ಸೈಕ್ಲಿಂಗ್ ಮೂಲಕ 24 ಸಾವಿರ ಕಿ.ಮೀ ಪ್ರಯಾಣಿಸಿ ವಿಶ್ವದಾಖಲೆ ನಿರ್ಮಿಸಿದ ಬೆಂಗಳೂರು ಯುವಕರು
ಇತ್ತೀಚಿನ ದಿನಗಳಲ್ಲಿ ಯುವಕರು, ಹಲವಾರು ಸಾಹಸಗಳನ್ನು ಮಾಡುತ್ತಾ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸುದ್ದಿಯಲ್ಲಿರುತ್ತಾರೆ. ಒಮ್ಮೊಮ್ಮೆ ಆ ಸಾಧನೆ ಅವರನ್ನು ಯಾರೂ ಸಹ ನಿರೀಕ್ಷಿಸದ ಹಂತಕ್ಕೆ ಕೊಂಡೊಯ್ಯುತ್ತದೆ. ಅದೇ ರೀತಿ ಬೆಂಗಳೂರಿನ ಇಬ್ಬರು ಯುವಕರು ಸೈಕಲ್ನಲ್ಲಿಯೇ ಸುಮಾರು 24 ಸಾವಿರ ಕಿಮೀ ಸುತ್ತಿ ವಿಶ್ವದಾಖಲೆ ಮಾಡಿದ್ದು, ಇದು ಕನ್ನಡಿಗರು ನಿಜವಾಗಿಯು ಸಂಭ್ರಮಿಸಿ ಹೆಮ್ಮೆ ಪಡುವಂತೆ ಮಾಡಿದ್ದಾರೆ.

ಕೇವಲ ಸೈಕಲ್ನಲ್ಲಿಯೇ ಸುಮಾರು 24 ಸಾವಿರ ಕಿಮೀ ಸಂಚರಿಸಿದ ಈ ಇಬ್ಬರು ಯುವಕರ ಹೆಸರು, 24 ವರ್ಷದ ಹೇಮಂತ್ ವೈ ಬಿ,ಮತ್ತು 23 ವರ್ಷದ ಧನುಷ್ ಮಂಜುನಾಥ್. ಒಂದೇ ದೇಶದಲ್ಲಿ ಅತೀ ಹೆಚ್ಚು ದೂರ ಸೈಕಲ್ ಪ್ರಯಾಣ ನಡೆಸಿದ ವಿಶ್ವ ದಾಖಲೆ ಇವರಿಬ್ಬರ ಪಾಲಾಗಿದೆ. ಇದರೊಂದಿಗೆ ಕರುನಾಡಿನ ಈ ಯುವಕರಿಬ್ಬರು ವಿಶ್ವದಲ್ಲಿ ಯಾರೂ ಮಾಡದಿರುವ ಸಾಧನೆ ಮಾಡಿ ವಿಶ್ವದಾಖಲೆ ಬರೆದಿದ್ದಾರೆ.

ದಿನಾಂಕ 11, ಜುಲೈ 2021 ರಂದು ವಿಧಾನಸೌಧದಿಂದ ತಮ್ಮ ಪ್ರಯಾಣವನ್ನು ಆರಂಭಿಸಿದ ಹೇಮಂತ್ ಹಾಗೂ ಧನುಷ್ ಭಾರತದಾದ್ಯಂತ ಸುಮಾರು 24 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಮಾರ್ಚ್ 12, 2022 ರಂದು ಹಿಂದಿರುಗುವ ಮೂಲಕ ಸುಮಾರು 24 ಸಾವಿರ ಕಿಮೀ ನ ತಮ್ಮ ಸಾಹಸಮಯ ಪ್ರಯಾಣಕ್ಕೆ ತೆರೆ ಎಳೆದರು.

