ರಾಷ್ಟ್ರಪತಿಗಳಿಂದಲೇ ಸೈಕಲ್ ಗಿಫ್ಟ್ ಪಡೆದ ವಿದ್ಯಾರ್ಥಿ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 9ನೇ ತರಗತಿ ವಿದ್ಯಾರ್ಥಿ, ಉದಯೋನ್ಮುಖ ಸೈಕ್ಲಿಸ್ಟ್ ರಿಯಾಜ್ ರವರು ಭರ್ಜರಿ ಗಿಫ್ಟ್ ಪಡೆದಿದ್ದಾರೆ. ವಿಶ್ವ ದರ್ಜೆಯ ಸೈಕ್ಲಿಸ್ಟ್ ಆಗಬೇಕೆಂಬ ಕನಸು ಹೊತ್ತಿರುವ ರಿಯಾಜ್ ಗೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ರವರು ರೇಸಿಂಗ್ ಬೈಸಿಕಲ್ ಅನ್ನು ಗಿಫ್ಟ್ ಆಗಿ ನೀಡಿದ್ದಾರೆ.

ರಾಷ್ಟ್ರಪತಿ ಭವನವು ಬಿಡುಗಡೆಗೊಳಿಸಿರುವ ಹೇಳಿಕೆಯ ಪ್ರಕಾರ ಬಿಹಾರದ ಮಧುಬನಿ ಜಿಲ್ಲೆಗೆ ಸೇರಿದ ರಿಯಾಜ್ ದೆಹಲಿಯ ಆನಂದ್ ವಿಹಾರದ ಸರ್ವೋದಯ ಬಾಲ ವಿದ್ಯಾಲಯದ ವಿದ್ಯಾರ್ಥಿ. ರಿಯಾಜ್ ರವರ ಕುಟುಂಬವು ಮಧುಬನಿಯಲ್ಲಿ ವಾಸಿಸುತ್ತಿದ್ದರೆ, ರಿಯಾಜ್ ಗಾಜಿಯಾಬಾದ್ನ ಮಹಾರಾಜಪುರದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ.

ರಿಯಾಜ್ ರವರ ತಂದೆ ಅಡುಗೆಯವರಾಗಿ ಕೆಲಸ ಮಾಡುತ್ತಿದ್ದಾರೆ. ತಂದೆಗೆ ಅವರು ಸಹ ನೆರವಾಗುತ್ತಾರೆ. ಅವರು ಗಾಜಿಯಾಬಾದ್ನ ಧಾಬಾವೊಂದರಲ್ಲಿ ಪಾತ್ರೆಗಳನ್ನು ತೊಳೆಯುವ ಕೆಲಸವನ್ನೂ ಸಹ ಮಾಡುತ್ತಾರೆ.
MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ರಿಯಾಜ್ ಸೈಕ್ಲಿಂಗ್ನಲ್ಲಿ ತನ್ನ ವೃತ್ತಿಜೀವನವನ್ನು ಮುಂದುವರಿಸುವ ಗುರಿಯನ್ನು ಹೊಂದಿದ್ದಾರೆ. ತಮ್ಮ ಗುರಿ ಸಾಧನೆಗಾಗಿ ಶಾಲೆಯಿಂದ ಮನೆಗೆ ಬಂದ ನಂತರ ಬಾಡಿಗೆ ಸೈಕಲ್ನೊಂದಿಗೆ ಅಭ್ಯಾಸ ಮಾಡುತ್ತಾರೆ.

ರಿಯಾಜ್ ಹಲವಾರು ಸೈಕ್ಲಿಂಗ್ ಚಾಂಪಿಯನ್ಶಿಪ್ಗಳಲ್ಲಿ ಭಾಗವಹಿಸಿದ್ದಾರೆ. 2017ರ ದೆಹಲಿ ರಾಜ್ಯ ಸೈಕ್ಲಿಂಗ್ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಜೊತೆಗೆ ಗುವಾಹಟಿಯಲ್ಲಿ ನಡೆದ ಶಾಲಾ ಸೈಕ್ಲಿಂಗ್ ಸ್ಪರ್ಧೆಯಲ್ಲೂ ಭಾಗವಹಿಸಿ ನಾಲ್ಕನೇ ಸ್ಥಾನವನ್ನು ಪಡೆದಿದ್ದರು.
MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ರಾಷ್ಟ್ರಪತಿ ರಾಮನಾಥ್ ಕೋವಿಂದ್ ರವರು ಮಾಧ್ಯಮ ವರದಿಗಳ ಮೂಲಕ ರಿಯಾಜ್ ರವರ ಹೋರಾಟದ ಬಗ್ಗೆ ತಿಳಿದುಕೊಂಡರು. ನಂತರ ರಾಷ್ಟ್ರಪತಿಗಳು ರಿಯಾಜ್ ರವರಿಗೆ ಬಕ್ರೀದ್ ಹಬ್ಬದ ಸಂದರ್ಭದಲ್ಲಿ ರೇಸಿಂಗ್ ಸೈಕಲ್ ಅನ್ನು ಉಡುಗೊರೆಯಾಗಿ ನೀಡಲು ನಿರ್ಧರಿಸಿದರು.

ಸದ್ಯಕ್ಕೆ ರಿಯಾಜ್ ರವರು ದೆಹಲಿಯ ಇಂದಿರಾ ಗಾಂಧಿ ಇನ್ ಡೋರ್ ಸ್ಟೇಡಿಯಂನಲ್ಲಿ ವೃತ್ತಿಪರ ಸೈಕ್ಲಿಂಗ್ ತರಬೇತುದಾರರ ಬಳಿ ತರಬೇತಿ ಪಡೆಯುತ್ತಿದ್ದಾರೆ. ರಿಯಾಜ್ಗೆ ಬೈಸಿಕಲ್ ನೀಡುವ ಸಂದರ್ಭದಲ್ಲಿ ರಾಷ್ಟ್ರಪತಿಗಳು ಅವರಿಗೆ ಉತ್ತಮ ಭವಿಷ್ಯ ಹಾಗೂ ಆರೋಗ್ಯ ಸಿಗಲೆಂದು ಹಾರೈಸಿದರು. ರಿಯಾಜ್ ರವರ ಕಥೆ ಇತರರಿಗೆ ಕಷ್ಟಪಟ್ಟು ಕೆಲಸ ಮಾಡಲು ಹಾಗೂ ಅವರ ಗುರಿಗಳನ್ನು ಸಾಧಿಸಲು ಸ್ಪೂರ್ತಿ ನೀಡುತ್ತದೆ ಎಂದು ಹೇಳಿದರು.


Click it and Unblock the Notifications