ಯುಟ್ಯೂಬ್ ನೋಡಿ ದುಬಾರಿ ಕಾರುಗಳನ್ನು ಕದಿಯುತ್ತಿದ್ದವನ ಬಂಧನ: ಇವನ ಟೆಕ್ನಿಕ್ಗೆ ಪೊಲೀಸರೇ ಸುಸ್ತು
ಯುಟ್ಯೂಬ್ ನೋಡಿ ದುಬಾರಿ ಕಾರುಗಳನ್ನು ಕದಿಯುತ್ತಿದ್ದ ಖತರ್ನಾಕ್ ಖದೀಮನೊಬ್ಬನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಅರುಣ ಕುಮಾರ್(32) ಎಂದು ತಿಳಿದುಬಂದಿದೆ.

ಇತ್ತೀಚೆಗೆ ಕಾರುಗಳ ಕಳ್ಳತನ ಪ್ರಕರಣಗಳು ಹೆಚ್ಚಾಗಿವೆ. ದೇಶದಲ್ಲಿ ದುಬಾರಿ ಹೈ ಎಂಡ್ ಕಾರುಗಳನ್ನು ಕದಿಯಲೆಂದೇ ಪ್ರತ್ಯೇಕ ಸಾಫ್ಟ್ವೇರ್ ಅನ್ನು ಅಭಿವೃದ್ಧಿಪಡಿಸಿ ಕಳ್ಳರಿಗೆ ಟ್ರೈನಿಂಗ್ ನೀಡಲಾಗುತ್ತಿದೆ. ಈ ಮೂಲಕ ಯಾವುದೇ ಶ್ರಮವಿಲ್ಲದೇ ಕಾರುಗಳನ್ನು ಕದಿಯುತ್ತಿದ್ದಾರೆ. ಈ ಪ್ರಕರಣದ ಆರೋಪಿಯಾದ ಅರುಣ್ ಕುಮಾರ್ ಕೂಡ ಸಾಫ್ಟ್ವೇರ್ ಬಳಸುತ್ತಿದ್ದ.

ಆರೋಪಿ ಅರುಣ್ ಕುಮಾರ್ ಬಿ.ಕಾಂ ಪದವೀಧರನಾಗಿದ್ದು, ಈ ಹಿಂದೆ ಆಂಧ್ರಪ್ರದೇಶದಲ್ಲಿ ಡಕಾಯಿತಿ ಪ್ರಕರಣದಲ್ಲಿ ಈತನನ್ನು ಬಂಧಿಸಲಾಗಿತ್ತು. ಅಲ್ಲಿ ಸಹ ಕೈದಿಯಿಂದ ಪಾಠಗಳನ್ನು ಕಲಿತು ಕಾರುಗಳನ್ನು ಕದಿಯಲು ಯೂಟ್ಯೂಬ್ ವೀಡಿಯೊಗಳನ್ನು ವೀಕ್ಷಿಸುತ್ತಿದ್ದ ಎಂದು ತಿಳಿದುಬಂದಿದೆ.

ಪೊಲೀಸರ ಪ್ರಕಾರ, ಕುಮಾರ್ನನ್ನು ಆಂಧ್ರಪ್ರದೇಶದ ಮದನಪಲ್ಲಿ ಸಬ್-ಜೈಲಿನಲ್ಲಿ ಇರಿಸಲಾಗಿತ್ತು. ಅಲ್ಲಿ ಸಹ ಕೈದಿ ರಾಕೇಶ್ನೊಂದಿಗೆ ಪರಿಚಯ ಮಾಡಿಕೊಂಡಿದ್ದ, ಕಾರಿನ ಬೀಗಗಳನ್ನು ಮುರಿಯಲು ಸಹಾಯ ಮಾಡುವ ಆಟೋ ಡಯಾಗ್ನೋಸ್ಟಿಕ್ ಟೂಲ್ ಬಗ್ಗೆ ಜೈಲಿನಲ್ಲೇ ರಾಕೇಶ್ ಪಾಠ ಮಾಡಿದ್ದ. ಬಳಿಕ ಈ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಯುಟ್ಯೂಬ್ ನೋಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ಜಾಮೀನಿನ ಮೇಲೆ ಹೊರಬಂದ ನಂತರ, ಕುಮಾರ್ ಯೂಟ್ಯೂಬ್ನಲ್ಲಿ ವೀಡಿಯೊಗಳನ್ನು ಹೆಚ್ಚಾಗಿ ವೀಕ್ಷಿಸುವುದನ್ನೇ ಕಾಯಕ ಮಾಡಿಕೊಂಡು, ಕಳ್ಳತನಕ್ಕೆ ಬೇಕಾದ ಉಪಕರಣವನ್ನು ಖರೀದಿಸಿದ್ದ. ನಂತರ ಎಚ್ಎಸ್ಆರ್ ಲೇಔಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಾತ್ರಿ ವೇಳೆ ಅತ್ಯಾಧುನಿಕ ಕಾರುಗಳನ್ನು ಕದಿಯಲು ಆರಂಭಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರಿನ ಕಿಟಕಿಗಳನ್ನು ಒಡೆದು ಸ್ಟೀರಿಂಗ್ ಅಡಿಯಲ್ಲಿ ಸಾಧನವನ್ನು ಸಂಪರ್ಕಿಸಲು ಮತ್ತು ಲಾಕ್ ತೆರೆಯಲು ಸಾಫ್ಟ್ವೇರ್ ಅನ್ನು ಬಳಸುತ್ತಿದ್ದ. ನಂತರ ಆ ಕಾರುಗಳನ್ನು ತಮಿಳುನಾಡು ಅಥವಾ ಆಂಧ್ರಪ್ರದೇಶಕ್ಕೆ ತೆಗೆದುಕೊಂಡು ಹೋಗಿ ನಕಲಿ ನೋಂದಣಿ ಪ್ರಮಾಣಪತ್ರ (ಆರ್ಸಿ) ಪುಸ್ತಕಗಳನ್ನು ಬಳಸಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ.

