ಉತ್ತರ ಪ್ರದೇಶದಲ್ಲಿ ನಿರ್ಮಾಣವಾಗಲಿದೆ ಮತ್ತೊಂದು ಎಕ್ಸ್ಪ್ರೆಸ್ವೇ
ದೆಹಲಿ - ಲಕ್ನೋ ನಡುವಿನ ಪ್ರಯಾಣದ ಸಮಯ ಶೀಘ್ರದಲ್ಲೇ ಕಡಿಮೆಯಾಗಲಿದೆ. ಈ ಎರಡು ನಗರಗಳನ್ನು ಸಂಪರ್ಕಿಸುವ 554 ಕಿ.ಮೀ ಉದ್ದದ ಎಕ್ಸ್ಪ್ರೆಸ್ವೇ ಕಾಮಗಾರಿ ಶೀಘ್ರದಲ್ಲಿಯೇ ಆರಂಭವಾಗಲಿದೆ ಎಂದು ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ಮಾಹಿತಿ ನೀಡಿದ್ದಾರೆ. ಈ ಯೋಜನೆ ಪೂರ್ಣಗೊಂಡ ನಂತರ ಎರಡು ನಗರಗಳ ನಡುವಿನ ಸಂಚಾರ ಅವಧಿ ಕೇವಲ ಮೂರೂವರೆ ಗಂಟೆಗಳಾಗಲಿದೆ ಎಂದು ಅವರು ಹೇಳಿದ್ದಾರೆ.

ದೆಹಲಿ - ಲಕ್ನೋ ನಗರಗಳು ಈಗ ಯಮುನಾ ಹಾಗೂ ತಾಜ್ ಎಕ್ಸ್ಪ್ರೆಸ್ವೇಗಳ ಮೂಲಕ ಸಂಪರ್ಕ ಹೊಂದಿವೆ. ಸದ್ಯ ಈ ಎರಡು ನಗರಗಳ ನಡುವೆ ಪ್ರಯಾಣಿಸಲು 7 ಗಂಟೆಗಳಿಗಿಂತಲೂ ಹೆಚ್ಚು ಸಮಯ ಬೇಕಾಗುತ್ತದೆ. ಪ್ರಸ್ತಾವಿತ ಹೊಸ ಎಕ್ಸ್ಪ್ರೆಸ್ವೇ ಯೋಜನೆಯನ್ನು ಮುಂದಿನ 10 - 12 ದಿನಗಳಲ್ಲಿ ಅಧಿಕೃತವಾಗಿ ಘೋಷಿಸಲಾಗುವುದು. ಈ ಯೋಜನೆಗೆ ಚಾಲನೆ ನೀಡುವ ಸಮಾರಂಭ ನಡೆಯಲಿದ್ದು, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಹ ಭಾಗವಹಿಸಲಿದ್ದಾರೆ.

ಇದೇ ವೇಳೆ ನಿತಿನ್ ಗಡ್ಕರಿರವರು ಉತ್ತರ ಪ್ರದೇಶದಲ್ಲಿ ಆರು ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಉದ್ಘಾಟನೆಯನ್ನು ಘೋಷಿಸಿದರು. ರೂ. 8,364 ಕೋಟಿ ವೆಚ್ಚದಲ್ಲಿ ಈ ಎಕ್ಸ್ಪ್ರೆಸ್ವೇ ಯೋಜನೆಗಳನ್ನು ವಿಸ್ತರಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು. ಮುಂಬರುವ ದೆಹಲಿ - ಲಕ್ನೋ ಎಕ್ಸ್ಪ್ರೆಸ್ವೇ ಯೋಜನೆಯನ್ನು ಹೊರತುಪಡಿಸಿ, ಉತ್ತರ ಪ್ರದೇಶವು ಈಗಾಗಲೇ ಹಲವು ರಾಷ್ಟ್ರೀಯ ಹೆದ್ದಾರಿ ಹಾಗೂ ಎಕ್ಸ್ಪ್ರೆಸ್ವೇಗಳ ಜಾಲವನ್ನು ಹೊಂದಿದೆ.

