ಬೆಂಗಳೂರು - ಮೈಸೂರು JUST 90 ನಿಮಿಷ: ಹೇಗಿರಲಿದೆ ಎಕ್ಸ್ಪ್ರೆಸ್ ವೇ!
ಬಹುನಿರೀಕ್ಷಿತ ಬೆಂಗಳೂರು - ಮೈಸೂರು ನಡುವಿನ ಎಕ್ಸ್ಪ್ರೆಸ್ ವೇ ಕಾಮಗಾರಿ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದೆ. ಕೆಲವು ದಿನಗಳ ಹಿಂದೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು, ಈ ಹೆದ್ದಾರಿ ಹೇಗಿರಲಿದೆ ಎಂಬ ಡ್ರೋನ್ ಚಿತ್ರದಲ್ಲಿ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು.
ಈ ಹೆದ್ದಾರಿ (NH 275) ನಿರ್ಮಾಣದಿಂದ ಪ್ರಯಾಣದ ಅವಧಿ ತುಂಬಾ ಕಡಿಮೆಯಾಗಲಿದ್ದು, ಕೇವಲ 90 ನಿಮಿಷಗಳಲ್ಲಿ ಬೆಂಗಳೂರಿನಿಂದ ಮೈಸೂರು ತಲುಪಬಹುದು. ಅಲ್ಲದೆ, ಕೈಗಾರಿಕೆ ಸೇರಿದಂತೆ ವಿವಿಧ ಉದ್ಯಮಗಳ ಬೆಳೆವಣಿಗೆಗೆ ಸಹಕಾರಿಯಾಗಲಿದ್ದು, ಈ ಎಕ್ಸ್ಪ್ರೆಸ್ ವೇ ಕೆಲವೇ ದಿನಗಳಲ್ಲಿ ಲೋಕಾರ್ಪಣೆಯಾಗುವ ಸಾಧ್ಯತೆಯಿದೆ. ಮೂಲಗಳ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ. ಕಳೆದ ತಿಂಗಳು ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ಮೈಸೂರು - ಕೊಡಗು ಸಂಸದ ಪ್ರತಾಪ್ ಸಿಂಹ ಹೆದ್ದಾರಿ ಕಾಮಗಾರಿಯನ್ನು ವೀಕ್ಷಿಸಿದ್ದರು.

ಇದು ದಶಪಥದ ಹೆದ್ದಾರಿಯಾಗಿದ್ದು, ಎರಡು ಕಡೆ ತಲಾ ಮೂರು ಲೈನ್ ಒಳಗೊಂಡಿರುವ 6 ಲೈನ್ ಎಕ್ಸ್ಪ್ರೆಸ್ ವೇ ಇರಲಿದೆ. ಉಳಿದಂತೆ ಎರಡು ಬದಿಯಲ್ಲಿ ತಲಾ 2 ಲೇನ್ಗಳಿರುವ ಸರ್ವಿಸ್ ರಸ್ತೆ ಇದ್ದು, ಈ ಮೂಲಕ NH 275 ದಶಪಥದ ರಸ್ತೆಯಾಗಿರಲಿದೆ. 9 ದೊಡ್ಡ ಸೇತುವೆ, 44 ಕಿರು ಸೇತುವೆ, 4 ರೈಲ್ವೆ ಮೇಲ್ಸೇತುವೆ, 28 ಅಂಡರ್ಪಾಸ್, 13 ಪಾದಚಾರಿ ಅಂಡರ್ ಪಾಸ್ಗಳನ್ನು ಈ ಎಕ್ಸ್ಪ್ರೆಸ್ ವೇ ಹೊಂದಿದೆ. ಒಟ್ಟು ಎರಡು ಹಂತದಲ್ಲಿ ಕಾಮಗಾರಿ ನಡೆಸಲಾಗಿದ್ದು, 118 ಕಿಲೋ ಮೀಟರ್ ಉದ್ದದ ರಸ್ತೆ ಇದಾಗಿದೆ.
