ಹೊಸ ನಿಯಮ ಜಾರಿಯಾದ್ರೆ ರಾಜ್ಯದಲ್ಲಿ ಗುಜುರಿ ಸೇರಲಿವೆ 45 ಲಕ್ಷ ಹಳೆಯ ವಾಹನಗಳು..!
ಜನಸಂಖ್ಯೆಗಿಂತ ವಾಹನಗಳ ಸಂಖ್ಯೆಯೇ ಹೆಚ್ಚುತ್ತಿರುವ ಬೆಂಗಳೂರಿನಲ್ಲಿ ವಾಹನ ದಟ್ಟಣೆಗೆ ಕಡಿವಾಣ ಹಾಕಲು ಮುಂದಾಗಿರುವ ಕರ್ನಾಟಕ ಸರ್ಕಾರವು ಸದ್ಯದಲ್ಲೇ ಕೆಲವು ಕಠಿಣ ಸಾರಿಗೆ ನಿಯಮಗಳನ್ನು ಜಾರಿಗೊಳಿಸಲು ಮುಂದಾಗಿದೆ.

ಹೆಚ್ಚುತ್ತಿರುವ ವಾಹನಗಳ ಸಂಖ್ಯೆಯಿಂದಾಗಿ ಮಾಲಿನ್ಯ ಪ್ರಮಾಣವು ವರ್ಷದಿಂದ ವರ್ಷಕ್ಕೆ ದ್ವಿಗುಣಗೊಳ್ಳುತ್ತಿದೆ. ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮೊನ್ನೆಯಷ್ಟೇ ಖಡಕ್ ವಾರ್ನ್ ಮಾಡಿದ್ದ ಸುಪ್ರೀಂಕೋರ್ಟ್, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿರುವ ಹಳೆಯ ಕಾರುಗಳನ್ನು ಬ್ಯಾನ್ ಮಾಡುವಂತೆ ಆದೇಶಿಸಿತ್ತು.

ಸುಪ್ರೀಂಕೋರ್ಟ್ ತೀರ್ಪಿನಂತೆ ಇನ್ಮುಂದೆ ದೆಹಲಿಯಲ್ಲಿ 10 ವರ್ಷ ಮೇಲ್ಪಟ್ಟ ಡೀಸೆಲ್ ಮತ್ತು 15 ಮೇಲ್ಪಟ್ಟ ಪೆಟ್ರೋಲ್ ಕಾರುಗಳು ರಸ್ತೆಗಿಳಿಯದಂತೆ ನಿಷೇಧ ಹೇರಲಾಗಿದ್ದು, ತಕ್ಷಣವೇ ಹೊಸ ಕಾಯ್ದೆ ಜಾರಿಗೆ ಬರುವಂತೆ ಹೊಸ ನಿಯಮವನ್ನು ರೂಪಿಸಿ ಎಂದು ಕೇಂದ್ರ ಸಾರಿಗೆ ಇಲಾಖೆಗೆ ಮಹತ್ವದ ನಿರ್ದೇಶನವನ್ನು ನೀಡಿತ್ತು.

ಸಮ-ಬೆಸ ಪದ್ದತಿಯಂತೆ ಕಾರುಗಳ ಓಡಾಟಕ್ಕೆ ಅನುಮತಿಯ ಹೊರತಾಗಿಯೂ ಮಾಲಿನ್ಯ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಹಳೆಯ ಕಾರುಗಳನ್ನು ಬ್ಯಾನ್ ಮಾಡಲಾಗಿದ್ದು, ಈ ಹಿಂದೆ ನ್ಯಾಷನಲ್ ಗ್ರೀನ್ ಟ್ರಿಬ್ಯೂನಲ್ ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿತ್ತು.

