ಚೆನ್ನೈನಲ್ಲೂ ಅಗ್ನಿ ದುರಂತ- ಪಾರ್ಕಿಂಗ್ ಸ್ಥಳದಲ್ಲಿ ಹೊತ್ತಿ ಉರಿದ 200 ಕಾರುಗಳು..!
ಬೆಂಗಳೂರಿನಲ್ಲಿ ಮೊನ್ನೆಯಷ್ಟೇ ಏರ್ ಶೋ ವೇಳೆ ನಡೆದ ಅಗ್ನಿ ಅವಘಡದ ಬೆನ್ನಲ್ಲೇ ತಮಿಳುನಾಡಿನಲ್ಲೂ ಅಂತದ್ದೇ ಒಂದು ಭೀಕರ ಘಟನೆ ನಡೆದುಹೋಗಿದೆ. ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಲಾಗಿದ್ದ ಸುಮಾರು 200ಕ್ಕೂ ಹೆಚ್ಚು ಕಾರುಗಳು ಹೊತ್ತಿ ಉರಿದಿದ್ದು, ಬೆಂಗಳೂರಿನಲ್ಲಿ ನಡೆದ ಅಗ್ನಿ ಅವಘಡವನ್ನು ಮರೆಯುವ ಮುನ್ನವೇ ಈ ದುರಂತ ನಡೆದಿದೆ.

ಚೆನ್ನೈ ನಗರದ ಪೋರೂರಿನಲ್ಲಿರುವ ಶ್ರೀ ರಾಮಚಂದ್ರ ಮೆಡಿಕಲ್ ಸೆಂಟರ್ ಬಳಿಯೇ ಈ ಘಟನೆ ನಡೆದಿದ್ದು, ಖಾಸಗಿ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಲಾಗಿದ್ದ ಸುಮಾರು 200ಕ್ಕೂ ಹೆಚ್ಚು ಕಾರುಗಳಿಗೆ ಬೆಂಕಿ ಹೊತ್ತಿಕೊಂಡಿದೆ. ಘಟನೆ ನಡೆದ ಕೂಡಲೇ ಸ್ಥಳಕ್ಕೆ ಆಗಮಿಸಿದ 8 ಅಗ್ನಿಶಾಮಕ ದಳದ ವಾಹನಗಳು ಮತ್ತು ಸ್ಥಳೀಯರ ನೆರವಿನಿಂದಾಗಿ ಕೆಲವೇ ಗಂಟೆಗಳಲ್ಲಿ ಬೆಂಕಿಯ ಕೆನ್ನಾಲಿಯು ಹತೋಟಿಗೆ ಬಂದಿದ್ದು, ಪಾರ್ಕಿಂಗ್ನಲ್ಲಿ ನಿಲ್ಲಿಸಲಾಗಿದ್ದ ಸುಮಾರು 500ರಿಂದ 600 ಕಾರುಗಳ ಪೈಕಿ 200ಕ್ಕೂ ಕಾರುಗಳು ಸುಟ್ಟು ಕರಕಲಾಗಿವೆ.

ಕಾರ್ ಪಾರ್ಕಿಂಗ್ನಲ್ಲಿ ಸುಮಾರು 100ರಿಂದ 150 ಕಾರುಗಳು ಕಳೆದ ಎರಡು ವರ್ಷಗಳಿಂದಲೇ ಚಾಲನೆ ಇಲ್ಲದೇ ಪಾಳು ಬಿದ್ದಿದ್ದು, ಅಗ್ನಿ ಅವಘಡದಲ್ಲಿ ಸುಟ್ಟುಕರಕಲಾದ ಬಹುತೇಕ ಕಾರುಗಳು ಚೆನ್ನೈ ಮೂಲದ ಖಾಸಗಿ ಸಂಸ್ಥೆಯೊಂದಕ್ಕೆ ಸೇರಿರುವ ಕಾರುಗಳು ಎನ್ನಲಾಗಿದೆ.

