ಕೋವಿಡ್ ಇಳಿಮುಖ: ಬೈಕ್ ಉತ್ಪಾದನೆಯನ್ನು ಪುನಾರಂಭಿಸಿದ ಹೋಂಡಾ ಮೋಟಾರ್ಸೈಕಲ್
ದೇಶಾದ್ಯಂತ ಕೋವಿಡ್ 2ನೇ ಅಲೆ ತೀವ್ರವಾಗಿ ಹೆಚ್ಚಳವಾಗಿದ್ದರಿಂದ ವಿವಿಧ ರಾಜ್ಯಗಳಲ್ಲಿ ಹಲವು ಕಠಿಣ ಕ್ರಮಗಳೊಂದಿಗೆ ಲಾಕ್ಡೌನ್ ವಿಧಿಸಿದ್ದು, ಲಾಕ್ಡೌನ್ ಪರಿಣಾಮ ಆರ್ಥಿಕ ಚಟುವಟಿಕೆಗಳು ಸಂಪೂರ್ಣವಾಗಿ ಸ್ತಬ್ಧವಾಗಿವೆ.

ಕಳೆದ ವರ್ಷದ ಲಾಕ್ಡೌನ್ ಹೊಡೆತಕ್ಕೆ ಸಿಲುಕಿ ಸುಧಾರಿಸಿಕೊಳ್ಳುತ್ತಿದ್ದ ಆಟೋ ಉದ್ಯಮವು ಸಹ ಇದೀಗ ವಿಸ್ತರಿತ ಲಾಕ್ಡೌನ್ ಪರಿಣಾಮ ಭಾರೀ ನಷ್ಟ ಅನುಭವಿಸುತ್ತಿದ್ದು, ಹೊಸ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿರುವ ಸಂದರ್ಭದಲ್ಲೇ ವಾಹನ ಉತ್ಪಾದನೆಯು ಸಂಪೂರ್ಣವಾಗಿ ನೆಲಕಚ್ಚಿದೆ. ಕೋವಿಡ್ ಹೆಚ್ಚಳವಾದ ನಂತರ ದೇಶದ ಪ್ರಮುಖ ಆಟೋ ಕಂಪನಿಗಳು ಒಂದು 15 ದಿನದಿಂದಲೇ ವಾಹನ ಉತ್ಪಾದನೆಯನ್ನು ಬಂದ್ ಮಾಡಿದ್ದು, ಕೋವಿಡ್ ತುಸು ತಗ್ಗಿರುವುದರಿಂದ ಇದೀಗ ಪರಿಸ್ಥಿತಿಗೆ ಅನುಗುಣವಾಗಿ ಹೊಸ ಸುರಕ್ಷಾ ಕ್ರಮಗಳೊಂದಿಗೆ ಉತ್ಪಾದನೆ ಹಂತ-ಹಂತವಾಗಿ ಹೆಚ್ಚಳಕ್ಕೆ ಸಿದ್ದತೆ ನಡೆಸಿವೆ.

ಹೋಂಡಾ ಮೋಟಾರ್ಸೈಕಲ್ ಕಂಪನಿಯು ಸಹ ಕೋವಿಡ್ ಪರಿಣಾಮ ಸುಮಾರು ಹತ್ತು ದಿನಗಳಿಂದ ಬೈಕ್ ಉತ್ಪಾದನೆಯನ್ನು ಸ್ಥಗಿತಗೊಳಿಸಿತ್ತು. ಇದೀಗ ಕಂಪನಿಯು ದೇಶದ ವಿವಿಧ ರಾಜ್ಯಗಳಲ್ಲಿರುವ ತನ್ನ ಪ್ರಮುಖ ಮೂರು ಘಟಕಗಳಲ್ಲೂ ಉತ್ಪಾದನೆ ಶುರು ಮಾಡಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರ ಗೈಡ್ಲೈನ್ಸ್ ಪ್ರಕಾರವೇ ವಾಹನ ಉತ್ಪಾದನೆಯನ್ನು ಕನಿಷ್ಠ ಸಂಖ್ಯೆಯ ಉದ್ಯೋಗಿಗಳೊಂದಿಗೆ ಆರಂಭಿಸಿದ್ದು, ಉದ್ಯೋಗಿಗಳ ಆರೋಗ್ಯ ಕಾಳಜಿಗೆ ಹಲವಾರು ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.

