ಉಚಿತ ಹೆಲ್ಮೆಟ್ ನೀಡದಿದ್ದರೆ ರದ್ದಾಗಲಿದೆ ವಾಹನ ರಿಜಿಸ್ಟ್ರೇಶನ್
ಭಾರತದ ರಸ್ತೆಗಳಲ್ಲಿ ವಾಹನ ಚಾಲನೆ ಮಾಡುವುದು ದೊಡ್ಡ ಸವಾಲಿನ ಕೆಲಸವೇ ಸರಿ. ರಸ್ತೆ ಸುರಕ್ಷತೆ ಅತ್ಯಂತ ಕೆಟ್ಟದಾಗಿರುವುದು ಇದಕ್ಕೆ ಮುಖ್ಯ ಕಾರಣವಾಗಿದೆ. ಭಾರತದಲ್ಲಿ ಸಂಭವಿಸುವ ರಸ್ತೆ ಅಪಘಾತಗಳಲ್ಲಿ ಪ್ರತಿ ವರ್ಷಕ್ಕೆ ಸುಮಾರು 1.50 ಲಕ್ಷ ಜನರು ಸಾವನ್ನಪ್ಪುತ್ತಿದ್ದಾರೆ.

ಹದಗೆಟ್ಟ ರಸ್ತೆಗಳ ಜೊತೆಗೆ ವಾಹನ ಚಾಲಕರು ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಿರುವುದು ಸಹ ಇದಕ್ಕೆ ಪ್ರಮುಖ ಕಾರಣ. ರಸ್ತೆ ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿವೆ.

ಇದರ ಅಂಗವಾಗಿ ರಸ್ತೆಯ ಗುಣಮಟ್ಟ ಕ್ರಮೇಣ ಸುಧಾರಿಸುತ್ತಿದೆ. ಭಾರತದಲ್ಲಿ ರಸ್ತೆ ಗುಣಮಟ್ಟ ಹಿಂದೆಂದಿಗಿಂತಲೂ ಉತ್ತಮವಾಗಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ವಾಹನ ಸವಾರರು ಸಂಚಾರ ನಿಯಮಗಳನ್ನು ಪಾಲಿಸುವಂತೆ ಮಾಡಲು ವಿವಿಧ ಪ್ರಯತ್ನಗಳು ನಡೆಯುತ್ತಿವೆ.

ಇದಕ್ಕಾಗಿ ಕಳೆದ ವರ್ಷದ ಸೆಪ್ಟೆಂಬರ್ 1ರಿಂದ ಭಾರತದಲ್ಲಿ ಜಾರಿಗೆ ಹೊಸ ಮೋಟಾರು ವಾಹನ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಇದರನ್ವಯ ಸಂಚಾರಿ ನಿಯಮಗಳು ಉಲ್ಲಂಘಿಸುವವರಿಗೆ
ಭಾರೀ ಪ್ರಮಾಣದ ದಂಡವನ್ನು ಉಲ್ಲಂಘಿಸಲಾಗುತ್ತದೆ. ಯಾವುದೇ ಕಾಯ್ದೆಯು ಯಶಸ್ಸನ್ನು ಕಾಣಬೇಕಾದರೆ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾಗುತ್ತದೆ.

ಅಂದರೆ, ವಾಹನ ಸವಾರರು, ಪಾದಚಾರಿಗಳು, ವಾಹನ ತಯಾರಕರು ಹಾಗೂ ಸರ್ಕಾರಿ ಅಧಿಕಾರಿಗಳು ಒಟ್ಟಾಗಿ ಕೆಲಸ ಮಾಡಿದರೆ ಮಾತ್ರ, ರಸ್ತೆ ಅಪಘಾತಗಳನ್ನು ತಡೆಯಬಹುದು. ಭಾರತದಲ್ಲಿ, ರಸ್ತೆ ಅಪಘಾತಗಳು ಹೆಚ್ಚು ಪರಿಣಾಮ ಬೀರುವುದು ದ್ವಿಚಕ್ರ ವಾಹನಗಳ ಮೇಲೆ.

ದ್ವಿಚಕ್ರ ವಾಹನ ಸವಾರರ ಪ್ರಮುಖ ರಕ್ಷಣಾ ಸಾಧನವೆಂದರೆ ಹೆಲ್ಮೆಟ್. ಆದರೆ ದ್ವಿಚಕ್ರ ವಾಹನಗಳನ್ನು ಚಾಲನೆ ಮಾಡುವ ಬಹುತೇಕ ಜನರು ಹೆಲ್ಮೆಟ್ ಧರಿಸುವುದಿಲ್ಲ. ವಾಹನ ತಯಾರಕರು ದ್ವಿಚಕ್ರ ವಾಹನಗಳ ಎಲ್ಲಾ ಸವಾರರಿಗೆ 2 ಉಚಿತ ಹೆಲ್ಮೆಟ್ಗಳನ್ನು ನೀಡಬೇಕೆಂಬ ನಿಯಮವಿದೆ.