ಇದೀಗ ಬೆಂಗಳೂರಿನಲ್ಲೂ ಇದೇ ತಂತ್ರವನ್ನು ಪಾಲಿಸಲು ಕರ್ನಾಟಕ ಸರ್ಕಾರ ಕೂಡಾ ಚಿಂತನೆ ನಡೆಸಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಹೊಸ ಸಾರಿಗೆ ನೀತಿಯೊಂದನ್ನು ಜಾರಿಗೆ ತರುವುದರ ಬಗ್ಗೆ ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಅವರು ಮಹತ್ವದ ಸೂಚನೆ ನೀಡಿದ್ದಾರೆ.

15 ವರ್ಷಗಳಿಂತ ಹಳೆಯ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲು ಪರಿಶೀಲನೆ ಮಾಡುತ್ತಿರುವಾಗಿ ಹೇಳಿರುವ ಸಾರಿಗೆ ಸಚಿವರು, ಮಾಲಿನ್ಯ ಮತ್ತು ಅಪಘಾತಗಳನ್ನು ತಗ್ಗಿಸಲು ಅವಧಿ ಮೀರಿದ ಸುಮಾರು 45 ಲಕ್ಷ ವಾಹನಗಳ ಮೇಲೆ ಸದ್ಯದಲ್ಲೇ ಕ್ರಮಕೈಗೊಳ್ಳುತ್ತಿರುವುದಾಗಿ ಹೇಳಿದ್ದಾರೆ.

ಇದಲ್ಲದೇ ಕಳೆದ ತಿಂಗಳು ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯಲ್ಲೂ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವಾಹನಗಳಿಗೆ ಕಡಿವಾಣ ಹಾಕುವ ಸಂಬಂಧ ಕೆಲವು ಹೊಸ ನೀತಿ ರೂಪಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಗಿತ್ತು.

ಸದ್ಯ ಬೆಂಗಳೂರಿನಲ್ಲಿ 80 ಲಕ್ಷಕ್ಕೂ ಹೆಚ್ಚು ನೋಂದಣಿ ಪಡೆದ ವಾಹನಗಳಿದ್ದು, ಹೊರಗಿನಿಂದ ಬಂದು ಹೋಗುವ ವಾಹನಗಳ ಸಂಖ್ಯೆಯು ಲೆಕ್ಕಕ್ಕಿಲ್ಲ. ಜೊತೆಗೆ ಪ್ರತಿ ದಿನ ಬೆಂಗಳೂರಿನಲ್ಲಿ 2 ಸಾವಿರಕ್ಕೂ ಹೆಚ್ಚು ಹೊಸ ವಾಹನಗಳು ನೋಂದಣಿ ಪಡೆದುಕೊಳ್ಳುತ್ತಿದ್ದು, ಹೆಚ್ಚಿದ ಮಾಲಿನ್ಯದಿಂದಾಗಿ ಹೊಸ ಹೊಸ ಸಮಸ್ಯೆ ಎದುರಾಗುತ್ತಿವೆ.

ಈ ಕುರಿತು ಕಳೆದ ತಿಂಗಳು 32 ಸಾವಿರ ಹಳೆಯ ವಾಹನಗಳ ಹೊಗೆ ತಪಾಸಣೆ ಮಾಡಿದ್ದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿವು ಸಹ 14% ರಷ್ಟು ಪೆಟ್ರೋಲ್ ವಾಹನಗಳು ಹಾಗೂ 25% ರಷ್ಟು ಡೀಸೆಲ್ ವಾಹನಗಳಿಂದ ವಿಷಕಾರಿ ಅನಿಲ ಬರುತ್ತಿರುವ ಬಗ್ಗೆ ಸರ್ಕಾರದ ಗಮನಕ್ಕೆ ತಂದಿತ್ತು.