ದೆಹಲಿ - ಆಗ್ರಾವನ್ನು ಸಂಪರ್ಕಿಸುವ ಯಮುನಾ ಎಕ್ಸ್ಪ್ರೆಸ್ವೇ, ಆಗ್ರಾ - ಲಕ್ನೋವನ್ನು ಸಂಪರ್ಕಿಸುವ ತಾಜ್ ಎಕ್ಸ್ಪ್ರೆಸ್ವೇ, ರಾಷ್ಟ್ರೀಯ ರಾಜಧಾನಿಯನ್ನು ಪಶ್ಚಿಮ ಉತ್ತರ ಪ್ರದೇಶದಲ್ಲಿರುವ ಮೀರತ್ನೊಂದಿಗೆ ಸಂಪರ್ಕಿಸುವ ದೆಹಲಿ - ಮೀರತ್ ಎಕ್ಸ್ಪ್ರೆಸ್ವೇಗಳು ಉತ್ತರ ಪ್ರದೇಶದಲ್ಲಿರುವ ಕೆಲವು ಪ್ರಮುಖ ಎಕ್ಸ್ಪ್ರೆಸ್ವೇಗಳಾಗಿವೆ. ಇವುಗಳ ಹೊರತಾಗಿ ಇನ್ನೂ ಹಲವು ಎಕ್ಸ್ಪ್ರೆಸ್ವೇ ಯೋಜನೆಗಳ ಕಾಮಗಾರಿ ನಡೆಯುತ್ತಿದೆ.

ಅವುಗಳಲ್ಲಿ ಮುಖ್ಯವಾದುದೆಂದರೆ ಗಂಗಾ ಎಕ್ಸ್ಪ್ರೆಸ್ವೇ. ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ರವರು ಈ ಎಕ್ಸ್ ಪ್ರೆಸ್ ವೇಗೆ ಶಂಕು ಸ್ಥಾಪನೆ ನೆರವೇರಿಸಿದ್ದರು. ರೂ. 36,200 ಕೋಟಿ ವೆಚ್ಚದಲ್ಲಿ ನೀರ್ಮಾನವಾಗಲಿರುವ ಮೀರತ್ - ಪ್ರಯಾಗರಾಜ್ಗೆ ಸಂಪರ್ಕ ಕಲ್ಪಿಸುವ 594 ಕಿ.ಮೀ ಉದ್ದದ ಈ ಎಕ್ಸ್ಪ್ರೆಸ್ವೇ ರಾಜ್ಯದ ಅತಿ ಉದ್ದದ ಎಕ್ಸ್ಪ್ರೆಸ್ವೇ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಮುಂದಿನ ಮೂರು ವರ್ಷಗಳಲ್ಲಿ ಈ ಎಕ್ಸ್ ಪ್ರೆಸ್ ವೇ ಯೋಜನೆಯ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಗಳಿವೆ. ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ರವರು ಉತ್ತರ ಪ್ರದೇಶದ ಪೂರ್ವಾಂಚಲ ಎಕ್ಸ್ಪ್ರೆಸ್ವೇಯನ್ನು ಉದ್ಘಾಟಿಸಿದ್ದರು. ಈ ಎಕ್ಸ್ಪ್ರೆಸ್ವೇ ರಾಜ್ಯದ ರಾಜಧಾನಿ ಲಕ್ನೋವನ್ನು ರಾಜ್ಯದ ಪೂರ್ವ ಭಾಗದಲ್ಲಿರುವ ಗಾಜಿಪುರದೊಂದಿಗೆ ಸಂಪರ್ಕಿಸುತ್ತದೆ.

ರೂ. 22,495 ಕೋಟಿ ವೆಚ್ಚದಲ್ಲಿ ಪೂರ್ವಾಂಚಲ ಎಕ್ಸ್ಪ್ರೆಸ್ವೇಯನ್ನು ನಿರ್ಮಿಸಲಾಗಿದೆ. ಈ ಎಕ್ಸ್ಪ್ರೆಸ್ವೇಯನ್ನು ಭಾರತೀಯ ವಾಯುಪಡೆಯ ಫೈಟರ್ ಜೆಟ್ಗಳಿಗೆ ತುರ್ತು ರನ್ವೇಯಾಗಿಯೂ ಬಳಸಬಹುದು. ಇತ್ತೀಚಿಗೆ ಕೇಂದ್ರ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ರವರು ತಮ್ಮ ಭಾಷಣದಲ್ಲಿ ಉತ್ತರ ಪ್ರದೇಶದ ರಸ್ತೆಗಳನ್ನು ಅಮೆರಿಕದಾ ರಸ್ತೆಗಳಂತೆ ಅಭಿವೃದ್ಧಿಪಡಿಸುವುದಾಗಿ ಹೇಳಿದ್ದರು.

