ಮೋಟಾರ್ ಸ್ಪೋರ್ಟ್ನಲ್ಲಿ ಯುವ ಕನ್ನಡಿಗನ ಮಹತ್ಸಾಧನೆ
ಬೆಂಗಳೂರಿನ ಯಶ್ ಆರಾಧ್ಯ ಪ್ರತಿಷ್ಠಿತ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಜೊತೆಗೆ ಈ ಪುರಸ್ಕಾರ ಪಡೆದ ಭಾರತದ ಮೊದಲ ಮೋಟಾರ್ ಸ್ಪೋರ್ಟ್ ಪಟು ಎನ್ನುವ ಹಿರಿಮೆಗೆ 17 ವರ್ಷದ ಯಶ್ ಆರಾಧ್ಯ ಪಾತ್ರರಾಗಿದ್ದಾರೆ.

ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ರವರು ಬಾಲಕ ಯಶ್ಗೆ ಪ್ರಶಸ್ತಿ ನೀಡಿ ಗೌರವಿಸಿದರು. ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿಯನ್ನು 18 ವಯಸ್ಸಿನೊಳಗಿನ ಅಸಾಧಾರಾಣ ವಿದ್ಯಾರ್ಥಿಗಳು ವಿವಿಧ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ನೀಡುವ ಭಾರತದ ಅತ್ಯುನ್ನತ ಪ್ರಶಸ್ತಿಯಾಗಿದೆ. ಯಶ್ ಸೇರಿದಂತೆ 49 ಪ್ರತಿಭಾವಂತರನ್ನು ಈ ಪ್ರಶಸ್ತಿಗೆ, ಕೇಂದ್ರ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆ ಆಯ್ಕೆ ಮಾಡಿತ್ತು.

9ನೇ ವಯಸ್ಸಿನಿಂದಲೇ ರೇಸಿಂಗ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಯಶ್ ತಮ್ಮ ಸಾಧನೆಯ ಹಾದಿಯಲ್ಲಿ 13 ಚಾಂಪಿಯನ್ಶಿಪ್ಗಳನ್ನು ಗೆದ್ದಿದ್ದಾರೆ. 17 ವರ್ಷದ ರೇಸರ್ ಯಶ್ ಈವರೆಗೂ 65 ಬಾರಿ ಪೋಡಿಯಂ ಫಿನಿಶ್ ಮಾಡಿದ್ದು, 12 ಪ್ರಶಸ್ತಿಗಳನ್ನು ತಮ್ಮ ಹೆಸರಿಗೆ ಸೇರ್ಪಡೆಗೊಳಿಸಿಕೊಂಡಿದ್ದಾರೆ. ಯಶ್ 2019ರ ಫಾರ್ಮುಲಾ-4 ಆಗ್ನೇಯ ಏಷ್ಯಾ ಚಾಂಪಿಯನ್ಶಿಪ್ನಲ್ಲಿ ಪಾದಾರ್ಪಣೆ ಮಾಡುವ ಮೂಲಕ ತಮ್ಮ ಪ್ರತಿಭೆ ಪ್ರದರ್ಶಿಸಿದ್ದರು.

ಯಶ್ 2015ರಲ್ಲಿ ಸ್ಪೇನ್, ಬೆಲ್ಜಿಯಂ ಹಾಗೂ ಫ್ರಾನ್ಸ್ ನಲ್ಲಿ ನಡೆದ ಸಿಐಕೆಎಫ್ಐಎ ಅಕಾಡೆಮಿ ಟ್ರೋಫಿ ಸೇರಿದಂತೆ ಅಂತರಾಷ್ಟ್ರೀಯ ಚಾಂಪಿಯನ್ಶಿಪ್ಗಳಲ್ಲೂ ಪಾಲ್ಗೊಂಡಿದ್ದರು. 2017ರಲ್ಲಿ ಪೋರ್ಚುಗಲ್ನಲ್ಲಿ ನಡೆದ ರೋಟಾಕ್ಸ್ ವಿಶ್ವ ಫೈನಲ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಲು ಎಫ್ಎಂಎಸ್ಸಿಐನಿಂದ ನಾಮನಿರ್ದೇಶನಗೊಂಡಿದ್ದರು.

2019ರಲ್ಲಿ ರೋಮ್ನಲ್ಲಿ ನಡೆದ ಎಫ್ಐಎ ಮೋಟಾರ್ ಸ್ಪೋರ್ಟ್ಸ್ ನಲ್ಲೂ ಯಶ್ ಸ್ಪರ್ಧಿಸಿದ್ದರು. ಯಶ್ ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿ, ನನ್ನ ಜೀವನದಲ್ಲಿ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ವಿಶೇಷವಾಗಿ ಉಳಿಯಲಿದೆ. ಇದು ಕೇವಲ ನನ್ನೊಬ್ಬನ ಸಾಧನೆಗೆ ಸಿಕ್ಕಿರುವುದಲ್ಲ. ಇಡೀ ತಂಡಕ್ಕೆ ಸಿಕ್ಕಿರುವುದಾಗಿದೆ. ಈ ಪ್ರಶಸ್ತಿ ಯುವ ರೇಸರ್ ಗಳಿಗೆ ಸಾಧನೆಗೈಯಲು ಸ್ಫೂರ್ತಿ ನೀಡಲಿದೆ. ಅವರು ಇನ್ನಷ್ಟು ಪರಿಶ್ರಮದೊಂದಿಗೆ ಮುನ್ನುಗ್ಗುತ್ತಾರೆ ಎಂದರು.

