ಶೀಘ್ರದಲ್ಲಿ ಜಯನಗರದಲ್ಲಿ ಸೈಕಲ್ ಪಥ: ವಿಜಯಕುಮಾರ್
ನಗರದಲ್ಲಿ ಹೆಚ್ಚಾಗುತ್ತಿರುವ ವಾಹನ ದಟ್ಟಣೆ ಕಡಿಮೆ ಮಾಡಲು ಮತ್ತು ಪರಿಸರ ಮಾಲಿನ್ಯ ನಿವಾರಣೆಗಾಗಿ ಮಹತ್ವಾಕಾಂಕ್ಷಿ "ಬೆಂಗಳೂರು ಸೈಕಲ್ ಪಥ" ಯೋಜನೆಯ ಮೊದಲ ಹಂತವು ಶೀಘ್ರದಲ್ಲಿ ಜಯನಗರದಿಂದಲೇ ಆರಂಭವಾಗಲಿದೆ ಎಂದು ಜಯನಗರ ಬಿಜೆಪಿ ಶಾಸಕ ಬಿ. ಎನ್. ವಿಜಯ ಕುಮಾರ್ ಕನ್ನಡ ಡ್ರೈವ್ ಸ್ಪಾರ್ಕಿಗೆ ತಿಳಿಸಿದ್ದಾರೆ.
ಕನ್ನಡದ ಪ್ರಪ್ರಥಮ ವಾಹನ ವೆಬ್ ತಾಣ "ಕನ್ನಡ ಡ್ರೈವ್ ಸ್ಪಾರ್ಕ್" ಮಾತೃಸಂಸ್ಥೆ ಒನ್ ಇಂಡಿಯಾ ಆಯೋಜಿಸಿದ್ದ 'Go Green'ಅಭಿಯಾನದ ಕಾಲ್ನಡಿಗೆ ಜಾಥಾ ಮತ್ತು ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
"ಈಗಾಗಲೇ ಗೋ ಗ್ರೀನ್ ಸೇರಿದಂತೆ ಹಲವು ಸಂಘಸಂಸ್ಥೆಗಳು, ಎನ್ ಜಿಒಗಳು ಬೆಂಗಳೂರು ಸೈಕಲ್ ಪಥ ಯೋಜನೆಗೆ ಬೆಂಬಲ ವ್ಯಕ್ತಪಡಿಸಿವೆ. ಜನರು ಮಾಲಿನ್ಯ ಕಾರಕ ವಾಹನಗಳ ಬದಲಾಗಿ ಪರಿಸರ ಸ್ನೇಹಿ ಸೈಕಲ್ ಬಳಕೆ ಹೆಚ್ಚಿಸಲು ಮನಸ್ಸು ಮಾಡಬೇಕು" ಎಂದು ಅವರು ಹೇಳಿದ್ದಾರೆ.
"ಜಯನಗರದಲ್ಲಿ ಪ್ರಾಥಮಿಕ ಶಾಲೆಗಳಿಂದ ಕಾಲೇಜುವರೆಗೆ ಸುಮಾರು 50ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತವೆ. ಈ ಎಲ್ಲಾ ಸಂಸ್ಥೆಗಳ ವಿದ್ಯಾರ್ಥಿಗಳನ್ನು ಸೈಕಲ್ ಬಳಸುವಂತೆ ಪ್ರೋತ್ಸಾಹಿಸಬೇಕಿದೆ. ಇದು ಉಳಿದ ಪ್ರದೇಶಗಳಿಗೂ ಮಾದರಿಯಾದೀತು" ಎಂದು ಜಯನಗರದ ಅರವಿಂದ್ ಹೇಳುತ್ತಾರೆ.
ಬೆಂಗಳೂರು ಸೈಕಲ್ ಪಥ ಯೋಜನೆಯ ಆರಂಭಿಕ ಹಂತವಾಗಿ ಜಯನಗರದಲ್ಲಿ ಸೈಕಲ್ ಪಥ ಅನುಷ್ಠಾನಗೊಳಿಸಲು ಕೆಲವು ವರ್ಷಗಳ ಹಿಂದೆ ಯೋಜಿಸಲಾಗಿತ್ತು. ಬಿಡಿಎ, ಬಿಬಿಎಂಪಿ, ಬಿಎಂಟಿಸಿ, ಸಾರಿಗೆ ಇಲಾಖೆ, ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶನಾಲಯ ಸೇರಿದಂತೆ ಪ್ರಮುಖ ವಿಭಾಗಗಳ ಹಲವು ಪ್ರತಿನಿಧಿಗಳನ್ನು ಒಳಗೊಂಡ ಕಾರ್ಯಪಡೆಯು ಸೈಕಲ್ ಪಥಕ್ಕಾಗಿ ಶ್ರಮಿಸುತ್ತಿದ್ದಾರೆ.
"ನಮ್ಮ ಮುಂದಿನ ಯುವಪೀಳಿಗೆಯವರು ಬೈಸಿಕಲ್ ತುಳಿಯಲು ಕಲಿತು ಉಪಯೋಗಿಸಿದರೆ ಈ ಯೋಜನೆ ಸಾರ್ಥಕ. ಎಲ್ಲಾ ಮಾಡೆಲ್ ಬೈಸಿಕಲ್ ಕೈಗೆಟುಕುವ ದರದಲ್ಲಿ ಮಾರಾಟ ಮಾಡಿದರೆ ರಸ್ತೆಯಲ್ಲಿ ಸೈಕಲ್ ಸಂಖ್ಯೆ ಹೆಚ್ಚಾಗಲಿದೆ" ಎಂದು ಬೆಂಗಳೂರು ಸೈಕಲ್ ಪಥದ ಕುರಿತು ಕನ್ನಡ ಡ್ರೈವ್ ಸ್ಪಾರ್ಕ್ ಓದುಗರಾದ ಗಿರೀಜಾ ಸಜನೆ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು ಸೈಕಲ್ ಪಥದ ಕುರಿತು ನಿಮ್ಮ ಅಭಿಮತ, ಅನಿಸಿಕೆ, ಅಭಿಪ್ರಾಯಗಳಿಗೆ ಸ್ವಾಗತ.


Click it and Unblock the Notifications









