕಚೇರಿಗೆ ತಡವಾಗಿ ಹೋಗುತ್ತೇವೆ. ರಸ್ತೆ ತುಂಬಾ ಕೆಟ್ಟದಾಗಿದೆ. ದಯವಿಟ್ಟು ಸಹಾಯ ಮಾಡಿ' ಎಂದು ಬರೆದಿದ್ದಾಳೆ.
ನೆಟ್ಟಿಗರು ಏನಂತಾರೆ?
ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು, ಅಭಿರೂಪ್ ಚಟರ್ಜಿ ಅವರೇ ನಿಮ್ಮ ಮಗಳು ಜಾಗೃತ ನಾಗರಿಕಳು ಎಂದು ಹೇಳಿದ್ದಾರೆ. ಮತ್ತೊಬ್ಬರು, ನೀವು ವಿದ್ಯಾವಂತರು, ಟ್ರಾಫಿಕ್ ಸಮಸ್ಯೆ ಕೇಂದ್ರ ಸರ್ಕಾರದ ಸಮಸ್ಯೆಯಲ್ಲ. ಅದು ರಾಜ್ಯ ಸರ್ಕಾರದ ಸಮಸ್ಯೆ ಎಂದು ನಿಮ್ಮ ಮಗುವಿಗೆ ವಿವರಿಸಿ ಎಂದು ಕಾಮೆಂಟ್ ಮಾಡಿದ್ದಾರೆ.
ಟಾಮ್ಟಾಮ್ ಟ್ರಾಫಿಕ್ ಇಂಡೆಕ್ಸ್ ಪ್ರಕಾರ, 2024ರಲ್ಲಿ ಬೆಂಗಳೂರು ವಿಶ್ವದ ಮೂರನೇ ಅತಿ ನಿಧಾನಗತಿ ನಗರವಾಗಿದೆ. ಬ್ರಾಂಕ್ವಿಲಾ (ಕೊಲಂಬಿಯಾ) ಮೊದಲ ಸ್ಥಾನದಲ್ಲಿದ್ದರೆ, ಕೋಲ್ಕತ್ತಾ ಎರಡನೇ ಸ್ಥಾನದಲ್ಲಿದೆ. 2023ರಲ್ಲಿ ಬೆಂಗಳೂರು ಹೆಚ್ಚು ಜನದಟ್ಟಣೆ ಹೊಂದಿರುವ ಪ್ರಪಂಚದ ಆರನೇ ನಗರವಾಗಿತ್ತು.
ಕರ್ನಾಟಕದಲ್ಲಿ ಅಪಘಾತದಿಂದಾಗುವ ಸಾವುಗಳು ಹೆಚ್ಚಳ:
ರಾಜ್ಯದಲ್ಲಿ ಕಳೆದ ಐದುವರೆ ವರ್ಷದಲ್ಲಿ 2,13,192 ರಸ್ತೆ ಅಪಘಾತಗಳು ಸಂಭವಿಸಿದ್ದು, 60,115 ಮಂದಿ ಮೃತಪಟ್ಟಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿಅವರು ವಿಧಾನ ಪರಿಷತ್ತಿನಲ್ಲಿ ಮಾಹಿತಿ ನೀಡಿದ್ದಾರೆ. ಬಿಜೆಪಿ ಸದಸ್ಯ ಕೆ.ಎಸ್.ನವೀನ್ ಅವರ ಪ್ರಶ್ನೆಗೆ ಉತ್ತರಿಸಿದರು. ಅಪಘಾತಗಳಿಂದ ಯುವಜನರ ಸಾವುಗಳು ಹೆಚ್ಚಳವಾಗುತ್ತಿದೆ. ಅತಿ ವೇಗದ ಚಾಲನೆ, ವೀಲಿಂಗ್, ಹೆಲ್ಮೆಟ್ ಧರಿಸದೆ ಇರುವುದು ಹಾಗೂ ಮದ್ಯಪಾನ ಮಾಡಿ ವಾಹನಗಳನ್ನು ಚಾಲನೆ ಮಾಡಿವುದರಿಂದ ಅಪಘಾತಗಳ ಸಂಖ್ಯೆ ಅಧಿಕಗೊಳ್ಳುತ್ತಿದೆ ಎಂದಿದ್ದಾರೆ.