ಆರೋಪಿಯಿಂದ 70 ಲಕ್ಷ ರೂ. ಮೌಲ್ಯದ 10 ಕಾರು ಹಾಗೂ ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಚ್ಎಸ್ಆರ್ ಲೇಔಟ್ ಪೊಲೀಸರು ತಿಳಿಸಿದ್ದಾರೆ. ಆಂಧ್ರಪ್ರದೇಶದಲ್ಲಿ ಸರಣಿ ಅಪರಾಧಗಳನ್ನು ಮಾಡಿದ ನಂತರ, ಕರ್ನಾಟಕಕ್ಕೆ ನೆಲೆಯನ್ನು ಬದಲಾಯಿಸಿದ್ದ. ಕದ್ದ ಕಾರುಗಳಿಂದ ಬಂದ ಹಣದಲ್ಲಿ ಗೋವಾದ ಕ್ಯಾಸಿನೊಗಳಲ್ಲಿ ಮತ್ತು ಐಷಾರಾಮಿ ಜೀವನ ನಡೆಸಲು ಖರ್ಚು ಮಾಡುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕದ್ದ ಕಾರುಗಳನ್ನು ತಮಿಳುನಾಡಿನ ತಿರುವಣ್ಣಾಮಲೈ, ಚೆನ್ನೈ, ವೆಲ್ಲೂರು, ನಾಮಕ್ಕಲ್, ನಾಗಪಟ್ಟಿಣಂ ಮತ್ತು ಇತರ ಸ್ಥಳಗಳಲ್ಲಿ ಅಗ್ಗದ ಬೆಲೆಗೆ ಮಾರಾಟ ಮಾಡಿದ್ದಾನೆ. ಈ ಕಾರುಗಳನ್ನು ಹಿಂತರಲು ಕ್ರಮ ಕೈಗೊಳ್ಳಲಾಗಿದೆ. ಬಳಿಕ ವಾಹನಗಳನ್ನು ಮಾಲೀಕರಿಗೆ ಹಿಂತಿರುಗಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಸಿಸಿಟಿವಿ ಕಣ್ಗಾವಲಿನಲ್ಲಿರಲಿ ಕಾರು
ಕಾರನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ ಬಳಿಕ ತರಾತುರಿಯಲ್ಲಿ ಡೋರ್ ಲಾಕ್ ಮಾಡುವುದಾಗಲಿ, ಗಾಜುಗಳನ್ನು ಮೇಲಕ್ಕೆ ಸರಿಸುವುದನ್ನು ಮರೆತುಬಿಡುತ್ತೇವೆ. ಪರಿಣಾಮ ದೊಡ್ಡ ಬೆಲೆಯನ್ನೇ ತೆರಬೇಕಾಗಿತ್ತು. ರಿಮೋಟ್ ಕೀ ನಿಯಂತ್ರಿತ ಕಾರಿನಲ್ಲಿ ಒಂದೇ ಬಟನ್ ನಲ್ಲಿ ಕಾರು ಮಾಡಬಹುದಾಗಿದ್ದರೂ ಮ್ಯಾನುವಲ್ ನಲ್ಲಿ ಇಂತಹ ಅನುಕೂಲಗಳಿರುವುದಿಲ್ಲ. ಇಂತಹ ಸಂದರ್ಭದಲ್ಲಿ ತುಸು ತಡವಾದರೂ ಕಾರನ್ನು ಸಿಸಿಟಿವಿ ಇರುವ ಜಾಗದಲ್ಲಿ ಪಾರ್ಕ್ ಮಾಡುವುದು ಉತ್ತಮ.

