ಕರೋನಾ ವೈರಸ್ ವಿರುದ್ದದ ಹೋರಾಟಕ್ಕಾಗಿ ರೂ.100 ಕೋಟಿ ದೇಣಿಗೆ ನೀಡಿದ ಬಜಾಜ್ ಗ್ರೂಪ್
ಕರೋನಾ ವೈರಸ್ ಅಟ್ಟಹಾಸ ಹೆಚ್ಚಾಗುತ್ತಿದ್ದಂತೆ ಇಡೀ ದೇಶವನ್ನೇ ಲಾಕ್ ಡೌನ್ ಮಾಡಲಾಗಿದ್ದು, ಬಹುತೇಕ ವಾಣಿಜ್ಯ ಚಟುವಟಿಕೆಗಳನ್ನು ಸ್ಥಗಿತಗೊಂಡಿವೆ. ಈ ಹಿನ್ನಲೆಯಲ್ಲಿ ಆರ್ಥಿಕ ಪರಿಸ್ಥಿತಿ ಶೋಚನೀಯ ಸ್ಥಿತಿ ತಲುಪಿದ್ದು, ಕರೋನಾ ವಿರುದ್ಧ ಹೋರಾಟಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದೇಣಿಗೆ ಸಂಗ್ರಹ ಅಭಿಯಾನವನ್ನು ಕೈಗೊಂಡಿವೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ದೇಣಿಗೆ ಸಂಗ್ರಹ ಅಭಿಯಾನಕ್ಕೆ ಈಗಾಗಲೇ ಭಾರೀ ಪ್ರಮಾಣದ ನೆರವು ಹರಿದು ಬಂದಿದ್ದು, ಉದ್ಯಮಿಗಳು, ಚಿತ್ರ ನಟರು, ಸರ್ಕಾರಿ ಅಧಿಕಾರಿಗಳು ಮತ್ತು ಜನಸಾಮಾನ್ಯರು ಸಹ ತಮ್ಮ ಕೈಲಾದಷ್ಟು ದೇಣಿಗೆ ನೀಡಿ ಕರೋನಾ ವಿರುದ್ಧ ಸರ್ಕಾರದ ಹೋರಾಟಕ್ಕೆ ಶಕ್ತಿ ತುಂಬಿದ್ದಾರೆ. ಅದರಲ್ಲೂ ಆಟೋ ಉತ್ಪಾದನಾ ಕಂಪನಿಗಳು ಕರೋನಾ ವಿರುದ್ದ ಹೋರಾಟಕ್ಕಾಗಿ ಸಂಕಷ್ಟದ ಸಮಯದಲ್ಲೂ ಸರ್ಕಾರದ ಜೊತೆ ನಿಂತಿರುವುದಲ್ಲದೆ ವೈದ್ಯಕೀಯ ಉಪಕರಣಗಳ ತಯಾರಿಕೆಗೆ ಮುಂದಾಗಿವೆ.

ದೇಶದ ಪ್ರಮುಖ ಆಟೋ ಉತ್ಪಾದನಾ ಕಂಪನಿಗಳಲ್ಲಿ ಒಂದಾಗಿರುವ ಬಜಾಜ್ ಗ್ರೂಪ್ ಕಂಪನಿಯು ರೂ. 100 ಕೋಟಿ ದೇಣಿಗೆ ಘೋಷಣೆ ಮಾಡಿದ್ದು, ಹಣದ ಬದಲು ವೈದ್ಯಕೀಯ ಉಪಕರಣಗಳನ್ನು ನೀಡುವುದಾಗಿ ಘೋಷಣೆ ಮಾಡಿದೆ.

ಸುಮಾರು 200ಕ್ಕೂ ಹೆಚ್ಚು ಎನ್ಜಿಓ ಸಂಸ್ಥೆಗಳ ಮೂಲಕ ಆರೋಗ್ಯ ಕೇಂದ್ರಗಳಿಗೆ ಅಗತ್ಯವಿರುವ ಟೆಸ್ಟಿಂಗ್ ಕಿಟ್, ವೆಂಟಿಲೆಟರ್ ಮತ್ತು ಐಸಿಯು ಯುನಿಟ್ಗೆ ಅಗತ್ಯವಿರುವ ಸೌಲಭ್ಯಗಳನ್ನು ನೀಡುವುದಾಗಿ ಘೋಷಣೆ ಮಾಡಿದ್ದು, ಆರೋಗ್ಯ ಇಲಾಖೆಯ ಬೇಡಿಕೆಗಳನ್ನು ಪೂರೈಸಲು ಸಿದ್ದವಾಗಿದೆ.

