ಬೆಳ್ಳಂದೂರು ಕೆರೆಯಲ್ಲಿ ಮತ್ತೆ ನೊರೆ ಹಾವಳಿ- ತಪ್ಪದ ವಾಹನ ಸವಾರರ ಪರದಾಟ
ನೊರೆ ಮತ್ತು ಬೆಂಕಿ ಕಾಣಿಸಿಕೊಂಡು ಈ ಹಿಂದೆ ಭಾರೀ ಆತಂಕ ಸೃಷ್ಟಿಸಿದ್ದ ಬೆಳ್ಳಂದೂರು ಕೆರೆಯಲ್ಲಿ ಇದೀಗ ಮತ್ತೆ ನೊರೆಯ ಪ್ರಮಾಣ ಹೆಚ್ಚಾಗಿದ್ದು, ವಾಹನ ಸವಾರರು ಮತ್ತು ಸ್ಥಳೀಯರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ನೊರೆ ಮತ್ತು ಬೆಂಕಿ ಕಾಣಿಸಿಕೊಂಡು ಈ ಹಿಂದೆ ಭಾರೀ ಆತಂಕ ಸೃಷ್ಟಿಸಿದ್ದ ಬೆಳ್ಳಂದೂರು ಕೆರೆಯಲ್ಲಿ ಇದೀಗ ಮತ್ತೆ ನೊರೆಯ ಪ್ರಮಾಣ ಹೆಚ್ಚಾಗಿದ್ದು, ವಾಹನ ಸವಾರರು ಮತ್ತು ಸ್ಥಳೀಯರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ರಾಜಧಾನಿ ಬೆಂಗಳೂರಿನಲ್ಲಿ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಬೆಳ್ಳಂದೂರು, ವರ್ತೂರು ಕೆರೆ ಕೋಡಿಗಳಲ್ಲಿ ಭಾರಿ ಪ್ರಮಾಣದ ನೊರೆ ಕಾಣಿಸಿಕೊಂಡು ಗಾಳಿಯಲ್ಲಿ ತೇಲಾಡುತ್ತಿರುವುದರಿಂದ ವಾಹನ ಸವಾರರು ಮತ್ತು ಸಾರ್ವಜನಿಕರು ತೀವ್ರ ಪರದಾಡುವಂತಾಗಿದೆ.

ಕೆರೆಯ ಅಭಿವೃದ್ಧಿ ಕಾರ್ಯಕ್ಕೆ ಬಿಡಿಎ ಒಂದಿಷ್ಟು ಕ್ರಮ ಕೈಗೊಂಡಿದ್ದರೂ ನೊರೆ ಸಮಸ್ಯೆ ಮತ್ತೆ ತೀವ್ರವಾಗಿದ್ದು, ಸ್ಥಳೀಯರು ಅನಾರೋಗ್ಯಕರ ವಾತಾವರಣದಲ್ಲೇ ದಿನ ಕಳೆಯುವಂತಾಗಿದೆ.

ನಿನ್ನೇ ಮಧ್ಯರಾತ್ರಿ ಧಾರಾಕಾರ ಮಳೆ ಸುರಿದ ನಂತರ ಬೆಳ್ಳಂದೂರು ಕೆರೆ ಮತ್ತು ವರ್ತೂರು ಕೆರೆಯ ಕೋಡಿಯಲ್ಲಿ ಭಾರೀ ಪ್ರಮಾಣದ ನೊರೆ ಸಂಗ್ರಹವಾಗಿತ್ತು. ಹೀಗಾಗಿ ಮಳೆ ಮುಂದುವರಿದಂತೆ ಕೆರೆಗೆ ನೀರಿನ ಹರಿವು ಹೆಚ್ಚಾಗಿದ್ದರಿಂದ ನೊರೆಯ ಪ್ರಮಾಣವೂ ಹೆಚ್ಚಾಗಿದೆ.

ಕೋಡಿ ಭಾಗದಲ್ಲಿ ಐದಾರು ಅಡಿ ಎತ್ತರದಷ್ಟು ದಟ್ಟ ನೊರೆ ಕಾಣಿಸಿಕೊಂಡಿದ್ದು, ಗಾಳಿ ಬೀಸಿದಂತೆಲ್ಲಾ ನೊರೆ ತೇಲಾಡುತ್ತಿದೆ. ಅಲ್ಲದೇ ಕೆಲವೆಡೆ ರಸ್ತೆಯಲ್ಲೇ ಅಡಿಗಟ್ಟಲೇ ನೊರೆ ಶೇಖರಣೆಯಾಗಿದ್ದರಿಂದ ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ.

ದ್ವಿಚಕ್ರ ವಾಹನ ಸವಾರರು, ಆಟೋರಿಕ್ಷಾ, ತ್ರಿಚಕ್ರ ವಾಹನ ಚಾಲಕರು, ಪ್ರಯಾಣಿಕರು ನೊರೆಯಿಂದ ತಪ್ಪಿಸಿಕೊಳ್ಳಲು ಹರಸಾಹಸ ಪಡುತ್ತಿದ್ದ ದೃಶ್ಯ ಸಾಮಾನ್ಯವಾಗಿದ್ದು, ವಿಷಯುಕ್ತ ರಾಸಾಯನಿಕ ಸೇರ್ಪಡೆಯ ನೊರೆ ಚರ್ಮಕ್ಕೆ ಸೋಕಿದ ಭಾಗದಲ್ಲಿ ಕೆಂಪು ಕಲೆಗಳಾಗಿ ತುರಿಕೆ ಕಾಣಿಸಿಕೊಳ್ಳುತ್ತಿರುವುದರಿಂದ ಸ್ಥಳೀಯರು ಈ ಭಾಗದಲ್ಲಿ ಓಡಾಡಲು ಆತಂಕಪಡುವಂತಾಗಿದೆ.

ಇನ್ನು ಬಿಡಿಎ ಅಲ್ಪಾವಧಿ ಕ್ರಮವೆಂಬಂತೆ ಕೆರೆಯಲ್ಲಿ ಸಂಗ್ರಹವಾಗಿದ್ದ ಜೊಂಡು, ಕಳೆ ಸಸಿ ತೆರವು ಕಾರ್ಯ ಮುಂದುವರಿಸಿದ್ದರು, ದೀರ್ಘಾವಧಿ ಕ್ರಮವಾಗಿ ಯಾವ ವಿಧಾನದಡಿ ಪರಿಹಾರ ಕಾರ್ಯ ಕೈಗೊಳ್ಳಬೇಕು ಎಂಬ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವ ಅಗತ್ಯವಿದೆ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ಬೆಳ್ಳಂದೂರು ಕೆರೆಯ ಕಳೆಸಸಿ ತೆರವು ಕಾರ್ಯವನ್ನು ಬಿಡಿಎ ಕೈಗೊಂಡಿರುವುದನ್ನು ಹೊರತುಪಡಿಸಿದರೆ ಇತರೆ ಸಂರಕ್ಷಣೆ ಕಾರ್ಯಗಳು ಶುರುವಾಗದ ಕಾರಣ ಕೆರೆಯ ಅವ್ಯವಸ್ಥೆ ಮುಂದುವರಿದಿದ್ದು, ಸಾರ್ವಜನಿಕರು ಮತ್ತು ವಾಹನ ಸವಾರರು ಮುಂಜಾಗ್ರತ ಕ್ರಮಗಳೊಂದಿಗೆ ಕೆರೆಯ ಬಳಿ ಪ್ರಯಾಣ ಮಾಡುವುದು ಒಳಿತು.


Click it and Unblock the Notifications