2020ರಲ್ಲಿ 34,178 ಅಪಘಾತಗಳು ದಾಖಲಾಗಿದ್ದು, 3,760 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 2021ರಲ್ಲಿ 34,647 ಅಪಘಾತಗಳಿದ್ದು, 10,038 ಜನರು ಸಾವನ್ನಪಿದ್ದಾರೆ. 2022ರಲ್ಲಿ 39,762 ಅಪಘಾತಗಳು ಜರುಗಿದ್ದು, 11,702 ಮೃತಪಟ್ಟಿದ್ದರು. 2023ರಲ್ಲಿ 43,440 ಅಪಘಾತಗಳಾಗಿದ್ದು, 12,321 ಜನರು ಇಹಲೋಕ ತ್ಯಜಿಸಿದ್ದಾರೆ. 2024ರಲ್ಲಿ 39,228 ಅಪಘಾತಗಳು ನಡೆದಿದ್ದು, 10,319 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅದೇ ರೀತಿಯಲ್ಲಿ 2025ರಲ್ಲಿ (ಈವರೆಗೆ) 21,937 ಅಪಘಾತಗಳು ಸಂಭವಿಸಿದ್ದು, 5,975 ಜನರು ಸಾವನ್ನಪಿದ್ದಾರೆ.
ಬೆಂಗಳೂರಿನಲ್ಲಿ ಅತಿ ಹೆಚ್ಚು ಅಪಘಾತಗಳು ವರದಿ:
ಈ ಐದುವರೆ ವರ್ಷದಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅತಿ ಹೆಚ್ಚು ಅಪಘಾತಗಳು ದಾಖಲಾಗಿವೆ. ಒಟ್ಟು 21,910 ಅಪಘಾತಗಳಾಗಿದ್ದು, 4,154 ಮಂದಿ ಮೃತರಾಗಿದ್ದಾರೆ. 16,247 ಜನರು ಗಾಯಾಳುಗಳಾಗಿದ್ದಾರೆ. ಎರಡನೇ ಸ್ಥಾನದಲ್ಲಿ ಮಂಗಳೂರು ನಗರವಿದೆ.
ಅಪಘಾತ ತಪ್ಪಿಸಲು ಏನು ಮಾಡಬೇಕು:
ಕಿರಿದಾದ ರಸ್ತೆ ಮತ್ತು ತಿರುವುಗಳಲ್ಲಿ ನಿಧಾನಗತಿಯಲ್ಲಿ ವಾಹನಗಳನ್ನು ಚಲಾಯಿಸಿರಿ. ಓವರ್ಟೇಕ್ ಮಾಡುವಾಗ ಹೆಚ್ಚಿನ ಜಾಗ್ರತೆ ಇರಲಿ. ಕಾರುಗಳನ್ನು ಓಡಿಸುವಾಗ ತಪ್ಪದೇ ಸೀಟ್ ಬೆಲ್ಟ್ನ್ನು ಧರಿಸಿರಿ. ದ್ವಿಚಕ್ರ ವಾಹನ ಓಡಿಸುವಾಗ ಹೆಲ್ಮೆಟ್ ಹಾಕುವುದನ್ನು ಮರೆಯಬೇಡಿ. ನಿರ್ದಿಷ್ಟ ವೇಗದಲ್ಲಿ ಸರಿಯಾದ ಪಥದಲ್ಲಿ ವಾಹನಗಳನ್ನು ಓಡಿಸಿರಿ. ಕಡ್ಡಾಯವಾಗಿ ಸಂಚಾರಿ ನಿಯಮಗಳನ್ನು ಪಾಲನೆ ಮಾಡಿರಿ. ಕುಡಿತದ ಅಮಲಿನಲ್ಲಿ ಎಂದಿಗೂ ವಾಹನಗಳನ್ನು ಚಲಾಯಿಸಬೇಡಿ. ಈ ಮೂಲಕ ಸಂಭಾವ್ಯ ಅಪಘಾತವನ್ನು ತಪ್ಪಿಸಬಹುದು.


Click it and Unblock the Notifications








