ಆಂಬ್ಯುಲೆನ್ಸ್'ಗೆ ಅಡ್ಡಿ ಪಡಿಸಿದ ಕಪ್ಪು ಪಟ್ಟಿಯಲ್ಲಿರುವ Innova Crysta ಕಾರು
2019 ರಲ್ಲಿ ಜಾರಿಗೆ ಬಂದ ಹೊಸ ಮೋಟಾರು ವಾಹನ ಕಾಯ್ದೆಯನ್ವಯ ತುರ್ತು ಸೇವೆ ನೀಡುವ ವಾಹನಗಳಿಗೆ ಅಡ್ಡಿ ಪಡಿಸುವ ವಾಹನ ಸವಾರರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಆದರೆ ಹೃದ್ರೋಗಿ ಒಬ್ಬರನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಆಂಬ್ಯುಲೆನ್ಸ್'ಗೆ ಸುಮಾರು 5 ಕಿ.ಮೀಗಳವರೆಗೆ ಅಡ್ಡಿ ಪಡಿಸಿದ Toyota Innova Crysta ಕಾರು ಮಾಲೀಕನ ವಿರುದ್ಧ ಕ್ರಮ ಕೈಗೊಳ್ಳದೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ವರದಿಯಾಗಿದೆ.

ಆಂಬುಲೆನ್ಸ್, ಅಗ್ನಿಶಾಮಕ ವಾಹನಗಳು ಸೇರಿದಂತೆ ಎಲ್ಲಾ ತುರ್ತು ಸೇವೆ ನೀಡುವ ವಾಹನಗಳಿಗೆ ಅಡ್ಡಿ ಪಡಿಸುವುದು ಭಾರತದಲ್ಲಿ ಕಾನೂನು ಬಾಹಿರವಾಗಿದೆ. ತುರ್ತು ಸೇವೆ ವಾಹನಗಳಿಗೆ ಅಡ್ಡಿ ಪಡಿಸುವವರ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿರುವ ಹಲವು ಘಟನೆಗಳು ಈ ಹಿಂದೆ ವರದಿಯಾಗಿವೆ. ಆದರೆ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಆಂಬ್ಯುಲೆನ್ಸ್'ಗೆ ಸುಮಾರು 5 ಕಿ.ಮೀಗಳವರೆಗೆ ಅಡ್ಡಿ ಪಡಿಸಿದ Innova Crysta ಕಾರಿನ ಚಾಲಕನ ವಿರುದ್ಧ ಅಲ್ಲಿನ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ.

Innova Crysta ಕಾರು ಆಂಬ್ಯುಲೆನ್ಸ್'ಗೆ ಅಡ್ಡಿ ಪಡಿಸುತ್ತಿರುವ ವೀಡಿಯೊವನ್ನು ಏಷಿಯಾ ನೆಟ್ ನ್ಯೂಸ್ ಯೂಟ್ಯೂಬ್ ಚಾನೆಲ್ ನಲ್ಲಿ ಪೋಸ್ಟ್ ಮಾಡಲಾಗಿದೆ.ಈ ವೀಡಿಯೊದಲ್ಲಿರುವ ಮಾಹಿತಿಯ ಪ್ರಕಾರ, ಈ ಆಂಬುಲೆನ್ಸ್ ನಲ್ಲಿ ಹೃದಯ ರೋಗಿಯನ್ನು ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯುಲಾಗುತ್ತಿತ್ತು.

ಈ ವೀಡಿಯೊದಲ್ಲಿ ಬಿಳಿ ಬಣ್ಣದ Toyota Innova ಕಾರನ್ನು ಹೊರತುಪಡಿಸಿ ಉಳಿದ ಎಲ್ಲಾ ವಾಹನಗಳು ಆಂಬ್ಯುಲೆನ್ಸ್ಗೆ ದಾರಿ ಮಾಡಿಕೊಡುವುದನ್ನು ಹಾಗೂ ಪಕ್ಕದಲ್ಲಿ ನಿಲ್ಲುವುದನ್ನು ಕಾಣಬಹುದು. ಆದರೆ ಈ ಕಾರು ಮಾತ್ರ ಆಂಬ್ಯುಲೆನ್ಸ್ಗೆ ಮೀಸಲಿರುವ ಜಾಗವನ್ನು ಬಳಸಿ ಮುಂದೆ ಸಾಗುತ್ತಿದೆ. Innova ಕಾರು ಚಾಲಕ ಆಂಬ್ಯುಲೆನ್ಸ್ ಒಳಗಿರುವ ರೋಗಿಯ ಪರಿಸ್ಥಿತಿ ಅರಿಯದೇ ಸುಮಾರು 5 ಕಿ.ಮೀ ದೂರ ಅಡ್ಡಿಪಡಿಸಿದ್ದಾನೆ.