ಇದರ ಜೊತೆಗೆ ಗ್ರಾಮೀಣ ಭಾಗದಲ್ಲಿನ ಆರೋಗ್ಯ ಸೌಕರ್ಯ ಮತ್ತು ಮೂಲಭೂತ ಸೌಕರ್ಯಗಳ ನಿರ್ಮಾಣಕ್ಕಾಗಿ ವಿಶೇಷ ಆದ್ಯತೆ ನೀಡುವುದಾಗಿ ಹೇಳಿಕೊಂಡಿರುವ ಬಜಾಜ್ ಕಂಪನಿಯು ಪರಿಸರ ಮತ್ತು ಆರೋಗ್ಯ ಕಾಳಜಿಗೆ ವಿಶೇಷ ಆಸಕ್ತಿ ವಹಿಸಿದ್ದು, ಶೀಘ್ರದಲ್ಲೇ ವೈದ್ಯಕೀಯ ಉಪಕರಣಗಳನ್ನು ಸರಬರಾಜು ಮಾಡುವುದಾಗಿ ಘೋಷಣೆ ಮಾಡಿದೆ. ಇನ್ನು ಬಜಾಜ್ ಮಾತ್ರವಲ್ಲದೇ ಪ್ರಮುಖ ಆಟೋ ಕಂಪನಿಗಳು ವಿವಿಧ ಮಾದರಿಯ ನೆರವು ಘೋಷಣೆ ಮಾಡಿವೆ.

ಎಂಜಿ ಮೋಟಾರ್ ಕಂಪನಿಯು ರೂ.2 ಕೋಟಿ ದೇಣಿಗೆ ನೀಡಿದಲ್ಲಿ ಮಹೀಂದ್ರಾ ಮತ್ತು ಮಾರುತಿ ಸುಜುಕಿ ಕಂಪನಿಗಳು ವೈದ್ಯಕೀಯ ಸೇವೆಗೆ ಬೇಕಿರುವ ಅಗತ್ಯ ಉಪಕರಣಗಳನ್ನು ಉತ್ಪಾದನೆ ಆರಂಭಿಸುವುದಾಗಿ ಹೇಳಿಕೊಂಡಿದೆ.

ಇನ್ನು ಚೀನಾದಿಂದ ಶುರುವಾದ ಕರೋನಾ ವೈರಸ್ ದಾಳಿಯು ಇದೀಗ ಇಡೀ ವಿಶ್ವವನ್ನೇ ವ್ಯಾಪಿಸಿದ್ದು, ಇದುವರೆಗೆ 5 ಲಕ್ಷ ಜನರಲ್ಲಿ ಸೋಂಕು ಕಾಣಿಸಿಕೊಂಡಿರುವುದಲ್ಲದೆ 23 ಸಾವಿರ ಜನ ಪ್ರಾಣಕಳೆದುಕೊಂಡಿದ್ದಾರೆ. 5 ಲಕ್ಷ ಜನರಲ್ಲಿ ಇದುವರೆಗೆ ಸುಮಾರು 1.20 ಲಕ್ಷದಷ್ಟು ಜನ ಗುಣಮುಖರಾಗಿದ್ದು, ಶೇ.7 ರಷ್ಟು ಸೋಂಕು ಪಿಡಿತರ ಸ್ಥಿತಿ ಶೋಚನೀಯವಾಗಿದೆ.

