ದಂಡ ವಿಧಿಸಿದರೆ ಸಾಯುತ್ತಾಳಂತೆ ಈ ಮಹಿಳೆ..!
ತಿದ್ದುಪಡಿಗೊಳಿಸಿರುವ ಹೊಸ ಮೋಟಾರ್ ವಾಹನ ಕಾಯ್ದೆಯು ಸೆಪ್ಟೆಂಬರ್ 1ರಿಂದ ಜಾರಿಗೆ ಬಂದಿದೆ. ಜಾರಿಯಾದಾಗಿನಿಂದ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರಿಗೆ ಭಾರೀ ಪ್ರಮಾಣದ ದಂಡವನ್ನು ವಿಧಿಸಲಾಗುತ್ತಿದೆ. ಕೆಲವು ಕಡೆ ವಿಧಿಸಿರುವ ದಂಡ ಪ್ರಮಾಣವು ವಾಹನದ ಬೆಲೆಗಿಂತ ಹೆಚ್ಚಾಗಿದೆ.

ಸಂಚಾರಿ ಪೊಲೀಸರು ಕಟ್ಟುನಿಟ್ಟಾಗಿ ಈ ಹೊಸ ನಿಯಮಗಳನ್ನು ಪಾಲಿಸುತ್ತಿದ್ದು, ವಾಹನ ಸವಾರರು ನಿಯಮಗಳನ್ನು ಉಲ್ಲಂಘಿಸದಂತೆ ನೋಡಿಕೊಳ್ಳುತ್ತಿದ್ದಾರೆ. ಹೊಸ ಮೋಟಾರು ವಾಹನ ಕಾಯ್ದೆಯ ಪ್ರಮುಖವಾದ ಅಂಶವೆಂದರೆ, ದಂಡದ ಮೊತ್ತ. ದಂಡದ ಮೊತ್ತವನ್ನು 10 ಪಟ್ಟು ಹೆಚ್ಚಿಸಲಾಗಿದೆ. ಈ ಕಾರಣಕ್ಕಾಗಿ ಜನರು ಕಡಿಮೆ ಪ್ರಮಾಣದ ದಂಡವನ್ನು ವಿಧಿಸುವಂತೆ ಪೊಲೀಸರನ್ನು ಒತ್ತಾಯಿಸುವಂತಹ ಘಟನೆಗಳೂ ಸಹ ವರದಿಯಾಗಿವೆ.

ಕೆಲ ದಿನಗಳ ಹಿಂದಷ್ಟೇ ಭಾರೀ ಪ್ರಮಾಣದ ದಂಡವನ್ನು ವಿಧಿಸಿದ ಕಾರಣಕ್ಕೆ ವ್ಯಕ್ತಿಯೊಬ್ಬ ತನ್ನ ದ್ವಿಚಕ್ರ ವಾಹನಕ್ಕೆ ಬೆಂಕಿ ಹಚ್ಚಿದ್ದ. ಈ ಘಟನೆ ದೆಹಲಿಯಲ್ಲಿ ನಡೆದಿತ್ತು. ಈಗ ದೆಹಲಿಯಲ್ಲಿಯೇ ನಡೆದಿರುವ ಮತ್ತೊಂದು ಘಟನೆಯಲ್ಲಿ ಮಹಿಳೆಯೊಬ್ಬರು ಸಂಚಾರಿ ಪೊಲೀಸರು ದಂಡ ವಿಧಿಸಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪೊಲೀಸರಿಗೆ ಧಮಕಿ ಹಾಕಿದ್ದಾರೆ.
ಈ ಘಟನೆಯನ್ನು ವೀಡಿಯೊ ಮಾಡಲಾಗಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವೀಡಿಯೊದ 8:27ನೇ ನಿಮಿಷದಲ್ಲಿ ಬರುವ ದೃಶ್ಯದಲ್ಲಿ ಮಹಿಳೆಯು ಪೊಲೀಸರಿಗೆ ಧಮಕಿ ಹಾಕುತ್ತಿರುವುದನ್ನು ಕಾಣಬಹುದು.

