ಇಂಧನ ಬೆಲೆ ಏರಿಕೆಯಿಂದ ದೇಶದ 95% ಜನರಿಗೆ ಯಾವುದೇ ತೊಂದರೆಯಿಲ್ಲವೆಂದ ಸಚಿವ
ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಗಳು ಏರಿಕೆಯಾಗುತ್ತಲೇ ಇವೆ. ಇಂಧನಗಳ ಬೆಲೆ ಏರಿಕೆಯಿಂದಾಗಿ ಅಗತ್ಯ ವಸ್ತುಗಳ ಬೆಲೆಯೂ ಏರಿಕೆಯಾಗಿದೆ. ಬೆಲೆ ಏರಿಕೆಯಿಂದಾಗಿ ಜನ ಸಾಮಾನ್ಯರು ಹೈರಣಾಗಿದ್ದಾರೆ. ಭಾರತದ ಬಹುತೇಕ ಎಲ್ಲಾ ನಗರಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ರೂ. 110 ಗಳ ಗಡಿ ದಾಟಿದೆ. ಇನ್ನು ಪ್ರತಿ ಲೀಟರ್ ಡೀಸೆಲ್ ಬೆಲೆ ರೂ. 100 ರ ಗಡಿ ದಾಟಿದೆ.

ಭಾರತದಲ್ಲಿ ಕಳೆದ ಮೂರು ವಾರಗಳಲ್ಲಿ 15 ಬಾರಿ ಬೆಲೆ ಏರಿಕೆ ಮಾಡಲಾಗಿದೆ ಎಂದು ವರದಿಗಳಾಗಿವೆ. ಇಂಧನಗಳ ಬೆಲೆ ಏರಿಕೆಗೆ - ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಏರಿಕೆ, ಒಪೆಕ್ ದೇಶಗಳು ಕಡಿಮೆ ಪ್ರಮಾಣದಲ್ಲಿ ಇಂಧನ ಉತ್ಪಾದಿಸುತ್ತಿರುವುದು, ಭಾರತದಲ್ಲಿ ಇಂಧನಗಳ ಮೇಲೆ ವಿಧಿಸಲಾಗುವ ವಿವಿಧ ತೆರಿಗೆಗಳು ಸೇರಿದಂತೆ ಹಲವು ಕಾರಣಗಳಿವೆ.

ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಮಾಡುವಂತೆ ದೇಶದ ಹಲವೆಡೆ ಪ್ರತಿಭಟನೆಗಳು ನಡೆಯುತ್ತಿವೆ. ಆದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಕೆಲವರು ಮುಖಂಡರು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದಾರೆ. ಈಗ ಉತ್ತರ ಪ್ರದೇಶದ ಸಚಿವರೊಬ್ಬರು ಇಂಧನ ಬೆಲೆ ಏರಿಕೆ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಸಾರ್ವಜನಿಕರ ಆಕ್ರೋಶಕ್ಕೆ ತುತ್ತಾಗಿದ್ದಾರೆ.

ದೇಶದ 95% ನಷ್ಟು ಜನರಿಗೆ ಪೆಟ್ರೋಲ್, ಡೀಸೆಲ್ ಅಗತ್ಯವಿಲ್ಲ. ನಾಲ್ಕು ಚಕ್ರ ವಾಹನಗಳನ್ನು ಬಳಸುವ ಕೇವಲ 5% ನಷ್ಟು ಜನರಿಗೆ ಮಾತ್ರ ಪೆಟ್ರೋಲ್, ಡೀಸೆಲ್ ಅಗತ್ಯವಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರವರ ಸಂಪುಟದಲ್ಲಿ ಸಚಿವರಾಗಿರುವ ಉಪೇಂದ್ರ ತಿವಾರಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸರ್ಕಾರ ಉಚಿತವಾಗಿ ಕರೋನಾ ಲಸಿಕೆಗಳನ್ನು ನೀಡುತ್ತಿರುವುದು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ಕಾರಣವೆಂದು ಅವರು ಹೇಳಿದ್ದಾರೆ.