ವೈರಸ್ ತಡೆಗಾಗಿ ಈಗಾಗಲೇ ವಿಶ್ವದ ಎಲ್ಲಾ ರಾಷ್ಟ್ರಗಳು ಒಗ್ಗಟ್ಟಿನಿಂದ ಹೋರಾಟ ನಡೆಸುತ್ತಿದ್ದು, ವೈದ್ಯಕೀಯ ಉಪಕರಣಗಳ ಕೊರತೆ ಎದ್ದುಕಾಣುತ್ತಿದೆ. ಹೀಗಾಗಿ ಆಟೋ ಉತ್ಪಾದನಾ ಘಟಕಗಳಲ್ಲಿ ಇದೀಗ ವೈದಕೀಯ ಉಪಕರಣಗಳ ಉತ್ಪಾದನೆಗೆ ನಿರ್ಧರಿಸಲಾಗಿದ್ದು, ವೆಂಟಿಲೆಟರ್ ಮತ್ತು ಮಾಸ್ಕ್ ಉತ್ಪಾದನೆ ಪ್ರಮುಖ ಕಾರು ಕಂಪನಿಗಳು ಒಪ್ಪಿಗೆ ಸೂಚಿಸಿವೆ.

ದಕ್ಷಿಣ ಕೊರಿಯಾದ ಕಿಯಾ ಮೋಟಾರ್ಸ್ ಕೂಡಾ ಮಹತ್ವದ ನಿರ್ಧಾರವೊಂದರನ್ನು ಪ್ರಕಟಿಸಿದ್ದು, ಶೀಘ್ರದಲ್ಲೇ 1 ಮಿಲಿಯನ್(10 ಲಕ್ಷ) ಫೇಸ್ ಮಾಸ್ಕ್ಗಳನ್ನು ಅಭಿವೃದ್ದಿಪಡಿಸಿ ಕೊಡುವುದಾಗಿ ಹೇಳಿಕೊಂಡಿದೆ.

ಲಾಕ್ಡೌನ್ನಲ್ಲಿ ಸಿಲುಕಿದ ಈ ಕೂಲಿ ಕಾರ್ಮಿಕರು ಕೊನೆಗೆ ಮಾಡಿದ್ದೇನು ಗೊತ್ತಾ?
ಕರೋನಾ ವೈರಸ್ ಪರಿಣಾಮ ಇಡೀ ದೇಶವೇ ಲಾಕ್ ಡೌನ್ ಆಗಿದ್ದು, ಅಗತ್ಯ ಸೇವೆಗಳನ್ನು ಹೊರತುಪಡಿಸಿ ಬಹುತೇಕ ವಾಣಿಜ್ಯ ಚಟುವಟಿಕೆಗಳು ಮತ್ತು ಸಾರಿಗೆ ಸೌಲಭ್ಯಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಇದರಿಂದ ದಿನಗೂಲಿ ಕಾರ್ಮಿಕರು ಸಾಕಷ್ಟು ಸಂಕಷ್ಟ ಅನುಭವಿಸುತ್ತಿದ್ದು, ಮರಳಿ ತಮ್ಮ ತಮ್ಮ ಹಳ್ಳಿಗಳತ್ತ ಸೇರಿಕೊಳ್ಳಲು ಹರಸಾಹಸಪಡುತ್ತಿದ್ದಾರೆ.

ವೈರಸ್ ಹರಡದಂತೆ ತಡೆಯಲು ತೆಗೆದುಕೊಳ್ಳಲಾಗಿರುವ 21 ದಿನಗಳ ಲಾಕ್ ಡೌನ್ ಹಿನ್ನಲೆಯಲ್ಲಿ ಎಲ್ಲಾ ಬಗೆಯ ಸಂಚಾರಿ ವ್ಯವಸ್ಥೆಯನ್ನು ಏಕಾಏಕಿ ಬಂದ್ ಮಾಡಲಾಗಿದ್ದು, ದಿನಗೂಲಿ ಕಾರ್ಮಿಕರು ಲಾಕ್ ಡೌನ್ ನಡುವೆಯೂ ತಮ್ಮ ಊರುಗಳತ್ತ ಧಾವಿಸಲು ಎಲ್ಲಿಲ್ಲದ ಹರಸಾಹಸ ಮಾಡುತ್ತಿದ್ದಾರೆ. ಕೆಲವರು ಯಾವುದೇ ಸಾರಿಗೆ ಸೌಲಭ್ಯ ಸಿಗದೆ ನಗರದಲ್ಲೇ ಪರದಾಟುತ್ತಿದ್ದರೆ ಇನ್ನು ಕೆಲವರು ನಡೆದುಕೊಂಡು ಊರು ತಲಪುತ್ತಿದ್ದಾರೆ.

