ಎಲೆಕ್ಟ್ರಿಕ್ ಬಸ್ಸಿನ ಪರೀಕ್ಷಾರ್ಥ ಸಂಚಾರವನ್ನಾರಂಭಿಸಿದ ಬಿಎಂಟಿಸಿ
ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರವು ಉತ್ತೇಜನ ನೀಡುತ್ತಿದೆ. ಇದಕ್ಕಾಗಿ, ಫೇಮ್ ಇಂಡಿಯಾ ಯೋಜನೆಯಡಿಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಸಬ್ಸಿಡಿಯನ್ನು ನೀಡಲಾಗುತ್ತಿದೆ.

ಕೇಂದ್ರ ಸರ್ಕಾರದ ಹೊರತಾಗಿ ಕೇರಳ, ದೆಹಲಿ, ಗುಜರಾತ್, ಪಶ್ಚಿಮ ಬಂಗಾಳ ಸೇರಿದಂತೆ ವಿವಿಧ ರಾಜ್ಯ ಸರ್ಕಾರಗಳು ಸಹ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಕ್ರಮ ಕೈಗೊಳ್ಳುತ್ತಿವೆ. ಇವುಗಳಲ್ಲಿ ಕರ್ನಾಟಕ ರಾಜ್ಯ ಸರ್ಕಾರವೂ ಸೇರಿದೆ. ಎಲೆಕ್ಟ್ರಾನಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸಲು ಕರ್ನಾಟಕ ಸರ್ಕಾರವು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಅದರಲ್ಲಿಯೂ ವಿಶೇಷವಾಗಿ ಬೆಂಗಳೂರು ನಗರದಲ್ಲಿ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಈ ಹಿನ್ನೆಲೆಯಲ್ಲಿ ಬೆಂಗಳೂರು ಮೆಟ್ರೋಪಾಲಿಟನ್ ಟ್ರಾನ್ಸ್ಪೋರ್ಟ್ ಕಾರ್ಪೊರೇಷನ್ (ಬಿಎಂಟಿಸಿ) ಇಂದಿನಿಂದ (ಅಕ್ಟೋಬರ್ 22) ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬಸ್ಸಿನ ಪರೀಕ್ಷಾರ್ಥ ಸಂಚಾರವನ್ನು ನಡೆಸಲು ನಿರ್ಧರಿಸಿದೆ. 6 ವರ್ಷಗಳ ನಂತರ ಎರಡನೇ ಬಾರಿಗೆ ಈ ಪರೀಕ್ಷಾರ್ಥ ಸಂಚಾರವನ್ನು ನಡೆಸಲಾಗುತ್ತಿದೆ.
MOSTREAD: ಟ್ರ್ಯಾಕ್ಟರ್ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್ಗಳಿರಲು ಕಾರಣಗಳಿವು

ಇದಕ್ಕೂ ಮುನ್ನ 2014ರಲ್ಲಿ ಮೊದಲ ಬಾರಿಗೆ ಈ ಪರೀಕ್ಷಾರ್ಥ ಸಂಚಾರವನ್ನು ನಡೆಸಲಾಗಿತ್ತು. ಈ ಪರೀಕ್ಷಾರ್ಥ ಸಂಚಾರವನ್ನು ಕಾಡುಗೋಡಿ - ಮೆಜೆಸ್ಟಿಕ್ ಮಾರ್ಗದಲ್ಲಿ ನಡೆಸಲಾಗಿತ್ತು. ಈಗ ನಡೆಯುತ್ತಿರುವ ಪರೀಕ್ಷಾರ್ಥ ಸಂಚಾರವು ಸುಮಾರು ಒಂದು ತಿಂಗಳು ನಡೆಯುವ ನಿರೀಕ್ಷೆಯಿದೆ.

