ರಸ್ತೆ ಅಪಘಾತಗಳಲ್ಲಿ ತ್ವರಿತ ಪರಿಹಾರ ವಿತರಣೆಗೆ ಹೊಸ ಕ್ರಮ ಜಾರಿಗೊಳಿಸಿದ ಕೇಂದ್ರ ಸರ್ಕಾರ
ರಸ್ತೆ ಅಪಘಾತಗಳ ತನಿಖೆಗಾಗಿ ಕೇಂದ್ರ ಸರ್ಕಾರವು ಹೊಸ ತನಿಖಾ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ತ್ವರಿತಗತಿಯಲ್ಲಿ ಪ್ರಕರಣದ ವಿಚಾರಣೆ ಮತ್ತು ಪರಿಹಾರ ವಿತರಣೆಗೆ ಮಹತ್ವದ ಆದೇಶ ಹೊರಡಿಸಿದೆ.

ದೇಶಾದ್ಯಂತ ದಿನಂಪ್ರತಿ ಸಾವಿರಾರು ಹೊಸ ವಾಹನಗಳು ರಸ್ತೆಗಿಳಿಯುತ್ತಿದ್ದು, ಅದೇ ರೀತಿ ಅಪಘಾತ ಪ್ರಕರಣಗಳು ಕೂಡಾ ಹೆಚ್ಚುತ್ತಿವೆ. ಅಪಘಾತಗಳನ್ನು ತಡೆಯಲು ಹಲವಾರು ಕಠಿಣ ಕ್ರಮಗಳನ್ನು ಜಾರಿಗೊಳಿಸಿದ್ದರ ಪರಿಣಾಮ ಅಪಘಾತಗಳಲ್ಲಿನ ಸಾವು ನೋವಿನ ತೀವ್ರತೆ ಈ ಹಿಂದಿಗಿಂತಲೂ ಇದೀಗ ತುಸು ಕಡಿಮೆಯಾಗಿದ್ದರೂ ಅಪಘಾತಗಳ ಸಂಖ್ಯೆ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ.

ಅಪಘಾತಗಳ ಸಂದರ್ಭದಲ್ಲಿ ಸಾವು ನೋವು ಉಂಟಾದ ಸಂದರ್ಭದಲ್ಲಿ ಅವರನ್ನೇ ನೆಚ್ಚಿಕೊಂಡ ಅವರ ಕುಟುಂಬವು ಸಂಕಷ್ಟಕ್ಕೆ ಸಿಲುಕುತ್ತದೆ. ಈ ವೇಳೆ ವಿಮಾ ಪರಿಹಾರವು ಸಹಾಯಕ್ಕೆ ಬರಬಹುದಾದರೂ ಅದು ಸರಿಯಾದ ಸಮಯಕ್ಕೆ ಸಿಗದೆ ಮತ್ತಷ್ಟು ಸಂಕಷ್ಟ ಎದುರಿಸಬೇಕಾದ ಪರಿಸ್ಥಿತಿ ಎದುರಾಗಬಹುದು.

ಇದಕ್ಕಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ರಸ್ತೆ ಅಪಘಾತಗಳಲ್ಲಿನ ಸಂತ್ರಸ್ತರಿಗೆ ತ್ವರಿತವಾಗಿ ಪರಿಹಾರ ಬಿಡುಗಡೆಗೆ ಹೊಸ ಕ್ರಮ ಅಳವಡಿಸಿಕೊಳ್ಳುವಂತೆ ವಿಮಾ ಕಂಪನಿಗಳಿಗೆ ಅಧಿಸೂಚನೆ ಹೊರಡಿಸಿದ್ದು, ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ ನಂತರದ ತನಿಖೆಯ ಪ್ರಕ್ರಿಯೆಗೆ ಕಾಲಮಿತಿ ನಿಗದಿಪಡಿಸಲಾಗಿದೆ.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ನೀಡಿದ ಮಾಹಿತಿ ಪ್ರಕಾರ, ಅಪಘಾತದ ನಂತರ ಸಂತ್ರಸ್ತರು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ ನಂತರ ಕಾಲಮಿತಿಯಲ್ಲಿಯೇ ಸಂಬಂಧಪಟ್ಟ ಅಧಿಕಾರಿಗಳು ತನಿಖೆಯನ್ನು ಪೂರ್ಣಗೊಳಿಸಬೇಕು ಮತ್ತು ತನಿಖಾ ವರದಿಯನ್ನು ನ್ಯಾಯಾಧಿಕರಣದ ಮುಂದೆ ಸಲ್ಲಿಕೆ ಮಾಡಬೇಕಾಗುತ್ತದೆ.