ಈ ವೀಡಿಯೊದಲ್ಲಿ ಕಾಣುವ ಮಹಿಳೆಯು ಸ್ಕೂಟರ್ ಚಾಲನೆ ಮಾಡುವಾಗ ಮೊಬೈಲ್ನಲ್ಲಿ ಮಾತನಾಡುವುದು, ಲಾಕ್ ಮಾಡದೇ ಹೆಲ್ಮೆಟ್ ಧರಿಸಿರುವುದು, ದೋಷಪೂರಿತ ನಂಬರ್ ಪ್ಲೇಟ್, ವಾಹನಕ್ಕೆ ಸಂಬಂಧಿಸಿದ ದಾಖಲೆಗಳನ್ನು ನೀಡದಿರುವುದು ಸೇರಿದಂತೆ ಹಲವು ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ.

ಪೊಲೀಸರು ಕೇಳಿದಾಗ ವಾಹನಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ನೀಡದಿದ್ದರೆ ಈಗ ರೂ.15,000 ದಂಡ ವಿಧಿಸಲಾಗುವುದು. ಈ ವೀಡಿಯೊದಲ್ಲಿ ಆ ಮಹಿಳೆಯು ತಾನು ಏನು ತಪ್ಪು ಮಾಡಿರುವೆ ಎಂದು ಕೇಳುತ್ತಾರೆ. ಆಕೆಗೆ ನಿಯಮಗಳನ್ನು ಉಲ್ಲಂಘಿಸಿರುವ ಬಗ್ಗೆ ತಿಳಿಸಿದಾಗ, ತನಗೆ ಹುಷಾರಿಲ್ಲವೆಂದು ಹೇಳುತ್ತಾರೆ.

ಇದರ ಜೊತೆಗೆ ಸ್ಕೂಟರ್ ಅನ್ನು ತಡೆದು ನಿಲ್ಲಿಸಿದ ಪೊಲೀಸರಿಗೆ ಹೆಲ್ಮೆಟ್ನಿಂದ ಹೊಡೆಯುವುದಾಗಿ ಬೆದರಿಕೆ ಹಾಕುತ್ತಾರೆ. ಈ ಬೆದರಿಕೆಗಳಿಗೆ ಸ್ಥಳದಲ್ಲಿದ್ದ ಪೊಲೀಸ್ ಕೇರ್ ಮಾಡದಿದ್ದಾಗ ಆಕೆ ತನ್ನ ಬಳಿಯಿದ್ದ ಹೆಲ್ಮೆಟ್ ಅನ್ನು ರಸ್ತೆಗೆಸೆಯುತ್ತಾರೆ.
MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ತನಗೆ ಹುಷಾರಿಲ್ಲದ ಕಾರಣ ತನ್ನನ್ನು ಅಲ್ಲಿದ್ದ ಹೋಗಲು ಬಿಡುವಂತೆ ಆಕೆ ಪೊಲೀಸರಿಗೆ ಹೇಳುತ್ತಲೇ ಇರುತ್ತಾರೆ. ಆದರೆ ಇದಕ್ಕೆ ಒಪ್ಪದ ಪೊಲೀಸರು ಆಕೆ ಹಲವಾರು ನಿಯಮಗಳನ್ನು ಉಲ್ಲಂಘಿಸಿರುವ ಕಾರಣಕ್ಕೆ ಆಕೆಗೆ ದಂಡ ವಿಧಿಸಲಾಗುವುದೆಂದು ತಿಳಿಸುತ್ತಾರೆ.
MOST READ: ಕ್ಯಾಬ್ ಬಳಸುವವರಿಗೆ ಮತ್ತಷ್ಟು ಹೊರೆಯಾಗಲಿದೆ ಸರ್ಕಾರದ ಈ ನಿರ್ಧಾರ..!

ಇದಾದ ನಂತರ ಆಕೆ ವಿಚಿತ್ರವಾಗಿ ವರ್ತಿಸಲು ಶುರು ಮಾಡುತ್ತಾರೆ. ಪೊಲೀಸರು ತನಗೆ ಕಿರುಕುಳ ನೀಡುತ್ತಿದ್ದು, ದಂಡ ವಿಧಿಸಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸುತ್ತಾರೆ. ಇನ್ನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕುತ್ತಿರುವ ಮಹಿಳೆ ಅನೇಕ ನಿಯಮಗಳನ್ನು ಉಲ್ಲಂಘಿಸಿದ್ದಾರೆ.
MOST READ: ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿದ್ರಾ ಮುಖೇಶ್ ಅಂಬಾನಿ? ಅಸಲಿ ಕಥೆ ಏನು?

