ಲೈಫ್ ಅಂದ್ರೆ ರಿಸ್ಕ್ ಬೇಡ್ವಾ? ಭಾರತದ 16 'ಕಿಲ್ಲರ್' ರಸ್ತೆಗಳು
ನೈಸರ್ಗಿಕ ಭೂ ಪ್ರದೇಶದಿಂದ ಕೂಡಿರುವ ಭಾರತವು ಅತಿ ಹೆಚ್ಚು ಅಪಾಯವನ್ನು ಆಹ್ವಾನಿಸುವ ರಸ್ತೆಗಳಿಂದ ತುಂಬಿಕೊಂಡಿದೆ.
ದೂರ ಪ್ರಯಾಣ ಇಷ್ಟಪಡದವರು ಯಾರೂ ಇಲ್ಲ. ಅದರಲ್ಲಂತೂ ಇಂದಿನ ಯುವ ಜನಾಂಗ ಯಾವುದೇ ಪೂರ್ವ ತಯಾರಿಯಿಲ್ಲದೆ ಮನಸ್ಸಿಗೆ ತೋಚಿದಂತೆ ಗಾಡಿಯಲ್ಲಿ ಪ್ರಯಾಣ ಹೊರಡುತ್ತಾರೆ. ಹಲವು ವಿಧದ ಪ್ರಯಾಣಗಳಿದ್ದರೂ ಸಾಹಸ ಯಾತ್ರೆಯೂ ಹೆಚ್ಚು ಸ್ಮರಣೀಯ ನಿಮಷಗಳನ್ನು ನೀಡುತ್ತದೆ. ಇಲ್ಲಿ ಹಿಂದೊಮ್ಮೆ ನಡೆಸಿದ ಸಾಹಸ ಯಾತ್ರೆಯು ನಮ್ಮ ಮುಂದಿನ ಯಾತ್ರೆಗೆ ಪ್ರೇರೆಣೆಯಾಗುತ್ತದೆ. ಕಾರು, ಬೈಕ್ ಪ್ರಿಯರು ಸಾಹಸ ಯಾತ್ರೆಗಾಗಿ ಅತ್ಯಂತ ಕಠಿಣ ರಸ್ತೆಗಳನ್ನೇ ಆಯ್ಕೆ ಮಾಡುತ್ತಾರೆ. ಅಂಥವರಿಗೆ ಅಪಾಯಗಳನ್ನು ಕೈಬೀಸಿ ಕರೆಯುವುದೇ ಹವ್ಯಾಸವಾಗಿರುತ್ತದೆ. ಜೀವನದಲ್ಲಿ ರಿಸ್ಕ್ ತೆಗೆದುಕೊಳ್ಳದಿದ್ದರೇ ಅದರಲ್ಲೇನಿದೆ ಥ್ರಿಲ್ ಎಂಬುದು ಪ್ರತಿಯೊಬ್ಬ ರೈಡರ್ ಕೇಳುವ ಪ್ರಶ್ನೆಯಾಗಿದೆ. ಹೀಗೆ ಭಾರತದಲ್ಲಿ ಪಟ್ಟಿ ಮಾಡಬಹುದಾದ 16 ಅತ್ಯಂತ ಅಪಾಯಕಾರಿ ಕಿಲ್ಲರ್ ರಸ್ತೆಗಳ ಬಗ್ಗೆ ಇಲ್ಲಿ ಮಾಹಿತಿ ಕೊಡುವ ಪ್ರಯತ್ನ ಮಾಡಲಿದ್ದೇವೆ.

1. ಜೋಝಿ ಲಾ ಪಾಸ್
ಸಮುದ್ರ ಮಟ್ಟಕ್ಕಿಂತ 11,575 ಅಡಿ (3,528 ಮೀಟರ್) ಎತ್ತರದಲ್ಲಿರುವ ಜೋಝಿ ಲಾ ಪಾಸ್ ನೈಸರ್ಗಿಕ ಸುಂದರ ನಾಡು ಕಾಶ್ಮೀರದಲ್ಲಿ ಹಾದು ಹೋಗುತ್ತಿದ್ದು, ದೇಶದ ಅತ್ಯಂತ ಅಪಾಯಕಾರಿ ರಸ್ತೆಗಳಲ್ಲಿ ಒಂದನಿಸಿಕೊಂಡಿದೆ. ರಾಷ್ಟ್ರೀಯ ಹೆದ್ದಾರಿ 1ಡಿ ಶ್ರೀನಗರ ಹಾಗೂ ಲೆಹ್ ನಡುವಣ ಹಾದು ಹೋಗುವ ಇಲ್ಲಿನ ರಸ್ತೆಯಲ್ಲಿ ಪ್ರವಾಸಿಗರು ಪಶ್ಚಿಮ ಹಿಮಾಲಯ ಪ್ರದೇಶದ ರಸದೌತಣ ಸವಿಯಬಹುದಾಗಿದೆ.