ಮುಂದುವರಿದು, ಬೆಂಗಳೂರು ನಗರದಲ್ಲಿ ಬೃಹತ್ ಗಾತ್ರದ ವಾಹನಗಳ ಸಂಚಾರವನ್ನು ರಿಂಗ್ ರಸ್ತೆಗಳತ್ತ ಡೈವರ್ಟ್ ಮಾಡಬೇಕು ಎಂದು ಮನವಿ ಮಾಡಿದ್ದ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯು, ಕಾನೂನು ಮೀರಿದವರಿಗೆ ದೊಡ್ಡ ಪ್ರಮಾಣದ ದಂಡ ವಿಧಿಸಬೇಕು ಎಂಬ ಸಲಹೆ ನೀಡಿತ್ತು.
MOST READ: ಶಾಕಿಂಗ್ ಸುದ್ದಿ- ಭಾರತದಲ್ಲಿ ಬ್ಯಾನ್ ಆಗಲಿವೆ ಈ ಒಂಬತ್ತು ಜನಪ್ರಿಯ ಕಾರುಗಳು..!

ಅದ್ರೆ ಈ ಬಗ್ಗೆ ಮೊದಮೊದಲ ಅಸಡ್ಡೆ ಮಾಡಿದ್ದ ರಾಜ್ಯ ಸರ್ಕಾರವು ಇದೀಗ ಎಚ್ಚೆತ್ತಿಕೊಂಡಿದ್ದು, ಹೊಸ ವಾಹನ ಖರೀದಿದಾರರನ್ನು ಸಾರ್ವಜನಿಕ ಸಾರಿಗೆ ಬಳಸುವಂತೆ ಉತ್ತೇಜಿಸಲು ಅಧಿಕ ಸಂಖ್ಯೆಯಲ್ಲಿ ಎಲೆಕ್ಟ್ರಿಕ್ ಬಸ್ಗಳನ್ನು ರಸ್ತೆಗಿಳಿಸುವ ಕುರಿತಂತೆ ನಿರ್ಣಯ ಕೈಗೊಂಡಿರುವುದು ಉತ್ತಮ ನಿರ್ಧಾರವಾಗಿದೆ.

ಕಾರ್ ಪೂಲಿಂಗ್ ಮೊರೆ ಹೋದ ಸರ್ಕಾರ..!
ಇಷ್ಟು ದಿನ ಕಾರ್ ಪೂಲಿಂಗ್ ವಿರುದ್ಧ ಕ್ರಮ ಜರಗಿಸುತ್ತಿದ್ದ ರಾಜ್ಯ ಸರ್ಕಾರವು ಇದೀಗ ಮಾಲಿನ್ಯ ನಿಯಂತ್ರಣಕ್ಕಾಗಿ ಕಾರ್ ಪೂಲಿಂಗ್ ಮಾಡಿ ಎನ್ನುತ್ತಿದೆ. ಸಿಲಿಕಾನ್ ಸಿಟಿಯಲ್ಲಿ ಸಾವಿರಾರು ಐಟಿ ಸಂಸ್ಥೆಗಳಿದ್ದು, ಕಾರ್ಪೋರೆಟ್ ಉದ್ಯೋಗಿಗಳು ಕಾರು ಪೂಲಿಂಗ್ ಅಳವಡಿಕೆ ಮಾಡಿಕೊಂಡಲ್ಲಿ ಮಾಲಿನ್ಯ ನಿಯಂತ್ರಣಕ್ಕೆ ಸಾಕಷ್ಟು ಸಹಕಾರಿಯಾಗಲಿದೆ ಎಂದಿದ್ದಾರೆ.