ಈ ಉದ್ದೇಶಕ್ಕಾಗಿ ಮೆಜೆಸ್ಟಿಕ್ನಲ್ಲಿ ಚಾರ್ಜಿಂಗ್ ಮೂಲಸೌಕರ್ಯಗಳನ್ನು ಸ್ಥಾಪಿಸಲಾಗಿದೆ. ಈ ಪರೀಕ್ಷಾರ್ಥ ಸಂಚಾರದಲ್ಲಿ 12 ಮೀಟರ್ ಉದ್ದದ ಎಲೆಕ್ಟ್ರಿಕ್ ಬಸ್ ಅನ್ನು ಬಳಸಲಾಗುವುದು. ಈ ಬಸ್ ಎಸಿ ಸೌಲಭ್ಯವನ್ನೂ ಹೊಂದಿದೆ.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಈ ಬಸ್ಸಿನಲ್ಲಿ 37 ಪ್ರಯಾಣಿಕರು ಕುಳಿತುಕೊಳ್ಳಬಹುದು. ಈ ಎಲೆಕ್ಟ್ರಿಕ್ ಬಸ್ ಒಮ್ಮೆ ಪೂರ್ತಿಯಾಗಿ ಚಾರ್ಜ್ ಆದ ನಂತರ ಸುಮಾರು 200 ಕಿ.ಮೀಗಳವರೆಗೆ ಸಂಚರಿಸುತ್ತದೆ ಎಂದು ವರದಿಯಾಗಿದೆ.

ಈ ಎಲೆಕ್ಟ್ರಿಕ್ ಬಸ್ ಓಡಿಸಲು ಬೆಂಗಳೂರು ಮಹಾನಗರ ಸಾರಿಗೆ ನಿಗಮವು 10 ಮಾರ್ಗಗಳನ್ನು ಗುರುತಿಸಿದೆ. ಇವುಗಳಲ್ಲಿ ವಿಮಾನ ನಿಲ್ದಾಣ, ಐಟಿಪಿಎಲ್, ಕೆಂಗೇರಿ, ಎಲೆಕ್ಟ್ರಾನಿಕ್ ಸಿಟಿ ಹಾಗೂ ನೆಲಮಂಗಲಗಳು ಸೇರಿವೆ. ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಜನಪ್ರಿಯಗೊಳಿಸಲು ವಿವಿಧ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.
MOSTREAD: ಲಾಕ್ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಆದರೆ ಚಾರ್ಜಿಂಗ್ ಸ್ಟೇಷನ್ ಗಳು ಕಡಿಮೆ ಸಂಖ್ಯೆಯಲ್ಲಿರುವ ಕಾರಣಕ್ಕೆ ಜನರು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಹಿಂಜರಿಯುತ್ತಿದ್ದಾರೆ. ಆದ್ದರಿಂದ, ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಮುಂದೆ ಬರುವವರಿಗೆ ಸಬ್ಸಿಡಿ ನೀಡುವ ಬಗ್ಗೆ ಕರ್ನಾಟಕ ಸರ್ಕಾರವು ಚಿಂತನೆ ನಡೆಸಿದೆ.

ಇದರಿಂದ ಚಾರ್ಜಿಂಗ್ ಸ್ಟೇಷನ್ ಗಳಲ್ಲಿ ಹೂಡಿಕೆ ಮಾಡಲು ಮುಂದೆ ಬರುವವರಿಗೆ ಅನುಕೂಲವಾಗಲಿದೆ. ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸುವ ಮೂಲಕ ವಾಯುಮಾಲಿನ್ಯದ ಸಮಸ್ಯೆಯನ್ನು ಪರಿಹರಿಸಬಹುದು. ಜೊತೆಗೆ ಕಚ್ಚಾ ತೈಲ ಆಮದು ಪ್ರಮಾಣವನ್ನು ಸಹ ಕಡಿಮೆ ಮಾಡಬಹುದು.
ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್ ಗಾಗಿ ಬಳಸಲಾಗಿದೆ.


Click it and Unblock the Notifications