ಪತಿ ದರ್ಶನ್ ಹುಟ್ಟುಹಬ್ಬದ ಸಂಭ್ರಮದಲ್ಲಿ ವಿಶೇಷ ವಿಡಿಯೋ ಹಂಚಿಕೊಂಡ ವಿಜಯಲಕ್ಷ್ಮಿ
ಕನ್ನಡ ಚಿತ್ರನಟ ದರ್ಶನ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ಸದ್ಯ ದರ್ಶನ್ ಜೈಲಿನಲ್ಲಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಅಭಿಮಾನಿಗಳು ಸಮಾಜಮುಖಿ ಕಾರ್ಯಗಳ ಮೂಲಕ ಹುಟ್ಟುಹಬ್ಬವನ್ನು ವಿಶೇಷವಾಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಕೈಲಾದ ಸಹಾಯ ಮಾಡುತ್ತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಹುಟ್ಟುಹಬ್ಬಕ್ಕೆ ಶುಭಾಶಯಗಳ ಮಹಾಪೂರವೇ ಹರಿದುಬರ್ತಿದೆ. ಪತ್ನಿ ವಿಜಯಲಕ್ಷ್ಮಿ ವಿಶೇಷವಾಗಿ ಪೋಸ್ಟ್ ಹಂಚಿಕೊಂಡಿದ್ದಾರೆ. "ಪ್ರತಿ ದಿನವನ್ನೂ ಸಂಭ್ರಮಿಸೋ ವ್ಯಕ್ತಿಗೆ ಜನ್ಮದಿನದ ಶುಭಾಶಯ" ಎಂದು ಬರೆದು ಪತಿ ಹಾಗೂ ಮಗನ ಜೊತೆಗಿನ ಫೋಟೊ ಹಂಚಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ವಿಶೇಷವಾದ ವಿಡಿಯೋ ಹಾಕಿದ್ದಾರೆ.

ಪತಿ ದರ್ಶನ್ ಹಾಗೂ ಮಗ ವಿನೀಶ್ ನಡುವಿನ ಸುಂದರ ಕ್ಷಣಗಳ ಝಲಕ್ ಅನ್ನು ನೋಡಬಹುದು. ಕೊನೆಗೆ ತಂದೆಗೆ ವಿನೀಶ್ ಹುಟ್ಟುಹಬ್ಬದ ಶುಭಾಶಯ ಕೋರಿರುವ ಆಡಿಯೋ ಕೇಳಬಹುದು. 'ಡೆವಿಲ್' ಚಿತ್ರದ ಚಿತ್ರೀಕರಣಕ್ಕಾಗಿ ಪತ್ನಿ ಹಾಗೂ ಮಗನ ಜೊತೆ ದರ್ಶನ್ ಬ್ಯಾಂಕಾಕ್ಗೆ ಹೋಗಿದ್ದರು. ಆ ಜರ್ನಿ ಝಲಕ್ ಅನ್ನು ವೀಡಿಯೋದಲ್ಲಿ ಗಮನಿಸಬಹುದು. ಜೊತೆಗೆ ತಂದೆ ಜೊತೆಗಿನ ಒಂದಷ್ಟು ಫೋಟೊಗಳು ಅದರಲ್ಲಿದೆ.
ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ಗೆ ಅಭಿಮಾನಿಗಳು ಲೈಕ್ಸ್, ಕಾಮೆಂಟ್ಸ್ ಮಾಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಕಾಮೆಂಟ್ ಬಾಕ್ಸ್ನಲ್ಲಿ ಹುಟ್ಟುಹಬ್ಬದ ಶುಭಾಶಯ ಕೋರುತ್ತಿದ್ದಾರೆ. ದರ್ಶನ್ ಆದಷ್ಟು ಬೇಗ ಜೈಲಿನಿಂದ ಬಿಡುಗಡೆ ಆಗಿ ಹೊರ ಬರುತ್ತಾರೆ ಎನ್ನುವ ಅಭಿಮಾನಿಗಳ ಆಸೆ ಈಡೇರುತ್ತಲೇ ಇಲ್ಲ. ಹೈಕೋರ್ಟ್ನಲ್ಲಿ ಸಿಕ್ಕದ್ದ ಜಾಮೀನು ಸುಪ್ರೀಂ ಕೋರ್ಟ್ನಲ್ಲಿ ರದ್ದಾಗಿತ್ತು. ಕಳೆದ ವರ್ಷ ಆಗಸ್ಟ್ 14ರಂದು ದರ್ಶನ್ ಮತ್ತೆ ಜೈಲು ಸೇರುವಂತಾಗಿತ್ತು. ಈಗಾಗಲೇ 6 ತಿಂಗಳು ಕಳೆದೇ ಹೋಗಿದೆ.
ನೆಚ್ಚಿನ ನಟನ ನೆನಪಿನಲ್ಲೇ ಅಭಿಮಾನಿಗಳು ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ಬರ್ತ್ಡೇ ಸಿಡಿಪಿಗಳು, ಸ್ಪೆಷಲ್ ವೀಡಿಯೋಗಳು ವೈರಲ್ ಆಗ್ತಿದೆ. ದರ್ಶನ್ ನಟನೆಯ 'ಕರಿಯ' ಸಿನಿಮಾ ಎರಡು ದಿನಗಳ ಹಿಂದೆ ರೀ-ರಿಲೀಸ್ ಆಗಿ ಸದ್ದು ಮಾಡ್ತಿದೆ. ದರ್ಶನ್ ಅಭಿಮಾನಿ ಆಗಿರುವ ತನಿಷಾ ಈ ಸಿನಿಮಾ ರೀ-ರಿಲೀಸ್ ಅನ್ನು ಸ್ನೇಹಿತರ ಜೊತೆ ಸಂಭ್ರಮಿಸಿದ್ದಾರೆ.
