ನೈಟ್ ಕರ್ಫ್ಯೂ: ರಾತ್ರಿ ಅವಧಿಯಲ್ಲಿನ ವಾಹನಗಳ ಸಂಚಾರಕ್ಕೆ ಏನೆಲ್ಲಾ ಹೊಸ ರೂಲ್ಸ್?
ದೇಶಾದ್ಯಂತ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ವಿವಿಧ ರಾಜ್ಯಗಳು ಸೋಂಕು ಹರಡುವಿಕೆಯನ್ನು ತಗ್ಗಿಸಲು ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ಸೋಂಕು ಹೆಚ್ಚಿರುವ ನಗರಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

ಹೆಚ್ಚುತ್ತಿರುವ ಕರೋನಾ ವೈರಸ್ ತಡೆಗಾಗಿ ಕೇಂದ್ರ ಸರ್ಕಾರದ ಸಲಹೆ ಮೇರೆಗೆ ಕರ್ನಾಟಕ ಸರ್ಕಾರವು ಕೂಡಾ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಜಾರಿಗೆ ತಂದಿದ್ದು, ರಾತ್ರಿ ವೇಳೆ ಜನಸಂಪರ್ಕ ತಪ್ಪಿಸುವುದಕ್ಕಾಗಿ ನೈಟ್ ಕಫ್ಯೂ ಜಾರಿಗೆಗೊಳಿಸಿದೆ. ನೈಟ್ ಕರ್ಫ್ಯೂ ಏಪ್ರಿಲ್ 10ರಿಂದ 20ರ ಜಾರಿಗೆ ತರಲು ಆದೇಸಿದ್ದು, ಕೊರೋನಾ ನಿಯಂತ್ರಣಕ್ಕೆ ಟಫ್ ರೂಲ್ಸ್ ಅನುಸರಿಸಲಾಗುತ್ತಿದೆ.

ನೈಟ್ ಕರ್ಫ್ಯೂ ಅನ್ನು ಸದ್ಯ ಕೋವಿಡ್ ಸಂಖ್ಯೆ ಹೆಚ್ಚಿರುವ ಪ್ರಮುಖ ಎಂಟು ಜಿಲ್ಲೆಗಳಿಗೆ ಅನ್ವಯವಾಗುವಂತೆ ಮಾತ್ರ ಜಾರಿಗೆ ತರಲಾಗಿದ್ದು, ರಾತ್ರಿ 10ರಿಂದ ಆರಂಭವಾಗಿ ಮುಂಜಾನೆ 5 ಗಂಟೆಯ ತನಕ ಕರ್ಫ್ಯೂ ಜಾರಿಯಲ್ಲಿರಲಿದೆ.

ರಾಜಧಾನಿ ಬೆಂಗಳೂರು ಸೇರಿದಂತೆ ಮೈಸೂರು, ಮಂಗಳೂರು, ತುಮಕೂರು, ಬೀದರ್, ಕಲಬುರಗಿ, ಉಡುಪಿ ಹಾಗೂ ಮಣಿಪಾಲ್ ಜಿಲ್ಲಾ ಕೇಂದ್ರಗಳಿಗೆ ನೈಟ್ ಕರ್ಫ್ಯೂ ಜಾರಿಗೊಳಿಸಲಾಗಿದ್ದು, ಅಗತ್ಯ ಸೇವೆಗಳನ್ನು ಹೊರತುಪಡಿಸಿ ಸಾಮಾನ್ಯ ವಾಹನ ಸಂಚಾರವು ಸಂಪೂರ್ಣವಾಗಿ ಸ್ತಬ್ಧಗೊಳ್ಳಲಿದೆ.

ತುರ್ತು ಸೇವೆಗಳನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ಸೇವೆಗಳು ನಿಗದಿತ ಅವಧಿಯೊಳಗೆ ಮಾತ್ರ ಲಭ್ಯವಿರಲಿದ್ದು, ಕರ್ಫ್ಯೂ ಸಂದರ್ಭದಲ್ಲಿ ಸಾಮಾನ್ಯ ವಾಹನಗಳ ಸಂಚಾರವೂ ಕೂಡಾ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಗತ್ಯ ಸೇವೆಗಳಿಗಾಗಿ ಬಳಕೆಯಾಗುವ ವಾಹನ ಸಂಚಾರವನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ಮಾದರಿಗಳ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಿರುವುದಾಗಿ ಸ್ಪಷ್ಟನೆ ನೀಡಲಾಗಿದ್ದು, ಯಾವುದೇ ರೀತಿ ಎಮರ್ಜೆನ್ಸಿ ಪಾಸ್ ವಿತರಿಸುತ್ತಿಲ್ಲ.