ವರ್ಷದ ಬಹುತೇಕ ತಿಂಗಳಲ್ಲಿ ಮೋಟಾರು ವಾಹನ ಸಂಚಾರಕ್ಕೆ ತೆರೆದುಕೊಳ್ಳುವ ಜೋಝಿ ಲಾ ಪಾಸ್ ರಸ್ತೆಯನ್ನು ಚಳಿಗಾಲದಲ್ಲಿ ವಿಪರೀತ ಹಿಮಪಾತದ ಹಿನ್ನಲೆಯಲ್ಲಿ ಮುಚ್ಚುಗಡೆಗೊಳಿಸಲಾಗುತ್ತದೆ. ಈ ವೇಳೆ ಬಾರ್ಡರ್ ರೋಡ್ಸ್ ಓರ್ಗನೈಝೆಶನ್ (ಬಿಆರ್ ಒ) ಸಂಪೂರ್ಣ ನಿರ್ವಹಣಾ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತದೆ.

2. ನೇರಾಳ್-ಮಥೇರನ್ ರಸ್ತೆ
ಕೇವಲ 8.9 ಕೀ.ಮೀ. ದೂರದ ಹಾದಿಯನ್ನಷ್ಟೇ ಹೊಂದಿರುವ ನೇರಾಳ್-ಮಥೇರನ್ ಪರ್ವತ ಕಣಿವೆ ಹಾದಿಯು ಅತ್ಯಂತ ಕಡಿದಾದ ರಸ್ತೆಯನ್ನು ಹೊಂದಿರುವ ಹಿನ್ನೆಲೆಯಲ್ಲೇ ದೇಶದ ಅತ್ಯಂತ ಅಪಾಯಕಾರಿ ರಸ್ತೆಗಳಲ್ಲಿ ಸ್ಥಾನಗಿಟ್ಟಿಸಿಕೊಂಡಿದೆ. ಇದು ಮಹಾರಾಷ್ಟ್ರದ ರಾಯ್ಗಡ್ ಜಿಲ್ಲೆಯಲ್ಲಿ ಸ್ಥಿತಗೊಂಡಿದೆ.

ಇಲ್ಲಿನ ಕಡಿದಾದ ರಸ್ತೆಗಳು ನಿಮ್ಮ ಶಾಂತಚಿತ್ತ ಸ್ವಭಾವದ ನೈಜ ಪರೀಕ್ಷೆಯನ್ನು ನಡೆಸಲಿದೆ. ಸಮುದ್ರ ಮಟ್ಟಕ್ಕಿಂದ 800 ಅಡಿ ಎತ್ತರದಲ್ಲಿ ಸ್ಥಿತಗೊಂಡಿರುವ ಇಲ್ಲಿನ ರಸ್ತೆಗಳು ಕಡಿದಾದ ತಿರುವುಗಳಿಂದ ಕೂಡಿದ್ದು, ಸಾವಿನ ಕೂಪವನ್ನು ತೆರೆದಂತಿದೆ.

3. ರಾಷ್ಟ್ರೀಯ ಹೆದ್ದಾರಿ 22
'ನರಕಕ್ಕಿರುವ ಹೆದ್ದಾರಿ' ಎಂದೇ ಅಪಖ್ಯಾತಿಯನ್ನು ಪಡೆದಿರುವ ರಾಷ್ಟ್ರೀಯ ಹೆದ್ದಾರಿ 22 ಕಣಿವೆ ಪ್ರದೇಶದಲ್ಲಾಗಿ ಸಾಗುತ್ತಿದ್ದು, ಅತಿ ಹೆಚ್ಚು ಅಪಾಯವನ್ನು ಆಹ್ವಾನಿಸುತ್ತದೆ. ಪರ್ವತಗಳ ಮಧ್ಯ ಭಾಗದಲ್ಲಿ ಕೊಚ್ಚಿಕೊಂಡು ಈ ಹಾದಿಯನ್ನು ನಿರ್ಮಿಸಲಾಗಿದೆ. ಕಳಪೆ ಸೇತುವೆ, ಸುರಂಗ ಮಾರ್ಗ, ಬಿಡುವಿಲ್ಲದ ವಾಹನ ದಟ್ಟಣೆ ಮತ್ತು ಕೆಟ್ಟ ರಸ್ತೆ ಪರಿಸ್ಥಿತಿ ಹಾಗೂ ನಿರ್ವಹಣೆಗಳು ಸಾವನ್ನು ಮತ್ತಷ್ಟು ಹತ್ತಿರಕ್ಕೆ ಕರೆದೊಯ್ಯುತ್ತದೆ.

