ಸೇನಾ ಟ್ರಕ್ಗೆ ಡಿಕ್ಕಿ ಹೊಡೆದ ನಿಸ್ಸಾನ್ ಮೈಕ್ರಾ- ಸ್ಥಳದಲ್ಲೇ ಐವರು ದುರ್ಮರಣ
ಸೇನಾ ಟ್ರಕ್ಗೆ ಡಿಕ್ಕಿ ಹೊಡೆದ ನಿಸ್ಸಾನ್ ಮೈಕ್ರಾ- ಸ್ಥಳದಲ್ಲೇ ಐವರು ದುರ್ಮರಣ
ಹೈ ಸ್ಪೀಡ್ ಯಾವತ್ತಿದ್ರೂ ಪ್ರಾಣಕ್ಕೆ ಸಂಚಕಾರ ತರತ್ತೆ ಅನ್ನುವುದರಲ್ಲಿ ಎರಡು ಮಾತಿಲ್ಲ. ಯಾಕೆಂದ್ರೆ ದೇಶದಲ್ಲಿ ದಿನಂಪ್ರತಿ ಸಂಭವಿಸುವ ಶೇ.80ರಷ್ಟು ಅಪಘಾತಗಳು ಹೈ ಸ್ಪೀಡ್ನಿಂದಲೇ ಎನ್ನುವುದು ಈಗಾಗಲೇ ಬಹುತೇಕರಿಗೆ ಗೊತ್ತಿರುವ ವಿಚಾರ. ಇಂದೂ ಕೂಡಾ ಇಂತದ್ದೆ ಒಂದು ಅಪಘಾತ ಪ್ರಕರಣದಲ್ಲಿ ನಿಸ್ಸಾನ್ ಮೈಕ್ರಾ ಕಾರು ಸೇನಾ ಟ್ರಕ್ಗೆ ಡಿಕ್ಕಿ ಹೊಡೆದಿರುವುದು ದೊಡ್ಡ ದುರಂತಕ್ಕೆ ಕಾರಣವಾಗಿದೆ.

ಅತಿಯಾದ ವೇಗ ಜೀವಕ್ಕೆ ಅಪಾಯ ಅಂತಾ ಗೊತ್ತಿದ್ರು ಬಹುತೇಕ ವಾಹನ ಸವಾರರಿಗೆ ಸ್ಪೀಡ್ನ ಹುಚ್ಚು ಕಡಿಮೆಯಾಗುವುದೇ ಇಲ್ಲ. ಕೆಲವರಂತೂ ಶೋಕಿಗಾಗಿ ಹೆಚ್ಚು ಜನ ಸಂದಣಿ ಇರುವ ಪ್ರದೇಶಗಳಲ್ಲೇ ಮಿತಿ ಮೀರಿದ ವೇಗದಲ್ಲಿ ವಾಹನಗಳನ್ನು ಚಾಲನೆ ಮಾಡುವುದನ್ನು ದಿನನಿತ್ಯ ನೋಡುತ್ತಲೇ ಇರುತ್ತವೆ.

ಹೀಗೆ ಅತಿಯಾದ ವೇಗದಲ್ಲಿದ್ದ ನಿಸ್ಸಾನ್ ಮೈಕ್ರಾ ಹ್ಯಾಚ್ಬ್ಯಾಕ್ ಕಾರೊಂದು ಸೇನಾ ಟ್ರಕ್ಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಮೂವರು ಮತ್ತು ಸೇನಾ ಪಡೆಯ ಇಬ್ಬರು ಸಿಬ್ಬಂದಿ ಸ್ಥಳದ್ದಲ್ಲೇ ಸಾವನ್ನಪ್ಪಿರುವ ಘಟನೆ ರಾಜಸ್ತಾನದ ಉದಯಪುರ್ನಲ್ಲಿ ನಡೆದಿದೆ.

ಉದಯಪುರ್ ಟು ಪಿಂದ್ವಾರ್ ನಡುವಿನ ರಾಷ್ಟ್ರೀಯ ಹೆದ್ದಾರಿ 76ರಲ್ಲಿ ಈ ದುರಂತ ನಡೆದಿದ್ದು, ವೇಗದಲ್ಲಿದ ಮೈಕ್ರಾ ಕಾರು ನಿಯಂತ್ರಣ ತಪ್ಪಿ ಸೇನಾ ಟ್ರಕ್ನ ಫ್ಯೂಲ್ ಟ್ಯಾಂಕ್ ಭಾಗಕ್ಕೆ ರಭಸವಾಗಿ ಗುದ್ದಿದೆ. ಈ ವೇಳೆ ಸೇನಾ ಟ್ರಕ್ಗೆ ಬೆಂಕಿ ಹೊತ್ತಿಕೊಂಡಿದ್ದಲ್ಲದೇ ಕೆಲವೇ ನಿಮಿಷಗಳಲ್ಲಿ ಬೆಂಕಿಯ ಕೆನ್ನಾಲಿಗೆಯು ಟ್ರಕ್ ಅನ್ನು ಸಂಪೂರ್ಣವಾಗಿ ಆವರಿಸಿಕೊಂಡಿದೆ.