ಆದರೆ ಕೆಲಸ ಅರಿಸಿ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಬಂದಿದ್ದ ಕೂಲಿ ಕಾರ್ಮಿಕರ ತಂಡವೊಂದು ಲಾಕ್ಡೌನ್ ಮಧ್ಯದಲ್ಲೂ ಸಾವಿರಾರು ಕಿ.ಮೀ ದೂರದಲ್ಲಿರುವ ಮನೆಯನ್ನು ಸುರಕ್ಷಿತವಾಗಿ ತಲುಪಿದ್ದು, ಯಾವುದೇ ಸಾರಿಗೆ ಸಂಪರ್ಕವಿಲ್ಲ ಸಂದರ್ಭದಲ್ಲಿ ಹೊಸ ಸಾಹಸವೊಂದನ್ನು ಮಾಡಿ ಗಮನಸೆಳೆದಿದ್ದಾರೆ.

ಹೌದು, ದೆಹಲಿ ಹೊರವಲಯದಲ್ಲಿ ಕೂಲಿ ಕೆಲಸಕ್ಕೆಂದು ದೂರದ ಬಿಹಾರದಿಂದ ಬಂದಿದ್ದ ಮೂವರು ಕಾರ್ಮಿಕರು ಲಾಕ್ಡೌನ್ ಆದ ಹಿನ್ನಲೆ ಅಕ್ಷರಶಃ ನಲುಗಿ ಹೋಗಿದ್ದಾರೆ. ತಿನ್ನಲು ಉಟ ಮತ್ತು ವಸತಿ ಸಿಗದೆ ಎರಡು ದಿನ ಪರದಾಡಿದ ಕೂಲಿ ಕಾರ್ಮಿಕರು ಕೊನೆಗೆ ಸೈಕಲ್ ಮಾದರಿಯ ತಳ್ಳುವ ಗಾಡಿಯಲ್ಲೇ ಊರು ಸೇರಲು ಯತ್ನಿಸಿದ್ದಾರೆ.

ಆದರೆ ದೆಹಲಿಯಿಂದ 1,200 ಕಿ.ಮೀ ದೂರದಲ್ಲಿರುವ ತಮ್ಮ ಊರನ್ನು ಸೈಕಲ್ನಲ್ಲಿ ಪ್ರಯಾಣ ಮಾಡುವ ಕಷ್ಟವೆಂದ ಅರಿತ ಮೂವರು ಕೂಲಿ ಕಾರ್ಮಿಕರು, ಗುಜರಿ ಅಂಗಡಿ ಮುಂಭಾಗದಲ್ಲಿ ಬಿದಿದ್ದ ಹಳೆಯ ಸ್ಕೂಟರ್ ಒಂದರ ಎಂಜಿನ್ ಅನ್ನು ಬಿಚ್ಚಿಕೊಂಡು ಸೈಕಲ್ ಕೆಳಭಾಗದಲ್ಲಿ ಜೋಡಿಸಿಕೊಂಡಿದ್ದಾರೆ. ಅದೃಷ್ಟವಶಾತ್ ಹಳೆಯ ಸ್ಕೂಟರ್ ಎಂಜಿನ್ ಕಾರ್ಯನಿರ್ವಹಣೆ ಮಾಡುವುದನ್ನ ಅರಿತ ಕೂಲಿ ಕಾರ್ಮಿಕರು ಸೈಕಲ್ಗೆ ಜೋಡಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಮೂವರು ಕಾರ್ಮಿಕರಲ್ಲಿ ಇಬ್ಬರಿಗೆ ಮೆಕ್ಯಾನಿಕಲ್ ಕೆಲಸ ಗೊತ್ತಿದ್ದ ಹಿನ್ನಲೆಯಲ್ಲಿ ಸ್ಕೂಟರ್ ಎಂಜಿನ್ ಕಾರ್ಯನಿರ್ವಹಣೆ ಬಗೆಗೆ ಅರಿತು ಸೈಕಲ್ಗೆ ಜೋಡಣೆ ಮಾಡುವಲ್ಲಿ ಯಶಸ್ವಿಯಾಗಿದ್ದು, ತಡಮಾಡದೆ ಅಲ್ಲಿಂದ ಹೊರಟುಬಂದಿದ್ದಾರೆ.