2003ರಲ್ಲಿ ಬಂದಿದ್ದ 'ಕರಿಯ' ಸಿನಿಮಾ ಸೂಪರ್ ಹಿಟ್ ಆಗಿತ್ತು. 3ನೇ ಬಾರಿ ಸಿನಿಮಾ ರೀ-ರಿಲೀಸ್ ಆಗ್ತಿದೆ. ದರ್ಶನ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಇಂದು(ಫೆಬ್ರವರಿ 16) ಕೂಡ ಸಿನಿಮಾ ಕೆಲವೆಡೆ ಪ್ರದರ್ಶನವಾಗ್ತಿದೆ. ಕಳೆದ ಕೆಲ ವರ್ಷಗಳಿಂದ ನಟ ದರ್ಶನ್ ಅದ್ಧೂರಿ ಹುಟ್ಟುಹಬ್ಬ ಆಚರಣೆಗೆ ಬ್ರೇಕ್ ಹಾಕಿದ್ದರು. ಸಂಭ್ರಮಾಚರಣೆ ಹೆಸರಿನಲ್ಲಿ ಅಭಿಮಾನಿಗಳು ಕೇಕ್, ಹಾರ, ಪಟಾಕಿ ತಂದು ವ್ಯರ್ಥ ಮಾಡುವುದು ಬೇಡ, ಅದೇ ಹಣವನ್ನು ಒಳ್ಳೆ ಕೆಲಸಗಳಿಗೆ ಬಳಸಲು ಹೇಳಿದ್ದರು.
ಅಭಿಮಾನಿಗಳು ದರ್ಶನ್ ಹುಟ್ಟುಹಬ್ಬಕ್ಕೆ ಉಡುಗೊರೆ ರೂಪದಲ್ಲಿ ದವಸಧಾನ್ಯಗಳನ್ನು ತಂದು ಕೊಡುತ್ತಿದ್ದರು. ಅದನ್ನು ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ನೀಡುವ ಪ್ರಯತ್ನವನ್ನು ದರ್ಶನ್ ವಹಿಸಿಕೊಂಡಿದ್ದರು. ಅಭಿಮಾನಿಗಳಿಗೆ ನಿರಾಸೆ ಮಾಡಬಾರದು ಎಂದು ಹುಟ್ಟುಹಬ್ಬದ ದಿನ ಭೇಟಿ ಮಾಡುತ್ತಿದ್ದರು. ಅಭಿಮಾನಿಗಳು ನೆಚ್ಚಿನ ನಟನ ಕೈಕುಲುಕಿ ಶುಭ ಕೋರುತ್ತಿದ್ದರು. ಆದರೆ ಕಳೆದೆರಡು ವರ್ಷಗಳಿಂದ ಅದು ಸಾಧ್ಯವಾಗುತ್ತಿಲ್ಲ.
ರೇಣುಕಾಸ್ವಾಮಿ ಪ್ರಕರಣದಲ್ಲಿ ಆರೋಪಿಯಾಗಿ ಜೂನ್ 11, 2024ರಂದು ನಟ ದರ್ಶನ್ ಬಂಧನವಾಗಿತ್ತು. 5 ತಿಂಗಳ ಬಳಿಕ ಜಾಮೀನು ಸಿಕ್ಕಿ ಜೈಲಿನಿಂದ ಬಿಡುಗಡೆ ಆಗಿದ್ದರು. 'ಡೆವಿಲ್' ಸಿನಿಮಾ ಚಿತ್ರೀಕರಣ ಮುಗಿಸಿದ್ದರು. ಆದರೆ ಮತ್ತೆ ಜೈಲು ಸೇರಿದ ಬಳಿಕ ಅವರ ಅನುಪಸ್ಥಿತಿಯಲ್ಲೇ ಸಿನಿಮಾ ತೆರೆಗೆ ಬಂದಿತ್ತು. ದರ್ಶನ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಸಿನಿಮಾ ಓಟಿಟಿಗೆ ಬರುತ್ತದೆ ಎಂದುಕೊಂಡಿದ್ದವರಿಗೆ ನಿರಾಸೆಯಾಗಿದೆ.
ಡಿಸೆಂಬರ್ 11ರಂದು ಬಿಡುಗಡೆಯಾಗಿದ್ದ 'ಡೆವಿಲ್' ಸಿನಿಮಾ 60 ದಿನ ಕಳೆದರೂ ಓಟಿಟಿಗೆ ಬಂದಿಲ್ಲ. ಅಭಿಮಾನಿಗಳು ಕಾದು ಕಾದು ಸುಸ್ತಾಗಿದ್ದಾರೆ. ದರ್ಶನ್ ಜೈಲು ಸೇರಿದ ಬಳಿಕ ಅವರು ನಟಿಸಬೇಕಿದ್ದ ಸಿನಿಮಾಗಳೆಲ್ಲಾ ತಡವಾಗುತ್ತಿದೆ. ಯಾವಾಗ ಬಿಡುಗಡೆ ಆಗಿ ಹೊರ ಬರುತ್ತಾರೆ ಎನ್ನುವ ಬಗ್ಗೆ ಯಾವುದೇ ಸುಳಿವು ಸಿಗುತ್ತಿಲ್ಲ.
Credit: Filmibeat


Click it and Unblock the Notifications