459 ಕೀ.ಮೀ. ದೂರದ ವರೆಗೂ ಹರಡಿರುವ ರಾಷ್ಟ್ರೀಯ ಹೆದ್ದಾರಿ 22, ಹರಿಯಾಣದ ಅಂಬಲ ಜಿಲ್ಲೆಯಿಂದ ಆರಂಭಿಸಿ, ಕಲ್ಕ, ಪಂಚಕುಲ ಜಿಲ್ಲೆ ಮಾರ್ಗವಾಗಿ ಕಡಿದಾದ ಹೇರ್ ಪಿನ್ ತಿರುವುಗಳನ್ನು ಒಳಗೊಂಡಿರುವ ಪರ್ವತ ಶ್ರೇಣಿಯನ್ನು ತಲುಪುತ್ತದೆ. ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲಿ ಇಲ್ಲಿನ ರಸ್ತೆಗಳಲ್ಲಿ ಸಂಚರಿಸಲೇ ಬಾರದು.

4. ಚಾಂಗ್ ಲಾ
ಚಾಂಗ್ ಲಾ ಲಡಾಕ್ ಕಣಿಮೆ ಪ್ರದೇಶದಲ್ಲಿ ಚಾಂಗ್ ಲಾ ಹಾದಿ ಸ್ಥಿತಗೊಂಡಿದ್ದು, ಸಮುದ್ರ ಮಟ್ಟಕ್ಕಿಂತಲೂ 5,360 ಮೀಟರ್ (17,590 ಅಡಿ) ಎತ್ತರದಲ್ಲಿದೆ. ಇದು ಜಗತ್ತಿನ ಮೂರನೇ ಅತಿದೊಡ್ಡ ವಾಹನ ಸಂಚರಿಸಬಹುದಾದ ರಸ್ತೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ವರ್ಷದುದ್ಧಕ್ಕೂ ಮಂಜಿನಿಂದ ಆವೃತ್ತವಾಗಿರುವ ಈ ರಸ್ತೆಯಲ್ಲಿ ನೆರೆಯ ಚೀನಾ ಅಪಾಯದ ಹಿನ್ನೆಲೆಯಲ್ಲಿ ಭಾರತೀಯ ಸೇನೆಯ ರಕ್ಷಣೆ ಹಾಗೂ ನಿರ್ವಹಣೆಯಲ್ಲಿದೆ. ಅಲ್ಲದೆ ವಿಪರೀತ ಹಿಮಪಾತವುಂಟಾದಾಗ ರಸ್ತೆಯನ್ನು ಸಂಪೂರ್ಣವಾಗಿ ಮುಚ್ಚುಗಡೆಗೊಳಿಸಲಾಗುತ್ತದೆ. ಪ್ರಸ್ತುತ ರಸ್ತೆ ಪಾಗೊಂಗ್ ಲೇಕ್ ನಿಂದ ಲೇಹ್ ವರೆಗೆ 134 ಕೀ.ಮೀ. ದೂರದ ವರೆಗೂ ಹರಡಿದೆ. ಅತಿಯಾದ ಚಳಿ ಹಿನ್ನಲೆಯಲ್ಲಿ ಉಸಿರಾಟಕ್ಕೂ ತೊಂದರೆಯಾಗಲಿದ್ದು ಇಲ್ಲಿ ಸಂಚರಿಸುವ ಸಾಹಸ ಯಾತ್ರಿಕರು ವೈದ್ಯಕೀಯ ಕಿಟ್ ಜೊತೆಗೆ ಒಯ್ಯುವುದು ಅತ್ಯಾವಶ್ಯಕವಾಗಿದೆ.

05. ಲೇಹ್ ಮನಾಲಿ ಹೆದ್ದಾರಿ
ಹಿಮಾಚಲ ಪ್ರದೇಶದಲ್ಲಿ ಸ್ಥಿತಗೊಂಡಿರುವ ಲೇಹ್-ಮನಾಲಿ ದೇಶದ ಅತ್ಯಂತ ಎತ್ತರದ ಪರ್ವತ ಕಣಿವೆ ಮಾರ್ಗಗಳಲ್ಲಿ ಒಂದಾಗಿದ್ದು, 479 ಕೀ.ಮೀ. (298 ಮೈಲ್) ದೂರದ ವರೆಗೂ ಹರಡಿದೆ. ಬೇಸಿಗೆಯಲ್ಲಿ ವರ್ಷದಲ್ಲಿ ನಾಲ್ಕು ವರೆ ತಿಂಗಳು ಮಾತ್ರ (ಮೇ ಅಥವಾ ಜೂನ್) ತೆರೆದುಕೊಳ್ಳುವ ಈ ಮಾರ್ಗವು ಲಡಾಕ್ನ ಲೇಹ್ನಿಂದ ಹಿಮಾಚಲ ಪ್ರದೇಶದ ಮನಾಲಿ ಪ್ರದೇಶವನ್ನು ಸಂಪರ್ಕಿಸುತ್ತದೆ. ಅಕ್ಟೋಬರ್ ತಿಂಗಳಲ್ಲಿ ವಿಪರೀತ ಹಿಮಪಾತವು ಇಲ್ಲಿನ ರಸ್ತೆಗೆ ತಡೆಯನ್ನುಂಟು ಮಾಡುತ್ತದೆ.

