ಟೋಲ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಬಿಜೆಪಿ ಮುಖಂಡ
ಬಿಜೆಪಿ ಮುಖಂಡನೊಬ್ಬ ದೆಹಲಿಯ ಹೊರವಲಯದಲ್ಲಿರುವ ಯಮುನಾ ಎಕ್ಸ್ ಪ್ರೆಸ್ವೇನಲ್ಲಿ ಟೋಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಘಟನೆ ಕಳೆದ ಬುಧವಾರ ನಡೆದಿದ್ದು, ಘಟನೆಯು ತಡವಾಗಿ ಬೆಳಕಿಗೆ ಬಂದಿದೆ.

ಟೋಲ್ನ ಸೂಪರ್ವೈಸರ್ ಪ್ರಕಾರ, ಸಂಜೀವ್ ಶರ್ಮಾ ಎಂಬ ಬಿಜೆಪಿ ಮುಖಂಡ, ಟೋಲ್ ಸಿಬ್ಬಂದಿ ಟೋಲ್ ಶುಲ್ಕವನ್ನು ಪಾವತಿಸುವಂತೆ ಕೇಳಿದಾಗ ಕೆರಳಿ, ತನ್ನ ಸ್ಕಾರ್ಪಿಯೊದಿಂದ ಕೆಳಗಿಳಿದು ಮೂವರು ಟೋಲ್ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಘಟನೆಯು ಕಳೆದ ಬುಧವಾರ ಸಂಜೆ 5.50ರ ಸುಮಾರಿಗೆ ನಡೆದಿದೆ.

ಈ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಲಾಗಿದೆ. ಶರ್ಮಾರವರು ಜೆವಾರ್ನ ಬ್ಲಾಕ್ ಬಿಜೆಪಿ ಅಧ್ಯಕ್ಷರಾಗಿದ್ದಾರೆ. ಈ ಘಟನೆ ನಡೆದಾಗ ಪಕ್ಷದ ಜಿಲ್ಲಾ ಅಧ್ಯಕ್ಷರಾದ ವಿಜಯ್ ಭಾಟಿರವರು ಸಹ ಇದ್ದರು. ಆದರೆ ಈ ಘಟನೆಯ ಸಂಬಂಧ ಶರ್ಮಾರವರ ವಿರುದ್ಧ ಮಾತ್ರ ಎಫ್ಐಆರ್ ದಾಖಲಿಸಲಾಗಿದೆ.

ಶರ್ಮಾರವರ ವಿರುದ್ಧ ಐಪಿಸಿ ಸೆಕ್ಷನ್ 506,504 ಹಾಗೂ 323ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಟೋಲ್ ಪ್ಲಾಜಾದ ಸೂಪರ್ವೈಸರ್ ಅಮಿತ್ ಕುಮಾರ್ ಶ್ರೀವಾಸ್ತವರವರು ಈ ಬಗ್ಗೆ ದೂರು ನೀಡಿದ್ದಾರೆ. ಅವರ ಪ್ರಕಾರ ಘಟನೆ ನಡೆದಾಗ ಸ್ಥಳದಲ್ಲಿ ಇಬ್ಬರು ಸೆಕ್ಯೂರಿಟಿ ಗಾರ್ಡ್ಗಳು ಹಾಗೂ ಒಬ್ಬರು ಅಧಿಕಾರಿ ಉಪಸ್ಥಿತರಿದ್ದರು.

ಸ್ಕಾರ್ಪಿಯೊ ಹಾಗೂ ಫಾರ್ಚುನರ್ ಕಾರಿನಲ್ಲಿ ಬಂದ ಸಂಜೀವ್ ಶರ್ಮಾ ಹಾಗೂ ವಿಜಯ್ ಭಾಟಿರವರು ತಮ್ಮಿಂದ ಶುಲ್ಕ ತೆಗೆದು ಕೊಳ್ಳದೇ ಟೋಲ್ನಲ್ಲಿ ಬಿಡುವಂತೆ ಆಗ್ರಹಿಸಿದರು. ಆಗ ಕರ್ತವ್ಯದಲ್ಲಿದ್ದ ಕುಲ್ದೀಪ್ರವರು ತಾವು ಈ ಬಗ್ಗೆ ಖಚಿತಪಡಿಸಿಕೊಳ್ಳುವವರೆಗೂ ಕಾಯುವಂತೆ ಸೂಚಿಸಿದರು.

ಭಾಟಿ ಹಾಗೂ ಶರ್ಮಾರವರ ಬಳಿ ಶುಲ್ಕ ವಿನಾಯಿತಿ ಪಡೆಯಲು ಯಾವುದೇ ಅಧಿಕೃತ ಪತ್ರವಿಲ್ಲದ ಕಾರಣ, ಅವರಿಗೆ ಶುಲ್ಕ ಪಾವತಿಸುವಂತೆ ಸೂಚಿಸಲಾಯಿತು. ಈ ಹಂತದಲ್ಲಿ ಟೋಲ್ ಅಧಿಕಾರಿ ಹಾಗೂ ಬಿಜೆಪಿ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು. ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ಸೂಪರ್ವೈಸರ್ರವರು ಎರಡೂ ಕಾರುಗಳನ್ನು ಹೋಗಲು ಅನುಮತಿ ನೀಡಿದರು.

ಸ್ವಲ್ಪ ಮುಂದೆ ಸಾಗಿದ ಅವರಿಬ್ಬರೂ ಕಾರನ್ನು ನಿಲ್ಲಿಸಿ ವಾಪಸ್ ಬಂದು ಕುಲ್ದೀಪ್ರವರ ಮೇಲೆ ಹಲ್ಲೆ ನಡೆಸಿದರು. ಅವರು ಕುಲ್ದೀಪ್ರವರಿಗೆ ಒದ್ದು, ಹಲ್ಲೆ ನಡೆಸಿದರು ಎಂದು ದೂರಿನಲ್ಲಿ ವಿವರಿಸಲಾಗಿದೆ.

ಈ ಘಟನೆಯ ಬಗ್ಗೆ ಬಿಜೆಪಿ ಮುಖಂಡರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಭಾಟಿರವರ ಫೋನ್ ಸ್ವಿಚ್ ಆಫ್ ಆಗಿದ್ದರೆ, ಶರ್ಮಾರವರ ನಂಬರ್ ಅನ್ನು ಬೇರೊಂದು ನಂಬರಿಗೆ ಡೈವರ್ಟ್ ಮಾಡಲಾಗಿದ್ದು, ಆ ನಂಬರ್ ಸಂಪರ್ಕಕ್ಕೆ ಸಿಗುತ್ತಿಲ್ಲ.


Click it and Unblock the Notifications








