ಯುವ ರೈತನಿಗೆ ಅಪಮಾನ ಪ್ರಕರಣ- ಕೊನೆಗೂ ಕ್ಷೆಮೆ ಕೇಳಿದ ಮಹೀಂದ್ರಾ ಶೋರೂಂ ಸಿಬ್ಬಂದಿ!
ಹೊಸ ವಾಹನ ಖರೀದಿಗಾಗಿ ಶೋರೂಂಗೆ ಭೇಟಿ ನೀಡಿದ್ದ ಯುವ ರೈತನಿಗೆ ಮಹೀಂದ್ರಾ ಶೋರೂಂ ಸಿಬ್ಬಂದಿ ಅವಮಾನ ಮಾಡಿದ ಪ್ರಕರಣವು ಕೊನೆಗೂ ಸುಖಾಂತ್ಯ ಕಂಡಿದ್ದು, ರೈತನಲ್ಲಿ ಕ್ಷೆಮೆ ಕೋರಿದ ಶೋರೂಂ ಸಿಇಒ ಘಟನೆ ಕುರಿತು ವಿಷಾದ ವ್ಯಕ್ತಪಡಿಸಿದ್ದಾರೆ.

ತುಮಕೂರಿನ ರಾಮನಪಾಳ್ಯದಲ್ಲಿ ಕೆಂಪೇಗೌಡ ಅನ್ನುವ ಯುವ ರೈತ ವಾಣಿಜ್ಯ ಬಳಕೆಗಾಗಿ ಬೊಲೆರೊ ಪಿಕ್ಅಪ್ ಖರೀದಿಸಲು ಮಹೀಂದ್ರಾ ಶೋರೂಂಗೆ ತಮ್ಮ ಸ್ನೇಹಿತರೊಂದಿಗೆ ಬುಕ್ ಮಾಡಲು ಬಂದಿದ್ದರು. ಈ ವೇಳೆ ರೈತನ ಸಾಮಾನ್ಯ ವೇಷ ಭೂಷಣ ನೋಡಿದ ಶೋರೂರಂ ಸಿಬ್ಬಂದಿ ವಾಹನ ಖರೀದಿ ಪ್ರಕ್ರಿಯೆ ಬಗೆಗೆ ಸರಿಯಾದ ಮಾಹಿತಿ ನೀಡದೆ ಅವಮಾನಿಸಿದ್ದಲ್ಲದೆ 10 ರೂಪಾಯಿ ಹೊಂದಿಸಲು ಯೋಗ್ಯತೆ ಇಲ್ಲ, ಹೊಸ ವಾಹನ ಖರೀದಿಸುತ್ತಾನಂತೆ ಎಂದು ಹಂಗಿಸಿದ್ದರು.

ಶೋರೂಂ ಸಿಬ್ಬಂದಿ ಮಾತಿಗೆ ಕೆರಳಿದ ರೈತ ಕೆಂಪೇಗೌಡ ಅರ್ಧ ಗಂಟೆಯಲ್ಲಿ ರೂ.10 ಲಕ್ಷ ರೂಪಾಯಿ ಹೊಂದಿಸುವ ಮೂಲಕ ಇಂದೇ ಹೊಸ ವಾಹನವನ್ನು ಡೆಲಿವರಿ ಕೊಡುವಂತೆ ಆಗ್ರಹಿಸಿದ್ದರು.

ಮೊದಮೊದಲು ಬೇಜವಾಬ್ದಾರಿಯಾಗಿ ವರ್ತಿಸಿದ್ದಲ್ಲದೆ ಅವಮಾನದ ಮಾತುಗಳ್ನಾಡಿದ್ದ ಶೋರೂಂ ಸೆಲ್ಸ್ ಸಿಬ್ಬಂದಿಯು ದುಡ್ಡು ಹೊಂದಿಸಿದ ರೈತನ ಸವಾಲಿಗೆ ಕಕ್ಕಾಬಿಕ್ಕಿಯಾಗಿದ್ದಾರೆ. ಆದರೆ ಶೋರೂಂ ಸಿಬ್ಬಂದಿಯು ದುಡ್ಡು ತಂದ ರೈತನಿಗೆ ಕೊಟ್ಟ ಮಾತಿನಂತೆ ವಾಹನ ನೀಡದೆ ಸಬೂಬು ಹೇಳಿ ರೈತನನ್ನು ಸಾಗ ಹಾಕಲು ಮುಂದಾಗಿದ್ದಾರೆ.