ಲೇಹ್ ಮನಾಲಿ ಹೆದ್ದಾರಿ
ಅನಿಶ್ಚಿತ ಹವಾಮಾನ ಪರಿಸ್ಥಿತಿ, ಅತಿಯಾದ ಚಳಿ, ಉಸಿರಾಟಕ್ಕೆ ತೊಂದರೆ, ಕಡಿದಾದ ರಸ್ತೆಗಳಿಂದ ಕೂಡಿದ ಲೇಹ್ ಮನಾಲಿ ಹೆದ್ದಾರಿಯು ನಿರ್ವಹಣೆಯ ಜವಾಬ್ದಾರಿಯನ್ನು ಭಾರತೀಯ ಸೇನೆಯ ಬಾರ್ಡರ್ ರೋಡ್ಸ್ ಆರ್ಗನೈಷನ್ ವಹಿಸಿಕೊಂಡಿದೆ.

06. ಮುನ್ನಾರ್ ರೋಡ್
ನೇರಾಳ್-ಮಥೇರನ್ ತರಹನೇ ಕೇರಳದ ಮುನ್ನಾರ್ ನಲ್ಲಿರುವ ರಸ್ತೆಯು ಅತ್ಯಂತ ಕಡಿದಾದ ತಿರುಗು ಇಳಿಜಾರಿನಿಂದ ಕೂಡಿದೆ. ರಸ್ತೆಯ ಬದಿಯಲ್ಲಿ ಹರಡಿರುವ ಇಲ್ಲಿನ ತಾಜಾ ಕಾಫಿ ತೋಟಗಳು ಪ್ರವಾಸಿಗರನ್ನು ಕೈಬೀಸಿ ಕರೆಯಲಿದೆ. ಆದರೆ ಅಸಭ್ಯ ವರ್ತನೆಯ ಚಾಲಕರಿಂದಾಗಿ ಹೆಚ್ಚಿನ ಅಪಘಾತಗಳು ಸಂಭವಿಸುತ್ತದೆ.

130 ಕೀ.ಮೀ. ದೂರದ ವರೆಗೆ ವ್ಯಾಪಿಸಿರುವ ಮುನ್ನಾರ್ ರೋಡ್ ನಲ್ಲಿ ನೈಸರ್ಗಿಕ ಅರಣ್ಯದ ಜೊತೆಗೆ ಜಲಪಾತದ ಸೊಗಸನ್ನು ಆನಂದಿಸಬಹುದಾಗಿದೆ. ಪಶ್ಚಿಮ ಘಟ್ಟದ ಭಾಗವಾಗಿರುವ ಮುನ್ನಾರ್, ಸಮುದ್ರ ಮಟ್ಟಕ್ಕಿಂತ 1700 ಮೀಟರ್ ಎತ್ತರದಲ್ಲಿ ಸ್ಥಿತಗೊಂಡಿದೆ.

07. ಮೂರು ಹಂತದ ಝಿಗ್ ಝಾಗ್ ರಸ್ತೆ
ಸಿಕ್ಕಿಂನಲ್ಲಿರುವ ಈ ಮೂರು ಹಂತದ ಸುಳಿಯಾಕಾರದ ರಸ್ತೆ ಅತ್ಯಂತ ದೃಶ್ಯ ವಿಸ್ಮಯಯವನ್ನು ನೀಡುತ್ತದೆ. ಇದು ಸಮುದ್ರ ಮಟ್ಟಕ್ಕಿಂತ 11,200 ಅಡಿ ಎತ್ತರದಲ್ಲಿ ಸ್ಥಿತಗೊಂಡಿದ್ದು, ಹಿಮಾಲಯದ ಅದ್ಭುತ ದರ್ಶನವನ್ನು ನೀಡುತ್ತದೆ.