ಮೊದಲ ಹಂತದಲ್ಲಿ ಬೆಂಗಳೂರಿನಿಂದ ಚನ್ನಪಟ್ಟಣ ನಿಡಘಟ್ಟದವರೆಗೂ ಕಾಮಗಾರಿಯನ್ನು (ಬರೋಬ್ಬರಿ 56 ಕಿ.ಮೀ ಉದ್ದ) ನಡೆಸಲಾಗಿತ್ತು. ನಿಡುಘಟ್ಟದಿಂದ ಮೈಸೂರಿನವರೆಗೆ ಎರಡನೇ ಹಂತದ ಕಾಮಗಾರಿ (61 ಕಿ.ಮೀ) ವೇಗದಿಂದ ಸಾಗುತ್ತಿದೆ. ಈಗಾಗಲೇ ಮೊದಲ ಹಂತದ ಕಾಮಗಾರಿ ಮುಕ್ತಾಯಗೊಂಡಿದ್ದು, ವಾಹನ ಸಂಚಾರಕ್ಕೆ ಹೆದ್ದಾರಿ ಮುಕ್ತವಾಗಿದೆ. ಫೆಬ್ರುವರಿ 15ರಿಂದ ಟೋಲ್ ಸಂಗ್ರಹವು ಆರಂಭವಾಗಲಿದೆ. ಎರಡನೇ ಹಂತದ ಕಾಮಗಾರಿ ಮುಗಿದ ನಂತರ, ಅಲ್ಲಿಯೂ ಟೋಲ್ ಶುಲ್ಕ ವಿಧಿಸುವುದನ್ನು ಶುರು ಮಾಡಲಾಗುತ್ತದೆ ಎಂದು ವರದಿಯಾಗಿದೆ.

ಸರ್ವಿಸ್ ರಸ್ತೆ ಪೂರ್ಣ ಪ್ರಮಾಣದಲ್ಲಿ ನಿರ್ಮಾಣವಾದ ನಂತರ, ಎಕ್ಸ್ಪ್ರೆಸ್ ವೇಯಲ್ಲಿ ದ್ವಿಚಕ್ರ ಮತ್ತು ಆಟೋಗಳಿಗೆ ಅವಕಾಶ ನೀಡದಿರಲು ತೀರ್ಮಾನ ಮಾಡಲಿದ್ದು, ಚನ್ನಪಟ್ಟಣದಲ್ಲಿ ವಿಶ್ರಾಂತಿ ಸ್ಥಳ (ರೆಸ್ಟ್ ಏರಿಯಾ) ನಿರ್ಮಾಣ ಮಾಡಲು ಸುಮಾರು 50 ಎಕರೆ ಜಮೀನನ್ನು ಖರೀದಿಸಲಾಗುವುದು. ಅಲ್ಲಿಯೇ, ಟ್ರಾಮಾ ಸೆಂಟರ್ ತೆರೆದು ಅಪಘಾತಗಳು ನಡೆದ ಸಂದರ್ಭದಲ್ಲಿ ತುರ್ತು ಚಿಕಿತ್ಸೆ ನೀಡಲು ಎಲ್ಲ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಂಸದ ಪ್ರತಾಪ್ ಸಿಂಹ ಮಾಹಿತಿ ನೀಡಿದ್ದಾರೆ.
ಈ ದಶಪಥ ರಸ್ತೆ ನಿರ್ಮಿಸಲು ಬರೋಬ್ಬರಿ ರೂ.8172 ಕೋಟಿ ಖರ್ಚಾಗಿದ್ದು, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ)ವು ಭಾರತಮಾಲಾ ಉಪ ಯೋಜನೆ ಹಂತ-1ರ ಅಡಿಯಲ್ಲಿ ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇಯನ್ನು ನಿರ್ಮಾಣ ಮಾಡುತ್ತಿದೆ. ಈ ರಸ್ತೆ ನಿರ್ಮಾಣದಿಂದ ಆಗುವ ದೊಡ್ಡ ಅನುಕೂಲವೆಂದರೆ, 150 ನಿಮಿಷಗಳ ಪ್ರಯಾಣದ ಅವಧಿ 90 ನಿಮಿಷಕ್ಕೆ ಇಳಿಯಲಿದೆ. ಎಕ್ಸ್ಪ್ರೆಸ್ ವೇಗೆ ಮೈಸೂರು ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರು ಇಡುವಂತೆಯು ಒತ್ತಾಯ ಕೇಳಿಬಂದಿದೆ.

