Proud Farmer: ಲಗ್ನ ಪತ್ರಿಕೆಯಲ್ಲಿ ಹೆಮ್ಮೆಯ ರೈತ ಎಂದು ಬರೆದುಕೊಂಡ ತುಮಕೂರಿನ ಕೆ.ಎನ್. ತೇಜೇಶ್ಕುಮಾರ್
Proud Farmer: ಕರ್ನಾಟಕದಲ್ಲಿ ರೈತರಿಗೆ ವಧು ಸಿಗುತ್ತಿಲ್ಲ ಎನ್ನುವುದು ಸಾಮಾನ್ಯ ಎನ್ನುವಂತೆ ಆಗಿದೆ. ವಿವಾಹ ವಯಸ್ಸು ಮೀರುತ್ತಿದ್ದರೂ ಹಲವು ರೈತರ ಮದುವೆ ಮುಂದೂಡಿಕೆ ಆಗುತ್ತಲೇ ಇದೆ. ಈ ಕಾರಣಕ್ಕೂ ಬಹಳಷ್ಟು ಜನ ಯುವಕರು ಕೃಷಿಯಿಂದ ಹಿಂದೆ ಸರಿಯುತ್ತಿದ್ದಾರೆ. ಕೋವಿಡ್ ಸಮಯದಲ್ಲಿ ಕೆಲಸ ಕಳೆದುಕೊಂಡ ಸಾವಿರಾರು ಜನ ಐಟಿ - ಬಿಟಿ ಉದ್ಯೋಗಿಗಳು ಸೇರಿದಂತೆ ಹಲವು ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಗಳು ಕೃಷಿ ಕಡೆ ಮುಖ ಮಾಡಿದ್ದರು. ಆದರೆ ಈ ಟ್ರೆಂಡ್ ಬಹಳ ದಿನಗಳ ಕಾಲ ಉಳಿಯಲಿಲ್ಲ. ರೈತರ ಮಕ್ಕಳ ಮದುವೆ ವಿಚಾರ ಚರ್ಚೆ ಆಗುತ್ತಿರುವಾಗಲೇ ಮೆಕಾನಿಕಲ್ ಎಂಜಿನಿಯರ್ ವಿದ್ಯಾಭ್ಯಾಸ ಮಾಡಿರುವ ಹಾಗೂ ರೈತ ಕೆ.ಎನ್. ತೇಜೇಶ್ ಕುಮಾರ್ ಅವರ ಲಗ್ನ ಪತ್ರಿಕೆ ಗಮನ ಸೆಳೆಯುತ್ತಿದೆ.
ಕರ್ನಾಟಕದ ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಕುರುಬರಹಳ್ಳಿಯ ರೈತ ಕೆ.ಎನ್. ತೇಜೇಶ್ಕುಮಾರ್ ಹಾಗೂ ಹರ್ಷಿತ ಅವರ ವಿವಾಹ ಫೆಬ್ರವರಿ 4ರ ಬುಧವಾರ ನಿಗದಿಯಾಗಿದೆ. ಕೆ.ಎನ್. ತೇಜೇಶ್ಕುಮಾರ್ ಅವರು ತಮ್ಮ ಲಗ್ನ ಪತ್ರಿಕೆಯಲ್ಲಿ ರೈತ / Royal Mech ಎಂದು ಮುದ್ರಿಸಿದ್ದಾರೆ. ರೈತರ ಮಕ್ಕಳಿಗೆ, ರೈತರಿಗೆ ಯಾರೂ ಹೆಣ್ಣು ಕೊಡುವುದಕ್ಕೆ ಮುಂದೆ ಬರುತ್ತಿಲ್ಲ ಎನ್ನುವ ಅಪವಾದಗಳ ನಡುವೆ ಕೆ.ಎನ್. ತೇಜೇಶ್ಕುಮಾರ್ ಅವರು ತಮ್ಮ ಲಗ್ನ ಪತ್ರಿಕೆಯಲ್ಲಿ ಹೆಮ್ಮೆಯ ರೈತ ಎಂದು ಬರೆದುಕೊಂಡಿದ್ದಾರೆ. Oneindia Kannadaದೊಂದಿಗೆ ಮಾತನಾಡಿದ ಕೆ.ಎನ್. ತೇಜೇಶ್ಕುಮಾರ್ ಅವರು, ರೈತರೇ ಹೆಣ್ಣು ಮಕ್ಕಳನ್ನು ಖುಷಿಯಾಗಿ ನೋಡಿಕೊಳ್ಳುವವರು ಎನ್ನುತ್ತಾರೆ.