ಪ್ರಾಯಶ: ಇಲ್ಲಿ ಸಂಚರಿಸುವ ಬಹುತೇಕ ಸವಾರರಿಗೆ ತಲೆ ಸುತ್ತು ಬರಿಸುವುದು ಗ್ಯಾರಂಟಿ. ಹಾಗಾಗಿ ನಿಮ್ಮ ಮನೋಬಲ ಗಟ್ಟಿಯಾಗಿದ್ದಲ್ಲಿ ಮಾತ್ರ ಇಲ್ಲಿ ಸಾಹಸಕ್ಕೆ ಮುಂದಾಗಬಹುದಾಗಿದೆ. ಕೇವಲ 30 ಕೀ.ಮೀ. ದೂರದ ಇಲ್ಲಿನ ರಸ್ತೆಯಲ್ಲಿ 100ರಷ್ಟು ಕಡಿದಾದ ಹೇರ್ ಪಿನ್ ತಿರುಗುವುಗಳಿಂದ ಆವೃತ್ತವಾಗಿದೆ.

08. ಖರ್ದುಂಗ್ ಲಾ ಪಾಸ್
ಜಮ್ಮು ಮತ್ತು ಕಾಶ್ಮೀರದ ಲಡಾಕ್ ಕಣಿವ ಪ್ರದೇಶದಲ್ಲಿ ಸಮುದ್ರ ಮಟ್ಟಕ್ಕಿಂತ 5359 ಮೀಟರ್ ಎತ್ತರದಲ್ಲಿ ಖರ್ದುಂಗ್ ಲಾ ಪಾಸ್ ಸ್ಥಿತಗೊಂಡಿದೆ. ಇದನ್ನು 1988ನೇ ಇಸವಿಯಲ್ಲಿ ಮೋಟಾರು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು.

ಭಾರತೀಯ ಸೇನೆಯ ಬಾರ್ಡರ್ ರೋಡ್ಸ್ ಆರ್ಗನೈಷನ್ ನಿಂದ ನಿರ್ವಹಿಸಲ್ಪಡುತ್ತಿರುವ ಖರ್ದುಂಗ್ ಲಾ ಪಾಸ್, ಪ್ರಪಂಚದ ಅತ್ಯಂತ ಎತ್ತರದ ಯುದ್ಧ ಭೂಮಿ ಸಿಯಾಚಿನ್ ಗ್ಲೇಸಿಯರ್ ಗೆ ಭಾರತೀಯ ಸೇನೆಯನ್ನು ರವಾನಿಸಲು ಬಳಕೆ ಮಾಡಲಾಗುತ್ತದೆ. ಇತಿಹಾಸದಲ್ಲೂ ಖರ್ದುಂಗ್ ಲಾ ಪಾಸ್ ಅತಿ ಪ್ರಾಮುಖ್ಯವೆನಿಸುತ್ತಿದ್ದು, ವಾರ್ಷಿಕವಾಗಿ 10,000ದಷ್ಟು ಕುದುರೆ ಮತ್ತು ಒಂಟೆಗಳನ್ನು ಕಾರಾವ್ಯಾನ್ ಹಾದಿ ಮೂಲಕ ಲೇಹ್ ನಿಂದ ಕೇಂದ್ರ ಏಷ್ಯಾದ ಕ್ಯಾಶ್ ಗರ್ ಗೆ ಸಾಗಿಸಲಾಗುತ್ತಿತ್ತು.

9. ಕಿಶ್ತ್ವಾರ್-ಕೈಲಾಸ್ ರಸ್ತೆ
ಭಯಾನಕ ಪರ್ವತ ಕಣಿವೆಯಿಂದ ದುಸ್ತರವಾಗಿರುವ ಕಿಶ್ತ್ವಾರ್-ಕೈಲಾಸ್ ರಸ್ತೆ 234 ಕೀ.ಮೀ. ದೂರದ ವರೆಗೂ ಹರಡಿದೆ. ರಾಷ್ಟ್ರೀಯ ಹೆದ್ದಾರಿ 26ರ ಭಾಗವಾಗಿರುವ ಇಲ್ಲಿನ ಪರ್ವತ ಅಂಚನ್ನು ನೋಡಿದಾಗ ದಿಕ್ಕುಗೆಡಿಸುತ್ತದೆ. ಇನ್ನು ಕಳಕ್ಕೆ ನೋಡಿದರೆ ಆಳವಾದ ಪ್ರಪಾತಗಳು ಮೈ ಜುಮ್ ಎನ್ನಿಸಲಿದೆ.

ಪ್ರಬಲವಾಗಿ ಬೀಸುವ ಗಾಳಿ, ಗುಡ್ಡ ಹಾಗೂ ಮಣ್ಣು ಜರಿತಗಳು ನಿಮ್ಮ ಪ್ರಯಾಣಕ್ಕೆ ನೈಜ ಸವಾಲನ್ನು ಒಡ್ಡಲಿದ್ದು, ಸಾವನ್ನೇ ಗೆದ್ದು ಬರಬೇಕಿದೆ. ರಸ್ತೆಯ ಎಡ ಅಂಚಿನಲ್ಲಿ ಸ್ವಲ್ಪನೂ ಯಾಮರಿದರೆ ಸಾವು ಖಚಿತ. ಸಮುದ್ರ ಮಟ್ಟಕ್ಕಿಂತ 3080 ಮೀಟರ್ ಎತ್ತರದಲ್ಲಿರುವ ಇಲ್ಲಿನ ಕಣಿವೆಗಳಲ್ಲಿ ಉಸಿರಾಟ ತೊಂದರೆಯು ಎದುರಾಗಲಿದೆ.

