ಈಡೇರದ ಬೇಡಿಕೆ, ಮುಷ್ಕರಕ್ಕಿಳಿದ ಕ್ಯಾಬ್ ಚಾಲಕರು
ದೆಹಲಿಯಲ್ಲಿ ಇಂದಿನಿಂದ ಓಲಾ ಹಾಗೂ ಉಬರ್ ಕ್ಯಾಬ್ ಗಳ ಚಾಲಕರು ವಾಹನ ಸಾಲದ ಇಎಂಐ ಪಾವತಿ ಅವಧಿಯನ್ನು ವಿಸ್ತರಿಸುವಂತೆ ಹಾಗೂ ಕ್ಯಾಬ್ ಗಳ ಪ್ರಯಾಣ ದರವನ್ನು ಏರಿಕೆ ಮಾಡಬೇಕೆಂದು ಒತ್ತಾಯಿಸಿ ಮುಷ್ಕರ ನಡೆಸುತ್ತಿದ್ದಾರೆ.

ದೆಹಲಿ ಸರ್ಕಾರವು ತಮ್ಮ ಬೇಡಿಕೆಗಳನ್ನು ಈಡೇರಿಸುತ್ತಿಲ್ಲವೆಂದು ಕ್ಯಾಬ್ ಚಾಲಕರು ಹೇಳಿದ್ದಾರೆ. ದೆಹಲಿಯಲ್ಲಿ 2 ಲಕ್ಷಕ್ಕೂ ಹೆಚ್ಚು ಕ್ಯಾಬ್ ಚಾಲಕರಿದ್ದಾರೆ. ಕೋವಿಡ್ -19ನಿಂದ ಉಂಟಾದ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕ್ಯಾಬ್ ಚಾಲಕರಿಗೆ ಪರಿಹಾರ ನೀಡುವುದಾಗಿ ದೆಹಲಿ ಸರ್ಕಾರವು ಭರವಸೆಯನ್ನು ನೀಡಿತ್ತು. ಆದರೆ ಇದುವರೆಗೂ ಯಾವುದೇ ಪರಿಹಾರವನ್ನು ನೀಡಿಲ್ಲವೆಂದು ಕ್ಯಾಬ್ ಚಾಲಕರು ದೂರಿದ್ದಾರೆ.

ಲಾಕ್ ಡೌನ್, ಕ್ಯಾಬ್ ಚಾಲಕರಲ್ಲಿ ಆರ್ಥಿಕ ಬಿಕ್ಕಟ್ಟನ್ನು ಸೃಷ್ಟಿಸಿದೆ. ಚಾಲಕರು ತಮ್ಮ ಇಎಂಐಗಳನ್ನು ಪಾವತಿಸಲು ಸಾಧ್ಯವಾಗುತ್ತಿಲ್ಲ ಎಂದು ದೆಹಲಿ ಕ್ಯಾಬ್ ಚಾಲಕರ ಸಂಘದ ಅಧ್ಯಕ್ಷ ಕಮಲ್ಜಿತ್ ಸಿಂಗ್ ಗಿಲ್ ಹೇಳಿದ್ದಾರೆ.
MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಸಾಲ ಮರುಪಾವತಿಯ ಕೊನೆಯ ದಿನ ನಿನ್ನೆಗೆ ಮುಕ್ತಾಯಗೊಂಡಿದ್ದು, ಸಾಲವನ್ನು ಮರುಪಾವತಿಸುವಂತೆ ಬ್ಯಾಂಕುಗಳು ಒತ್ತಡ ಹೇರುತ್ತಿವೆ. ಕ್ಯಾಬ್ ಚಾಲಕರು ಇಎಂಐಗಳನ್ನು ಪಾವತಿಸದಿದ್ದರೆ ಬ್ಯಾಂಕುಗಳು ತಮ್ಮ ಕಾರುಗಳನ್ನು ವಶಕ್ಕೆ ಪಡೆಯುತ್ತವೆ ಎಂದು ಅವರು ಹೇಳಿದ್ದಾರೆ.

ಕ್ಯಾಬ್ ಗಳ ಪ್ರಯಾಣ ದರವನ್ನು ಹೆಚ್ಚಿಸಬೇಕೆಂದು ಅವರು ಒತ್ತಾಯಿಸಿದ್ದಾರೆ. ಕ್ಯಾಬ್ ಕಂಪನಿಗಳ ಬದಲು ಸರ್ಕಾರವು ಕ್ಯಾಬ್ ಹಾಗೂ ಟ್ಯಾಕ್ಸಿಗಳ ಪ್ರಯಾಣ ದರವನ್ನು ನಿಗದಿಪಡಿಸಬೇಕೆಂದು ಗಿಲ್ ಹೇಳಿದ್ದಾರೆ. ಓಲಾ ಹಾಗೂ ಉಬರ್ ಕಂಪನಿಗಳು ಈ ಮುಷ್ಕರದ ಬಗ್ಗೆ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ದೆಹಲಿಯಲ್ಲಿ ಕ್ಯಾಬ್ ಚಾಲಕರು ನಡೆಸುತ್ತಿರುವ ಮುಷ್ಕರದಿಂದಾಗಿ ಪ್ರಯಾಣಿಕರು ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ದೆಹಲಿಯಲ್ಲಿ ಮೆಟ್ರೋ ರೈಲಿನ ಸಂಚಾರವು ಇನ್ನೂ ಆರಂಭಗೊಂಡಿಲ್ಲ.

ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳ ಬೇಕಾಗಿರುವ ಹಿನ್ನೆಲೆಯಲ್ಲಿ ಬಸ್ಸುಗಳು ಅರ್ಧ ಸಾಮರ್ಥ್ಯದಲ್ಲಿ ಸಂಚರಿಸುತ್ತಿವೆ. ಈ ಸಂದರ್ಭದಲ್ಲಿ ಕ್ಯಾಬ್ ಚಾಲಕರು ಮುಷ್ಕರವನ್ನು ಮುಂದುವರೆಸಿದರೆ ಕಚೇರಿಗೆ ಹಾಗೂ ಪ್ರಮುಖ ಕೆಲಸಗಳಿಗೆ ತೆರಳುವ ಜನರು ಭಾರಿ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ.


Click it and Unblock the Notifications