ಆಂಬ್ಯುಲೆನ್ಸ್ ವಾಹನಗಳಿಗೆ ಅಡ್ಡಿ ಪಡಿಸುವವರಿಗೆ ಖಡಾ ಖಂಡಿತವಾಗಿಯೂ ದಂಡ ವಿಧಿಸಲಾಗುತ್ತದೆ. ಈ ವೀಡಿಯೊದಲ್ಲಿರುವ ಕಾರಿನ ಹಿಂಬದಿಯ ವಿಂಡೋ ಗ್ಲಾಸ್ ಅನ್ನು ಪರದೆಯಿಂದ ಕಾಣಬಹುದು. ಇದರಿಂದ ಕಾರಿನೊಳಗೆ ಯಾರು ಇದ್ದಾರೆ ಎಂದು ಕಾಣಿಸುವುದಿಲ್ಲ. ಕಾರುಗಳ ವಿಂಡೋ ಗ್ಲಾಸ್ ಗಳನ್ನು ಯಾವುದೇ ರೀತಿಯ ಸ್ಕ್ರೀನ್ ಅಥವಾ ಸನ್ ಫಿಲ್ಮ್ ನಿಂದ ಮುಚ್ಚುವುದು ಸಹ ಭಾರತದಲ್ಲಿ ಕಾನೂನು ಬಾಹಿರ.

ಇದರ ಜೊತೆಗೆ ಈ Innova ಕಾರು ರಸ್ತೆ ನಿಯಮಗಳನ್ನು ಸರಿಯಾಗಿ ಪಾಲಿಸಿಲ್ಲ. ಸಾಂದರ್ಭಿಕವಾಗಿ ಪರ್ಯಾಯ ಮಾರ್ಗದಲ್ಲಿ ಸಾಗುವ ವಾಹನಗಳಿಗೆ ಈ ವಾಹನವು ಬೆದರಿಕೆ ಒಡ್ಡುವ ರೀತಿಯಲ್ಲಿ ಸಾಗಿದೆ. ಆಂಬ್ಯುಲೆನ್ಸ್'ಗೆ ದಾರಿ ನೀಡದೇ ಉದ್ದಟತನ ತೋರಿದ ಈ Innova ಕಾರಿನ ಚಾಲಕ ಘಟನೆ ನಡೆದ ಪ್ರದೇಶಕ್ಕೆ ಸೇರಿದವನು ಎಂದು ತಿಳಿದು ಬಂದಿದೆ.

ಆ ಪ್ರದೇಶದ ಜನರು ಆತನ ವರ್ತನೆಯಿಂದ ರೋಸಿ ಹೋಗಿದ್ದಾರೆ. ಈ Innova ಕಾರು ಚಾಲಕ ಪದೇ ಪದೇ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುವ ರೀತಿಯಲ್ಲಿ ಕಾರು ಚಾಲನೆ ಮಾಡುತ್ತಾನೆ ಎಂದು ಅಲ್ಲಿನ ಸಾರ್ವಜನಿಕರು ಮಾಹಿತಿ ನೀಡಿದ್ದಾರೆ. ಈ Innova ಕಾರ್ ಅನ್ನು ಸಂಬಂಧಪಟ್ಟ ಆರ್ಟಿಒ ಕಚೇರಿಯಲ್ಲಿ ಕಪ್ಪು ಪಟ್ಟಿಗೆ ಸೇರಿಸಲಾಗಿದೆ.

ಆದರೂ ಸಾರಿಗೆ ಇಲಾಖೆ ಅಧಿಕಾರಿಗಳು ಅಥವಾ ಪೊಲೀಸರು ಈ ಕಾರು ಚಾಲಕನ ವಿರುದ್ಧ ಯಾವುದೇ ಪ್ರಕರಣ ದಾಖಲಿಸಿಲ್ಲ ಎಂದು ವರದಿಗಳಾಗಿವೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಅಲ್ಲಿನ ಅಧಿಕಾರಿಗಳು ಸಹ ನಿರಾಕರಿಸುತ್ತಾರೆ. ಈಗ ಆಂಬ್ಯುಲೆನ್ಸ್'ಗೆ ಅಡ್ಡಿ ಪಡಿಸಿದ ಹಿನ್ನೆಲೆಯಲ್ಲಿಯಾದರೂ ಈ Innova ಕಾರಿನ ಚಾಲಕನ ವಿರುದ್ಧ ಸಂಬಂಧ ಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂಬುದು ಅಲ್ಲಿನ ಜನರ ಕಾಳಜಿಯಾಗಿದೆ.