10. ರಾಜ್ ಮಾಚಿ ರಸ್ತೆ
ಅಪ್ಪಟ ಆಫ್ ರೋಡ್ ಚಾಲಕರಿಗೆ ಮಣ್ಣು, ಜಲ್ಲಿ, ಕಲ್ಲುಗಳಿಂದ ಕೂಡಿದ ಸಹ್ಯಾದ್ರಿ ಪರ್ವತ ಕಣಿವೆಯಲ್ಲಿ ಹಾದು ಹೋಗುವ ರಾಜ್ ಮಾಚಿ ರಸ್ತೆ ಕೈಬೀಸಿ ಕರೆಯಲಿದೆ. ಶ್ರೀವರ್ಧನ್ ಕೋಟೆ ಮತ್ತು ಮನರಂಜನ ಕೋಟೆಗೆ ಹಾದು ಹೋಗುವ ರಸ್ತೆಗಳು ಕಡಿದಾದ ತಿರುವುಗಳಿಂದ ಆವೃತ್ತವಾಗಿದೆ.

ಮಳೆಗಾಲದಲ್ಲಿ ಜಲಪಾತವಾಗುವುದರಿಂದ ಇಲ್ಲಿನ ಹಾದಿಗಳು ಮತ್ತಷ್ಟು ಕಠಿಣವೆನಿಸುತ್ತದೆ. ಹಸಿರು ಹುಲ್ಲುಹಾಸಿನ ಹಾಗೆ ಇದ್ದರೂ ಜಾರುವ ರಸ್ತೆಗಳ ಬಗ್ಗೆ ಬಹಳ ಜಾಗರೂಕರಾಗಿ ಗಾಡಿ ಓಡಿಸಬೇಕಾಗುತ್ತದೆ.

11. ಕಿನ್ನೌರ್ ರಸ್ತೆ
ಕಿನ್ನೌರ್ ರಸ್ತೆ ಹಿಮಾಚಲ ಪ್ರದೇಶದಲ್ಲಿ ಹಾದು ಹೋಗುತ್ತಿರುವ ಮಗದೊಂದು ನೈಸರ್ಗಿಕ ಸುಂದರವಾದ ರಸ್ತೆಯಾಗಿದೆ. ಬಾಸ್ಪಾ ನದಿಯು ಇದರ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ.

ಬಲಿಷ್ಠವಾದ ಬಂಡೆಕಲ್ಲುಗಳನ್ನು ಕೆತ್ತುವ ಮೂಲಕ ಇಲ್ಲಿನ ರಸ್ತೆಗಳನ್ನು ಸಂಚಾರ ಯೋಗ್ಯವಾಗಿಸಲಾಗಿದೆ. ಸಮುದ್ರ ಮಟ್ಟಕ್ಕಿಂತ 4000 ಮೀಟರ್ ಎತ್ತರದಲ್ಲಿ ಇಲ್ಲಿನ ರಸ್ತೆಗಳು ಸ್ಥಿತಗೊಂಡಿದೆ. ಡಿಸೆಂಬರ್ ನಿಂದ ಮೇ ವರೆಗಿನ ಚಳಿಗಾಲದ ಕಾಲಘಟ್ಟದಲ್ಲಿ ಅತಿಯಾದ ಹಿಮಪಾತದ ಹಿನ್ನಲೆಯಲ್ಲಿ ರಸ್ತೆಗಳನ್ನು ಮುಚ್ಚುಗಡೆಗೊಳಿಸುತ್ತದೆ.

12. ನಾಥು ಲಾ ಪಾಸ್
ಸಮುದ್ರ ಮಟ್ಟಕ್ಕಿಂತ 4310 ಮೀಟರ್ ಎತ್ತರದಲ್ಲಿ ಭಾರತ ಮತ್ತು ಚೀನಾ ಗಡಿ ಭಾಗದ ಹಿಮಾಲಯ ಪರ್ವತ ಕಣಿವೆ ಪ್ರದೇಶದಲ್ಲಿ ನಾಥು ಲಾ ಪಾಸ್ ಹಾದು ಹೋಗುತ್ತದೆ. ಇದು ಮೋಟಾರು ವಾಹನ ಸಂಚರಿಸಬಹುದಾದ ಜಗತ್ತಿನ ಅತ್ಯಂತ ಎತ್ತರದ ಪ್ರದೇಶಗಳಲ್ಲಿ ಒಂದಾಗಿದೆ.