ಇದಕ್ಕಾಗಿ ರೂ. 5 ಸಾವಿರ ಕೋಟಿ ವೆಚ್ಚದ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಈ ಮೊತ್ತದಿಂದ ಉತ್ತರ ಪ್ರದೇಶದ ರಸ್ತೆಗಳ ಮೂಲಸೌಕರ್ಯ ಸುಧಾರಣೆಯಾಗಲಿದ್ದು, ಅಮೆರಿಕಾದ ರಸ್ತೆಗಳಂತೆ ಇಲ್ಲಿನ ರಸ್ತೆಗಳೂ ಅಭಿವೃದ್ಧಿ ಹೊಂದಲಿವೆ ಎಂದು ಅವರು ಹೇಳಿದರು. ನವೆಂಬರ್ 2021ರ ವೇಳೆಗೆ ದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಉದ್ದ 1,40,937 ಕಿ.ಮೀಗಳಾಗಿದೆ ಎಂದು ನಿತಿನ್ ಗಡ್ಕರಿ ರವರು ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ.

ಭಾರತದಲ್ಲಿರುವ ರಾಷ್ಟ್ರೀಯ ಹೆದ್ದಾರಿಗಳ ಒಟ್ಟು ಉದ್ದವು 2014ರ ಏಪ್ರಿಲ್ ತಿಂಗಳಿನಲ್ಲಿ ಸುಮಾರು 91,287 ಕಿ.ಮೀಗಳಾಗಿತ್ತು. ಈ ಪ್ರಮಾಣವು ವರ್ಷದ ನವೆಂಬರ್ ಅಂತ್ಯದ ವೇಳೆಗೆ ಸುಮಾರು 1,40,937 ಕಿ.ಮೀಗಳಿಗೆ ಏರಿಕೆಯಾಗಿದೆ ಎಂದು ಅವರು ಹೇಳಿದರು. ಈ ಬಗ್ಗೆ ಅಂಕಿ ಅಂಶಗಳನ್ನು ಹಂಚಿಕೊಂಡ ಗಡ್ಕರಿರವರು, 2014 - 15 ರಿಂದ ಈ ವರ್ಷದ ನವೆಂಬರ್ ಅಂತ್ಯದವರೆಗೆ ಸುಮಾರು 82,058 ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ನಿಗದಿಪಡಿಸಲಾಗಿದೆ.

ಈ ಅವಧಿಯಲ್ಲಿ ಸುಮಾರು 68,068 ಕಿ.ಮೀ ರಸ್ತೆಗಳನ್ನು ನಿರ್ಮಿಸಲಾಗಿದೆ ಎಂದು ಹೇಳಿದರು. ಇದೇ ಅವಧಿಯಲ್ಲಿ ಸುಮಾರು ರೂ. 1,13,000 ಕೋಟಿ ವೆಚ್ಚದಲ್ಲಿ 4,970 ಕಿ.ಮೀಗಳಲ್ಲಿ 49 ಯೋಜನೆಗಳು ಪ್ರಗತಿಯ ವಿವಿಧ ಹಂತಗಳಲ್ಲಿದ್ದು, 2023 - 24 ರ ವೇಳೆಗೆ ಪೂರ್ಣಗೊಳಿಸುವ ಗುರಿಯನ್ನು ಹೊಂದಲಾಗಿದೆ. ಕೇಂದ್ರ ಸಾರಿಗೆ ಇಲಾಖೆಯು ಹೆಚ್ಚುವರಿ 27 ಗ್ರೀನ್ಫೀಲ್ಡ್ ಎಕ್ಸ್ಪ್ರೆಸ್ವೇ ಅಥವಾ ಪ್ರವೇಶ ನಿಯಂತ್ರಿತ ಹೆದ್ದಾರಿಗಳಿಗಾಗಿ ಒಟ್ಟು ರೂ. 3.6 ಲಕ್ಷ ಕೋಟಿ ಹೂಡಿಕೆ ಮಾಡಲಿದೆ ಎಂದು ಗಡ್ಕರಿ ಹೇಳಿದರು.