ಆದ್ರೆ ಅಗ್ನಿ ಅವಘಡಕ್ಕೆ ನಿಖರವಾದ ಕಾರಣ ಏನೆಂದು ತಿಳಿದುಬಂದಿಲ್ಲವಾದರೂ ವಿಮೆ ಮೊತ್ತ ಪಡೆಯಲು ಬೆಕೆಂದೆ ಕಾರುಗಳಿಗೆ ಬೆಂಕಿ ಹಚ್ಚಿರುವ ಬಗ್ಗೆ ಕೆಲವರು ಸಂಶಯ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಘಟನೆ ಕುರಿತು ವಿಶೇಷ ತನಿಖಾ ತಂಡ ರಚಿಸಿ ತನಿಖೆ ಕೈಗೊಂಡಿರುವ ಚೆನ್ನೈ ಪೊಲೀಸರು ಘಟನೆಗೆ ಅಸಲಿ ಕಾರಣ ಏನು ಎನ್ನುವ ಬಗ್ಗೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

ಇನ್ನು ಕೆಲವು ಮೂಲಗಳ ಪ್ರಕಾರ, ಪಾರ್ಕಿಂಗ್ ಜಾಗದಲ್ಲಿ ಒಣ ಹುಲ್ಲು ಹೆಚ್ಚಾದ ಪರಿಣಾಮ ಬೆಂಕಿಯ ಕಿಡಿ ಹೊತ್ತಿಕೊಂಡಿದೆ. ಹೀಗಾಗಿ ಗಾಳಿಯ ರಭಸಕ್ಕೆ ಇಡೀ ಪಾರ್ಕಿಂಗ್ ಸ್ಥಳವನ್ನು ಬೆಂಕಿಯ ಕೆನ್ನಾಲಿಗೆಯು ಬಹುಬೇಗ ಆವರಿಸಿದ್ದರಿಂದ ಕಾರುಗಳು ಸುಟ್ಟುಕರಕಲಾಗಿವೆ ಎನ್ನುವ ಮಾತುಗಳು ಸಹ ಕೇಳಿಬರುತ್ತಿವೆ.

ನಗರ ಒಳಭಾಗದಲ್ಲೇ ಈ ಘಟನೆ ನಡೆದಿದ್ದರಿಂದ ದಟ್ಟವಾದ ಹೊಗೆಯು ಸುಮಾರು 2 ಕಿ.ಮಿ ವರೆಗೆ ಆವರಿಸಿದ್ದರಿಂದ ಘಟನಾ ಸ್ಥಳದ ಸುತ್ತಮತ್ತಲಿನ ಜನರು ಕೆಲವು ಗಂಟೆಗಳ ಕಾಲ ಸರಿಯಾಗಿ ಉಸಿರಾಡಲು ಸಹ ಪರದಾಡಿದ್ದಾರೆ.
ಸದ್ಯ ಘಟನಾ ಸ್ಥಳದಿಂದ ಸುಟ್ಟುಕರಕಲಾದ ಕಾರುಗಳನ್ನು ಬೇರೆಡೆ ಸ್ಥಳಾಂತರ ಮಾಡಲಾಗುತ್ತಿದ್ದು, ಪಾರ್ಕಿಂಗ್ ಸ್ಥಳದಲ್ಲಿ ಅಗ್ನಿಅವಘಡಕ್ಕೆ ಕಾರಣವಾಗಬಹುದಾದ ಕೆಲವು ಕೆಟ್ಟನಿಂತ ಕಾರುಗಳನ್ನು ಸಹ ತೆಗೆದುಕೊಂಡು ಹೋಗುವಂತೆ ಮಾಲೀಕರಿಗೆ ಖಡಕ್ ಸೂಚನೆ ನೀಡಲಾಗಿದೆ.