ಅಪಘಾತದ ನಂತರ 48 ಗಂಟೆಗಳ ಒಳಗೆ ವಿಚಾರಣಾ ಅಧಿಕಾರಿಯು ಕ್ಲೈಮ್ಸ್ ಟ್ರಿಬ್ಯೂನಲ್ಗೆ ಪ್ರಕರಣದ ಸಂಪೂರ್ಣ ವರದಿ ಸಲ್ಲಿಸಿಬೇಕಿದ್ದು, ಅಪಘಾತದಲ್ಲಿನ ಬಲಿಪಶುಗಳು ಮತ್ತು ಅವರ ಕಾನೂನು ಪ್ರತಿನಿಧಿಗಳು ಅಪಘಾತದ 10 ದಿನಗಳಲ್ಲಿ ಅವರ ಹಕ್ಕುಗಳನ್ನು ಟ್ರಿಬ್ಯೂನಲ್ ಮುಂದೆ ಪ್ರಸ್ತುತಪಡಿಸಬೇಕು.

ಅಪಘಾತದ ತಪಾಸಣಾ ಅಧಿಕಾರಿಯು ಮಧ್ಯಂತರ ವರದಿಯನ್ನು ಕ್ಲೈಮ್ಸ್ ಟ್ರಿಬ್ಯೂನಲ್ಗೆ 50 ದಿನದೊಳಗೆ ಸಲ್ಲಿಸಬೇಕಿದ್ದು, ಅಗತ್ಯ ಸಂದರ್ಭದಲ್ಲಿ ಕ್ರಿಮಿನಲ್ ತನಿಖೆಯನ್ನು ಸಹ ಇದೇ ಅವಧಿಯಲ್ಲಿ ಪೂರ್ಣಗೊಳಿಸಿ ಸಂಬಂಧಿಸಿದ ಕ್ರಿಮಿನಲ್ ನ್ಯಾಯಾಲಯಕ್ಕೆ ವರದಿಯನ್ನು ಸಲ್ಲಿಸಬೇಕು.

ತಪಾಸಣಾ ಅಧಿಕಾರಿಯು ಅಪಘಾತದ ಮಾಹಿತಿ ಮತ್ತು ದಾಖಲೆಗಳ ಪರಿಶೀಲನೆಯನ್ನು ಪೂರ್ಣಗೊಳಿಸಬೇಕು ಮತ್ತು ವಿವರವಾದ ಅಪಘಾತ ವರದಿಯನ್ನು (ಡಿಎಆರ್) 90 ದಿನಗಳಲ್ಲಿ ನ್ಯಾಯ ಮಂಡಳಿಗೆ ಸಲ್ಲಿಸಬೇಕು.

ಈ ಹಿಂದೆ ರಸ್ತೆ ಅಪಘಾತಗಳಲ್ಲಿ ಸಂತ್ರಸ್ತರು ಪರಿಹಾರಕ್ಕಾಗಿ ವರ್ಷಗಳ ಕಾಲವೇ ಕಾಯಬೇಕಿದ್ದ ಪರಿಸ್ಥಿತಿಯು ಇನ್ಮುಂದೆ ಸುಧಾರಿಸಲಿದ್ದು, ವಿಲೇವಾರಿಯಾಗದೆ ಉಳಿದಿರುವ ಲಕ್ಷಾಂತರ ಅಪಘಾತ ಪ್ರಕರಣಗಳ ಪರಿಹಾರವನ್ನು ವಿತರಣೆಯನ್ನು ತುರ್ತಾಗಿ ಕೈಗೊಳ್ಳಲು ಈ ಹೊಸ ಮಾರ್ಗಸೂಚಿ ಅನುಕೂಲಕರವಾಗಲಿದೆ.

