ಕುಡಿದು ಅಡ್ಡಾದಿಡ್ಡಿ ಕಾರು ಚಲಾಯಿಸಿದ ಕನ್ನಡ ಚಿತ್ರನಟ; ಸರಣಿ ಅಪಘಾತ ಬೆನ್ನಲ್ಲೇ FIR
ಕುಡಿದ ಮತ್ತಲ್ಲಿ ಫಾರ್ಚೂನರ್ ಕಾರು ಚಲಾಯಿಸಿ ಸರಣಿ ಅಪಘಾತಕ್ಕೆ ಕನ್ನಡ ಚಿತ್ರನಟ ಕಾರಣರಾಗಿದ್ದಾರೆ. ನಿನ್ನೆ(ಜನವರಿ 28) ರಾತ್ರಿ ದೊಮ್ಮಲೂರು ಕಮಾಂಡೋ ಆಸ್ಪತ್ರೆ ಬಳಿ ಈ ಘಟನೆ ನಡೆದಿದೆ. ಕನ್ನಡ ಚಿತ್ರನಡ ಮಯೂರ್ ಪಟೇಲ್ ಹೀಗೆ ಕುಡಿದು ವಾಹನ ಚಲಾಯಿಸಿದ್ದಾರೆ. ಡಿಕ್ಕಿ ರಭಸಕ್ಕೆ 3 ಕಾರುಗಳು ಜಖಂ ಆಗಿದೆ.
ಸಿಗ್ನಲ್ನಲ್ಲಿ ನಿಂತಿದ್ದ ಕಾರುಗಳಿಗೆ ಮಯೂರ್ ಪಟೇಲ್ ವೇಗವಾಗಿ ಬಂದು ಫಾರ್ಚೂನರ್ ಕಾರ್ನಿಂದ ಗುದ್ದಿದ್ದಾರೆ. ಕಾರಿನ ಮಾಲೀಕರು ಕೂಡಲೇ ಕಂಟ್ರೋಲ್ ರೂಮ್ಗೆ ಕರೆ ಮಾಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ನಟ ಮಯೂರ್ ಪಟೇಲ್ ಅವರನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಅವರು ಕುಡಿದಿರುವುದು ಸಾಬೀತಾಗಿದೆ. ಪ್ರಕರಣ ಸಂಬಂಧ ಹಲಸೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ನಟ ಮಯೂರ್ ಪಟೇಲ್ ಚಲಾಯಿಸುತ್ತಿದ್ದ ಫಾರ್ಚೂನರ್ ಕಾರ್ ಇನ್ಸುರೆನ್ಸ್ ಕೂಡ ಇಲ್ಲ. ಪೊಲೀಸರು ಕಾರ್ ಸೀಜ್ ಮಾಡಿದ್ದಾರೆ. ಕಮಾಂಡೋ ಆಸ್ಪತ್ರೆ ಮುಂದಿನ ಸರ್ಕಲ್ನಲ್ಲಿ ಸಿಗ್ನಲ್ ಬಿದ್ದಿತ್ತು. ಹಾಗಾಗಿ ಕಾರುಗಳನ್ನು ನಿಂತಿದ್ದವು. ಈ ವೇಳೆ ಹಿಂದಿನಿಂದ ಬಂದು ಶ್ರೀನಿವಾಸ್, ಅಭಿಷೇಕ್ ಎಂಬುವವರ ಕಾರುಗಳಿಗೆ ಮಯೂರ್ ಪಟೇಲ್ ಕಾರಿನಿಂದ ಗುದಿದ್ದರು. ಮುಂದೆ ಇದ್ದ ಸರ್ಕಾರಿ ವಾಹನಕೂಡ ಜಖಂ ಆಗಿದೆ. ಶ್ರೀನಿವಾಸ್ ನೀಡಿದ ದೂರು ಆಧರಿಸಿ ಎಫ್ಐಆರ್ ದಾಖಲಿಸಿಕೊಂಡು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಅಪಘಾತವಾಗುತ್ತಿದ್ದಂತೆ ನಟ ಮಯೂರ್ ಪಟೇಲ್ "ಏನೇ ಇದ್ದರೂ ನಾನು ಸರಿಪಡಿಸಿಕೊಡ್ತೀನಿ" ಎಂದು ಮಾತನಾಡಿರುವ ವಿಡಿಯೋ ವೈರಲ್ ಆಗ್ತಿದೆ. ನಟ, ನಿರ್ಮಾಪಕ ಮದನ್ ಪಟೇಲ್ ಪುತ್ರ ಮಯೂರ್ ಪಟೇಲ್ 26 ವರ್ಷಗಳ ಹಿಂದೆ ಚಿತ್ರರಂಗ ಪ್ರವೇಶಿಸಿದ್ದರು. 'ಆಂಧ್ರ ಹೆಂಡತಿ' ಎಂಬ ಚಿತ್ರದಲ್ಲಿ ಮೊದಲಿಗೆ ಬಣ್ಣ ಹಚ್ಚಿದ್ದರು. ಬಳಿಕ ಯೋಗರಾಜ್ ಭಟ್ ನಿರ್ದೇಶನದ 'ಮಣಿ' ಚಿತ್ರದಲ್ಲಿ ಮಿಂಚಿದ್ದರು.