ಉಪೇಂದ್ರ ತಿವಾರಿ ರವರ ಪ್ರಕಾರ, ಈಗಿರುವ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಕೇವಲ ಬೆರಳೆಣಿಕೆಯಷ್ಟು ಜನರಿಗೆ ಮಾತ್ರ ನಾಲ್ಕು ಚಕ್ರದ ವಾಹನಗಳಿಗೆ ಪೆಟ್ರೋಲ್ ಅಗತ್ಯವಿದೆ. ಅಂದರೆ ದೇಶದ 95% ನಷ್ಟು ಜನರಿಗೆ ಪೆಟ್ರೋಲ್ ಅಗತ್ಯವಿಲ್ಲ. ಕೇಂದ್ರ ಸರ್ಕಾರವು 100 ಕೋಟಿಗೂ ಹೆಚ್ಚು ಉಚಿತ ಲಸಿಕೆಗಳನ್ನು ನೀಡಿದೆ. ಜೊತೆಗೆ ಮನೆ ಬಾಗಿಲಿಗೆ ಔಷಧಗಳನ್ನು ವಿತರಿಸಲಾಗುತ್ತದೆ ಎಂದು ಉಪೇಂದ್ರ ತಿವಾರಿ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಹಾಗೂ ಯೋಗಿ ಆದಿತ್ಯನಾಥ್ ರವರು ಅಧಿಕಾರ ಸ್ವೀಕರಿಸಿದ ನಂತರ ತಲಾ ಆದಾಯವು ದ್ವಿಗುಣಗೊಂಡಿದೆ. ಜನರ ತಲಾ ಆದಾಯಕ್ಕೆ ಹೋಲಿಸಿದರೆ ಪೆಟ್ರೋಲ್, ಡೀಸೆಲ್ ಬೆಲೆ ಏನೇನೂ ಅಲ್ಲವೆಂದು ಉಪೇಂದ್ರ ತಿವಾರಿ ಹೇಳಿದ್ದಾರೆ. ಬಿಜೆಪಿ ಅಧಿಕಾರದಲ್ಲಿರುವ ಬಹುತೇಕ ರಾಜ್ಯಗಳ ಮುಖಂಡರು ಇದೇ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಇತ್ತೀಚೆಗೆ ಕೇಂದ್ರ ಪೆಟ್ರೋಲಿಯಂ ಮತ್ತು ಅನಿಲ ಖಾತೆ ಸಚಿವರಾದ ರಾಮೇಶ್ವರ ತೇಲಿರವರು, ಇಂಧನದ ಬೆಲೆ ಹೆಚ್ಚಿಲ್ಲ, ಆದರೆ ಅವುಗಳ ಮೇಲೆ ವಿಧಿಸುವ ತೆರಿಗೆಗಳು ಹೆಚ್ಚಾಗಿವೆ. ದೇಶದ ಜನರಿಗೆ ಉಚಿತ ಲಸಿಕೆ ನೀಡಬೇಕಾಗಿದೆ. ಇದಕ್ಕೆ ಹಣ ಎಲ್ಲಿಂದ ಬರುತ್ತದೆ. ಈ ಕಾರಣಕ್ಕೆ ಇಂಧನಗಳ ಬೆಲೆಯನ್ನು ಹೆಚ್ಚಿಸಲಾಗಿದೆ ಎಂದು ಹೇಳಿದ್ದರು. ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಗಳು ರೂ. 100 ರ ಗಡಿ ದಾಟಿವೆ.