ಈ ವೇಳೆ ಪ್ರಾಣಕಳೆದುಕೊಂಡು ಇಬ್ಬರು ಸಿಬ್ಬಂದಿಯನ್ನ ಹೊರತು ಪಡಿಸಿ ಉಳಿದವರು ಕೂಡಲೇ ಹೊರಬಂದಿದ್ದು, ನಡೆಯಬಹುದಾಗಿದ್ದ ಮತ್ತೊಂದು ದುರಂತದಿಂದ ಎಲ್ಲರೂ ಪಾರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಅದೇ ರೀತಿಯಾಗಿ ಕಾರಿನಲ್ಲಿದ್ದ ಮೂವರು ಯುವಕರು ಸಹ ಟ್ರಕ್ಗೆ ಡಿಕ್ಕಿ ಹೊಡೆದ ಸ್ಥಳದಲ್ಲೇ ಸಾವನ್ನಪ್ಪಿದ್ದು, ವೇಗದಲ್ಲಿದ್ದ ಪರಿಣಾಮವೇ ಈ ದುರಂತಕ್ಕೆ ಪ್ರಮುಖ ಕಾರಣ ಎಂಬುವುದು ಪ್ರಾಥಾಮಿಕ ತನಿಖೆ ವೇಳೆ ಬಹಿರಂಗವಾಗಿದೆ.

ಇನ್ನು ಟ್ರಕ್ಗೆ ಡಿಕ್ಕಿ ಹೊಡೆದ ಕಾರಿನ ಸ್ಥಿತಿ ಕಂಡರೇ ಅದರಲ್ಲಿದ್ದ ಪ್ರಯಾಣಿಕರ ಸ್ಥಿತಿ ಯಾವ ರೀತಿಯಾಗಿತ್ತು ಎಂಬುವುದು ಊಹೆ ಮಾಡಲು ಅಸಾಧ್ಯ. ಯಾಕೆಂದ್ರೆ ಕಳಪೆ ಗುಣಮಟ್ಟದಿಂದ ಕೂಡಿರುವ ಮೈಕ್ರಾ ಕಾರುಗಳ ರಕ್ಷಣಾ ಕವಚವು ಒಂದೇ ಏಟಿಗೆ ಪುಡಿ ಪುಡಿಯಾಗಿರುವುದನ್ನು ನಾವಿಲ್ಲಿ ಗಮನಿಸಬಹುದು.

ಹೀಗಾಗಿ ಕಾರುಗಳ ಆಯ್ಕೆ ವೇಳೆ ಗುಣಮಟ್ಟದಿಂದ ಕೂಡಿರುವ ಕಾರುಗಳ ಆಯ್ಕೆ ತುಂಬಾ ಮಹತ್ವದ ವಿಚಾರವಾಗಿದ್ದು, ಅದಕ್ಕೂ ಮುನ್ನ ರಸ್ತೆ ನಿಯಮಗಳನ್ನು ಸರಿಯಾಗಿ ಪಾಲಿಸುವುದು ಕೂಡಾ ಅಷ್ಟೇ ಮುಖ್ಯ. ಇಲ್ಲವಾದ್ರೆ ಒಬ್ಬರು ಮಾಡುವ ತಪ್ಪಿಗೆ ಇತರರು ಬಲಿಯಾಗುವುದು ದುರಂತವೇ ಸರಿ.

ವೇಗದಲ್ಲಿ ಮಿತಿಯಿರಲಿ
ಭಾರತೀಯ ಬಹುತೇಕ ಹೆದ್ದಾರಿಗಳಲ್ಲಿ ವೇಗ ಮಿತಿ ನಿಯಮ ಸರಿಯಾಗಿ ಅನುಷ್ಠಾನಕ್ಕೆ ಬಂದಿಲ್ಲ. ಹಾಗಾಗಿ ಹೆದ್ದಾರಿ ಪರಿಸ್ಥಿತಿಗೆ ಅನುಗುಣವಾಗಿ ವೇಗದಲ್ಲಿ ಮಿತಿಯಿರಲಿ. ನಿಮ್ಮ ಗುರಿ ತಲುಪಲು ಯಾವುದೇ ರೀತಿಯ ಅವಸರ ಬೇಡ. ಮಳೆ, ಟ್ರಾಫಿಕ್ ಅಥವಾ ಮಂಜಿನ ತೊಂದರೆಯಿದ್ದಲ್ಲಿ ನಿಧಾನವಾಗಿ ಚಲಿಸಲು ಮರೆಯದಿರಿ. ಮುನ್ಮುಖವಾಗಿ ಚಲಿಸುವ ಪ್ರತಿಯೊಂದು ವಾಹನವನ್ನು ಓವರ್ ಟೇಕ್ ಮಾಡುವ ಗೋಜಿಗೆ ಹೋಗದಿರಿ.

