ವಾಯುಮಾಲಿನ್ಯ ನಿಯಂತ್ರಣಕ್ಕೆ ಸಲಹೆ ನೀಡಿದ ಮುಖ್ಯಮಂತ್ರಿ
ವಾಯುಮಾಲಿನ್ಯವು ವಿಶ್ವಾದ್ಯಂತ ಹಲವು ದೇಶಗಳಿಗೆ ತಲೆನೋವಾಗಿ ಪರಿಣಮಿಸಿದೆ. ವಾಯು ಮಾಲಿನ್ಯಕ್ಕೆ ಹಲವು ಕಾರಣಗಳಿದ್ದರೂ ವಾಹನಗಳು ಹೊರಸೂಸುವ ಹೊಗೆಯೇ ಪ್ರಮುಖ ಕಾರಣ ಎಂದು ಅನೇಕ ಸಂಶೋಧನೆಗಳಿಂದ ದೃಢಪಟ್ಟಿದೆ.

ಈ ಕಾರಣಕ್ಕೆ ಪ್ರಮುಖ ವಾಹನ ತಯಾರಕ ಕಂಪನಿಗಳು ಇಂಧನ ಚಾಲಿತ ವಾಹನಗಳ ಉತ್ಪಾದನೆಯನ್ನು ಕಡಿಮೆಗೊಳಿಸಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೆ ಆದ್ಯತೆ ನೀಡುತ್ತಿವೆ. ಎಲೆಕ್ಟ್ರಿಕ್ ವಾಹನಗಳು ಪರಿಸರ ಸ್ನೇಹಿಯಾಗಿರುತ್ತವೆ ಎಂಬುದು ಇದರ ಹಿಂದಿರುವ ಕಾರಣ.

ಈಗ ನಮ್ಮ ರಾಜ್ಯದ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರು ಇಂಧನ ಚಾಲಿತ ವಾಹನಗಳಿಗೆ ಪರ್ಯಾಯವಾಗಿ ಸೈಕಲ್ ಗಳನ್ನು ಬಳಸಬೇಕೆಂದು ರಾಜ್ಯದ ಜನರಿಗೆ ಸಲಹೆ ನೀಡಿದ್ದಾರೆ.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ವಾಯುಮಾಲಿನ್ಯವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಸಾರ್ವಜನಿಕರು ಸ್ವಂತ ವಾಹನ ಬಳಕೆಯನ್ನು ಕಡಿಮೆ ಮಾಡಿ ಸೈಕಲ್ ಅಥವಾ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಸುವಂತೆ ಸಲಹೆ ನೀಡಿದ್ದಾರೆ.

ಸ್ವಚ್ಛ ಗಾಳಿ ಹಾಗೂ ಶುದ್ಧ ನೀರು ಪ್ರತಿಯೊಬ್ಬ ನಾಗರಿಕನ ಹಕ್ಕು ಎಂದು ಅವರು ಹೇಳಿದ್ದಾರೆ. ಬೆಂಗಳೂರು ನಗರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಉದ್ದೇಶದಿಂದ ನಗರದ ಚರ್ಚ್ ಸ್ಟ್ರೀಟ್ನಲ್ಲಿ ಕ್ಲೀನ್ ಏರ್ ಟೆಸ್ಟ್ಬೆಡ್ ಡ್ರೈವ್ ಸ್ಥಾಪಿಸಲಾಗಿದೆ.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಮಾಲಿನ್ಯದಿಂದ ನಗರವನ್ನು ರಕ್ಷಿಸುವ ಗುರಿಯನ್ನು ಹೊಂದಿರುವ ಈ ಯೋಜನೆಯನ್ವಯ ಈ ರಸ್ತೆಯಲ್ಲಿ ಕೇವಲ ಪಾದಚಾರಿಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ.

ಈ ರಸ್ತೆಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಕ್ರಮವು ಮುಂದಿನ ಫೆಬ್ರವರಿವರೆಗೆ ಮುಂದುವರೆಯಲಿದೆ ಎಂದು ಹೇಳಲಾಗಿದೆ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಈ ರಸ್ತೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ವಾಯುಮಾಲಿನ್ಯವನ್ನು ಕಡಿಮೆ ಮಾಡಲು ಕರ್ನಾಟಕ ಸರ್ಕಾರವು ನಗರ ಭೂ ಸಾರಿಗೆ ನಿರ್ದೇಶನಾಲಯ, ಭಾರತೀಯ ವಿಜ್ಞಾನ ಸಂಸ್ಥೆ ಹಾಗೂ ಇಂಗ್ಲೆಂಡಿನ ಕ್ಯಾಟಾಪಲ್ಟ್ ನೆಟ್ ವರ್ಕ್ ನೊಂದಿಗೆ ಕಾರ್ಯನಿರ್ವಹಿಸುತ್ತಿದೆ.

ಇದರ ಭಾಗವಾಗಿ ಚರ್ಚ್ ಸ್ಟ್ರೀಟ್ ನಲ್ಲಿ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಕರ್ನಾಟಕದಲ್ಲಿ ಸದ್ಯಕ್ಕೆ 85 ಲಕ್ಷಕ್ಕೂ ಹೆಚ್ಚು ವಾಹನಗಳು ಬಳಕೆಯಲ್ಲಿವೆ. ಇವುಗಳಿಂದ ರಾಜ್ಯದಲ್ಲಿ 50%ನಷ್ಟು ವಾಯುಮಾಲಿನ್ಯ ಉಂಟಾಗುತ್ತಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರು ಹೇಳಿದರು.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಈ ಸಂಖ್ಯೆ ಪ್ರತಿವರ್ಷ 10%ನಷ್ಟು ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಜನರು ಸಾರ್ವಜನಿಕ ಸಾರಿಗೆಯನ್ನು ಬಳಸುವಂತೆ ಹೇಳಿದ್ದಾರೆ. ಹತ್ತಿರದ ಸ್ಥಳಗಳಿಗೆ ತೆರಳಲು ಸೈಕಲ್ ಬಳಸುವಂತೆ ಅಥವಾ ನಡೆದುಕೊಂಡು ಹೋಗುವಂತೆ ಅವರು ಕರೆ ನೀಡಿದರು.

ಪ್ರತಿಯೊಬ್ಬ ವ್ಯಕ್ತಿಯು ಪರಿಸರವನ್ನು ರಕ್ಷಿಸುವುದನ್ನು ತನ್ನ ಪ್ರಾಥಮಿಕ ಕರ್ತವ್ಯವಾಗಿಸಿಕೊಳ್ಳಬೇಕು. ಪರಿಸರ ಸಂರಕ್ಷಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಬೇಕು ಎಂದು ಅವರು ಹೇಳಿದರು.


Click it and Unblock the Notifications