ಸಮ ಬೆಸ ನಿಯಮ ವಿರೋಧಿಸಿ ಪ್ರತಿಭಟನೆಗಿಳಿದ ಜನ
ಕಳೆದ ವಾರದಿಂದ ದೆಹಲಿಯ ಎನ್ಸಿಆರ್ ಪ್ರದೇಶದಲ್ಲಿ ಸಮ ಬೆಸ ನಿಯಮವನ್ನು ಜಾರಿಗೆ ತರಲಾಗಿದೆ. ಈ ನಿಯಮದ ಬಗ್ಗೆ ಈ ಪ್ರದೇಶದ ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನವೆಂಬರ್ 15ರವರೆಗೆ ಜಾರಿಯಲ್ಲಿರುವ ಈ ನಿಯಮವು ಅವರ ಸ್ವಾತಂತ್ರ್ಯವನ್ನು ಇಲ್ಲದಂತೆ ಮಾಡುತ್ತಿದೆ ಎಂಬುದು ಅವರ ಅಭಿಪ್ರಾಯವಾಗಿದೆ.

ತಮ್ಮ ಸ್ವಂತ ವಾಹನಗಳನ್ನು ಪ್ರತಿದಿನ ಪ್ರಯಾಣಿಸಲು ಬಳಸುವ ಜನಸಾಮಾನ್ಯರು ತಮ್ಮ ಚಲನೆಯ ಸ್ವಾತಂತ್ರ್ಯವನ್ನು ಸರ್ಕಾರವು ಕಿತ್ತುಕೊಂಡಿರುವುದಾಗಿ ಹೇಳಿದ್ದಾರೆ. ಸಿಎನ್ಜಿ ವಾಹನಗಳನ್ನು ಈ ನಿಯಮದಿಂದ ಹೊರಗಿಡಬೇಕು ಎಂದು ಸಹ ಹೇಳಿದ್ದಾರೆ.

ಬೆಸ ಸಮ ಯೋಜನೆಯಡಿಯಲ್ಲಿ ಸಮ ಸಂಖ್ಯೆಯ ರಿಜಿಸ್ಟ್ರೇಷನ್ ನಂಬರ್ಗಳನ್ನು ಹೊಂದಿರುವ ವಾಹನಗಳು ಸಮ ದಿನಾಂಕಗಳಂದು ಮಾತ್ರ ಹಾಗೂ ಬೆಸ ಸಂಖ್ಯೆಯ ರಿಜಿಸ್ಟ್ರೇಷನ್ ನಂಬರ್ಗಳನ್ನು ಹೊಂದಿರುವ ವಾಹನಗಳು ಬೆಸ ದಿನಾಂಕಗಳಂದು ಮಾತ್ರ ರಸ್ತೆಗಿಳಿಯ ಬೇಕೆಂಬ ನಿಯಮ ರೂಪಿಸಲಾಗಿದೆ.

ಸಿಎನ್ಜಿ ವಾಹನಗಳನ್ನು ಈ ಯೋಜನೆಯಲ್ಲಿ ಸೇರಿಸಿರುವುದನ್ನು ಪ್ರಶ್ನಿಸಿ ದೆಹಲಿಯ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳಿಗೆ ಹೋಲಿಸಿದರೆ ಸಿಎನ್ಜಿ ವಾಹನಗಳು ಕಡಿಮೆ ಹೊಗೆಯನ್ನು ಹೊರಸೂಸುತ್ತವೆ, ಆದ ಕಾರಣ ಅವುಗಳ ರಿಜಿಸ್ಟ್ರೇಷನ್ ನಂಬರ್ಗಳನ್ನು ಪರಿಗಣಿಸದೇ ಸಿಎನ್ಜಿ ವಾಹನಗಳನ್ನು ಈ ನಿಯಮದಿಂದ ಹೊರಗಿಡಬೇಕೆಂದು ಹೇಳಿದ್ದಾರೆ.

ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿರುವ ಹೈಕೋರ್ಟ್, ದೆಹಲಿಯ ರಾಜ್ಯ ಸರ್ಕಾರದ ಅಭಿಪ್ರಾಯವನ್ನು ಕೇಳಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ದೆಹಲಿ ಸರ್ಕಾರ, ಸಿಎನ್ಜಿ ವಾಹನಗಳೂ ಸಹ ಈ ಯೋಜನೆಯ ಭಾಗವಾಗಿದ್ದು, ಇದರಿಂದಾಗಿ ಹೆಚ್ಚು ಕಲುಷಿತಗೊಂಡಿರುವ ನಗರದಲ್ಲಿ ವಾಹನ ದಟ್ಟಣೆಯು ಕಡಿಮೆಯಾಗಲಿದೆ ಎಂದು ಹೇಳಿದರು.

ದೆಹಲಿ ಸರ್ಕಾರವು ದೆಹಲಿಯಲ್ಲಿನ ಮಾಲಿನ್ಯವನ್ನು ಕಡಿಮೆ ಮಾಡುವ ಉದ್ದೇಶದಿಂದ ಹಾಗೂ ಏರ್ ಕ್ವಾಲಿಟಿ ಇಂಡೆಕ್ಸ್ ಅನ್ನು ಸುಧಾರಿಸುವ ಕಾರಣದಿಂದ ಬೆಸ ಸಮ ನಿಯಮವನ್ನು ಜಾರಿಗೆ ತಂದಿದೆ. ಏರ್ ಕ್ವಾಲಿಟಿ ಇಂಡೆಕ್ಸ್ ಕಳೆದ ಎಂಟು ವಾರಗಳಿಂದ ತೀವ್ರವಾಗಿ ಹದಗೆಟ್ಟಿದೆ.

ರಸ್ತೆಯಲ್ಲಿ ವಾಹನಗಳ ಸಂಖ್ಯೆಯನ್ನು ಕಡಿಮೆಗೊಳಿಸುವುದರಿಂದ ಸಂಚಾರ ದಟ್ಟಣೆ ಕಡಿಮೆಯಾಗುವುದರ ಜೊತೆಗೆ, ವಾಯು ಮಾಲಿನ್ಯ ಪ್ರಮಾಣವು ಕಡಿಮೆಯಾಗುತ್ತದೆಂಬುದು ಸರ್ಕಾರದ ಅಭಿಪ್ರಾಯವಾಗಿದೆ.
MOST READ: ಕೈಕೊಟ್ಟ ದುಬಾರಿ ಬೆಲೆಯ ಕಾರಿನ ಬ್ರೇಕ್..!

ಎಲ್ಲಾ ದ್ವಿಚಕ್ರ ವಾಹನಗಳು, ವಿಐಪಿ ವಾಹನಗಳು, ಮಹಿಳೆಯರು ಚಾಲನೆ ಮಾಡುವ ವಾಹನಗಳು, ಶಾಲಾ ಮಕ್ಕಳನ್ನು ಕೊಂಡೊಯ್ಯುವ ವಾಹನಗಳನ್ನು ಈ ನಿಯಮದಿಂದ ಹೊರಗಿಡಲಾಗಿದೆ.
MOST READ: ವಿಮಾನಗಳಲ್ಲಿ ಬಿಳಿ ಬಣ್ಣವನ್ನೇ ಬಳಕೆ ಮಾಡುವುದರ ಹಿಂದಿನ ಕಾರಣವೇನು?

ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ಗಳಿಗೆ ಹೋಲಿಸಿದರೆ ಸಿಎನ್ಜಿ ವಾಹನಗಳು ಕಡಿಮೆ ಪ್ರಮಾಣದ ಕಾರ್ಬನ್ ಡೈಆಕ್ಸೈಡ್ ಹಾಗೂ ನೈಟ್ರೊಜನ್ ಆಕ್ಸೈಡ್ ಅನ್ನು ಹೊರಬಿಡುತ್ತವೆಂದು ಸರ್ಕಾರಗಳು ಹೇಳುತ್ತವೆ. ಆದರೆ ಈ ಪ್ರಮಾಣವು ಭಾರೀ ಪ್ರಮಾಣದಲ್ಲಿಲ್ಲದ ಕಾರಣ ಸಿಎನ್ಜಿ ವಾಹನಗಳನ್ನು ಸಹ ಈ ಯೋಜನೆಯಡಿಯಲ್ಲಿ ತರಲಾಗಿದೆ ಎಂಬುದು ಸರ್ಕಾರದ ಅಭಿಪ್ರಾಯ.
MOST READ: ಖಾಸಗಿ ವಿಮಾನ ಹೊಂದಿರುವ ಉದ್ಯಮಿಗಳಿವರು..!