Proud Farmer: ರೈತರೇ ಖುಷಿಯಾಗಿ ನೋಡಿಕೊಳ್ಳುತ್ತಾರೆ
ನಾವು ರೈತ ಕುಟುಂಬದ ಹಿನ್ನೆಲೆಯಿಂದ ಬಂದವರು. ನಮ್ಮ ಮನೆತನ ಕೃಷಿಯಲ್ಲಿ ತೊಡಗಿಸಿಕೊಂಡಿದ್ದೇವೆ. 25 ವರ್ಷಗಳಿಂದಲೂ ನಾವು ಕೃಷಿಯನ್ನೇ ಕಾಯಕ ಮಾಡಿಕೊಂಡಿದ್ದೇವೆ. ರೈತರಿಗೆ ಹೆಣ್ಣು ಕೊಡುತ್ತಿಲ್ಲ ಎನ್ನುವ ಭಾವನೆ ತುಂಬಾ ಜನರಲ್ಲಿ ಇದೆ. ಈ ಮನಸ್ಥಿತಿಯಿಂದ ಜನ ಹೊರಕ್ಕೆ ಬರಬೇಕು. ರೈತರು ಸಹ ಇಂದು ಕೈ ತುಂಬಾ ಹಣ ಮಾಡುತ್ತಿದ್ದಾರೆ. ಕೃಷಿಯಲ್ಲಿರುವ ನೆಮ್ಮದಿಯ ಜೀವನ ಬೇರೆ ಯಾವುದರಲ್ಲೂ ಇಲ್ಲ. ಹೆಣ್ಣು ಮಕ್ಕಳನ್ನು ಸಂತೋಷವಾಗಿಯೂ, ನೆಮ್ಮದಿಯಾಗಿಯೂ ನೋಡಿಕೊಳ್ಳುವುದಕ್ಕೆ ರೈತರಿಂದ ಮಾತ್ರ ಸಾಧ್ಯ. ಮೆಕಾನಿಕಲ್ ಎಂಜಿನಿಯರ್ ವಿದ್ಯಾಭ್ಯಾಸ ಪೂರೈಸಿ ನಾನೂ ಸಹ ಕೆಲಸಕ್ಕೆ ಸೇರಿಕೊಂಡಿದ್ದೆ. ಆದರೆ ಆ ಕೆಲಸ ನನಗೆ ಸಮಾಧಾನ ತರಲಿಲ್ಲ. ಹೀಗಾಗಿ, ಕೃಷಿಗೆ ಮರಳಿದೆ ಎಂದು ತಮ್ಮ ಕೃಷಿ ಪಯಣದ ಬಗ್ಗೆ ಸಂತೋಷ ಹಂಚಿಕೊಳ್ಳುತ್ತಾರೆ ತೇಜೇಶ್ಕುಮಾರ್.
ನಾನು ಮತ್ತು ಸ್ನೇಹಿತರು ಸೇರಿಕೊಂಡು ಕೃಷಿ ಸಲಕರಣಿಗಳನ್ನು ಸೇಲ್ ಮಾಡುತ್ತೇವೆ. ಈಗ ನೆಮ್ಮದಿಯ ಜೀವನ ಹಾಗೂ ಕೈ ತುಂಬಾ ಆದಾಯವಿದೆ. ನಾನು ಲಗ್ನ ಪತ್ರಿಕೆಯಲ್ಲಿ ರೈತ ಎಂದು ಹಾಕಿಸಿಕೊಂಡಿರುವುದು ಜನರಿಗೆ ರೈತರು ಕಮ್ಮಿ ಅಲ್ಲ ಎಂದು ತೋರಿಸುವ ಮುಖ್ಯ ಉದ್ದೇಶದಿಂದ. ನಾನು ವಿವಾಹವಾಗುತ್ತಿರುವ ಹರ್ಷಿತ ಅವರು ಬಿ.ಕಾಂ ಓದಿದ್ದಾರೆ. ರೈತರಿಗೆ ಹೆಣ್ಣು ಸಿಗಲ್ಲ, ಓದಿರುವವರು ಮದುವೆ ಆಗಲ್ಲ ಎನ್ನುವ ಎರಡು ವಿಷಯವೂ ನನ್ನ ವಿಚಾರದಲ್ಲಿ ಸುಳ್ಳಾಗಿದೆ. ಎಂಜಿನಿಯರ್ ದುಡಿಮೆ ಟ್ಯಾಕ್ಸ್ನಲ್ಲೇ ಕಳೆದು ಹೋಗುತ್ತದೆ. ಯಾವಾಗ ಕೆಲಸದಿಂದ ತೆಗೆದುಹಾಕುತ್ತಾರೆ ಎನ್ನುವ ಗ್ಯಾರಂಟಿ ಇಲ್ಲ. ನಾವು ರೈತರು / ಕೃಷಿಕರು ಯಾವ ಸಮಯದಲ್ಲಿ ಬೇಕಾದರೂ ನಮ್ಮ ಕುಟುಂಬಕ್ಕೆ ಸಮಯ ಕೊಡಬಹುದು. ರೈತರಿಂದ ಮಾತ್ರ ಇಂದಿನ ದಿನದಲ್ಲಿ ನೆಮ್ಮದಿಯ ಜೀವನ ನಡೆಸಲು ಹಾಗೂ ಕುಟುಂಬಕ್ಕೂ ಸಮಯ ಕೊಡುವುದಕ್ಕೆ ಸಾಧ್ಯವಿದೆ.

ಗೆಳೆಯರು ಒಳ್ಳೆಯ ಕೆಲಸ ಮಾಡಿದ್ದೀಯ ಅಂತಾರೆ
ನನ್ನ ಬಹಳಷ್ಟು ಜನ ಗೆಳೆಯರು ಎಂಜಿನಿಯರ್ ಆಗಿದ್ದಾರೆ. ನನ್ನನ್ನು ನೋಡಿ, ನೀನು ತುಂಬಾ ಒಳ್ಳೆಯ ಕೆಲಸ ಮಾಡಿದ್ದೀಯ. ನೆಮ್ಮದಿಯ ಜೀವನ ನಡೆಸುತ್ತಿದ್ದೀಯ ಅಂತ ಹೇಳುತ್ತಾರೆ. ರೈತರಿಗೆ ಹೆಣ್ಣು ಕೊಡುವುದಕ್ಕೆ ಯೋಚನೆ ಮಾಡಬೇಡಿ, ರೈತರು ಹೆಣ್ಣು ಮಕ್ಕಳನ್ನು ಕಾಳಜಿಯಿಂದ ನೋಡಿಕೊಳ್ಳುತ್ತಾರೆ. ನೆಮ್ಮದಿಯಿಂದ ಬಾಳ್ವೆ ಮಾಡುತ್ತಾರೆ ಎನ್ನುವುದು ತೇಜೇಶ್ಕುಮಾರ್ ಮಾತು.
Credit: Oneindia


Click it and Unblock the Notifications