ಸುರಕ್ಷಿತ ಪಾರ್ಕಿಂಗ್
ಯಾವತ್ತೂ ವಾಹನ ನಿಲುಗಡೆಗಾಗಿ ಅತಿ ಹೆಚ್ಚು ಸುರಕ್ಷಿತ ಪ್ರದೇಶವನ್ನು ಆಯ್ಕೆ ಮಾಡಿ. ನಿಮಗೆ ಸೇಫ್ ಎಂದು ತೋಚುವ ಪ್ರದೇಶಗಳಲ್ಲಿ ಮಾತ್ರ ವಾಹನ ನಿಲುಗಡೆಗಾಗಿ ಅವಕಾಶ ಕೊಡಿ. ರಸ್ತೆ ಬದಿ, ಅಪರಿಚಿತ ಜಾಗ ಮುಂತಾದ ಕಡೆಗಳಲ್ಲಿ ವಾಹನ ಪಾರ್ಕಿಂಗ್ ಗೆ ಅನುವು ಮಾಡಿಕೊಡದಿರಿ. ಇನ್ನು ಅನಿವಾರ್ಯವೆನಿಸಿದ್ದಲ್ಲಿ ಹೆಚ್ಚು ಜನ ಸಂಚಾರವಿರುವ ಪ್ರದೇಗಳಲ್ಲಿ ಪಾರ್ಕಿಂಗ್ ಗೆ ಅವಕಾಶ ಮಾಡಿಕೊಡಿ.

ಅಗತ್ಯ ವಸ್ತುಗಳನ್ನು ಕಾರಿನಲ್ಲಿ ಇರಿಸಬೇಡಿ
ಕಾರಲ್ಲಿ ಲ್ಯಾಪ್ ಟಾಪ್, ಮೊಬೈಲ್, ಐಪ್ಯಾಡ್, ಐಫೋನ್, ಹ್ಯಾಂಡಲ್ ಬಾರ್, ಪರ್ಸ್ ಮುಂತಾದ ಬೆಲೆ ಬಾಳುವ ಡಿವೈಸ್ ಗಳನ್ನು ಇಟ್ಟುಕೊಂಡು ಪಯಣಿಸುವುದು ಬೇಡ. ಇದು ನಿಮ್ಮ ಕಾರ್ ಮೇಲೆ ಆಕ್ರಮಣ ಮಾಡುವ ಕಳ್ಳರಿಗೆ ಇನ್ನಷ್ಟು ಹುಮ್ಮಸ್ಸು ನೀಡಿದಂತಾಗುವುದು.

ಚಲಿಸದಂತೆ ಮಾಡುವುದು (Immobiliser)
ಇದು ಅತ್ಯಂತ ಪರಿಣಾಮಕಾರಿ ಆಧುನಿಕ ವ್ಯವಸ್ಥೆಗಳಲ್ಲಿ ಒಂದಾಗಿದೆ. ಇತ್ತೇಚಿಗಿನ ಕಾರುಗಳನ್ನು ಕದಿಯುವುದನ್ನು ತಡೆಯಲು ಕಾರುಗಳಲ್ಲೇ ಇಂಮೊಬಿಲೈಜರ್ ವ್ಯವಸ್ಥೆಯನ್ನು ಒದಗಿಸಲಾಗುತ್ತದೆ. ಇದೊಂದು ಎಲೆಕ್ಟ್ರಾನಿಕ್ ಸೆಕ್ಯೂರಿಟಿ ಡಿವೈಸ್ ಆಗಿದ್ದು, ಕಳ್ಳರು ಕಾರನ್ನು ಒಡೆದು ಒಳಪ್ರವೇಶಿಸಿದರೂ ಕಾರನ್ನು ಅಪಹರಿಸುವುದು ಇನ್ನು ದೂರದ ಮಾತು. ಯಾಕೆಂದರೆ ಇದರಲ್ಲಿ ಕಂಪ್ಯೂಟರ್ ಚಿಪ್ ಹೊಂದಿದ ಕೀಯು ಎಂಜಿನ್ ಜೊತೆ ಸಂಪರ್ಕದಲ್ಲಿರುತ್ತಿದ್ದು, ನಕಲಿ ಕೀ ಬಳಸಿ ಗಾಡಿ ಸ್ಟ್ಯಾರ್ಟ್ ಮಾಡಲು ಪ್ರಯತ್ನಿಸಿದರೂ ಪ್ರಯೋಜನ ಸಿಗದು.

ಡ್ರೈವ್ಸ್ಪಾರ್ಕ್ ಅಭಿಪ್ರಾಯ
ದೇಶದಲ್ಲಿ ಇತ್ತೀಚೆಗೆ ಹೆಚ್ಚಾಗುತ್ತಿರುವ ಕಳ್ಳತನ ಪ್ರಕರಣಗಳೆಲ್ಲವೂ ಹೈ ಟೆಕ್ನಾಲಜಿಯನ್ನು ಬಳಸಿ ಮಾಡುವಂತಹ ಕಳ್ಳತನಗಳಾಗಿವೆ. ಕಳ್ಳರು ಕೂಡ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಕೃತ್ಯಗಳನ್ನು ಎಸಗುತ್ತಿದ್ದಾರೆ. ಇದನ್ನು ತಡೆಗಟ್ಟಬೇಕಾದರೆ ಪೊಲೀಸರು ಕೂಡ ಕಳ್ಳರಿಗಿಂತ ಹತ್ತು ಪಟ್ಟು ಟೆಕ್ನಾಲಜಿಯಲ್ಲಿ ಮುಂದುವರಿಯಬೇಕಿದೆ.


Click it and Unblock the Notifications