ಕೇಂದ್ರ ಸರ್ಕಾರದ ಇತ್ತೀಚಿನ ಅಂಕಿ ಅಂಶಗಳ ಪ್ರಕಾರ 2020ರಲ್ಲಿ ದೇಶಾದ್ಯಂತ ಬರೋಬ್ಬರಿ 3,66,138 ರಸ್ತೆ ಅಪಘಾತ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ ಸುಮಾರು 1,31,714 ಜನ ಪ್ರಾಣಕಳೆದುಕೊಂಡಿದ್ದಾರೆ.

ಹೀಗಾಗಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಅಪಘಾತ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ತ್ವರಿತ ಪರಿಹಾರ ವಿತರಣೆಗೆ ಕೇಂದ್ರ ಸರ್ಕಾರವು ಮಹತ್ವದ ಆದೇಶ ಹೊರಡಿಸಿದ್ದು, ಇದರ ಜೊತೆಗೆ ಕೇಂದ್ರ ಸರ್ಕಾರವು ಹಿಟ್ ಅಂಡ್ ರನ್ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ಹೆಚ್ಚಿನ ಪರಿಹಾರ ಘೋಷಣೆ ಮಾಡಿದೆ.

ಹೊಸ ಪರಿಹಾರ ಘೋಷಣೆಯಲ್ಲಿ ಕೇಂದ್ರ ಸರ್ಕಾರವು ಹಿಟ್ ಅಂಡ್ ರನ್ ಪ್ರಕರಣಗಳಲ್ಲಿ ಮೃತಪಟ್ಟವರ ಕುಟುಂಬಕ್ಕೆ ಇನ್ಮುಂದೆ 8 ಪಟ್ಟು ಹೆಚ್ಚು ಪರಿಹಾರ ಸಿಗಲಿದ್ದು, ಈ ಹಿಂದೆ ಇದ್ದ ಪರಿಹಾರ ಮೊತ್ತವನ್ನು ಇದೀಗ ರೂ. 2 ಲಕ್ಷಕ್ಕೆ ಏರಿಕೆ ಮಾಡಲಾಗಿದೆ.

ಹಿಟ್ ಅಂಡ್ ರನ್ ಅಪಘಾತ ಪ್ರಕರಣದಲ್ಲಿ ಸಾವನ್ನಪ್ಪಿದ ಕುಟುಂಬಸ್ಥರಿಗೆ ನೀಡುವ ಪರಿಹಾರದ ಮೊತ್ತವನ್ನು ಏಪ್ರಿಲ್ 1 ರಿಂದಲೇ ಎಂಟು ಪಟ್ಟು ಹೆಚ್ಚಿಸಿರುವ ಕೇಂದ್ರ ಸರ್ಕಾರವು ರೂ. 2 ಲಕ್ಷಕ್ಕೆ ಏರಿಸಿದ್ದು, ಗಂಭೀರವಾಗಿ ಗಾಯಗೊಂಡರಿಗೆ ಪರಿಹಾರದ ಮೊತ್ತವನ್ನು ರೂ.12,500 ರಿಂದ ರೂ. 50 ಸಾವಿರಕ್ಕೆ ಹೆಚ್ಚಿಸಿದೆ.

ಹಿಟ್ ಅಂಡ್ ರನ್ ಪ್ರಕರಣಗಳಲ್ಲಿ ಈ ಹಿಂದೆ ಸಾವನ್ನಪ್ಪಿದ ಸಂತ್ರಸ್ತರ ಕುಟುಂಬಸ್ಥರಿಗೆ ರೂ. 25 ಸಾವಿರ ಪರಿಹಾರ ನೀಡುತ್ತಿದ್ದ ಕೇಂದ್ರ ಸರ್ಕಾರವು ಇದೀಗ ರೂ. 2 ಲಕ್ಷಕ್ಕೆ ಹೆಚ್ಚಿಸಿದ್ದು, ಇದಕ್ಕಾಗಿ ಪರಿಹಾರ ನೀಡುವ ಕಾಲಮಿತಿಯನ್ನು ಸಹ ತಗ್ಗಿಸಲಾಗಿದೆ.


Click it and Unblock the Notifications