ರದ್ದಾಗಲಿದೆ ಐದು ಬಾರಿ ಚಲನ್ ಪಡೆದ ಬಸ್ಗಳ ಪರವಾನಗಿ
ಉತ್ತರ ಪ್ರದೇಶದಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಈಗ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಅಖಿಲ ಭಾರತ ಪರವಾನಗಿ ಹಾಗೂ ಉತ್ತರ ಪ್ರದೇಶದ ಪರವಾನಗಿಗಳನ್ನು ಹೊಂದಿರುವ ಬಸ್ಗಳು ಐದು ಬಾರಿ ಅಥವಾ ಅದಕ್ಕಿಂತ ಹೆಚ್ಚು ಬಾರಿ ಚಲನ್ ಪಡೆದಿದ್ದರೆ ಅವುಗಳ ಪರವಾನಗಿಗಳನ್ನು ರದ್ದುಗೊಳಿಸಲಾಗುತ್ತದೆ.

ಒಂದು ವರ್ಷದಲ್ಲಿ ಐದು ಬಾರಿ ಚಲನ್ ಪಡೆದ ಬಸ್ಗಳ ಪರವಾನಗಿಯನ್ನು ತಕ್ಷಣವೇ ರದ್ದುಗೊಳಿಸಬೇಕು ಎಂದು ಉತ್ತರ ಪ್ರದೇಶ ಸರ್ಕಾರವು ಸೂಚನೆ ನೀಡಿದೆ. ಈ ಮೂಲಕ ಅತಿ ವೇಗವಾಗಿ ವಾಹನ ಚಾಲನೆ ಮಾಡುವವರ ವಿರುದ್ಧ ಹಾಗೂ ಕುಡಿದು ವಾಹನ ಚಾಲನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಾರಿಗೆ ಇಲಾಖೆಗೆ ಸೂಚನೆ ನೀಡಲಾಗಿದೆ.

ರಾಜ್ಯದಲ್ಲಿ ಸಂಭವಿಸುತ್ತಿರುವ ಬಸ್ ಅಪಘಾತಗಳನ್ನು ಗಮನದಲ್ಲಿಟ್ಟುಕೊಂಡು ಈ ಸೂಚನೆ ನೀಡಲಾಗಿದೆ. ಇತ್ತೀಚೆಗೆ ಬಾರಾಬಂಕಿಯಲ್ಲಿ ಭೀಕರ ಬಸ್ ಅಪಘಾತ ಸಂಭವಿಸಿತ್ತು. ಆ ಅಪಘಾತದಲ್ಲಿ 20 ಜನರು ಪ್ರಾಣ ಕಳೆದುಕೊಂಡಿದ್ದರು.

ಈ ಘಟನೆಯ ನಂತರ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಾರಿಗೆ ಇಲಾಖೆಯ ಉನ್ನತ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ರಾಜ್ಯದಲ್ಲಿ ಇದುವರೆಗೂ ಅನುಮತಿ ಪಡೆದ ಬಸ್ಗಳ ತನಿಖೆಯನ್ನು ಪುನರಾರಂಭಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜೊತೆಗೆ ನಿಯಮಗಳನ್ನು ಉಲ್ಲಂಘಿಸುವ ಚಾಲಕರ ಚಾಲನಾ ಪರವಾನಗಿಗಳನ್ನು ರದ್ದುಗೊಳಿಸುವ ಮೂಲಕ ಕಠಿಣ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು. ಎಲ್ಲಾವಾಹನಗಳಲ್ಲಿ ಹೈ ಸೆಕ್ಯುರಿಟಿ ರಿಜಿಸ್ಟ್ರೇಶನ್ ಪ್ಲೇಟ್ (ಹೆಚ್ಎಸ್ಆರ್ಪಿ) ಅಳವಡಿಸಲಾಗಿದೆಯೇ ಎಂಬುದನ್ನು ಪರಿಶೀಲಿಸುವಂತೆ ಸರ್ಕಾರವು ಅಧಿಕಾರಿಗಳಿಗೆ ಸೂಚನೆ ನೀಡಿದೆ.

ಇದಲ್ಲದೇ ನಿಗದಿತ ಸಾಮರ್ಥ್ಯಕ್ಕಿಂತ ಹೆಚ್ಚು ಸಾಮರ್ಥ್ಯವನ್ನು ಹೊತ್ತೊಯ್ಯುವ ಬಸ್ಗಳು ಹಾಗೂ ಓವರ್ಲೋಡ್ ಮಾಡಿದ ಟ್ರಕ್ಗಳ ವಿರುದ್ಧವೂ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.

ದೇಶದಲ್ಲಿ ಹೊಸ ಮೋಟಾರು ವಾಹನ ಕಾಯ್ದೆ ಜಾರಿಯಾದ ನಂತರ ಸಂಚಾರ ನಿಯಮಗಳನ್ನು ಉಲ್ಲಂಘಿಸುವವರಿಗೆ ಭಾರೀ ಪ್ರಮಾಣದ ದಂಡ ವಿಧಿಸುವಂತಹ ಹಾಗೂ ಪರವಾನಗಿ ರದ್ದತಿಯಂತಹ ಕಠಿಣ ಕ್ರಮಗಳನ್ನು ತೆಗೆದು ಕೊಳ್ಳಲಾಗುತ್ತಿದೆ.

ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಇಲಾಖೆಯು ಚಾಲನಾ ಪರವಾನಗಿ ಹಾಗೂ ಸಂಬಂಧಿತ ಸೇವೆಗಳ ಬಗ್ಗೆ ಕಾಲಕಾಲಕ್ಕೆ ಮಾರ್ಗಸೂಚಿಗಳನ್ನು ಹೊರಡಿಸುತ್ತದೆ. ಹೊಸ ಮೋಟಾರು ವಾಹನ ಕಾಯಿದೆಯಡಿ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಚಾಲಕರ ನಡವಳಿಕೆಯನ್ನು ಮೇಲ್ವಿಚಾರಣೆ ಮಾಡಲು ವ್ಯವಸ್ಥೆ ಮಾಡಲಾಗಿದೆ.

ಇದರ ಜೊತೆಗೆ ಅವರ ನಡವಳಿಕೆಯನ್ನು ಸಹ ವ್ಯಾಖ್ಯಾನಿಸಲಾಗುತ್ತದೆ. ಮೋಟಾರು ವಾಹನ ಕಾಯ್ದೆಯು ಸಂಚಾರ ಪೊಲೀಸರಿಗೆ ನಿಯಮಗಳ ಉಲ್ಲಂಘನೆಗಾಗಿ ಮಾತ್ರವಲ್ಲದೇ ವಾಹನ ಸವಾರರ ಕೆಟ್ಟ ನಡವಳಿಕೆಯ ಕಾರಣಕ್ಕೂ ಚಾಲನಾ ಪರವಾನಗಿಯನ್ನು ರದ್ದುಗೊಳಿಸಲು ಅಧಿಕಾರ ನೀಡುತ್ತದೆ.

ಯಾವುದೇ ವಾಹನಗಳನ್ನು ಖರೀದಿಸಿದ ನಂತರ ಅವುಗಳ ವಿನ್ಯಾಸದಲ್ಲಿ ಯಾವುದೇ ಕಾನೂನುಬಾಹಿರ ಬದಲಾವಣೆ ಇರಬಾರದು. ಬಸ್ ಅಥವಾ ಟ್ರಕ್ ಚಾಲಕ ಸಾಕಷ್ಟು ತರಬೇತಿ ಪಡೆದಿರಬೇಕು ಹಾಗೂ ಮಾನ್ಯವಾದ ಚಾಲನಾ ಪರವಾನಗಿ ಹೊಂದಿರಬೇಕು.

ಬಸ್ ಮಾಲೀಕರು ಬಸ್ಗಳನ್ನು ರಸ್ತೆಯ ಮೇಲೆ ಹಾಳಾಗದಂತೆ ನೋಡಿಕೊಳ್ಳಬೇಕು. ಇದರ ಜೊತೆಗೆ ಉತ್ತರ ಪ್ರದೇಶ ಸರ್ಕಾರವು ಹಲವು ಪ್ರಮುಖ ನಿರ್ಧಾರಗಳನ್ನು ತೆಗೆದು ಕೊಂಡಿದೆ. ಅವುಗಳಲ್ಲಿ ರಾಜ್ಯದ ಗಡಿಯಲ್ಲಿ ಅನಧಿಕೃತ ಬಸ್ಗಳ ತಪಾಸಣೆ, ಇಂಟರ್ ಸೆಪ್ಟರ್ ಮೂಲಕ ಅತಿ ವೇಗವಾಗಿ ಚಲಿಸುವ ವಾಹನಗಳ ತಪಾಸಣೆ, ಬ್ರೀಥ್ ಅನಾಲೈಜರ್ ಮೂಲಕ ತಪಾಸಣೆ ನಡೆಸುವಂತೆ ಸೂಚಿಸಲಾಗಿದೆ.

ಇದರ ಜೊತೆಗೆ ಪದೇ ಪದೇ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರ ಚಾಲನಾ ಪರವಾನಗಿ ರದ್ದುಪಡಿಸುವುದು, ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಪರಿಶೀಲನೆ, ಬಸ್ ಬಾಡಿಯನ್ನು ಸರಿಯಾಗಿ ಪರಿಶೀಲಿಸುವಂತೆ ಸೂಚಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರತಿ 40 ಕಿ. ಮೀಗಳಿಗೆ ಗಸ್ತು ತಿರುಗುವುದು, ಆಂಬ್ಯುಲೆನ್ಸ್ ಹಾಗೂ ರಿಕವರಿ ವಾಹನಗಳನ್ನು ಒದಗಿಸುವುದು ಸೇರಿದಂತೆ ಹಲವು ಪ್ರಮುಖ ನಿರ್ಧಾರಗಳನ್ನು ಉತ್ತರ ಪ್ರದೇಶ ಸರ್ಕಾರವು ತೆಗೆದು ಕೊಂಡಿದೆ.
ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.


Click it and Unblock the Notifications