ಶೋರೂಂ ಸಿಬ್ಬಂದಿಯ ವರ್ತನೆಗೆ ಬೇಸತ್ತ ಕೆಂಪೇಗೌಡ ಸಿಬ್ಬಂದಿ ವಿರುದ್ಧ ತುಮಕೂರಿನ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಶೋರೂಂ ಸಿಬ್ಬಂದಿಯ ಮಾತಿನಂತೆಯೇ ಹಣ ತಂದಿದ್ದು, ಬಟ್ಟೆ ನೋಡಿ ಅವಮಾನಿಸಿದ ಸಿಬ್ಬಂದಿ ವಿರುದ್ದ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದರು.

ಸಾಹಸಸಿಂಹ ವಿಷ್ಣುವರ್ಧನ್, ರೆಬೆಲ್ ಸ್ಟಾರ್ ಅಂಬರೀಶ್ ಅಭಿನಯದ 'ದಿಗ್ಗಜರು' ಸಿನಿಮಾದಲ್ಲಿನ ದೃಶ್ಯದಂಥ ಘಟನೆಯು ಇಡೀ ದೇಶಾದ್ಯಂತ ಸುದ್ದಿಯಾಗುತ್ತಿದ್ದಂತೆ ಎಚ್ಚತ್ತುಕೊಂಡ ಮಹೀಂದ್ರಾ ಕಂಪನಿಯ ಹಿರಿಯ ಅಧಿಕಾರಿಗಳು ಪ್ರಕರಣವನ್ನು ಇತ್ಯರ್ಥ್ಯಕ್ಕೆ ಮುಂದಾಗಿದ್ದಾರೆ.

ರೈತನಿಗೆ ಆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶೋರೂಂ ಸಿಇಒ ದೀಪಕ್ ಕುಮಾರ್ ಘಟನೆಗೆ ವಿಷಾದ ವ್ಯಕ್ತಪಡಿಸಿ ಕ್ಷೆಮೆ ಕೋರಿದ್ದಾರೆ. ನಮ್ಮ ಸಿಬ್ಬಂದಿ ರೈತನ ಬಟ್ಟೆ ನೋಡಿ ಅವಮಾನಿಸಿಲ್ಲ, ಕೆಲವು ತಪ್ಪು ಕಲ್ಪನೆಗಳಿಂದ ಈ ಘಟನೆ ನಡೆದಿದೆ. ನಮ್ಮ ಶೋರೂಂನಲ್ಲಿ ರೈತರು, ಚಾಲಕರೇ ಮುಖ್ಯ ಗ್ರಾಹಕರಾಗಿದ್ದು, ಅವರ ಮನಸ್ಸಿಗೆ ನೋವಾಗಿದ್ದರೆ ಕ್ಷಮಿಸಿ ಎಂದು ಪ್ರಕಣಕ್ಕೆ ಮಂಗಳ ಹಾಡಿದ್ದಾರೆ.

ಜೊತೆಗೆ ಪೂರ್ತಿ ಹಣ ನೀಡಿದರೂ ವಾಹನ ನೀಡದಿರುವ ಬಗೆಗೆ ಸ್ಪಷ್ಟನೆ ನೀಡಿದ ಸಿಇಒ ದೀಪಕ್ ಕುಮಾರ್ ವಾಹನ ಖರೀದಿಗಾಗಿ ಗ್ರಾಹಕರಿಂದ ಗರಿಷ್ಠ ಪ್ರಮಾಣದಲ್ಲಿ ನೇರವಾಗಿ ಹಣ ಪಡೆಯಲು ಸಾಧ್ಯವಿರಲಿಲ್ಲ. ಹೊಸ ವಾಹನ ಖರೀದಿಗೆ ಗ್ರಾಹಕರು ನಿಗದಿತ ಪ್ರಮಾಣದಲ್ಲಿ ಮಾತ್ರ ಹಣ ಸ್ವಿಕರಿಸಿ ಇನ್ನಳಿದ ಮೊತ್ತವನ್ನು ಕಡ್ಡಾಯವಾಗಿ ಆರ್ಟಿಜಿಎಸ್ ಅಥವಾ ಚೆಕ್ ಮೂಲಕ ಮಾತ್ರ ಸ್ವಿಕರಿಸಬೇಕಿತ್ತು. ಇದರಿಂದ ಆದ ಗೊಂದಲಗಳೇ ಈ ಘಟನೆ ಕಾರಣವಾಗಿದೆ ಎಂದಿದ್ದಾರೆ.

ಅಪಮಾನ ಪ್ರಕರಣದ ಕುರಿತು ಮಾತನಾಡಿದ ಯುವ ರೈತ ಕೆಂಪೇಗೌಡ ಶೋರೂಂ ಸಿಬ್ಬಂದಿ ಮಾಡಿದ ಅಪಮಾನವು ಕೇವಲ ನನಗೆ ಮಾತ್ರವಲ್ಲ ಇಡೀ ರೈತ ಕುಲಕ್ಕೆ ಅಪಚಾರ ಮಾಡಿದಂತೆ ಎಂದು ವಿಷಾದ ವ್ಯಕ್ತಪಡಿಸಿದ್ದು, ಶೋರೂಂ ಸಿಇಒ ಘಟನೆ ಕುರಿತು ಕ್ಷೆಮೆ ಕೋರಿದ್ದಕ್ಕೆ ಕೇಸ್ ವಾಪಸ್ ಪಡೆಯುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ.