'ಉಡೀಸ್', 'ಗುನ್ನ', 'ಲವ್ ಸ್ಟೋರಿ', 'ನಿನದೇ ನೆನಪು', 'ಮುನಿಯ', 'ಸ್ಲಂ', 'ಪೆಪೆ' ಸೇರಿ ಒಂದಷ್ಟು ಸಿನಿಮಾಗಳಲ್ಲಿ ಮಯೂರ್ ಪಟೇಲ್ ನಟಿಸಿದ್ದರು. 'ತಮಟೆ' ಎಂಬ ಸಿನಿಮಾ ನಿರ್ದೇಶನ ಸಹ ಮಾಡಿದ್ದರು. ಆದರೆ ಯಾವುದೇ ಸಿನಿಮಾ ದೊಡ್ಡಮಟ್ಟದ ಯಶಸ್ಸು ತಂಡುಕೊಡಲಿಲ್ಲ. ಹಾಗಾಗಿ ಅಷ್ಟಾಗಿ ಅವಕಾಶಗಳು ಸಿಗಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಸಿನಿಮಾಗಳಲ್ಲಿ ನಟಿಸುತ್ತಿರಲಿಲ್ಲ.
ಅಪಘಾತದಲ್ಲಿ ಜಖಂಗೊಂಡ ಕಾರು ಮಾಲೀಕ ಶ್ರೀನಿವಾಸ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. "ಕಮಾಂಡೋ ಆಸ್ಪತ್ರೆ ಬಳಿ ಸಿಗ್ನಲ್ ಬಿದ್ದಿತ್ತು. ಬಲಭಾಗದಲ್ಲಿ ಕಾರುಗಳು ಒಂದರ ಹಿಂದೆ ಒಂದು ನಿಂತಿದ್ದವು. ಹಿಂದಿನಿಂದ ಏಕಾಏಕಿ ಬಂದು ಫಾರ್ಚೂನರ್ ಕಾರ್ ಗುದ್ದಿತ್ತು. ಕಾರ್ ಚಾಲಕನನ್ನು ಮಾತನಾಡಿಸಿದ್ದಕ್ಕೆ ನಾನು ಸಿನಿಮಾ ನಟ, ಮಯೂರ್ ಪಟೇಲ್ ಅಂದ್ರು. ನೋಡಿದ್ರೆ, ಕುಡಿದಿರುವಂತೆ ಕಂಡ್ರು. ಮೊದಲು ನನ್ನ ಕಾರಿಗೆ ಗುದ್ದಿದ್ರು. ನನ್ನ ಕಾರು ಮುಂದಿನ ಕಾರಿಗೆ ಆ ಕಾರು ಮುಂದಿನ ಕಾರ್ಗೆ ಗುದ್ದುವಂತಾಯಿತು. ಬೆಳಗ್ಗೆ ಕಾರ್ ಸರಿಪಡಿಸಿ ಕೊಡ್ತೀವಿ ಎನ್ನುತ್ತಿದ್ದು ಮಯೂರ್ ಪಟೇಲ್. ಸಾಲ ಮಾಡಿ ಕಾರ್ ಖರೀದಿಸಿದ್ದೆ. ಹೀಗಾಯ್ತು" ಎಂದು ನೋವು ತೋಡಿಕೊಂಡಿದ್ದಾರೆ.
ಏನೋ ಸಣ್ಣಪುಟ್ಟ ಡ್ಯಾಮೇಜ್ ಆಗಿದೆ. ಬೆಳಗ್ಗೆ ಕಾರುಗಳನ್ನು ಸರಿಪಡಿಸಿಕೊಡ್ತೀನಿ, ಬೇಕಿದ್ದರೆ ನನ್ನ ಆಧಾರ್ ಕಾರ್ಡ್ ತಗೊಳ್ಳಿ, ಫೋನ್ ನಂಬರ್ ತಗೊಳ್ಳಿ ಎಂದು ನಟ ಮಯೂರ್ ಪಟೇಲ್ ಹೇಳಿರುವುದನ್ನು ಶ್ರೀನಿವಾಸ್ ವೀಡಿಯೋ ಮಾಡಿದ್ದಾರೆ. ಆ ವಿಡಿಯೋ ವೈರಲ್ ಆಗ್ತಿದೆ.
Credit: Filmibeat


Click it and Unblock the Notifications








