ಮೈಸೂರು ನಗರದಲ್ಲಿ ಗರಿಗೆದರಿದ ಸೈಕಲ್ ಪ್ರೇಮ
ಕರ್ನಾಟಕದ ಎರಡನೇ ದೊಡ್ಡ ನಗರ ಮೈಸೂರಿನಲ್ಲಿ ಸೈಕಲ್ ಪ್ರೇಮ ಗರಿಗೆದರಿದೆ. ಅಲ್ಲಿನ ಜನರೀಗ ಎರಡು ಚಕ್ರದ ಈ ಪರಿಸರ ಸ್ನೇಹಿ ಅಂಬಾರಿಯೇ ಸರಿ ಎನ್ನತೊಡಗಿದ್ದಾರೆ. ಅಲ್ಲಿನ ನಗರಾಡಳಿತವೂ ಟ್ರಿಣ್ ಟ್ರಿಣ್ ಬೆಲ್ ಹೊಡೆಯುವ ಸೈಕಲ್ ಸವಾರಿಗೆ ಪ್ರೋತ್ಸಾಹ ನೀಡುತ್ತಿದೆ. ವಿದ್ಯಾರ್ಥಿಗಳು, ಸರಕಾರಿ ಮತ್ತು ಖಾಸಗಿ ಉದ್ಯೋಗಿಗಳು ಸೇರಿದಂತೆ ಹೆಚ್ಚಿನ ಜನರು ಸೈಕಲಿಗೆ ಜೈ ಎನ್ನುತ್ತಿದ್ದಾರೆ.
ಸವಾರರಿಗಾಗಿಯೇ ನಗರದ ರಸ್ತೆಯ ಬಲಭಾಗದಲ್ಲಿ ವಿಶೇಷ ಸೈಕಲ್ ಪಥ ರೂಪಿಸಲು ನಗರಾಡಳಿತವೂ ಅಸ್ತು ಎಂದಿದೆ. ಡೆಪ್ಯೂಟಿ ಕಮಿಷನರ್ ಪಿ.ಎಸ್. ವಸ್ತ್ರದ್ ನೇತೃತ್ವದ ಸಭೆಯಲ್ಲಿ ನಗರದ ಪ್ರಮುಖ ಹನ್ನೊಂದು ರಸ್ತೆಗಳು ಸೇರಿದಂತೆ ಸುಮಾರು 20 ಕಿ.ಮೀ. ದೂರವನ್ನು ಸೈಕಲ್ ಪಥಕ್ಕಾಗಿ ಮೀಸಲಿಡಲಾಗಿದೆ.

ಕೆಲವು ದಿನಗಳ ಹಿಂದೆ ಅಲ್ಲಿನ ಸರಕಾರಿ ಅಧಿಕಾರಿಗಳು ಸೈಕಲ್ ಮೂಲಕ ಕಚೇರಿಗೆ ಆಗಮಿಸಿ ಇಡೀ ದೇಶದ ಗಮನ ಸೆಳೆದಿದ್ದರು. ಪ್ರತಿ ಸೋಮವಾರ ಸೈಕಲ್ ಸವಾರಿ ಕೈಗೊಳ್ಳುವಂತೆ ಡಿಸಿ ಆದೇಶ ಹೊರಡಿಸಿದ್ದರು. ಡಿಸಿ ಪಿಎಸ್ ವಸ್ತ್ರದ್, ಜಿಲ್ಲಾ ಪಂಚಾಯತಿನ ಅಜಯ್ ನಾಗಭೂಷನ್, ಮುಡಾ ಕಮಿಷನರ್ ಸೇರಿದಂತೆ ಸುಮಾರು 200ಕ್ಕೂ ಹೆಚ್ಚು ಸರಕಾರಿ ಉದ್ಯೋಗಿಗಳು ಸೈಕಲ್ ಸವಾರಿ ನಡೆಸಿದ್ದರು.
ಮಾನಸಗಂಗೋತ್ರಿಯ ವಿದ್ಯಾರ್ಥಿಗಳು ಸಹ ಚಲ್ ಮೇರಿ ಸೈಕಲ್ ಮಂತ್ರ ಪಠಿಸತೊಡಗಿದ್ದಾರೆ. ಹೆಚ್ಚಿನ ವಿದ್ಯಾರ್ಥಿಗಳು ಬೈಕ್, ಕಾರು ಬಿಟ್ಟು ಸೈಕಲ್ ಮೂಲಕ ಕಾಲೇಜಿಗೆ ಆಗಮಿಸುತ್ತಿದ್ದಾರೆ. ಮೈಸೂರಿನ ಹೈಸ್ಕೂಲ್ ಮತ್ತು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳನ್ನೂ ಸೈಕಲ್ ಸವಾರಿ ಸೆಳೆಯುತ್ತಿದೆ.
ಅಂಬಾ ವಿಲಾಸ ಅರಮನೆ ಸರಹದ್ದಿನಲ್ಲೂ ಸೈಕಲ್ ಸವಾರಿ ಹೆಚ್ಚಾಗುತ್ತಿದೆ. ಅರಮನೆ ಮಂಡಳಿಯು ಪ್ರವಾಸಿಗರಿಗಾಗಿ ಸುಮಾರು 10 ಸೈಕಲ್ಗಳನ್ನು ಮೀಸಲಿಟ್ಟಿದೆ. ಪ್ರವಾಸಿಗರು ಸೈಕಲ್ ಮೂಲಕ ಪ್ರೇಕ್ಷಣಿಯ ಸ್ಥಳಗಳನ್ನು ನೋಡಲು ಬಯಸುತ್ತಿದ್ದಾರೆ.
ಬೆಂಗಳೂರಿನಲ್ಲಿಯೂ ಸೈಕಲ್ ಪಥ ಯೋಜನೆಯು ಅಂತಿಮ ಹಂತದಲ್ಲಿದೆ. ಮಂಗಳೂರು, ಧಾರವಾಡ, ಹುಬ್ಬಳ್ಳಿ, ಗದಗ, ಬೆಳಗಾವಿ, ಬೀದರ್, ರಾಯಚೂರು, ಯಾದಗಿರಿ, ಉಡುಪಿ, ಹಾಸನ, ಮ೦ಡ್ಯ, ಚಾಮರಾಜನಗರ, ಶಿವಮೊಗ್ಗ, ಚಿಕ್ಕಮಗಳೂರು, ಬಳ್ಳಾರಿ, ತುಮಕೂರು, ಕೋಲಾರ, ಚಿತ್ರದುರ್ಗ ಸೇರಿದಂತೆ ರಾಜ್ಯದ ಎಲ್ಲಾ ರಸ್ತೆಗಳಲ್ಲಿಯೂ ಸೈಕಲ್ ಪ್ರೇಮ ಹೆಚ್ಚಾಗಲಿ. ಗೋ ಗ್ರೀನ್


Click it and Unblock the Notifications