ಘಟನೆ ಕುರಿತು ಮತ್ತಷ್ಟು ಮಾಹಿತಿ ಹಂಚಿಕೊಂಡ ರೈತ ಕೆಂಪೇಗೌಡರು ಅಂದು ಶೋರೂಂ ಸಿಬ್ಬಂದಿ ನಮ್ಮನ್ನು ನೋಡಿ ಕೇವಲವಾಗಿ ಮಾತನಾಡಿದ್ದಲ್ಲದೇ 10 ರೂಪಾಯಿ ತರಲು ಯೋಗ್ಯತೆ ಇಲ್ಲ ಎಂದು ಅವಮಾನಿಸಿದ್ದರು. ವಾಹನ ಖರೀದಿಗಾಗಿ ನಾವು ಒಟ್ಟು ಏಳು ಹೋಗಿದ್ದಾಗ ನೀವು ತಮಾಷೆ ಮಾಡಲು ಬಂದಿದ್ದೀರಾ. ವಾಹನ ತಗೊಂಡು ಹೋಗೊದಕ್ಕೆ ಬಂದಿಲ್ಲ. ನಿಮ್ಮ ಯೋಗ್ಯತೆಗೆ 10 ರೂಪಾಯಿ ಇಲ್ಲ, ಸುಮ್ಮನೇ ಬಂದಿದ್ದೀರಾ' ಎಂದು ಅವಮಾನಿಸಿದ್ದರಂತೆ.

ಕಳೆದ ಡಿಸೆಂಬರ್ 4ರಂದು ಕೂಡಾ ಹೊಸ ವಾಹನ ಖರೀದಿಯ ಉದ್ದೇಶದಿಂದಲೇ ಕೊಟೇಷನ್ ಪಡೆದಿದ್ದ ಕೆಂಪೇಗೌಡರ ಜೊತೆ ಸಿಬ್ಬಂದಿ ಚೆನ್ನಾಗಿಯೇ ಮಾತನಾಡಿದ್ದಂತೆ. ಆದರೆ ಮೊನ್ನೆ ಮುಂಗಡವಾಗಿ ರೂ.2 ಲಕ್ಷ ಡೌನ್ ಪೆಮೆಂಟ್ ಮೂಲಕ ವಾಹನ ಖರೀದಿಗೆ ಬಂದಿದ್ದಾಗ ಶೋರೂಂ ಸಿಬ್ಬಂದಿ ತಮ್ಮ ಯೋಗ್ಯತೆ ಕುರಿತಂತೆ ಮಾತನಾಡಿದ್ದು ತುಂಬಾ ಬೇಸರ ತಂದಿತು ಎಂದಿದ್ದಾರೆ.

ನಾವು ಶೋರೂಂ ಸಿಬ್ಬಂದಿ ಹೇಳಿದಂತೆ ರೂ.10 ಲಕ್ಷ ತಂದ ಕೊಟ್ಟ ನಂತರವೂ ಸಿಬ್ಬಂದಿ ವರ್ತನೆಯು ತಮಗೆ ಬೇಸರ ತಂದಿತು. ಹೀಗಾಗಿ ನಾವು ಅವರು ವಿರುದ್ದ ಪ್ರಕರಣ ದಾಖಲೆ ಮಾಡಿದ್ದೇವು. ಇದೀಗ ಶೋರೂಂ ಸಿಇಒ ಕ್ಷೆಮೆ ಕೋರಿದ್ದರಿಂದ ನಾವು ಕೇಸ್ ವಾಪಸ್ ಪಡೆದುಕೊಂಡಿರುವುದಾಗಿ ಮಾಹಿತಿ ನೀಡಿದ್ದಾರೆ.

ಇನ್ನು ವಾಹನ ಖರೀದಿಸಲು ಬಂದ ಗ್ರಾಹಕನಿಗೆ ಅವಮಾನ ಮಾಡಿದ ಘಟನೆಗೆ ದೇಶಾದ್ಯಂತ ತೀವ್ರ ವ್ಯಕ್ತವಾಗುತ್ತಿದ್ದಂತೆ ಕ್ಷೆಮೆ ಕೋರಿರುವ ಮಹೀಂದ್ರಾ ಶೋರೂಂ ಸಿಇಒ ಗ್ರಾಹಕರೇ ನಮ್ಮ ಆಸ್ತಿ ಎನ್ನುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ.


Click it and Unblock the Notifications