ಹರಿಯಾಣದ ಮನೇಸರ್, ಕರ್ನಾಟಕದ ನರಸಾಪುರ ಹಾಗೂ ಗುಜರಾತ್'ನ ವಿಠಾಪುರಗಳಲ್ಲಿನ ಘಟಕಗಳಲ್ಲಿ ವಾಹನ ಉತ್ಪಾದನೆಗೆ ಪುನಾರಂಭಿಸಲಾಗಿದ್ದು, ಉದ್ಯೋಗಿಗಳಿಗೆ ಹ್ಯಾಂಡ್ ಗ್ಲೌಸ್, ಸ್ಯಾನಿಟೈಜರ್, ಮಾಸ್ಕ್ ಮತ್ತು ನಿಗದಿತ ಅವಧಿಯೊಳಗೆ ಪರೀಕ್ಷೆಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ.

ಇನ್ನು ಕೋವಿಡ್ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರವು ಹರಸಾಹಸ ಪಡುತ್ತಿದ್ದು, ಆರ್ಥಿಕ ಸಂಕಷ್ಟದಲ್ಲೂ ಸರ್ಕಾರದ ಜೊತೆ ಕೈಜೋಡಿಸಿರುವ ವಿವಿಧ ಆಟೋ ಕಂಪನಿಗಳು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ(ಸಿಎಸ್ಆರ್) ನೀತಿ ಅಡಿ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಕೈಗೊಂಡಿವೆ.

ಸೋಂಕಿತರ ಸಂಖ್ಯೆಯಲ್ಲಿ ತೀವ್ರ ಹೆಚ್ಚಳದಿಂದಾಗಿ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡಲು ವೈದ್ಯಕೀಯ ಸೇವೆಗಳಲ್ಲಿ ವ್ಯತ್ಯಯ ಉಂಟಾಗುತ್ತಿದ್ದು, ಸರ್ಕಾರಗಳ ಪ್ರಯತ್ನಕ್ಕೆ ವಿವಿಧ ಆಟೋ ಉತ್ಪಾದನಾ ಕಂಪನಿಗಳು ವಿವಿಧ ಮಾದರಿಯ ಸಹಕಾರ ನೀಡುತ್ತಿವೆ.

ಆರ್ಥಿಕ ಸಂಕಷ್ಟದ ನಡುವೆಯೂ ಆಟೋ ಕಂಪನಿಯು ಸಾಧ್ಯವಿರುವ ಕಡೆಗಳಲ್ಲಿ ಸರ್ಕಾರದ ಜೊತೆಗೂಡಿ ಕೋವಿಡ್ ನಿಯಂತ್ರಣಕ್ಕೆ ಸಹಕಾರ ನೀಡುತ್ತಿದ್ದು, ದೇಶದ ಪ್ರಮುಖ ಆಟೋ ಉತ್ಪಾದನಾ ಕಂಪನಿಯಾಗಿರುವ ಹೋಂಡಾ ಗ್ರೂಪ್ ಕೂಡಾ ತನ್ನ ಹೋಂಡಾ ಫೌಂಡೇಶನ್ ಮೂಲಕ ಕೋವಿಡ್ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಕೇಂದ್ರ ಸರ್ಕಾರಕ್ಕೆ ಹಣಾಕಾಸು ನೆರವು ನೀಡಿದೆ.

2020ರ ಏಪ್ರಿಲ್ ಅವಧಿಯಲ್ಲಿನ ಕೋವಿಡ್ ಹೆಚ್ಚಳ ಸಂದರ್ಭದಲ್ಲೂ ಬರೋಬ್ಬರಿ ರೂ.10 ಕೋಟಿ ದೇಣಿಗೆ ನೀಡಿದ್ದ ಹೋಂಡಾ ಗ್ರೂಪ್ ಕಂಪನಿಯು ಇದೀಗ 2ನೇ ಅಲೆಯ ಕೋವಿಡ್ ನಿಯಂತ್ರಣಕ್ಕಾಗಿ ರೂ. 6.50 ಕೋಟಿ ದೇಣಿಗೆ ಘೋಷಣೆ ಮಾಡಿದ್ದು, ದೇಣಿಗೆ ಹಣವನ್ನು ಪಿಎಂ ಕೇರ್ಸ್ ಫಂಡ್(ಪ್ರಧಾನ ಮಂತ್ರಿ ಪರಿಹಾರ ನಿಧಿ)ಗೆ ನೀಡಲಾಗಿದೆ.


Click it and Unblock the Notifications