ಭಾರತದ ಸಿಕ್ಕಿನಿಂದ ಚೀನಾ ಅಧೀನತೆಯಲ್ಲಿರುವ ಟಿಬೆಟ್ ವರೆಗೂ ಹಾದಿ ಕಲ್ಪಿಸಿಕೊಟ್ಟಿದೆ. ಇಲ್ಲಿನ ರಸ್ತೆಗಳಲ್ಲಿ ಸಂಚರಿಸಲು ಪ್ರವಾಸ ಇಲಾಖೆಯ ವಿಶೇಷ ಪರವಾನಗಿಯ ಅಗತ್ಯವಿರುತ್ತದೆ. ವಿದೇಶಿಯರಿಗೆ ನಾಥುಲಾ ಪ್ರದೇಶಕ್ಕೆ ಭೇಟಿ ಕೊಡಲು ಅವಕಾಶವಿರುವುದಿಲ್ಲ. ಅಷ್ಟೇ ಯಾಕೆ ಛಾಯಾಗ್ರಹಣ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಜಗತ್ತಿನ ಅತಿ ಎತ್ತರದಲ್ಲಿ ಸ್ಥಿತಗೊಂಡಿರುವ ಎಟಿಎಂ ಮೆಷಿನ್ ಕೂಡಾ ಇಲ್ಲಿದೆ.

13. ವಲ್ಪಾರಾಯ್ ತಿರುಪತಿ ಘಾಟಿ
ತಿರುಪತಿಯಿಂದ ತಿರುಮಲದಲ್ಲಿರುವ ವಿಶ್ವ ಪ್ರಸಿದ್ಧ ಶ್ರೀ ವೆಂಕೇಟೇಶ್ವರ ದೇವಸ್ಥಾನಕ್ಕೆ ಭೇಟಿ ಕೊಡುವ ಪ್ರತಿಯೊಬ್ಬ ಭಕ್ತನಿಗೂ ಇಲ್ಲಿನ ಕಡಿದಾದ ರಸ್ತೆಗಳ ಅನುಭವವಾಗಿರಬಹುದು.

ವಲ್ಪಾರಾಯ್ ತಿರುಪತಿ ಘಾಟಿ
ಅರಣ್ಯ ಪ್ರದೇಶದಿಂದ ಆವೃತ್ತವಾದ ಇಲ್ಲಿನ ರಸ್ತೆಗಳು ಕಡಿದಾದ ತಿರುವುಗಳಿಂದ ಕೂಡಿದ್ದು, ಚಾಲಕರು ಬಹಳಷ್ಟು ಎಚ್ಚರದಿಂದ ವಾಹನ ಓಡಿಸಬೇಕಿದೆ. ಮಳೆ ಸುರಿದಾಗ ಮಾತ್ರ ದ್ವಿಚಕ್ರ ವಾಹನ ಸವಾರರಿಗೆ ಹೆಚ್ಚಿನ ಅಪಾಯ ಎದುರಾಗಲಿದೆ.

14. ಘಾಟಾ ಲೂಪ್ಸ್
ಲೇಹ್-ಮನಾಲಿ ಹಾದಿಯಲ್ಲಿ ಸಂಚರಿಸುವಾಗ ಬೆನ್ನು ಬೆನ್ನಿಗೆ 21 ಅತ್ಯಂತ ಅಪಾಯಕಾರಿ ತಿರುಗುವುಗಳು ಎದುರಾಗಲಿದೆ. ಇಲ್ಲಿ ಸಂಭವಿಸಿದ ಅವಘಡದಲ್ಲಿ ಸಾವನ್ನಪ್ಪಿದ ಪ್ರವಾಸಿಗರ ಆತ್ಮಗಳು ಈಗಲೂ ಇಲ್ಲಿ ಅಲೆದಾಡುತ್ತಿದೆಯೆಂಬ ಕಟ್ಟುಕಥೆಯಿದೆ.

ಮತ್ತಷ್ಟು ಆಶ್ಚರ್ಯಕರ ಘಟನೆಯೆಂದರೆ ಈ ಹಾದಿಯಾಗಿ ತೆರಳುವ ಪ್ರವಾಸಿಗರು ಆತ್ಮಗಳ ಸಂತೃಪ್ತಿಗಾಗಿ ಸಿಗರೇಟ್ ಮತ್ತು ನೀರಿನ ಬಾಟಲಿಗಳನ್ನು ಅರ್ಪಿಸುತ್ತಾರೆ. ಈ ಆಚಾರವನ್ನು ನಂಬುವುದು ಬಿಡುವುದು ನಿಮಗೆ ಬಿಟ್ಟಿದ್ದು? ಆದರೆ ಪ್ರಾಣ ಭಯದಿಂದ ಯಾರು ಕೂಡಾ ಕಟ್ಟಾಳೆಗಳನ್ನು ಬೇಧಿಸುವ ಪ್ರಯತ್ನಕ್ಕೆ ಮುಂದಾಗುವುದಿಲ್ಲ.