ಕೇಂದ್ರ ಮೋಟಾರು ವಾಹನ ಕಾಯ್ದೆ, 1989ರ ಸೆಕ್ಷನ್ 138 (4) (ಎಫ್) ಇದರ ಬಗ್ಗೆ ತಿಳಿಸುತ್ತದೆ. ಇದರನ್ವಯ ಹೊಸ ದ್ವಿಚಕ್ರ ವಾಹನ ಮಾರಾಟ ಮಾಡುವ ವೇಳೆ 2 ಹೆಲ್ಮೆಟ್ಗಳನ್ನು ಉಚಿತವಾಗಿ ನೀಡಬೇಕು. ಹಾಗೂ ಈ ಹೆಲ್ಮೆಟ್ ಗಳು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಗಳಿಗೆ ಅನುಸಾರವಾಗಿರಬೇಕು.

ಆದರೆ ದ್ವಿಚಕ್ರ ವಾಹನ ತಯಾರಕ ಕಂಪನಿಗಳು ಈ ನಿಯಮವನ್ನು ಪಾಲಿಸುತ್ತಿಲ್ಲ. ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡುವ ವೇಳೆಯಲ್ಲಿ, ಅವರು ಗ್ರಾಹಕರಿಗೆ ಹೆಲ್ಮೆಟ್ಗಳನ್ನು ಪೂರೈಸುತ್ತಿಲ್ಲ. ರಸ್ತೆ ಅಪಘಾತಗಳಲ್ಲಿ ಸಾವುನೋವುಗಳು ಹೆಚ್ಚಾಗಲು ಇದೂ ಸಹ ಒಂದು ಕಾರಣವಾಗಿದೆ.

ಇತ್ತೀಚಿಗೆ ಮಹಾರಾಷ್ಟ್ರ ಹೈಕೋರ್ಟ್ ಹೊಸ ಸ್ಕೂಟರ್, ಬೈಕ್ ಖರೀದಿಸುವ ಎಲ್ಲರಿಗೂ ಉಚಿತ ಹೆಲ್ಮೆಟ್ ನೀಡುವಂತೆ ಆದೇಶಿಸಿದೆ. ಇಲ್ಲದಿದ್ದರೆ, ಮಹಾರಾಷ್ಟ್ರದಲ್ಲಿ, ದ್ವಿಚಕ್ರ ವಾಹನ ನೋಂದಣಿಯನ್ನು ನಿಲ್ಲಿಸಲಾಗುವುದೆಂದು ಆದೇಶ ನೀಡಿತ್ತು.

ಇದರನ್ವಯ ಮಹಾರಾಷ್ಟ್ರ ರಾಜ್ಯ ಸಾರಿಗೆ ಆಯುಕ್ತರು ಈಗ ಸಿಯಾಮ್ - ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ತಯಾರಕರಿಗೆ ಪತ್ರವೊಂದನ್ನು ಬರೆದಿದ್ದಾರೆ. ಈ ಪತ್ರದಲ್ಲಿ ದ್ವಿಚಕ್ರ ವಾಹನಗಳನ್ನು ಖರೀದಿಸುವ ಎಲ್ಲ ಗ್ರಾಹಕರಿಗೆ, ದ್ವಿಚಕ್ರ ವಾಹನ ತಯಾರಕರು ಎರಡು ಹೆಲ್ಮೆಟ್ ಗಳನ್ನು ಒದಗಿಸಬೇಕು. ಇಲ್ಲದಿದ್ದರೆ ಮಹಾರಾಷ್ಟ್ರದಲ್ಲಿ ದ್ವಿಚಕ್ರ ವಾಹನಗಳ ರಿಜಿಸ್ಟ್ರೇಶನ್ ಗಳನ್ನು ಯಾವುದೇ ಮುನ್ಸೂಚನೆಯಿಲ್ಲದೆ ನಿಲ್ಲಿಸಲಾಗುವುದು ಎಂದು ಹೇಳಿದ್ದಾರೆ.

ಹೊಸ ದ್ವಿಚಕ್ರ ವಾಹನಗಳನ್ನು ಖರೀದಿಸುವ ಹೆಚ್ಚಿನ ಜನರಿಗೆ ಈ ರೀತಿಯ ನಿಯಮವಿರುವುದು ತಿಳಿದಿಲ್ಲ. ಇದರಿಂದ ಬಹಳಷ್ಟು ದ್ವಿಚಕ್ರ ವಾಹನ ಸವಾರರಿಗೆ ಅನುಕೂಲವಾಗಲಿದೆ. ಹಲವರು ಹೆಲ್ಮೆಟ್ ಧರಿಸುವುದನ್ನು ಇಷ್ಟ ಪಡುವುದಿಲ್ಲ. ದ್ವಿಚಕ್ರ ವಾಹನಗಳ ಅಪಘಾತವಾದಾಗ ಹೆಲ್ಮೆಟ್ ಪ್ರಾಣ ಉಳಿಸಲು ನೆರವಾಗಲಿದೆ.
ಸೂಚನೆ: : ಬಳಸಿದ ಚಿತ್ರಗಳು ಪ್ರಾತಿನಿಧ್ಯದ ಉದ್ದೇಶಕ್ಕಾಗಿ ಮಾತ್ರ.


Click it and Unblock the Notifications