ಇವರ ಈ ಪ್ರಯಾಣದ ವಿಶೇಷತೆ ಏನೆಂದರೆ ಇವರಿಬ್ಬರೂ ಸಹ ತಮ್ಮೊಂದಿಗೆ ಸುಮಾರು 50 ಕೆಜಿಯಷ್ಟು ಸರಕು ಸರಂಜಾಮು ಅನ್ನು ಸಹ ಸೈಕಲ್ನಲ್ಲಿ ಸಹ ತೆಗೆದುಕೊಂಡು ಹೋಗಿದ್ದರು. ಅಷ್ಟು ಮಾತ್ರವಲ್ಲದೆ ತಮ್ಮ ಹಿಂದೆ ಯಾವುದೇ ವೈದ್ಯಕೀಯ ಸೇವೆಯನ್ನು ಸಹ ಕೊಂಡು ಹೋಗಿರಲಿಲ್ಲ.

ಸೈಕ್ಲಿಸ್ಟ್ ಮಂಜುನಾಥ್ ವೈದ್ಯಕೀಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಮತ್ತು ಹೇಮಂತ್ ರೈತರಾಗಿದ್ದರು. ಇವರಿಬ್ಬರಿಗೂ ಏನಾದರೂ ಒಂದು ಸಾಧಿಸಬಬೇಕೆನ್ನುವ ಛಲ ಮೊದಲಿನಿಂದಲೂ ಇತ್ತು. ಒಂದು ದಿನ ಗಟ್ಟಿ ನಿರ್ಧಾರ ತೆಗೆದುಕೊಂಡು ಸೈಕಲ್ನಲ್ಲಿ ರೆಕಾರ್ಡ್ ಬ್ರೇಕ್ ಮಾಡುವ ನಿರ್ಧಾರವನ್ನು ತೆಗೆದಕೊಂಡರು. ಹೀಗೆ ಸೈಕಲ್ ಪ್ರಯಾಣದ ಮೂಲಕ ದೇಶದಾದ್ಯಂತ ಸಾಹಸ ಕ್ರೀಡೆ ಸೇರಿದಂತೆ ಅಡ್ವೆಂಚರ್ ಸೈಕ್ಲಿಂಗ್ ಕುರಿತಾಗಿ ಅರಿವು ಮೂಡಿಸುವ ನಿರ್ಧಾರವನ್ನು ಮಾಡಿದರು.

ಇವರಿಬ್ಬರ ಕುರಿತಾಗಿ ಇನ್ನೊಂದು ಗಮನಿಸಬೇಕಾದ ಅಂಶವೇನೆಂದರೆ, ಇವರಿಬ್ಬರೂ ಸಹ ವೃತ್ತಿ ಪರ ಸೈಕ್ಲಿಂಗ್ ಪಟುಗಳಾಗಲಿ, ಅಥವಾ ಸೈಕ್ಲಿಂಗ್ ಬಗ್ಗೆ ಯಾವುದೇ ರೀತಿಯ ತರಬೇತಿ ಪಡೆದವರಾಗಲಿ ಅಲ್ಲ. ಆದರೂ ಸಹ ವಿಶ್ವದಾಖಲೆ ಬರೆಯುವ ಮಟ್ಟಿಗೆ ಸೈಕ್ಲಿಂಗ್ನಲ್ಲಿ ಸಾಧನೆ ಮಾಡಿದ್ದು ವಿಶೇಷವೇ ಸರಿ.

ಇನ್ನು ಈ ಕುರಿತಾಗಿ ಮಾತನಾಡಿದ ಮಂಜುನಾಥ್, ನಾವು ಆರಂಭದಲ್ಲಿ ಸುಮಾರು 1000 ಕಿಮೀ ವರೆಗೆ ಸೈಕ್ಲಿಂಗ್ ಮಾಡಿದ್ದೆವು. ಪ್ರತಿ ದಿನವೂ ನಾವು ಒಂದಷ್ಟು ದೂರ ರನ್ನಿಂಗ್ ಹಾಗೂ ವ್ಯಾಯಾಮಗಳನ್ನು ಮಾಡುತ್ತಿದ್ದೆವು. ಇದಕ್ಕಾಗಿ ಯಾವುದೇ ರೀತಿಯ ಸ್ಪೆಷಲ್ ಡಯೆಟ್ಗಳನ್ನು ಮಾಡುತ್ತಿರಲಿಲ್ಲ. ಕಾಲೇಜಿನಲ್ಲಿದ್ದಾಗ ಪ್ರತಿದಿನವೂ ಜಿಮ್ಗೆ ಹೋಗುತ್ತಿದ್ದೆ ಎಂದಿದ್ದಾರೆ.