ಈ ವೇಳೆ ಮಾರ್ಗಮಧ್ಯದಲ್ಲಿ ಬರುತ್ತಿರುವಾಗ ಎದುರಾದ ಉತ್ತರ ಪ್ರದೇಶದ ಪೊಲೀಸರು ಮೂವರು ಕಾರ್ಮಿಕರನ್ನು ತಡೆದು ಪ್ರಶ್ನಿಸಿದ್ದಾರೆ. ಎಲ್ಲಿಂದ ಬಂದಿರುವುದು? ಎಲ್ಲಿಗೆ ಹೋಗಬೇಕಿದೆ ಎನ್ನುವುದನ್ನು ಪ್ರಶ್ನಿಸಿದ್ದಾರೆ.

ಪೊಲೀಸರ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದ ಮೂವರು ಕಾರ್ಮಿಕರು ದೆಹಲಿ ಆದ ಪರಿಸ್ಥಿತಿ ಬಗೆಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಉತ್ತರ ಪ್ರದೇಶದ ಪೊಲೀಸರು ಕೂಲಿ ಕಾರ್ಮಿಕರಾದ ಹಿನ್ನಲೆಯಲ್ಲಿ ಯಾವುದೇ ರೀತಿ ತೊಂದರೆ ಆಗದಂತೆ ಬಿಟ್ಟು ಕಳುಹಿಸಿದ್ದಾರೆ.

ಆದರೆ ಉತ್ತರ ಪ್ರದೇಶದ ಗಡಿಯಿಂದ ಬಿಟ್ಟುಹೊರಡುವ ಮುನ್ನ ಮೂವರು ಕಾರ್ಮಿಕರನ್ನು ಸ್ಕ್ರೀನಿಂಗ್ ಮಾಡಿದ ವೈದ್ಯಕೀಯ ತಂಡವು ಕಡ್ಡಾಯವಾಗಿ ಮಾಸ್ಕ್ ಬಳಕೆ ಮಾಡಬೇಕೆಂಬ ಎಚ್ಚರಿಕೆಯ ಸಂದೇಶ ನೀಡಿ ಕಳುಹಿಸಿದ್ದಾರೆ.

1,200 ಕಿ.ಮಿ ಪ್ರಯಾಣವನ್ನು ಇಂದು ಕೂಡಾ ಮುಂದುವರಿಸಿರುವ ಮೂವರು ಕೂಲಿ ಕಾರ್ಮಿಕರು ಊರಿನತ್ತ ಪ್ರಯಣಿಸುತ್ತಿದ್ದಾರೆ. ಇನ್ನು ಸೈಕಲ್ ಪ್ಲಸ್ ಸ್ಕೂಟರ್ ಎಂಜಿನ್ ಹೊಂದಿರುವ ವಾಹನದಲ್ಲಿ ಪೆಟ್ರೋಲ್ ಟ್ಯಾಂಕ್ ಸಹ ಇದ್ದು, ಪೆಟ್ರೋಲ್ ಸಿಗದೆ ಇದ್ದಾಗ ಪೆಡಲ್ ತುಳಿದುಕೊಂಡು ಪ್ರಯಾಣ ಮಾಡುತ್ತಿದ್ದಾರೆ.

ಇನ್ನು ಚೀನಾದಿಂದ ಶುರುವಾದ ಕರೋನಾ ವೈರಸ್ ದಾಳಿಯು ಇದೀಗ ಇಡೀ ವಿಶ್ವವನ್ನೇ ವ್ಯಾಪಿಸಿದ್ದು, ಇದುವರೆಗೆ 6 ಲಕ್ಷ ಜನರಲ್ಲಿ ಸೋಂಕು ಕಾಣಿಸಿಕೊಂಡಿರುವುದಲ್ಲದೆ 27 ಸಾವಿರ ಜನ ಪ್ರಾಣಕಳೆದುಕೊಂಡಿದ್ದಾರೆ. 6 ಲಕ್ಷ ಜನರಲ್ಲಿ ಇದುವರೆಗೆ ಸುಮಾರು 1.33 ಲಕ್ಷದಷ್ಟು ಜನ ಗುಣಮುಖರಾಗಿದ್ದು, ಶೇ.7 ರಷ್ಟು ಸೋಂಕು ಪಿಡಿತರ ಸ್ಥಿತಿ ಶೋಚನೀಯವಾಗಿದೆ.


Click it and Unblock the Notifications