ಈ Innova ಕಾರಿನ ಮಾಲೀಕರು ಯಾರು ಎಂಬುದರ ಬಗ್ಗೆ ಜನರು ಸಹ ಮಾಹಿತಿ ನೀಡಿಲ್ಲ. ಈ ರೀತಿಯ ಘಟನೆಗಳು ನಮ್ಮ ದೇಶದಲ್ಲಿ ನಡೆಯುತ್ತಿರುವುದು ಹೊಸದೇನಲ್ಲ. ಈ ಹಿಂದೆಯೂ ಇದೇ ರೀತಿಯ ಹಲವು ಘಟನೆಗಳು ನಡೆದಿವೆ. ಅದಕ್ಕೆ ಸಂಬಂಧಿಸಿದ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಕೂಡಲೇ ಸಂಬಂಧ ಪಟ್ಟ ಅಧಿಕಾರಿಗಳು ಸಾರ್ವಜನಿಕರಿಗೆ ತೊಂದರೆ ನೀಡಿದ ವಾಹನ ಸವಾರರ ವಿರುದ್ಧ ಕ್ರಮ ಕೈಗೊಂಡಿದ್ದರು.

ಈ ಪ್ರಕರಣದಲ್ಲಿಯೂ ಅಲ್ಲಿನ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಮುಂದೆ ಇಂತಹ ಘಟನೆಗಳು ಜರುಗದಂತೆ ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ. ಇಲ್ಲದಿದ್ದರೇ ಈ ರೀತಿಯ ಘಟನೆಗಳು ಮರು ಕಳುಹಿಸುತ್ತಲೇ ಇರುತ್ತವೆ. ಕೇರಳ ಪೊಲೀಸರು ಈ ರೀತಿಯ ಘತ್ನೆಗಳು ಜರುಗಿದಾಗ ಮುಲಾಜಿಲ್ಲದೇ ಕಟ್ಟು ನಿಟ್ಟಿನ ಕಾನೂನು ಕ್ರಮಗಳನ್ನು ಕೈಗೊಳ್ಳುತ್ತಾರೆ.
ಆದರೂ ಈ Innova ಕಾರಿನ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಕೆಲ ತಿಂಗಳ ಹಿಂದೆ ನಮ್ಮ ರಾಜ್ಯದ ಮಂಗಳೂರಿನಲ್ಲಿ ವ್ಯಕ್ತಿಯೊಬ್ಬ ತನ್ನ Maruti Suzuki Ertiga ಕಾರಿನಿಂದ ಹೆದ್ದಾರಿಯಲ್ಲಿ ಸಾಗುತ್ತಿದ್ದ ಆಂಬ್ಯುಲೆನ್ಸ್'ಗೆ ಅಡ್ಡಿ ಪಡಿಸಿದ್ದ. ಈ ಘಟನೆಯ ವೀಡಿಯೊ ವೈರಲ್ ಆಗಿತ್ತು.

ತಕ್ಷಣವೇ ಎಚ್ಚೆತ್ತ ಮಂಗಳೂರು ಪೊಲೀಸರು ಆಂಬ್ಯುಲೆನ್ಸ್'ಗೆ ಅಡ್ಡಿ ಪಡಿಸಿದ್ದ Ertiga ಕಾರು ಚಾಲಕನ ವಿರುದ್ಧ ಕ್ರಮ ಕೈಗೊಂಡರು. 2019 ರಲ್ಲಿ ಜಾರಿಗೆ ಬಂದ ಭಾರತೀಯ ಮೋಟಾರು ವಾಹನ ಕಾಯ್ದೆಯ ಅನ್ವಯ ತುರ್ತು ವಾಹನಗಳಿಗೆ ಅಡ್ಡಿ ಪಡಿಸುವ ವಾಹನ ಸವಾರರಿಗೆ ರೂ .10,000 ದಂಡ ವಿಧಿಸಲಾಗುತ್ತದೆ. ಆದರೂ ಕೆಲವರು ತುರ್ತು ಸೇವೆ ವಾಹನಗಳಿಗೆ ಅಡ್ಡಿ ಪಡಿಸುತ್ತಲೇ ಇರುತ್ತಾರೆ. ದಂಡದ ಜೊತೆಗೆ ಕಠಿಣ ಕಾನೂನು ಕ್ರಮಗಳು ಮಾತ್ರ ಇಂತಹ ಚಟುವಟಿಕೆಗಳನ್ನು ಕಡಿಮೆ ಮಾಡಬಹುದು.
ಚಿತ್ರ ಕೃಪೆ: ಮೊದಲ ಐದು ಚಿತ್ರಗಳನ್ನು ಏಷಿಯಾ ನೆಟ್ ನ್ಯೂಸ್'ನಿಂದ ಪಡೆಯಲಾಗಿದ್ದು, ಉಳಿದ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.


Click it and Unblock the Notifications