ABS: ಪ್ರಾಣ ರಕ್ಷಕವಿದು.. ಇದರ ಸಾಧಕ ಬಾಧಕಗಳೇನು, ಪಿನ್ ಟು ಪಿನ್ ಮಾಹಿತಿ!
ಭಾರತದಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ದಿನದಿಂದ ದಿನಕ್ಕೆ ವಿಪರೀತವಾಗಿ ಹೆಚ್ಚಳವಾಗುತ್ತಿದೆ. ಇದಕ್ಕೆ ಕರ್ನಾಟಕ ಸಹ ಹೊರತಾಗಿಲ್ಲ. ಕಳೆದ 6 ವರ್ಷಗಳಲ್ಲಿ 2.13 ಲಕ್ಷ ರಸ್ತೆ ಅಪಘಾತಗಳಾಗಿದ್ದು, 60 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಹಲವರು ಗಂಭೀರವಾಗಿಯೂ ಗಾಯಗೊಂಡಿದ್ದಾರೆ. ದ್ವಿಚಕ್ರ ವಾಹನಗಳಿಂದ ನಡೆಯುವ ಅಪಘಾತಗಳಿಂದಲೇ ಹೆಚ್ಚಿನ ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ, ಬೈಕ್ ಹಾಗೂ ಸ್ಕೂಟರ್ ಸವಾರರ ಸುರಕ್ಷತೆಗಾಗಿ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಎಂಬುದು ತೀರಾ ಅಗತ್ಯವಾಗಿದೆ. ನಾವಿಲ್ಲಿ, ಇದರ ಸಾಧಕ ಬಾಧಕಗಳ ಕುರಿತಂತೆ ಸಂಪೂರ್ಣವಾಗಿ ವಿವರಿಸಿದ್ದೇವೆ.
ಎಬಿಎಸ್ (ABS) ಉಪಯೋಗವೇನು:
ಎಬಿಎಸ್ ಎಂಬುದು ಜೀವರಕ್ಷಕ ಸುರಕ್ಷತಾ ವೈಶಿಷ್ಟ್ಯವಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ದ್ವಿಚಕ್ರ ವಾಹನಗಳನ್ನು ಚಲಾಯಿಸುವ ಅಚಾನಕ್ ಆಗಿ ಬ್ರೇಕ್ ಹಾಕಿದಾಗ, ವೀಲ್ ಲಾಕ್ ಆಗುವುದನ್ನು ತಪ್ಪಿಸುತ್ತಿದೆ. ವಾಹನದ ಮೇಲೆ ಪೂರ್ತಿ ಹಿಡಿತ ಸಾಧಿಸಲು ನೆರವಾಗಲಿದೆ. ಸ್ಕಿಡ್ ಆಗುವುದನ್ನು ತಡೆಗಟ್ಟುತ್ತದೆ. ಇದೊಂದಿದ್ದರೆ ಅಪಘಾತವಾಗುವ ಸಾಧ್ಯತೆಯೂ ತೀರಾ ವಿರಳವೆಂದು ನುರಿತವರು ಹೇಳುತ್ತಾರೆ.

ಎಬಿಎಸ್ ವಿಧಗಳೇನು, ಯಾವುದು ಉತ್ತಮ:
ಇದನ್ನು ಎರಡು ರೂಪದಲ್ಲಿ ವಿಂಗಡಿಸಲಾಗದೆ. ಅವುಗಳೆಂದರೆ, ಸಿಂಗಲ್ ಚಾನೆಲ್ ಎಬಿಎಸ್ ಹಾಗೂ ಡುಯಲ್ ಚಾನೆಲ್ ಎಬಿಎಸ್ ಎಂದು. ಬಹುತೇಕ ಸ್ಕೂಟರ್ & ಮೋಟಾರ್ಸೈಕಲ್ಗಳು ಮುಂಭಾಗ (ಫ್ರಂಟ್) ಮಾತ್ರ ಡಿಸ್ಕ್ ಬ್ರೇಕ್ನ್ನು ಹೊಂದಿರುತ್ತವೆ. ಸವಾರರು ಅದನ್ನು ಬಳಕೆ ಮಾಡಲು ಸ್ವಲ್ಪ ಮಟ್ಟಿಗೆ ಹೆದರುತ್ತಾರೆ. ಜೊತೆಗೆ ಹಿಂಭಾಗದ (ರೇರ್) ಬ್ರೇಕ್ನ್ನೇ ಅವಲಂಭಿಸಿರುತ್ತಾರೆ.
ವಿಶೇಷವಾಗಿ ಸಿಂಗಲ್ ಚಾನೆಲ್ ಎಬಿಎಸ್ನ್ನು ಮುಂದಿರುವ ವೀಲ್ನಲ್ಲಿ ನೀಡಲಾಗಿರುತ್ತದೆ. ಇದು ಹೆಚ್ಚಿನ ಸಂದರ್ಭದಲ್ಲಿ ಉಪಯೋಗಕ್ಕೆ ಬರುವುದಿಲ್ಲ. ಮುಂದಿನ ಹಾಗೂ ಹಿಂದಿನ ವೀಲ್ಗಳೆರಡರಲ್ಲೂ ಡುಯಲ್ ಚಾನೆಲ್ ಎಬಿಎಸ್ ಇದ್ದರೆ ತುಂಬಾ ಚೆನ್ನಾಗಿ ಪ್ರಯೋಜನಕ್ಕೆ ಬರುತ್ತದೆ ಎಂದು ಹೇಳಬಹುದು.