ಏನಿದು ಕಾರ್ ಪೂಲಿಂಗ್..?
ನಗರದಲ್ಲಿ ಶಬ್ದ ಮಾಲಿನ್ಯ, ವಾಯು ಮಾಲಿನ್ಯ ಜಾಸ್ತಿಯಾಗಿದೆ. ಇದರಿಂದ ಜನರು ವಿವಿಧ ಖಾಯಿಲೆಗಳಿಂದ ಬಳಲುವ ಸಾಧ್ಯತೆಯೂ ಇದೆ. ಅಷ್ಟೇ ಯಾಕೆ ಒಬ್ಬರೇ ಆಟೋ ಅಥವಾ ನಿಮ್ಮ ಆಟೋದಲ್ಲಿ ಪಯಣಿಸುವಾಗ ಅದಕ್ಕೆ ಅಗತ್ಯವಿರುವ ಪೆಟ್ರೋಲ್ ಹಾಕಿಸಬೇಕು. ನಗರದಲ್ಲಿ ಅಗತ್ಯಕ್ಕಿಂತ ಹೆಚ್ಚು ವಾಹನಗಳಿಂದ ಮಾಲಿನ್ಯ ಹೆಚ್ಚಿದೆ. ಇವೆಲ್ಲವನ್ನು ಮನಗಂಡಿರುವ ಬೆಂಗಳೂರು ಸಂಚಾರ ಪೊಲೀಸ್ ಕಾರ್ ಪೂಲಿಂಗ್ ಅಥವಾ ಕಾರ್ ಶೇರಿಂಗ್ ಪರಿಕಲ್ಪನೆಯನ್ನು ಜಾರಿಗೆ ತಂದಿದೆ.
MOST READ: ವಾಹನ ಸವಾರರೇ ಎಚ್ಚರ- ಪೆಟ್ರೋಲ್ ಬಂಕ್ಗಳಲ್ಲಿ ಹೇಗೆ ನಡೆಯುತ್ತೆ ನೋಡಿ ಹಗಲು ದರೋಡೆ..!

ಪೆಟ್ರೋಲ್ ದರ ದುಬಾರಿಯಾಗಿಬಿಟ್ಟಿದೆ. ಹೆಚ್ಚಿನವರು ಕಾರು ಖರೀದಿಸುವ ಯೋಚನೆ ಕೈಬಿಟ್ಟಿರಬಹುದು. ಕಾರು ಮಾಲಿಕರುಗಳಿಗೆ ಕಾರೀಗ ಹೊರೆಯಾಗಿರಬಹುದು. ಇಂತಹ ಸಮಯದಲ್ಲಿ ಬೆಂಗಳೂರಿನಂತಹ ನಗರಗಳಲ್ಲಿ ಕಾರ್ ಪೂಲಿಂಗ್ ಉತ್ತಮ ಆಯ್ಕೆಯಾಗಿರಲಿದೆ.

ಇನ್ನು ಚುಟುಕಾಗಿ ಹೇಳುವುದಾದರೆ ನಾಲ್ಕು ಜನ ಪ್ರತ್ಯೇಕ ಕಾರುಗಳನ್ನು ಬಳಸುವುದಕ್ಕೆ ಬದಲಾಗಿ ನಾಲ್ಕು ಜನ ಒಂದೇ ಕಾರನ್ನು ಹಂಚಿಕೊಂಡು ತಮ್ಮ ಕಚೇರಿ ಮತ್ತಿತರ ಸ್ಥಳಕ್ಕೆ ಸಂಚರಿಸುವ ವಿಧಾನನೇ ಕಾರ್ ಪೂಲಿಂಗ್.

ಒಟ್ಟಿನಲ್ಲಿ ಮಾಲಿನ್ಯ ನಿಯಂತ್ರಿಸುವ ನಿಟ್ಟಿನಲ್ಲಿ ಹೊಸ ಕ್ರಮಕೈಗೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರವು ಸದ್ಯ 15 ವರ್ಷ ಮೇಲ್ಪಟ್ಟ ವಾಹನಗಳನ್ನು ನಿಷೇಧದ ಕುರಿತಂತೆ ಸದ್ಯದಲ್ಲೇ ಮಹತ್ವದ ನಿರ್ಧಾರವನ್ನು ಪ್ರಕಟಿಸಲಿದ್ದು, ವಾಹನಗಳ ವಿಮೆ, ಪಾರ್ಕಿಂಗ್ ಶುಲ್ಕಗಳನ್ನು ಸಹ ಹೆಚ್ಚುಸುವ ಬಗ್ಗೆ ಚರ್ಚಿಸಲಾಗಿದೆ.


Click it and Unblock the Notifications