ಆ ನಿಯಮ ಉಲ್ಲಂಘನೆಗಳ ಬಗ್ಗೆ ಹೇಳುವುದಾದರೆ, ಡ್ರೈವಿಂಗ್ ಲೈಸೆನ್ಸ್ ಇಲ್ಲದೇ ಚಾಲನೆ ಮಾಡಿರುವ ಕಾರಣಕ್ಕೆ ರೂ.5,000 ದಂಡ, ಆರ್ಸಿ ಇಲ್ಲದ ಕಾರಣಕ್ಕೆ ರೂ.5,000, ಥರ್ಡ್ ಪಾರ್ಟಿ ಇನ್ಶೂರೆನ್ಸ್ ಇಲ್ಲದ ಕಾರಣಕ್ಕೆ ರೂ.3,000, ಹೆಲ್ಮೆಟ್ ಲಾಕ್ ಮಾಡದೇ ಧರಿಸಿರುವ ಕಾರಣಕ್ಕೆ ರೂ.1,000.

ಎಮಿಷನ್ ನಿಯಮಗಳನ್ನು ಉಲ್ಲಂಘಿಸಿರುವ ಕಾರಣಕ್ಕೆ ರೂ.10,000, ದೋಷ ಪೂರಿತ ನಂಬರ್ ಪ್ಲೇಟ್ ಹೊಂದಿರುವ ಕಾರಣಕ್ಕೆ ರೂ.2,000, ವಾಹನ ಚಾಲನೆ ವೇಳೆ ಇಯರ್ಫೋನ್ ಬಳಸಿದ ಕಾರಣಕ್ಕೆ ರೂ.5,000 ಸೇರಿದಂತೆ ಒಟ್ಟು ರೂ.31,000 ದಂಡ ವಿಧಿಸಬೇಕಾಗಿತ್ತು.

ಆದರೆ ಆ ಮಹಿಳೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಬೆದರಿಕೆ ಹಾಕಿದ ಕಾರಣಕ್ಕೆ ದಂಡ ವಿಧಿಸದೇ ಹಾಗೆಯೇ ಬಿಟ್ಟು ಕಳುಹಿಸಿದ್ದಾರೆ. ಹೊಸ ಮೋಟಾರು ವಾಹನ ಕಾಯ್ದೆಯನ್ನು ದೇಶದ ಹಲವಾರು ರಾಜ್ಯಗಳು ಜಾರಿಗೊಳಿಸಿಲ್ಲ.

ಕೆಲವು ರಾಜ್ಯಗಳು ಹೊಸ ಕಾಯ್ದೆಯ ಅನುಷ್ಠಾನವನ್ನು ಮುಂದೂಡಿದ್ದರೆ, ಇನ್ನೂ ಕೆಲವು ರಾಜ್ಯಗಳು ದಂಡದ ಮೊತ್ತವನ್ನು ಕಡಿಮೆ ಮಾಡಿವೆ. ಇತ್ತೀಚಿಗೆ ಕರ್ನಾಟಕ ಸರ್ಕಾರವು ಸಹ ದಂಡದ ಮೊತ್ತವನ್ನು ಕಡಿಮೆ ಮಾಡಿದೆ.

ಹೊಸ ಕಾಯ್ದೆಯನ್ನು ರಾಜ್ಯ ಸರ್ಕಾರಗಳು ಜಾರಿಗೆ ತರುವುದು, ಬಿಡುವುದು ಆಯಾ ರಾಜ್ಯಗಳಿಗೆ ಸಂಬಂಧಿಸಿದ ವಿಚಾರವಾದರೂ, ಯಾವುದೇ ಪಕ್ಷಪಾತವಿಲ್ಲದೆ ಏಕರೂಪವಾಗಿ ಜಾರಿಗೆ ತರಬೇಕು. ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಬೆದರಿಕೆ ಹಾಕಿದ ತಕ್ಷಣ ದಂಡ ವಿಧಿಸದೇ ಬಿಡುವುದು ಎಷ್ಟು ಸರಿ.


Click it and Unblock the Notifications