ಟಿಸಿಎಸ್ ಕೂಡ ಪ್ರಾಣ ರಕ್ಷಕ:
ಅನಿರೀಕ್ಷಿತ ಸನ್ನಿವೇಶಗಳಲ್ಲಿ ಎಬಿಎಸ್ನೊಂದಿಗೆ ಟಿಸಿಎಸ್ (ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್) ಸುರಕ್ಷತಾ ವೈಶಿಷ್ಟ್ಯವು ಕೂಡ ದ್ವಿಚಕ್ರ ವಾಹನ ಸವಾರರ ಜೀವ ಉಳಿಸಬಲ್ಲದು. ಇದು ರಸ್ತೆಯ ಮೇಲೆ ಗಟ್ಟಿ & ಬಿಗಿಯಾದ ಹಿಡಿತ ಒದಗಿಸಲು ನೆರವಾಗುತ್ತದೆ. ವಾಹನವು ಹೆಚ್ಚಿನ ವೇಗದಲ್ಲಿರುವಾಗ ನಿಯಂತ್ರಣ ಕಳೆದುಕೊಳ್ಳವುದಿಲ್ಲ. ಮಳೆಗಾಲದಲ್ಲೂ ಸಹಾಯಕವಾಗಬಲ್ಲದು.
ಅಗ್ಗದ ಸಿಬಿಎಸ್ ಬಳಕೆಯೂ ಹೆಚ್ಚು ಪ್ರಯೋಜನಕಾರಿ:
ಎಬಿಎಸ್ ಸುರಕ್ಷತಾ ವೈಶಿಷ್ಟ್ಯ ಹೊಂದಿರುವ ದ್ವಿಚಕ್ರ ವಾಹನಗಳ ಬೆಲೆ ಹೆಚ್ಚಿರುತ್ತದೆ. ಆದರೆ, ಸಿಬಿಎಸ್ (ಕಾಂಬಿ ಬ್ರೇಕಿಂಗ್ ಸಿಸ್ಟಮ್) ಒಳಗೊಂಡಿರುವ ಬೈಕ್ ಹಾಗೂ ಸ್ಕೂಟರ್ಗಳ ಬೆಲೆಯು ತುಸು ಕಡಿಮೆಯಿದೆ. ಸಿಬಿಎಸ್ ಎಂಬುದು ಬ್ರೇಕ್ ಹಾಕಿದಾಗ ಏಕಕಾಲದಲ್ಲಿ ಎರಡು ವೀಲ್ಗಳನ್ನು ನಿಯಂತ್ರಣಕ್ಕೆ ತರುತ್ತದೆ. ಇದರೊಂದಿಗೆ ದ್ವಿಚಕ್ರ ವಾಹನಗಳ ವೇಗವನ್ನು ಹತೋಟಿಗೆ ತರುತ್ತದೆ.
ಭಾರತದಲ್ಲಿ ಎಬಿಎಸ್ ಬಳಕೆ ಏನು, ಎತ್ತ:
ಪ್ರಸ್ತುತ ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ 125-ಸಿಸಿಗಿಂತ ಹೆಚ್ಚಿನ ಸಾಮರ್ಥ್ಯವಿರುವ ಎಂಜಿನ್ ಒಳಗೊಂಡಿರುವ ಎಲ್ಲ ವಿಧದ ಸ್ಕೂಟರ್ ಹಾಗೂ ಮೋಟಾರ್ಸೈಕಲ್ಗಳಲ್ಲಿ ಎಬಿಎಸ್ ಕಡ್ಡಾಯಗೊಳಿಸಲಾಗಿದೆ. ಆದರೂ ಶೇಕಡ 40% ದ್ವಿಚಕ್ರ ವಾಹನಗಳು ಈ ಸೌಲಭ್ಯವಿಲ್ಲ. 2026ರ ಜನವರಿ 1ರಿಂದ ಪ್ರತಿಯೊಂದು ಬೈಕ್ ಮತ್ತು ಸ್ಕೂಟರ್ಗಳು ಎಬಿಎಸ್ ಹೊಂದಿರಬೇಕೆಂದು ಕೇಂದ್ರ ಸರ್ಕಾರವು ಬಯಸಿದೆ. ಶೀಘ್ರದಲ್ಲೇ ಅಧಿಸೂಚನೆಯೊಂದನ್ನು ಹೊರಡಿಸಲಿದೆ ಎಂದು ಈ ಹಿಂದೆ ವಿವಿಧ ಮಾಧ್ಯಮಗಳು ವರದಿ ಮಾಡಿದ್ದವು.
ಅಪಘಾತ ತಡೆಯಲು ನಾವೇನು ಮಾಡಬೇಕು:
ಕೇವಲ ಸುರಕ್ಷತಾ ವೈಶಿಷ್ಟ್ಯಗಳಿಂದ ಅಪಘಾತವನ್ನು ತಡೆಗಟ್ಟಲು ಸಾಧ್ಯವಾಗುವುದಿಲ್ಲ. ಸಂಚಾರಿ ನಿಯಮಗಳನ್ನು ಪಾಲಿಸುವುದು. ದ್ವಿಚಕ್ರ ವಾಹನ ಚಲಾಯಿಸುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸುವುದು. ಏರ್ ಫೋನ್ ಹಾಕಿಕೊಂಡು ಮಾತನಾಡದಿರುವುದು ಹಾಗೂ ಮದ್ಯಪಾನ ಮಾಡಿದ ವೇಳೆಯಲ್ಲಿ ವಾಹನ ಚಾಲನೆಯಿಂದ ದೂರವಿರೊವುದರೊಂದಿಗೆ ಅಪಘಾತವಾಗುವುದನ್ನು ತಪ್ಪಿಸಬಹುದು.


Click it and Unblock the Notifications