ಈ ಪ್ರಶಸ್ತಿಗೆ ನನ್ನನ್ನು ಪರಿಗಣಿಸಿದ್ದಕ್ಕೆ ಭಾರತ ಸರ್ಕಾರಕ್ಕೆ ಧನ್ಯವಾದ ಹೇಳಲು ಇಚ್ಛಿಸುತ್ತೇನೆ ಹಾಗೂ ವಿನಮ್ರತೆಯಿಂದ ಪುರಸ್ಕಾರ ಸ್ವೀಕರಿಸುತ್ತೇನೆ. ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಗಣನೀಯ ಯಶಸ್ಸು ಸಾಧಿಸಿದ ನಂತರ ಈ ಗೌರವ ಸಿಗುತ್ತಿರುವುದು ಸಂತಸ ನೀಡಿದೆ ಎಂದು ಹೇಳಿದರು.

ಕಳೆದ ವರ್ಷ ಭಾರತೀಯ ಮೋಟಾರ್ ಸ್ಪೋರ್ಟ್ ಪಟು ಗೌರವ್ ಗಿಲ್ ಅವರಿಗೆ ಅರ್ಜುನ್ ಪ್ರಶಸ್ತಿಯು ಲಭಿಸಿತ್ತು. ಭಾರತೀಯ ಮೋಟಾರ್ ಸ್ಪೋರ್ಟ್ ವಿಭಾಗದಲ್ಲಿ ಅರ್ಜುನ್ ಪ್ರಶಸ್ತಿ ಪಡೆದ ಕೀರ್ತಿ ಇವರಿಗೆ ಸಲ್ಲುತ್ತದೆ.

ಯಶ್ ಸಾಧನೆ ನಮ್ಮೆಲ್ಲರಿಗೂ ಖುಷಿ ನೀಡಿದೆ. ನಾವು ಅರ್ಹರಿದ್ದರೂ ನಮ್ಮನ್ನು ಪರಿಗಣಿಸಲು ಹೆಚ್ಚಿನ ಸಮಯವಾಗಿದೆ. ಆದರೆ ಈಗ ಗೌರವ್ ಗಿಲ್ ಹಾಗೂ ಯಶ್ಗೆ ಸಿಕ್ಕಿರುವ ಗೌರವದಿಂದ ನಮಗೆ ಮತ್ತಷ್ಟು ಪ್ರಶಸ್ತಿ, ಪುರಸ್ಕಾರಗಳು ಸಿಗಲಿದೆ ಎನ್ನುವ ವಿಶ್ವಾಸ ಮೂಡಿಸಿದೆ. ಜನ ನಮ್ಮ ಕ್ರೀಡೆಯನ್ನು ಗಂಭೀರವಾಗಿ ಪರಿಗಣಿಸಲಿದ್ದಾರೆ ಎಂದು ಎಫ್ಎಂಎಸ್ಸಿಐನ ಅಧ್ಯಕ್ಷ ಜೆ.ಪೃಥ್ವಿರಾಜ್ ಹೇಳಿದರು.

ಸಾಧಾರಣ ಹಿನ್ನೆಲೆ ಹಾಗೂ ರೇಸಿಂಗ್ ಕ್ಷೇತ್ರದಲ್ಲಿ ಯಾವುದೇ ಕುಟುಂಬಸ್ಥರು ಇಲ್ಲದಿದ್ದರೂ, ಯಶ್ ತಮ್ಮ ಸ್ವಂತ ಶ್ರಮದಿಂದ ಈ ಮಟ್ಟಕ್ಕೆ ತಲುಪಿದ್ದಾರೆ. 8 ವರ್ಷಗಳ ಹಿಂದೆ ಜೆಕೆ ಟೈಯರ್ ರಾಷ್ಟ್ರೀಯ ಗೋ ಕಾರ್ಟಿಂಗ್ ಚಾಂಪಿಯಸ್ಶಿಪ್ನಿಂದ ವೃತ್ತಿಬದುಕು ಆರಂಭಿಸಿದ ಯಶ್, ಅಕ್ಬರ್ ಇಬ್ರಾಹಿಂ ಅವರ ಮೀಕೋ ಮೋಟಾರ್ ಸ್ಪೋರ್ಟ್ ತಂಡವನ್ನು ಪ್ರತಿನಿಧಿಸಿದ್ದರು.

ನಿರಂತರವಾಗಿ ಮೆಟ್ಟಿಲುಗಳನ್ನು ಏರುತ್ತಾ, ಫಾರ್ಮುಲಾ ರೇಸಿಂಗ್ವರೆಗೂ ತಲುಪಿದ್ದಾರೆ. ಯಾವುದು ಅಸಾಧ್ಯಯವಲ್ಲ ಎನ್ನುವ ಮಾತಿಗೆ ಯಶ್ ಆರಾಧ್ಯಯವರು ಉತ್ತಮ ಉದಾಹರಣೆಯಾಗಿದೆ. ಯಶ್ ರಾಷ್ಟೀಯ ಮತ್ತು ಅಂತರಾಷ್ಟ್ರೀಯ ವೃತ್ತಿಪರ ರೇಸಿಂಗ್ನಲ್ಲಿ ತನ್ನದೇ ಛಾಪು ಮೂಡಿಸಿದ್ದಾರೆ. ಮುಂದೆ ಅಂತರಾಷ್ಟ್ರೀಯ ವೃತ್ತಿಪರ ರೇಸಿಂಗ್ನಲ್ಲಿ ಮಿಂಚಲಿರುವ ಈ ಯುವ ಪ್ರತಿಭೆ ಕನ್ನಡಿಗರ ಹೆಮ್ಮೆಯಾಗಿದೆ.


Click it and Unblock the Notifications