3 Railway New Project: ಗದಗ-ಯಲವಿಗಿ ಲೈನ್ ಸೇರಿ 3 ಹೊಸ ಯೋಜನೆ ಆರಂಭಕ್ಕೆ ಆಗ್ರಹ: ಕೇಂದ್ರಕ್ಕೆ ಬೊಮ್ಮಾಯಿ ಪತ್ರ
ನವದೆಹಲಿ/ಬೆಂಗಳೂರು: ಉತ್ತರ ಕರ್ನಾಟಕದ ಪ್ರಮುಖ ರೈಲು ಯೋಜನೆಗಳಲ್ಲಿ ಒಂದಾಗಿರುವ ಗದಗ ಮತ್ತು ಯಲವಿಗಿ ಮಧ್ಯದ (Gadag-Yalvigi Railway Project) ರೈಲು ಯೋಜನೆ ಇಷ್ಟರಲ್ಲಾಗಲೇ ವಿಸೃತ ಯೋಜನಾ ವರದಿ (ಡಿಪಿಆರ್) ಸಿದ್ಧವಾಗಿ ಕಾಮಗಾರಿ ಆರಂಭವಾಗಬೇಕಿತ್ತು. ವಿಳಂಬ ವಾಗುತ್ತಿರುವ ಕಾರಣ ಈ ಭಾಗದ ಸಂಸದರು ಮತ್ತು ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಕೇಂದ್ರಕ್ಕೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಗದಗ ಯಲವಿಗಿ ರೈಲು ಯೋಜನೆ ಡಿಪಿಆರ್ ಗೆ ಒಪ್ಪಿಗೆ ನೀಡಿ ತ್ವರಿತಗತಿಯಲ್ಲಿ ಆರಂಭಿಸುವುದು ಸೇರಿದಂತೆ ಉತ್ತರ ಕರ್ನಾಟಕದ 03 ರೈಲು ಯೋಜನೆಗಳ ಆರಂಭ, ತ್ವರಿತ ಪೂರ್ಣಕ್ಕೆ ಬೊಮ್ಮಾಯಿ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಜೊತೆಗೆ ಸಚಿವರನ್ನು ದೆಹಲಿಯಲ್ಲಿ ಬುಧವಾರ ಭೇಟಿ ಮಾಡಿ ಈ ರೈಲ್ವೆ ಯೋಜನೆಗಳ ಅಗತ್ಯತೆ, ಸಾರಿಗೆ ಉತ್ತೇಜನ, ಜನರ ಬೇಡಿಕೆ ಬಗ್ಗೆ ತಿಳಿಸಿದ್ದಾರೆ.

2026 ರಲ್ಲಿ ಯೋಜನೆ ಕಾರ್ಯಾರಂಭ ಸಾಧ್ಯತೆ
ಯೋಜನೆಗೆ ಕೇಂದ್ರ ಸರ್ಕಾರ ಯೋಜನೆಗೆ ಒಪ್ಪಿಗೆ ನೀಡಿದ್ದು, ಡಿಪಿಆರ್ ಗೆ ಅನುಮತಿ ನೀಡಿ ಯೋಜನೆ ಕಾರ್ಯಾರಂಭ ಮಾಡಬೇಕು. ನಾನು ರಾಜ್ಯ ಸರ್ಕಾರಕ್ಕೆ ಭೂಸ್ವಾಧೀನ ಕೈಗೊಳ್ಳಲು ಮನವಿ ಮಾಡುತ್ತೇನೆ. ಡಿಪಿಆರ್ ಗೆ ಒಪ್ಪಿಗೆ ನೀಡಿದಲ್ಲಿ 2026 ರಲ್ಲಿ ಯೋಜನೆ ಆರಂಭಿಸಿ ವರ್ಷಗಳಲ್ಲಿ ಪೂರ್ಣಗೊಳಿಸಲು ಅನುಕೂಲವಾಗಲಿದೆ ಎಂದು ಕೇಳಿಕೊಂಡಿದ್ದಾರೆ. ಇದಕ್ಕೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎನ್ನಲಾಗಿದೆ.
ಮಧ್ಯ ಕರ್ನಾಟಕದ ಹಾವೇರಿ ಜಿಲ್ಲೆ ವ್ಯಾಪ್ತಿಯ ರಾಣೆಬೆನ್ನೂರಿನಿಂದ ಮಲೆನಾಡಿನ ಶಿವಮೊಗ್ಗ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ರೈಲು ಮಾರ್ಗ ಯೋಜನೆ ಆರಂಭಿಸುವ ಉದ್ದೇಶವಿದೆ. ಈ ಯೋಜನೆಗೆ ಆದಷ್ಟು ಬೇಗ ಭೂಸ್ವಾದಿನ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಬಹಳ ವರ್ಷಗಳಿಂದ ಈ ಯೋಜನೆ ನೆನೆಗುದಿಗೆ ಬಿದ್ದಿದೆ ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಮಾತ್ರವಲ್ಲದೇ ಕಲ್ಯಾಣ ಕರ್ನಾಟಕಕ್ಕೆ ಸಂಪರ್ಕ ಸಾಧಿಸಬಲ್ಲ 56 ಕಿಲೋ ಮೀಟರ್ ಉದ್ದದ ಗದಗ-ಕುಷ್ಟಗಿ ಹೊಸ ರೈಲು ಮಾರ್ಗಕ್ಕಾಗಿ ಬೇಡಿಕೆ ಇದೆ. ಇದು ಗದಗ-ವಾಡಿ ರೈಲು ಮಾರ್ಗದ ಭಾಗವೇ ಆಗಿದೆ. ನರೇಗಲ್, ಗಜೇಂದ್ರಗಢ ಮೂಲಕ ಹಾದು ಹೋಗುವ ಈ ಮಾರ್ಗಕ್ಕೆ ತಕ್ಷಣ ಸಮೀಕ್ಷೆ ನಡೆಸಲು ಸೂಚಿಸಬೇಕು. ಯೋಜನೆ ಜಾರಿಗೆ ಕ್ರಮವಹಿಸುವಂತೆ ಕೋರಿದ್ದಾರೆ.
ರೈಲು ಯೋಜನೆಯ ಪ್ರಯೋಜನಗಳು
ಈ ಮೇಲಿನ ಮೂರು ರೈಲು ಯೋಜನೆಗಳಿಂದ ಉತ್ತರ ಕರ್ನಾಟಕದ ಭಾಗದಲ್ಲಿ ರೈಲು ಸಾರಿಗೆ ಸುಧಾರಣೆ ಆದಂತಾಗುತ್ತದೆ. ವಿವಿಧ ಜಿಲ್ಲೆಗಳ ಮಧ್ಯ ಸುಗಮ ಸಂಪರ್ಕ ಸಾಧ್ಯವಾಗುತ್ತದೆ. ವ್ಯಾಪಾರ, ವಾಣಿಜ್ಯ, ಕೈಗಾರಿಕೆ, ಶಿಕ್ಷಣ, ಪ್ರವಾಸೋದ್ಯಮಕ್ಕೆ, ಗ್ರಾಮೀಣ ಭಾಗದ ಅಭಿವೃದ್ಧಿಗೂ ಈ ಯೋಜನೆಗಳು ಸಹಾಯವಾಗಲಿವೆ.
Credit: Oneindia


Click it and Unblock the Notifications