15. ಮುಂಬೈ-ಪುಣೆ ಎಕ್ಸ್ಪ್ರೆಸ್ವೇ
ದೇಶದ ಅತ್ಯಂತ ಪ್ರಸಿದ್ಧ ರಸ್ತೆ ಮಾರ್ಗಗಳಲ್ಲಿ ಒಂದಾಗಿರುವ ಮುಂಬೈ-ಪುಣೆ ಎಕ್ಸ್ಪ್ರೆಸ್ವೇ ಭಾರತದ ಮೊದಲ ಹೈ ಸ್ಪೀಡ್, ಆರು ಹಾದಿಯ ಕಾಂಕ್ರೀಟ್ ಹೈ ಸ್ಪೀಡ್ ರಸ್ತೆಯಾಗಿದ್ದು, ವೇಗವನ್ನು ಇಷ್ಟಪಡುವ ಕಾರು ಚಾಲಕರನ್ನು ಕೈಬೀಸಿ ಕರೆಯುತ್ತಿದೆ.

93 ಕೀ.ಮೀ. ಉದ್ದದ ಈ ಹೈ ಸ್ಪೀಡ್ ರಸ್ತೆಯು ವಾಣಿಜ್ಯ ನಗರಿ ಮುಂಬೈ ಹಾಗೂ ಕೈಗಾರಿಕಾ ನಗರಿ ಪುಣೆಯನ್ನು ಸಂಪರ್ಕಿಸುತ್ತದೆ. ಮಣ್ಣು ಜರಿತ ಮತ್ತು ಅಜಾಗರೂಕ ಹಾಗೂ ಅಪ್ರಾಪ್ತ ಚಾಲಕರಿಂದಾಗಿ ಈ ಹೆದ್ದಾರಿ ಅತ್ಯಂತ ಅಪಾಯಕಾರಿ ಎನಿಸಿಕೊಂಡಿದೆ. ಅವಸರವೇ ಅಪಘಾತಕ್ಕೆ ಕಾರಣ ಎಂಬುದಿಲ್ಲಿ ಉಲ್ಲೇಖವಾಗಿದೆ.

16. ಕಿಲ್ಲರ್ - ಕಿಸ್ತಾವರ್
ಚಾಲನೆಯಲ್ಲಿ ಅತೀವ ಜಾಗ್ರತೆ ಮತ್ತು ಕೌಶಲ್ಯವಿದ್ದರೆ ಮಾತ್ರ ನೀವು ಈ ಹಾದಿಯಲ್ಲಿ ಮುಂದುವರಿಯಬಹುದು. ಕಿರಿದಾದ ರಸ್ತೆಗಳಾಗಿರುವುದರಿಂದ ಚಾಲನೆಯಿಂದ ಸ್ವಲ್ಪನೂ ಗಮನ ತಪ್ಪಿದರೆ ಅಪಘಾತ ಕಟ್ಟಿಟ್ಟ ಬುತ್ತಿ.

ಕಿಲ್ಲರ್ - ಕಿಸ್ತಾವರ್ ರಸ್ತೆಗಳಲ್ಲಿ ಸಂಚರಿಸಲು ನಿರ್ಭೀತ ಸಾಹಸಿಗಳಿಂದ ಮಾತ್ರ ಸಾಧ್ಯ. ಭಾರತದ ನೈಸರ್ಗಿಕ ಪ್ರಕೃತಿ ದರ್ಶನದ ಅಮೋಘ ಸೌಂದರ್ಯವನ್ನು ಸವಿಯಬಹುದಾಗಿದೆ.

ಇವನ್ನೂ ಓದಿ
01. ಭಾಗ 1: ಅತ್ಯಂತ ಅಪಾಯಕಾರಿ 15 ರಸ್ತೆಗಳು
02. 'ಸಾವಿನ ರಸ್ತೆ' - ಇದುವೇ ವಿಶ್ವದ ಅತ್ಯಂತ ಅಪಾಯಕಾರಿ ರಸ್ತೆ!
03. ನೀವು ನೋಡಿರದ ಅದ್ಭುತಗಳಲ್ಲಿ ಅತಿ ಅದ್ಭುತ ರಸ್ತೆ ಸೇತುವೆಗಳಿವು


Click it and Unblock the Notifications