ನಾವು 50 ಡಿಗ್ರಿ ಸೆಲ್ಸಿಯಸ್ ನಿಂದ ಹಿಡಿದು 10 ಡಿಗ್ರಿ ಸೆಲ್ಸಿಯಸ್ವರೆಗಿನ ಹವಾಮಾನದಲ್ಲಿಯೂ ಸಹ ಸೈಕ್ಲಿಂಗ್ ಮಾಡಿದ್ದೇವೆ. ಗುಜರಾತ್, ಮಧ್ಯಪ್ರದೇಶ, ಮತ್ತು ತಮಿಳುನಾಡಿನಲ್ಲಿ ಹಲವಾರು ರೀತಿಯ ಹವಾಮಾನ ವೈಪರೀತ್ಯಕ್ಕೆ ಒಳಗಾಗಿದ್ದೆವು. ಕೆಲವೊಂದು ದಿನಗಳಲ್ಲಂತೂ ಕೇವಲ 5 ಕಿಮೀ ತಲುಪುವುದೂ ಸಹ ಕಷ್ಟವಾಗುತ್ತಿತ್ತು. ಕೆಲವೊಂದು ದಿನ ಹವಾಮಾನ ಚೆನ್ನಾಗಿರುವಾಗ ಸುಮಾರು 120 ಕಿಮೀ ಸಹ ತಲುಪಿದ್ದಾಗಿ ವಿವರಿಸಿದರು.

ಇವರಿಬ್ಬರ ಈ ಪ್ರಯಾಣಕ್ಕೆ ಒಟ್ಟು ರೂ. 9 ಲಕ್ಷ ರೂಪಾಯಿಗಳು ಖರ್ಚಾಗಿದ್ದು, ಈ ಪ್ರಯಾಣಕ್ಕೆ ಹಲವಾರು ಸಂಘ-ಸಂಸ್ಥೆಗಳು ಹಣಕಾಸು ನೆರವು ನೀಡಿದ್ದಾರೆ. ಒಟ್ಟಾರೆ 245 ದಿನಗಳ ಸೈಕಲ್ ಪ್ರಮಾಣದಲ್ಲಿ ಕೇವಲ 20 ದಿನವಷ್ಟೇ ವಿಶ್ರಾಂತಿ ತೆಗೆದುಕೊಳ್ಳುವ ಮೂಲಕ ಗುರಿತಲುಪಿದ್ದಾರೆ.

ಇನ್ನು ಧನುಷ್ ಅವರು, ಭಾರತಕ್ಕೆ ಸ್ವಾತಂತ್ರ್ಯ ದೊರಕಿದ 75 ನೇ ವರ್ಷದ ಸವಿನೆನಪಿಗಾಗಿ ಲಂಡನ್ ತನಕವೂ ಸೈಕ್ಲಿಂಗ್ ಮಾಡುವ ಯೋಜನೆಯಲ್ಲಿದ್ದು, ಇದಕ್ಕಾಗಿ ಈಗಾಗಲೇ ತಯಾರಿ ಕೂಡಾ ನಡೆಯುತ್ತಿದೆ.

ಇನ್ನು ಬೆಂಗಳೂರಿನ ಬೈಸಿಕಲ್ ಮೇಯರ್ ಸತ್ಯ ಶಂಕರ್ ಅವರು ಮಾತನಾಡಿ, "ನಮ್ಮ ದೇಶದಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸೈಕ್ಲಿಂಗ್ ಕುರಿತಾಗಿ ಅರಿವನ್ನು ಮೂಡಿಸಬೇಕಾಗಿದೆ. ನಮ್ಮಲ್ಲಿ ಈ ಐಪಿಎಲ್ ಮಾದರಿಯಲ್ಲಿ ಸ್ಪಾನ್ಸರ್ಡ್ ಸೈಕ್ಲಿಂಗ್ ಟೀಮ್ ಅನ್ನು ಸಿದ್ದಪಡಿಸಬೇಕು ಎಂದರು.


Click it and Unblock the Notifications