ಕೇಂದ್ರ ಸರ್ಕಾರವು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಡ್ವಾನ್ಸ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಂ (ಎಟಿಎಂಸಿ) ಸಹಾಯದಿಂದ ರಸ್ತೆ ಸುರಕ್ಷತೆಯನ್ನು ಬಲಪಡಿಸುತ್ತಿದೆ. ಈ ತಂತ್ರಜ್ಞಾನವು ಮಿತಿ ಮೀರಿದ ವಾಹನಗಳ ಮೇಲೆ ನಿರ್ಬಂಧಗಳನ್ನು ಹಾಕಿ, ಹೆದ್ದಾರಿಗಳಲ್ಲಿ ಅಪಘಾತಗಳನ್ನು ಕಡಿಮೆ ಮಾಡಲು ನೆರವಾಗುತ್ತದೆ. ಇದರ ಜೊತೆಗೆ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳ ರಸ್ತೆ ಸುರಕ್ಷತಾ ಆಡಿಟ್ ನಡೆಸಲಾಗುತ್ತಿದೆ.

ಇದರ ಅಡಿಯಲ್ಲಿ ಹೆದ್ದಾರಿಗಳಲ್ಲಿರುವ ಅಪಘಾತ ಪೀಡಿತ ಬ್ಲಾಕ್ ಸ್ಪಾಟ್ ಗಳನ್ನು ತೆಗೆದುಹಾಕಲಾಗುತ್ತಿದೆ. ಸದ್ಯಕ್ಕೆ 4,500 ಬ್ಲಾಕ್ ಸ್ಪಾಟ್ ಗಳನ್ನು ಗುರುತಿಸಲಾಗಿದೆ. ಇದರಲ್ಲಿ ಒಂದು ಸಾವಿರ ಬ್ಲಾಕ್ ಸ್ಪಾಟ್ ಗಳನ್ನು ಸರಿಪಡಿಸುವ ಕೆಲಸ ನಡೆಯುತ್ತಿದೆ. ಈ ಹಿಂದೆ 2500 ಬ್ಲಾಕ್ ಸ್ಪಾಟ್ ಗಳನ್ನು ಸರಿಪಡಿಸಲಾಗಿದೆ.

ಹೆದ್ದಾರಿಗಳು ಹಾಗೂ ಎಕ್ಸ್ಪ್ರೆಸ್ವೇಗಳಲ್ಲಿ ಚಲಿಸುವ ವಾಹನಗಳ ವೇಗದ ಮಿತಿಯನ್ನು ಹೆಚ್ಚಿಸಲು ಸಂಸತ್ತಿನಲ್ಲಿ ಶೀಘ್ರದಲ್ಲೇ ಮಸೂದೆಯನ್ನು ಮಂಡಿಸುವುದಾಗಿ ಅವರು ಹೇಳಿದ್ದಾರೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಚತುಷ್ಪಥ ರಸ್ತೆಗಳ ವೇಗದ ಮಿತಿ ಪ್ರತಿ ಗಂಟೆಗೆ ಕನಿಷ್ಠ 100 ಕಿ.ಮೀ ಆಗಿರಬೇಕು. ಇನ್ನು ದ್ವಿಪಥ ಹಾಗೂ ನಗರ ರಸ್ತೆಗಳಲ್ಲಿ ವೇಗದ ಮಿತಿಯನ್ನು ಗಂಟೆಗೆ 80 ಕಿ.ಮೀ ಹಾಗೂ 75 ಕಿ.ಮೀಗಳಿಗೆ ಹೆಚ್ಚಿಸಬೇಕು ಎಂದು ಗಡ್ಕರಿ ಹೇಳಿದ್ದಾರೆ.
ಗಮನಿಸಿ: ಈ ಲೇಖನದಲ್ಲಿರುವ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.


Click it and Unblock the Notifications