ಕಾನ್ಪುರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಹಾಗೂ ದಿ ಎನರ್ಜಿ ಅಂಡ್ ರಿಸೋರ್ಸಸ್ ಇನ್ಸ್ಟಿಟ್ಯೂಟ್ನ ಸಂಶೋಧಕರು ನಾಲ್ಕು ಚಕ್ರದ ವಾಹನಗಳಿಗೆ ಹೋಲಿಸಿದರೆ ಒಟ್ಟಾರೆ ಪಿಎಂ 2.5 ಹೊರಸೂಸುವಿಕೆಯಲ್ಲಿ ದ್ವಿಚಕ್ರ ವಾಹನಗಳು ಹೆಚ್ಚಿನ ಪ್ರಮಾಣದ ಹೊಗೆಯನ್ನು ಹೊರಸೂಸುತ್ತವೆ ಎಂದು ಹೇಳಿದ್ದಾರೆ.

ಈ ಎರಡೂ ಸಂಸ್ಥೆಗಳು ವಾಯುಮಾಲಿನ್ಯವನ್ನು ನಿಯಂತ್ರಿಸಲು ಸಮಗ್ರ ಯೋಜನೆಗೆ ಕರೆ ನೀಡಿವೆ. ಹಿಂದೆ ಜಾರಿಗೊಳಿಸಲಾಗಿದ್ದ ಬೆಸ ಸಮ ಯೋಜನೆಗಳಿಂದ ಏರ್ ಕ್ವಾಲಿಟಿ ಇಂಡೆಕ್ಸ್ ನಲ್ಲಿ ಯಾವುದೇ ಪರಿಣಾಮವಾಗಿಲ್ಲ ಎಂದು ಸಹ ಹೇಳಿವೆ.

ಡ್ರೈವ್ಸ್ಪಾರ್ಕ್ ಅಭಿಪ್ರಾಯ
ದೆಹಲಿಯಲ್ಲಿನ ಮಾಲಿನ್ಯ ಪ್ರಮಾಣವು ವಿಪರೀತವಾಗಿ ಏರಿಕೆಯಾಗಲು ಸರ್ಕಾರದ ನಿರ್ದೇಶನ, ಉದ್ಯಮದ ಮಾರ್ಗಸೂಚಿ, ಹೊರಸೂಸುವಿಕೆಯ ಮಾನದಂಡಗಳ ಉಲ್ಲಂಘನೆ ಹಾಗೂ ಏನು ಮಾಡಿದರು ನಡೆಯುತ್ತೆ ಎಂಬ ಮನೋಭಾವಗಳೇ ಮುಖ್ಯ ಕಾರಣವಾಗಿವೆ. ಗಮನಾರ್ಹ ಸಂಗತಿಯೆಂದರೆ ಈ ಮಾರ್ಗಸೂಚಿಗಳನ್ನು ಹೆಚ್ಚು ಉಲ್ಲಂಘಿಸುವವರು ಸರ್ಕಾರದ ಉನ್ನತ ಅಧಿಕಾರದಲ್ಲಿರುವವರಾಗಿದ್ದಾರೆ.

ಇಡೀ ದೆಹಲಿ ಪ್ರದೇಶಕ್ಕೆ ಬೇಕಾಗಿರುವುದು ದೆಹಲಿಯ ಹೊರಗಿನ ಪ್ರದೇಶಗಳನ್ನು ಒಳಗೊಂಡಿರುವ ಒಂದು ಯೋಜನೆ. ಅವುಗಳಲ್ಲಿ ಬೆಳೆ ಸುಡುವಿಕೆ ಹಾಗೂ ಕೈಗಾರಿಕಾ ಮಾಲಿನ್ಯಗಳು ಸೇರಿವೆ. ಕಾನೂನುಗಳನ್ನು ಕಟ್ಟುನಿಟ್ಟಾಗಿ ಹಾಗೂ ಯಾವುದೇ ವಿನಾಯಿತಿ ಇಲ್ಲದೆ ಜಾರಿಗೊಳಿಸಿದರೆ ಮಾತ್ರ ಗಾಳಿಯ ಗುಣಮಟ್ಟವನ್ನು ಸುಧಾರಿಸಬಹುದು.


Click it and Unblock the Notifications