ದಶಪಥ ರಸ್ತೆ ನಿರ್ಮಾಣದಿಂದ ವಿಮಾನ ಸಂಚಾರಕ್ಕೂ ತೊಂದರೆಯಾಗಿದೆ ಎಂದು ಹೇಳಲಾಗಿದೆ. ದುಬಾರಿ ವೆಚ್ಚದ ಕಾರಣ, ಮೈಸೂರಿನಿಂದ ಬೆಂಗಳೂರಿಗೆ ವಿಮಾನದಲ್ಲಿ ಪ್ರಯಾಣಿಸಲು ಜನರು ಹಿಂದೇಟು ಹಾಕುತ್ತಿದ್ದಾರೆ. ಇದಕ್ಕೆ ಕಾರಣ, ಎಕ್ಸ್ಪ್ರೆಸ್ ವೇಯಲ್ಲಿ ಕೇವಲ 90 ನಿಮಿಷ ಹಾಗೂ ವಂದೇ ಭಾರತ್ ಎಕ್ಸ್ಪ್ರೆಸ್ನಲ್ಲಿ ಎರಡು ಗಂಟೆಯೊಳಗೆ ಬೆಂಗಳೂರು ತಲುಪಬಹುದು. ಬಹುತೇಕ ಎರಡನೇ ಹಂತದ ಕಾಮಗಾರಿಯು ಶೀಘ್ರದಲ್ಲೇ ಮುಗಿಯುವ ನಿರೀಕ್ಷೆಯಲ್ಲಿ ಈ ಎರಡು ನಗರದ ಜನರು ಕಾತರದಿಂದ ಕಾಯುತ್ತಿದ್ದಾರೆ.
ಬೆಂಗಳೂರು - ಮೈಸೂರು ನಡುವಿನ ಎಕ್ಸ್ಪ್ರೆಸ್ ವೇಯಿಂದ ಬಹುತೇಕ ಊರುಗಳ ಸಣ್ಣ - ಪುಟ್ಟ ವ್ಯಾಪಾರಸ್ಥರಿಗೆ ಉದ್ಯೋಗವೇ ಇಲ್ಲದಂತೆ ಆಗಲಿದೆ. ಮದ್ದೂರಿನಲ್ಲಿ ಎಕ್ಸ್ಪ್ರೆಸ್ ವೇಯ ದೊಡ್ಡ ಸೇತುವೆ ಇದ್ದು, ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣಿಸುವವರಿಗೆ ಇಲ್ಲಿನ ಸಂಪರ್ಕವೇ ಇಲ್ಲದಂತೆ ಆಗಲಿದೆ. ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿದ ವ್ಯಾಪಾರಿಗಳು ನಷ್ಟ ಅನುಭವಿಸಬೇಕಾಗಿದೆ. ಇದು ಅಲ್ಲಿನ ಸಮಸ್ಯೆ ಮಾತ್ರವಲ್ಲ. ಎಕ್ಸ್ಪ್ರೆಸ್ ವೇ ಅಕ್ಕಪಕ್ಕದಲ್ಲಿ ಬರುವ ಎಲ್ಲ ಊರುಗಳು ಜನರು ಇದೇ ಪರಿಸ್ಥಿತಿಯನ್ನು ಎದುರಿಸಬೇಕಾಗಿದೆ.


Click it and Unblock the Notifications