ಟ್ಯಾಂಕರ್ ಮತ್ತು ಲಾರಿಗಳು
ಘಾಟಿ ಪ್ರದೇಶಗಳಲ್ಲಿ ನಿಧಾನವಾಗಿ ಚಲಿಸುವ ಅಮಿತ ಭಾರದ ಟ್ಯಾಂಕರ್ ಮತ್ತು ಸರಕು ಲಾರಿಗಳು ತುಂಬಿಕೊಂಡಿರುವುದರಿಂದ ಅತಿಯಾದ ಜಾಗ್ರತೆಯಿಂದ ಪ್ರಯಾಣ ಮುಂದುವರಿಸಿರಿ. ಹೆದ್ದಾರಿಗಳಲ್ಲಿ ಸಾಕಷ್ಟು ಹೊತ್ತು ಡ್ರೈವಿಂಗ್ ಮಾಡಿ ದಣಿವಾಗಿರುವುದರಿಂದ ಅಜಾಗರೂಕತೆಯಿಂದ ಚಾಲನೆ ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹಾಗಾಗಿ ಓವರ್ ಟೇಕ್ ಮಾಡುವಾಗ ಎಚ್ಚರದಿಂದಿರಬೇಕು.

ಎರಡು ಲೇನ್ ಹೆದ್ದಾರಿ
ಎರಡು ಲೇನ್ ಹೆದ್ದಾರಿಗಳನ್ನು ಸಮೀಪಿಸಿದಾಗ ವೇಗದಲ್ಲಿ ಮಿತಿಯಿರಲಿ. ಮುಂಭಾಗದಿಂದ ಬರುವ ವಾಹನಗಳು ಹೆಡ್ ಲೈಟ್ ಫ್ಲ್ಯಾಶ್ ಮಾಡಿದಾಗ ವಾಹನ ನಿಧಾನ ಮಾಡಿ ಆ ಗಾಡಿಗೆ ಮುಂದಕ್ಕೆ ಹೋಗಲು ಅನುವು ಮಾಡಿಕೊಡಿ. ಹಾಗೆಯೇ ಹೈ ಬಿಮ್ ಹೆಡ್ ಲೈಟ್ ಗಳನ್ನು ಡಿಮ್ ಆ್ಯಂಡ್ ಡಿಪ್ ಮಾಡಲು ಮರೆಯದಿರಿ.

ರಸ್ತೆ ಚಿಹ್ನೆ
ಪ್ರಯಾಣ ಹಾದಿಯ ಬಗ್ಗೆ ನಿಮಗೆ ಸ್ಪಷ್ಟವಾದ ಜ್ಞಾನವಿಲ್ಲದಿದ್ದಲ್ಲಿ ರಸ್ತೆ ಮಾರ್ಗ ಬದಿಗಳಲ್ಲಿರುವ ರಸ್ತೆ ಚಿಹ್ನೆಗಳನ್ನು ಪಾಲಿಸಲು ಮರೆಯದಿರಿ. ಕಡಿದಾದ ತಿರುವು, ಕಿರಿದಾದ ಸೇತುವೆ, ಅಂಕುಡೊಂಕುವಕ್ರಾಕೃತಿ, ಝಿಬ್ರಾ ಕ್ರಾಸಿಂಗ್, ಇಳಿಜಾರು, ರೈಲ್ವೆ ಕ್ರಾಸಿಂಗ್ ಹೀಗೆ ಎಲ್ಲ ರಸ್ತೆ ಚಿಹ್ನೆಗಳನ್ನು ನೋಡಿಕೊಂಡು ಮುನ್ನುಗಬೇಕು.

ಅಪಕ್ವ ಚಾಲನೆ
ದೇಶದಲ್ಲಿ ನಡೆಯುತ್ತಿರುವ ಬಹುತೇಕ ಅಪಘಾತ ಪ್ರಕರಣಗಳು ಅಪಕ್ವ ರೀತಿಯ ಚಾಲನೆಯಿಂದಲೇ ನಡೆಯುತ್ತಿರುತ್ತದೆ. ಹಾಗಾಗಿ ಇತರರನ್ನು ದೂಷಿಸುವ ಮೊದಲು ನಿಮ್ಮ ತಪ್ಪನ್ನು ಸರಿಪಡಿಸಿಕೊಂಡು ಸುರಕ್ಷಿತ ಚಾಲನೆಯತ್ತ ಗಮನನೀಡಿ.


Click it and Unblock the Notifications