ಅಗತ್ಯ ಸೇವೆಳನ್ನು ಒದಗಿಸುವ ವಾಹನಗಳಿಗೆ, ಸರಕುಸಾಗಣೆ ವಾಹನಗಳಿಗೆ, ಆರೋಗ್ಯ ಸೇವೆಯ ವಾಹನಗಳಿಗೆ ಅವಕಾಶ ನೀಡಲಾಗಿದ್ದು, ಎಲ್ಲಾ ಮಾದರಿಯ ವಾಣಿಜ್ಯ ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗಿದೆ.

ರಾತ್ರಿ ಪಾಳಿಯಲ್ಲಿನ ಕಾರ್ಖಾನೆ, ಇತರೆ ಕಂಪನಿಗಳ ಉದ್ಯೋಗಿಗಳ ಸಂಚಾರಕ್ಕೂ ಅನುಮತಿ ನೀಡಲಾಗಿದ್ದರೂ ನಿಗದಿತ ಅವಧಿಯೊಳಗೆ ಕಚೇರಿ ತಲುಪಬೇಕಿದ್ದು, ಮಧ್ಯಂತರ ಅವಧಿಯಲ್ಲಿ ಹೊರಗೆ ತಿರುಗಾಡುವಂತಿಲ್ಲ.
MOST READ: ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಕಾರಿಗೆ ಸಗಣಿಯ ಲೇಪನ ನೀಡಿದ ಕಾರು ಮಾಲೀಕ

ಹಾಗೆಯೇ ರೈಲು, ವಿಮಾನ ಪ್ರಯಾಣಕ್ಕೂ ನೈಟ್ ಕರ್ಫ್ಯೂನಲ್ಲಿ ಅವಕಾಶ ನೀಡಲಾಗಿದ್ದು, ತಡರಾತ್ರಿ ನಗರಕ್ಕೆ ಪ್ರವೇಶಿಸುವ ಬಸ್, ರೈಲು, ಮತ್ತು ವಿಮಾನ ಪ್ರಯಾಣಿಕರು ಅಗತ್ಯ ದಾಖಲೆಗಳನ್ನು ತೊರಿಸಿ ಪ್ರಯಾಣ ಮಾಡಬಹುದು.

ಕರ್ನಾಟಕ ಸರ್ಕಾರವು ಅನಗತ್ಯ ಸಂಚಾರಕ್ಕೆ ಕಟ್ಟುನಿಟ್ಟಿನ ನಿಯಮ ಜಾರಿಗೆ ತಂದಿದ್ದು, ರಾತ್ರಿ ವೇಳೆಯ ಕಫ್ಯೂ ಎಪ್ರಿಲ್ 20 ತನಕವು ಜಾರಿಯಲ್ಲಿರುತ್ತದೆ. ಒಂದು ವೇಳೆ ಕರ್ಫ್ಯೂ ನಿಯಮ ಪಾಲನೆ ಮಾಡದೆ ಇದ್ದಲ್ಲಿ ಕಠಿಣ ಕ್ರಮ ಜರುಗಿಸಲಿದ್ದು, ವಾಹನಗಳನ್ನು ಕೂಡಾ ಜಪ್ತಿ ಮಾಡಲಾಗುತ್ತದೆ.
MOST READ: ರೂ.200 ಟ್ರಾಫಿಕ್ ಉಲ್ಲಂಘನೆ ದಂಡದ ಪ್ರಕರಣವನ್ನು ಗೆಲ್ಲಲು ರೂ.10 ಸಾವಿರ ಖರ್ಚು ಮಾಡಿದ ಬೈಕ್ ಮಾಲೀಕ

ಹೀಗಾಗಿ ಅಗತ್ಯ ಸಂದರ್ಭಗಳನ್ನು ಹೊರತುಪಡಿಸಿ ರಾತ್ರಿ ಅವಧಿಯ ಪ್ರಯಾಣವನ್ನು ಹಗಲಿನ ವೇಳೆ ಕೈಗೊಳ್ಳುವುದು ಒಳಿತು. ಇಲ್ಲವಾದಲ್ಲಿ ಕಠಿಣ ಕ್ರಮಗಳನ್ನು ಎದುರಿಸಬೇಕಲ್ಲದೆ ದುಬಾರಿ ಮೊತ್ತದ ದಂಡ ತೆತ್ತಬೇಕಾದ ಸಂದರ್ಭ ಎದುರಾಗಬಹುದು.


Click it and Unblock the Notifications