ಏರುತ್ತಿರುವ ಇಂಧನ ಬೆಲೆ ದೇಶದ ವಾಹನ ಸವಾರರಿಗೆ ದೊಡ್ಡ ಸಮಸ್ಯೆಯಾಗುತ್ತಿದೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದಾಗಿ ಎಲ್ಲಾ ಸರಕುಗಳ ದರವೂ ಹೆಚ್ಚಾಗಿದೆ. ಇದರಿಂದ ವಾಹನವನ್ನು ಬಳಸದವರೂ ಸಹ ಪರೋಕ್ಷವಾಗಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಭಾರತದಲ್ಲಿ 95% ಜನರಿಗೆ ಮಾತ್ರ ಪೆಟ್ರೋಲ್ ಬೇಕು ಎಂಬ ಉತ್ತರ ಪ್ರದೇಶ ಸಚಿವರ ಹೇಳಿಕೆ ಅಸಂಬದ್ಧವಾಗಿದೆ.

ಅವರು ಹೇಳುವಂತೆ ದೇಶದ 5% ನಷ್ಟು ಜನರಿಗೆ ಮಾತ್ರ ಪೆಟ್ರೋಲ್ ಅಗತ್ಯವಿರಬಹುದಾದರೂ, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ಬಿಸಿ ದೇಶದ ಪ್ರತಿಯೊಬ್ಬ ನಾಗರಿಕರಿಗೂ ತಟ್ಟಿದೆ ಎಂಬುದು ಸುಳ್ಳಲ್ಲ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ರೂ. 105.84 ಗಳಾಗಿದ್ದರೆ, ಪ್ರತಿ ಲೀಟರ್ ಡೀಸೆಲ್ ಬೆಲೆ ರೂ. 94.57 ಗಳಾಗಿದೆ. ಇನ್ನು ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ರೂ. 111.77 ಗಳಾಗಿದ್ದರೆ, ಪ್ರತಿ ಲೀಟರ್ ಡೀಸೆಲ್ ಬೆಲೆ ರೂ. 102.52 ಗಳಾಗಿದೆ.

ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಗಳನ್ನು ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ನವೀಕರಿಸಲಾಗುತ್ತದೆ. ಉಪೇಂದ್ರ ತಿವಾರಿಯಂತಹ ಕೆಲವು ರಾಜಕಾರಣಿಗಳು ವಿವಾದಾತ್ಮಕ ಹೇಳಿಕೆ ನೀಡಿ ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ಪೆಟ್ಟು ನೀಡುತ್ತಿದ್ದಾರೆ. ಇಂಧನ ಬೆಲೆಗೆ ನಾವೇ ಕಾರಣ ಎಂದು ಬಿಜೆಪಿಯ ಕೆಲವು ನಾಯಕರು ಪರೋಕ್ಷವಾಗಿ ಒಪ್ಪಿ ಕೊಳ್ಳುತ್ತಿದ್ದಾರೆ. ಇತ್ತೀಚಿಗೆ ಅಸ್ಸಾಂನ ಬಿಜೆಪಿ ನಾಯಕರೊಬ್ಬರು ಮತ್ತೊಂದು ಹೇಳಿಕೆ ನೀಡಿದ್ದರು.

ಅಸ್ಸಾಂನ ಬಿಜೆಪಿ ನಾಯಕರಾದ ಬಾಬೇಶ್ ಕಲಿದಾ ರವರು, 1 ಲೀಟರ್ ಪೆಟ್ರೋಲ್ ಬೆಲೆ ರೂ. 200 ಮುಟ್ಟಿದರೆ ದ್ವಿಚಕ್ರ ವಾಹನಗಳಲ್ಲಿ ಟ್ರಿಪಲ್ ರೈಡಿಂಗ್'ಗೆ ಅವಕಾಶ ನೀಡಲಾಗುವುದು ಎಂದು ಹೇಳಿದ್ದರು. ಜೊತೆಗೆ ದ್ವಿಚಕ್ರ ವಾಹನಗಳಲ್ಲಿ ಮೂರು ಸೀಟುಗಳನ್ನು ಅಳವಡಿಸಿಕೊಳ್ಳಲು ಅವಕಾಶ ನೀಡಲಾಗುವುದು ಎಂದು ಹೇಳಿದ್ದರು.


Click it and Unblock the Notifications