ಇನ್ನು ಬೆಂಗಳೂರಿನಲ್ಲಿ ಏರ್ ಶೋ ವೀಕ್ಷಣೆಗಾಗಿ ಬರುವವರಿಗಾಗಿ ತಾತ್ಕಾಲಿಕವಾಗಿ ವ್ಯವಸ್ಥೆ ಮಾಡಲಾಗಿದ್ದ ಪಾರ್ಕಿಂಗ್ ಸ್ಥಳದಲ್ಲೂ ಕಳೆದ ಶನಿವಾರದಂದು ಅಗ್ನಿ ಅವಘಡ ಸಂಭವಿಸಿದ್ದಲ್ಲದೇ ಸುಮಾರು 273 ಕಾರುಗಳು ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿದ್ದವು.
MOST READ: ಏರ್ ಶೋ ವೇಳೆ ಅಗ್ನಿ ದುರಂತ- ಕಾರು ಮಾಲೀಕರಿಗೆ ಧೈರ್ಯ ತುಂಬಿದ ಟೊಯೊಟಾ..!

ಇವುಗಳಲ್ಲಿ ಕೆಲವು ಕಾರುಗಳನ್ನು ಪತ್ತೆ ಹಚ್ಚಲು ಸಾಧ್ಯವಿಲ್ಲದಷ್ಟು ಸುಟ್ಟುಹೊಗಿದ್ದು, ತಮ್ಮ ಪ್ರೀತಿಯ ಕಾರನ್ನು ಕಳೆದುಕೊಂಡ ಅದೆಷ್ಟೋ ಜನರ ಕಣ್ಣಲ್ಲಿ ಇನ್ನು ನೀರು ನಿಂತಿಲ್ಲ. ಯಾಕೆಂದ್ರೆ ವರ್ಷಾನುಗಟ್ಟಲೇ ಕಷ್ಟುಪಟ್ಟು ಸಂಪಾದಿಸಿ ಖರೀದಿಸಿದ ಕಾರು ಕೆಲವೇ ನಿಮಿಷಗಳಲ್ಲಿ ಸುಟ್ಟು ಕರಕಲಾದಾಗ ಅವರ ನೋವು ಅವರಿಗೆ ಮಾತ್ರ ಗೊತ್ತು.

ಆದರೂ ಕೂಡಾ ವಿಮಾ ಸಂಸ್ಥೆಗಳು, ಕಾರು ಉತ್ಪಾದನಾ ಸಂಸ್ಥೆಗಳು ಮತ್ತು ರಾಜ್ಯ ಸರ್ಕಾರವು ಕಾರು ಮಾಲೀಕರಿಗೆ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದ್ದರೂ ಸಹ ಆದ ಅಗ್ನಿ ದುರಂತದಿಂದ ಕೆಲವು ಕಾರು ಮಾಲೀಕರು ನಷ್ಟದ ಸುಳಿಗೆ ಸಿಲುಕಿದ್ದಾರೆ.
MOST READ: ಫಾರ್ಚೂನರ್ ಕಾರಿಗಿಂತ ದುಬಾರಿಯೆಂತೆ ಈ ಪೋರ್ಷೆ ಕಾರಿನ ನಂಬರ್ ಪ್ಲೇಟ್..!

ಕಾರು ಮಾಲೀಕರಿಗೆ ವಿಮೆ ಹಣ ಬಂದರೂ ಸಹ ಕಾರಿನಲ್ಲಿದ್ದ ಕೆಲವು ದುಬಾರಿ ವಸ್ತುಗಳಿಗೆ ಪರಿಹಾರ ಸಿಗದಿರುವುದು ಕೆಲವರಿಗೆ ಭಾರೀ ನಷ್ಟು ಉಂಟು ಮಾಡಲಿದ್ದು, ಇನ್ನು ಕೆಲವು ವಿಮೆ ಹೊಂದದ ಕಾರು ಮಾಲೀಕರಿಗೆ ಬರಬಹುದಾದ ಪರಿಹಾರವು ಸಿಗುವುದು ಕೂಡಾ ಕಷ್ಟವಾಗಿದೆ.


Click it and Unblock the Notifications